ಪರಿಹಾರ ಸಿಗದವರಿಗೆ ಜಿಲ್ಲಾಡಳಿತದಿಂದ ಪರಿಹಾರ ಅದಾಲತ್
ಮಡಿಕೇರಿ, ಮೇ 29: ಕಳೆದ ವರ್ಷ ಮುಂಗಾರಿನಲ್ಲಿ ನಡೆದ ಪ್ರಕೃತಿ ವಿಕೋಪ ಇಡೀ ಕೊಡಗನ್ನೇ ಅಲ್ಲೋಲ ಕಲ್ಲೋಲ ಮಾಡಿತ್ತು. ಒಂದಷ್ಟು ಸಾವು ನೋವು, ಆಸ್ತಿ ಪಾಸ್ತಿ ನಾಶವನ್ನು ಜನ ಅನುಭವಿಸಿ ಕಂಗಾಲಾಗಿದ್ದರು. ಆ ಸಮಯದಲ್ಲಿ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯವೂ ಭರದಿಂದಲೇ ಸಾಗಿತ್ತು. ಆದರೆ ಬಹಳಷ್ಟು ಮಂದಿಗೆ ಇನ್ನೂ ಪರಿಹಾರ ಕೈಸೇರಿಲ್ಲ. ಇದೀಗ ಅಂಥ ಸಂತ್ರಸ್ತರ ಅನುಕೂಲಕ್ಕೆಂದೇ ಜಿಲ್ಲಾಡಳಿತ ಪರಿಹಾರ ಅದಾಲತ್ ನಡೆಸಿ, ಪರಿಹಾರ ವಿತರಿಸುವ ಕಾರ್ಯಕ್ಕೆ ಮುಂದಾಗಿದೆ.
ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸುವ ಕಾರ್ಯ ಸಮರೋಪಾದಿಯಲ್ಲಿ ಸಾಗುತ್ತಿದೆ. ಪ್ರಕೃತಿ ವಿಕೋಪದಿಂದಾದ ಜೀವಹಾನಿ, ಜಾನುವಾರು ಹಾನಿ, ಬೆಳೆ ಹಾನಿ, ಮನೆ ಹಾನಿ ಹಾಗೂ ವಿವಿಧ ಹಾನಿಗಳ ಸಂಬಂಧ ಪರಿಹಾರವನ್ನು ನೀಡಲಾಗುತ್ತಿದೆ.
ಮಾನವ ಜೀವ ಹಾನಿ ಅನುಕಂಪ ಭತ್ಯೆ 21 ಪ್ರಕರಣಗಳಿಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರ ಪರಿಹಾರ ನಿಧಿಯಡಿ 1.370 ಕೋಟಿ ರೂ, ಜಾನುವಾರು ಪ್ರಾಣಹಾನಿ 127 ಪ್ರಕರಣಗಳಿಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ನಡಿ 0.282 ಕೋಟಿ ರೂ, ದಿನಬಳಕೆಯ ವಸ್ತು ಹಾನಿಗೆ ಸಂಬಂಧಿಸಿದಂತೆ (ಅನುಕಂಪ ಭತ್ಯೆ ಪ್ರತಿ ಕುಟುಂಬಕ್ಕೆ 3,800ರೂ ನಂತೆ) 4,400 ಪ್ರಕರಣಗಳಿಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ನಡಿ 1.672 ಕೋಟಿ ರೂ, ವಾಸದ ಮನೆ ಹಾನಿಯ 4,254 ಪ್ರಕರಣಗಳಿಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ನಡಿ 15.087 ಕೋಟಿ ರೂ, ಮನೆಹಾನಿ (ಅನುಕಂಪ ಭತ್ಯೆ ಪ್ರತಿ ಕುಟುಂಬಕ್ಕೆ 50 ಸಾವಿರ ರೂ ನಂತೆ) 1,021 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 5,105 ಕೋಟಿ ರೂ, ವಾಸದ ಮನೆ ಹಾನಿ 480 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 0.480 ಕೋಟಿ ರೂ, ವಾಸದ ಮನೆ ಹಾನಿ 415 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 2.075 ಕೋಟಿ ರೂ, ವಾಸದ ಮನೆ ಹಾನಿ 54 ಪ್ರಕರಣಗಳಿಗೆ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 1.080 ಕೋಟಿ ರೂ, ಬೆಳೆಹಾನಿ 32,198 ಪ್ರಕರಣಗಳಿಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ 38.050 ಕೋಟಿ ರೂ, ಬೆಳೆಹಾನಿ 1,185 ಪ್ರಕರಣಗಳಿಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ 2.970 ಕೋಟಿ ರೂ, ಬೆಳೆಹಾನಿ 351 ಪ್ರಕರಣಗಳಿಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ 20.920 ಕೋಟಿ ರೂ, ಒಟ್ಟಾರೆ ವೈಯಕ್ತಿಕ 44,506 ಪ್ರಕರಣಗಳಿಗೆ ಎನ್ಡಿಆರ್ಎಫ್, ಎಸ್ಡಿಆರ್ಎಫ್, ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರ ಪರಿಹಾರ ನಿಧಿಯಿಂದ 89.091 ಕೋಟಿ ರೂಪಾಯಿ ಹಣವನ್ನು ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆ ಹಾಗೂ ಚೆಕ್ ಮೂಲಕ ಪಾವತಿ ಮಾಡಲಾಗಿದೆ.

ಇದೆಲ್ಲದರ ನಡುವೆಯೂ ಬಹಳಷ್ಟು ಮಂದಿಗೆ ಇನ್ನೂ ಪರಿಹಾರ ದೊರೆತಿಲ್ಲ. ಇದನ್ನು ಮನಗಂಡ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲಾಡಳಿತದ ವತಿಯಿಂದ ಮೂರು ದಿನಗಳ ಕಾಲ ಪರಿಹಾರ ಅದಾಲತ್ ಏರ್ಪಡಿಸುವ ಮೂಲಕ ಸಂತ್ರಸ್ತರ ಅಹವಾಲು ಸ್ವೀಕರಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ಅದಾಲತ್ ನಲ್ಲಿ ನೂರಾರು ಸಂತ್ರಸ್ತರು ಪಾಲ್ಗೊಂಡು ತಮ್ಮ ಹೆಸರು ನೋಂದಾಯಿಸಿಕೊಂಡು ಸಮಸ್ಯೆಗಳ ಬಗ್ಗೆ ಮನವಿ ಮಾಡಿದ್ದಾರೆ. ಈ ಅದಾಲತ್ ನಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರೇ ಮುಂದೆ ನಿಂತು ಸಂತ್ರಸ್ತರ ಮನವಿಯನ್ನು ಪರಿಶೀಲಿಸಿದ್ದಾರೆ. ಕಳೆದ ಬಾರಿ ಪ್ರಕೃತಿ ವಿಕೋಪ ಸಂಭವಿಸಿದಾಗ ಜಿಲ್ಲಾಧಿಕಾರಿಯಾಗಿದ್ದ ಶ್ರೀವಿದ್ಯಾ ಅವರು ಪರಿಸ್ಥಿತಿಯನ್ನು ಸಮರ್ಥವಾಗಿ ಪರಿಶೀಲಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅವರು ವರ್ಗಾವಣೆಯಾದ ಬಳಿಕ ಅನೀಸ್ ಕಣ್ಮಣಿ ಜಾಯ್ ಅವರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಸಂತ್ರಸ್ತರ ಬಗ್ಗೆ ಕಾಳಜಿ ವಹಿಸಿ ಕಾರ್ಯ ನಿರ್ವಹಿಸುತ್ತಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.











Click it and Unblock the Notifications