ಕೊಡಗಿನಲ್ಲಿ ಗುಡ್ಡ ಕುಸಿತ ತಡೆಗೆ ವೆಟ್ಟಿವೆರ್ ಹುಲ್ಲು ನಾಟಿ
ಮಡಿಕೇರಿ, ಸೆಪ್ಟೆಂಬರ್ 16: ಕೊಡಗಿನಲ್ಲಿ ಮಳೆ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ನಿಧಾನಗತಿಯಲ್ಲಿ ಜಿಲ್ಲಾದ್ಯಂತ ಮಳೆ ಸುರಿಯುತ್ತಲೇ ಇದೆ. ಪ್ರವಾಹ ಪರಿಸ್ಥಿತಿ ಇಲ್ಲದಿದ್ದರೂ ಬೆಟ್ಟದ ಮಣ್ಣು ಸಡಿಲಗೊಂಡು ಬಂಡೆಗಳು ಉರುಳುತ್ತಿರುವುದು ಬೆಟ್ಟದ ತಪ್ಪಲಲ್ಲಿ ಮನೆ ಮಾಡಿಕೊಂಡಿರುವ ಜನರನ್ನು ಭಯಭೀತರನ್ನಾಗಿಸಿದೆ.
ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಪೆರಾಜೆ ಗ್ರಾಮದ ಕೋಳಿಕಲ್ಲು ಮಲೆ ಬೆಟ್ಟದಿಂದ ಬೃಹತ್ ಗಾತ್ರದ ಬಂಡೆ ಕಲ್ಲುಗಳು ಜಾರಿ ಬಿದ್ದಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರವಾಹ, ಭೂಕುಸಿತ ಹೀಗೆ ಹತ್ತಾರು ಸಮಸ್ಯೆಗಳಿಂದ ಪರದಾಡುತ್ತಿರುವ ಜನ ಇದೀಗ ಬಂಡೆಗಳು ಉರುಳುತ್ತಿರುವುದನ್ನು ನೋಡಿ ಮುಂದೆ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದಾರೆ.
ಪೆರಾಜೆಯ ಕೋಳಿಕಲ್ಲು ಮಲೆ ಬೆಟ್ಟದ ತಪ್ಪಲಿನಲ್ಲಿ ಹಲವು ಕುಟುಂಬಗಳು ವಾಸಿಸುತ್ತಿವೆ. ಈ ಸ್ಥಳ ಭಾಗಮಂಡಲ ಅರಣ್ಯ ವ್ಯಾಪ್ತಿಗೆ ಒಳಪಡುತ್ತದೆ. ಹಚ್ಚ ಹಸಿರಿನ ಶೋಲಾ ಕಾಡುಗಳಿಂದ ಆವೃತವಾಗಿರುವ ಬೆಟ್ಟದ ಮೇಲಿಂದ ಉರುಳಿದ ಬೃಹತ್ ಗಾತ್ರದ ಬಂಡೆಗಳು ಅರಣ್ಯದೊಳಗಿನ ಮರಗಳಿಗೆ ಬಡಿದು ನಿಂತಿವೆ. ಇದರಿಂದ ಅನಾಹುತಗಳು ತಪ್ಪಿವೆ. ಆದರೆ ಯಾವಾಗ ಯಾವ ಬಂಡೆ ಕುಸಿದು ಉರುಳುವುದೋ ಎಂಬ ಭಯ ಮಾತ್ರ ಕಾಡುತ್ತಲೇ ಇದೆ.

ಈ ನಡುವೆ ದಕ್ಷಿಣ ಕೊಡಗಿನ ತೋರಾ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ಭಾರೀ ಹಾನಿಯಾಗಿದೆ. ಜತೆಗೆ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಬಿರುಕು ಕಾಣಿಸಿಕೊಂಡು ಅಪಾಯದ ಮುನ್ಸೂಚನೆ ನೀಡಿದೆ. ಸದ್ಯದ ಪರಿಸ್ಥಿತಿ ಗಮನಿಸಿರುವ ಪರಿಸರ ಪ್ರೇಮಿ ಸಂಘಟನೆಗಳು ಎಚ್ಚೆತ್ತುಕೊಂಡು ಪ್ರಾಕೃತಿಕ ವಿಕೋಪವನ್ನು ತಡೆಯುವ ಪ್ರಯತ್ನ ಮಾಡುತ್ತಿವೆ.
ಬಿರುಕು ಕಾಣಿಸಿಕೊಂಡ ಬ್ರಹ್ಮಗಿರಿ ಬೆಟ್ಟ ಕುಸಿದು ಸಮಸ್ಯೆಗಳಾಗಬಹುದು ಎಂಬ ಮುಂದಾಲೋಚನೆಯಿಂದ ಬೆಟ್ಟ ಜಾರದಂತೆ ವೆಟ್ಟಿವೆರ್ ಹುಲ್ಲು ನೆಡುವ ಕಾರ್ಯ ಆರಂಭಿಸಿದ್ದಾರೆ. ಹಿರಿಯರಾದ ನೆಲ್ಲಮಕ್ಕಡ ಶಂಭು ಹಾಗೂ ತಲಕಾವೇರಿ ಕ್ಷೇತ್ರದ ಹಿರಿಯ ಅರ್ಚಕ ನಾರಾಯಣ ಆಚಾರ್ ಹುಲ್ಲು ನೆಡುವ ಕಾರ್ಯಕ್ಕೆ ಚಾಲನೆ ನೀಡಿದ್ದು, ಸ್ವಯಂ ಸೇವಕರು ಹುಲ್ಲು ನೆಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಹಿರಿಯ ಕಾಫಿ ಬೆಳೆಗಾರ ತೇಲಪಂಡ ಪ್ರಮೋದ್ ಅವರು ವೆಟ್ಟಿವೆರ್ ಎನ್ನುವ ಹುಲ್ಲಿನ ಬೇರು ಸುಮಾರು 18 ಅಡಿ ಭೂಮಿಯ ಕೆಳಗೆ ಹರಡುವುದರಿಂದ ಮಳೆ ಜಾಸ್ತಿಯಾಗಿ ಬರೆಯ ಮಣ್ಣು ಕುಸಿಯುವುದನ್ನು ತಡೆಯುತ್ತದೆ. ಈ ಹುಲ್ಲಿನ ಮಹತ್ವವನ್ನು ಅರಿತ ಕುಪ್ಪಂಡ ಪ್ರೇಮನಾಥ್ ಎಂಬುವವರು ಕುಣ್ಣೂರಿನಿಂದ ಹುಲ್ಲಿನ ಬೇರುಗಳನ್ನು ತಂದು ಹಾಕತ್ತೂರಿನ ಗದ್ದೆಯಲ್ಲಿ ಬೆಳೆಸಿದ್ದಾರೆ.

ಇವುಗಳನ್ನು ಗುಡ್ಡ ಪ್ರದೇಶಗಳಲ್ಲಿ ನೆಡುವುದರಿಂದ ಮುಂದೆ ಸಂಭವಿಸಬಹುದಾದ ದುರಂತಗಳನ್ನು ತಡೆಯಲು ಸಾಧ್ಯ ಎಂದು ಹೇಳಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಇಂತಹದೊಂದು ಪ್ರಕೃತಿಗೆ ಪೂರಕವಾದ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಇಲ್ಲದೆ ಹೋದರೆ ಭವಿಷ್ಯದಲ್ಲಿ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಲೇಬೇಕಾಗುತ್ತದೆ. ಅದನ್ನು ತಪ್ಪಿಸಬೇಕಾದರೆ ಪ್ರತಿಯೊಬ್ಬರು ಜಾಗೃತರಾಗಬೇಕಿದೆ.












Click it and Unblock the Notifications