ಕೊಡಗಿನಲ್ಲಿ ನಕ್ಸಲರು ಪ್ರತ್ಯಕ್ಷ : ಅಕ್ಕಿ ಮೂಟೆ, ಮೊಬೈಲ್ ಕಳವು
ಮಡಿಕೇರಿ, ಏಪ್ರಿಲ್ 25 : ಕರ್ನಾಟಕದಲ್ಲಿ ಮತ್ತೆ ನಕ್ಸಲ್ ಚಟುವಟಿಕೆ ಸಕ್ರಿಯವಾಗಿರುವ ಅನುಮಾನ ಉಂಟಾಗಿದೆ. ಕೊಡಗು ಜಿಲ್ಲೆಯಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಕೊಡಗು ಜಿಲ್ಲೆಯ ತಡಿಯಂಡಮೋಳ್ ಬೆಟ್ಟದ ತಪ್ಪಲಿನಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಅಕ್ಕಿಮೂಟೆ ಮತ್ತು ಮೊಬೈಲ್ ಅನ್ನು ದೋಚಿ ಅವರು ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಕೊಡಗು ಜಿಲ್ಲೆಯಲ್ಲಿನ ಅತಿ ಎತ್ತರದ ಬೆಟ್ಟ ಪ್ರದೇಶ ತಡಿಯಂಡಮೋಳ್. ಬೆಟ್ಟದ ತಪ್ಪಲಿನ ಯುವಕಪಾಡಿ ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಇಬ್ಬರು ನಕ್ಸಲರು ಗ್ರಾಮದ ಎರಡು ಮನೆಗಳಿಗೆ ಬಂದಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಸುಮಾರು 30 ವರ್ಷ ಪ್ರಾಯದ ಒಬ್ಬ ಪುರುಷ, ಒಬ್ಬ ಮಹಿಳೆ ಕುಟ್ಟಪ್ಪ ಎಂಬುವವರ ಮನೆಗೆ ನುಗ್ಗಿ ಅಕ್ಕಿಯನ್ನು ಹೊತ್ತುಕೊಂಡು ಹೋಗಿದ್ದಾರೆ. ಅರುಣ ಎಂಬುವವರ ಮನೆಗೆ ನುಗ್ಗಿದ ಅವರು ಮೊಬೈಲ್ ಕಸಿದು ಪರಾರಿಯಾಗಿದ್ದಾರೆ.
ಕೊಡಗು ಪೊಲೀಸರು ಮತ್ತು ನಕ್ಸಲ್ ನಿಗ್ರಹ ಪಡೆ ಸ್ಥಳಕ್ಕೆ ಧಾವಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮಕ್ಕೆ ಬಂದಿದ್ದ ನಕ್ಸಲರು ತಮ್ಮ ಬಗ್ಗೆ ಮಾಹಿತಿ ನೀಡದಂತೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯ ಭಾರತದಲ್ಲಿರುವ ನಕ್ಸಲರು ರಕ್ಷಣಾ ಪಡೆಗಳ ಕಾರ್ಯಾಚರಣೆಯಿಂದಾಗಿ ಬೆದರಿ ದಕ್ಷಿಣ ಭಾರತದತ್ತ ಮುಖ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಕೇರಳ ಮೂಲಕ ನಕ್ಸಲರು ಕೊಡಗು ಪ್ರವೇಶಿಸಿರಬಹುದು ಎಂದು ಅಂದಾಜಿಸಲಾಗಿದೆ.












Click it and Unblock the Notifications