ಪ್ರವಾಹ ನಿಂತರೂ ಕತ್ತಲೆಯಲ್ಲಿ ಮುಳುಗಿದ ಕೊಡಗು; ಆಗಸ್ಟ್ ವರೆಗೂ ತಪ್ಪಿಲ್ಲ ಆತಂಕ
ಮಡಿಕೇರಿ, ಆಗಸ್ಟ್ 13: ಕೊಡಗಿನಲ್ಲಿ ಪ್ರವಾಹದ ನಂತರ ನಿಧಾನಗತಿಯಲ್ಲಿ ಜನಜೀವನ ಯಥಾ ಸ್ಥಿತಿಗೆ ಮರಳುತ್ತಿದೆಯಾದರೂ ಮಳೆ ಗಾಳಿಗೆ ಮರಗಳು ಮುರಿದು ವಿದ್ಯುತ್ ಕಂಬಗಳ ಮೇಲೆ ಬಿದ್ದ ಪರಿಣಾಮ ಜಿಲ್ಲೆಯಲ್ಲಿ ಸುಮಾರು 2677ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನಾಶವಾಗಿವೆ. ಹೀಗಾಗಿ ಬಹುತೇಕ ಪ್ರದೇಶಗಳು ಕತ್ತಲೆಯಲ್ಲಿಯೇ ಮುಳುಗಿವೆ.
Recommended Video
ಇನ್ನು ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಶ್ರೇಣಿಯ ಗಿರಿಬೆಟ್ಟ ಕುಸಿದು ಅರ್ಚಕ ಕುಟುಂಬ ಭೂಸಮಾಧಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಪೈಕಿ ಇಬ್ಬರ ಶವ ಈಗಾಗಲೇ ದೊರೆತಿದೆ. ಉಳಿದ ಮೂವರ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಮಳೆ ಮತ್ತು ದಟ್ಟ ಮಂಜಿನಿಂದಾಗಿ ಕಾರ್ಯಾಚರಣೆ ನಡೆಸುವುದು ಸವಾಲಾಗಿ ಪರಿಣಮಿಸಿದೆ.

ಆಗಸ್ಟ್ ಕಳೆಯುವವರೆಗೂ ಚಿಂತೆ ತಪ್ಪಿದ್ದಲ್ಲ
ಆದರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ನಡುವೆಯೂ ಆರಕ್ಷಕ ಉಪ ಅಧೀಕ್ಷಕರ ನೇತೃತ್ವದಲ್ಲಿ ಪೊಲೀಸ್, ಅಗ್ನಿಶಾಮಕ, ಎನ್ಡಿಆರ್ ಎಫ್, ಎಸ್ಡಿಆರ್ ಎಫ್ ಮತ್ತು ಅರಣ್ಯ ಇಲಾಖೆಯ ರಕ್ಷಣಾ ತಂಡಗಳು ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಮುಂದುವರೆಸಿದೆ.
ಜಿಲ್ಲೆಯಲ್ಲಿ ಧಾರಾಕಾರವಲ್ಲದಿದ್ದರೂ ಉತ್ತಮ ಮಳೆಯಾಗುತ್ತಿದ್ದು, ಇದೇ ಮುಂದುವರೆದರೆ ಯಾವುದೇ ಹಾನಿಯಾಗುವುದಿಲ್ಲ. ಆದರೆ ಆಶ್ಲೇಷ ಮಳೆ ಕೊನೆಯ ಪಾದದಲ್ಲಿ ಮತ್ತೆ ಕುಂಭದ್ರೋಣ ಮಳೆಯನ್ನು ಸುರಿಸಿದರೆ ಎಂಬ ಭಯವೂ ಇಲ್ಲದಿಲ್ಲ. ಹಿಂದಿನ ವರ್ಷಗಳಲ್ಲಿ ಈ ಮಳೆ ಕೊನೆಯ ಪಾದದಲ್ಲಿ ಭಾರೀ ಮಳೆ ಸುರಿಯುವ ಮೂಲಕ ಭಾರೀ ಅನಾಹುತವನ್ನು ಸೃಷ್ಟಿ ಮಾಡಿತ್ತು. ಹೀಗಾಗಿ ಆಗಸ್ಟ್ ತಿಂಗಳು ಕಳೆಯುವ ತನಕವೂ ಇಲ್ಲಿನವರಿಗೆ ಚಿಂತೆ ಮಾತ್ರ ತಪ್ಪಿದಲ್ಲ.

ಜಿಲ್ಲೆಯಲ್ಲಿ ಸಾಧಾರಣ ಮಳೆ
ಜಿಲ್ಲೆಯಲ್ಲಿ ಒಂದು ದಿನದ ಅವಧಿಯಲ್ಲಿ ಸರಾಸರಿ 41.49 ಮಿ.ಮೀ. ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 54.2 ಮಿ.ಮೀ. ವಿರಾಜಪೇಟೆ ತಾಲೂಕಿನಲ್ಲಿ 38.13 ಮಿ.ವೀ. ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 32.15 ಮಿ.ಮೀ. ಮಳೆ ಸುರಿದಿದೆ. ಇನ್ನು ಮಡಿಕೇರಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಹಾರಂಗಿ ಜಲಾಶಯಕ್ಕೆ 5436 ಕ್ಯುಸೆಕ್ ನೀರು ಹರಿದು ಬರುತ್ತಿದೆ. 2859 ಅಡಿಯ ಜಲಾಶಯದಲ್ಲಿ 2856 ಅಡಿಯಷ್ಟು ನೀರನ್ನು ಸಂಗ್ರಹಿಸಿಡಲಾಗಿದ್ದು ನದಿಗೆ 5636 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.

2,677 ವಿದ್ಯುತ್ ಕಂಬಗಳಿಗೆ ಹಾನಿ
ಕಳೆದ ವಾರ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಸಾಕಷ್ಟು ಹಾನಿ ಸಂಭವಿಸಿದ್ದು, ಈ ಪೈಕಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಈ ಕುರಿತಂತೆ ಮಡಿಕೇರಿ ವಿಭಾಗದಲ್ಲಿ ಉಂಟಾದ ಹಾನಿಯ ಮಾಹಿತಿಯನ್ನು ಸೆಸ್ಕ್ ಇಇ ಸೋಮಶೇಖರ್ ನೀಡಿದ್ದಾರೆ. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ 2,677 ವಿದ್ಯುತ್ ಕಂಬಗಳಿಗೆ ಹಾನಿಯಾಗಿ 25,650 ಮೀಟರ್ ವಿದ್ಯುತ್ ಮಾರ್ಗಕ್ಕೂ ಹಾನಿ ಸಂಭವಿಸಿದೆ. 75 ವಿದ್ಯುತ್ ಪರಿವರ್ತಕಗಳು ತೊಂದರೆಗೀಡಾಗಿದೆ. ಅಂದಾಜು 304.81 ಲಕ್ಷ ರೂ. ಹಾನಿ ಸಂಭವಿಸಿದೆ.
ಮಡಿಕೇರಿಯಲ್ಲಿ 722 ವಿದ್ಯುತ್ ಕಂಬಗಳು, ಸೋಮವಾರಪೇಟೆ ತಾಲೂಕಿನಲ್ಲಿ 794 ವಿದ್ಯುತ್ ಕಂಬಗಳು, ವಿರಾಜಪೇಟೆ ತಾಲೂಕಿನಲ್ಲಿ 1161 ಕಂಬಗಳು, 9,450 ಮೀಟರ್ ವಿದ್ಯುತ್ ಮಾರ್ಗ, 29 ವಿದ್ಯುತ್ ಪರಿವರ್ತಕ ಸೇರಿದಂತೆ 126.07 ಲಕ್ಷ ರೂ. ಹಾನಿ ಸಂಭವಿಸಿದೆ.

ಸಮರೋಪಾದಿಯಲ್ಲಿ ಸಾಗಿದ ದುರಸ್ತಿ ಕಾರ್ಯ
ಈಗಾಗಲೇ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಇಲ್ಲದೆ ಜನ ಕತ್ತಲೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ವಿದ್ಯುತ್ ಸಂಪರ್ಕವನ್ನು ದುರಸ್ತಿಗೊಳಿಸುವ ಕಾರ್ಯ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಒಟ್ಟು 385 ಶಾಶ್ವತ ನಿರ್ವಹಣಾ ಸಿಬ್ಬಂದಿಗಳಿದ್ದು, ಹೆಚ್ಚುವರಿಯಾಗಿ 200 ಸಂಖ್ಯೆಯ ನಿರ್ವಹಣಾ ಸಿಬ್ಬಂದಿಗಳನ್ನು ಚಾವಿಸನಿನಿಯ ಮೈಸೂರು ಹಾಗೂ ವೃತ್ತಗಳಿಂದ ಹಾಗೂ ಗುತ್ತಿಗೆ ಏಜನ್ಸಿ ಮುಖಾಂತರ ನಿಯೋಜಿಸಿದೆ. ನಿಗಮದ ಸಿಬ್ಬಂದಿ ವತಿಯಿಂದ ದುರಸ್ತಿ ಕಾರ್ಯ ಕೈಗೊಂಡಿದ್ದು, ಇದರ ಜೊತೆಗೆ ಗುತ್ತಿಗೆದಾರರಿಂದಲೂ ಕಾಮಗಾರಿ ನಡೆಸಲಾಗುತ್ತಿದೆ.
ದುರಸ್ತಿ ಕಾಮಗಾರಿಗಳಿಗೆ ಅಗತ್ಯವಿರುವ ಕಂಬಗಳು, ವಿದ್ಯುತ್ ಪರಿವರ್ತಕಗಳು, ವಾಹಕ ಹಾಗೂ ಇತರೆ ವಿದ್ಯುತ್ ಪರಿಕರಗಳನ್ನು ದಾಸ್ತಾನು ಮಾಡಲಾಗಿದೆ. ಒಟ್ಟಾರೆ ಕತ್ತಲಲ್ಲಿರುವ ಜಿಲ್ಲೆಗೆ ಬೆಳಕು ನೀಡುವ ಕಾರ್ಯ ಪ್ರಗತಿಯಲ್ಲಿ ಸಾಗಿರುವುದು ಕಂಡು ಬಂದಿದೆ.












Click it and Unblock the Notifications