ಮಗಳು, ತಾಯಿಯ ಪ್ರಾಣ ತೆಗೆಯಿತು ಕೆರೆಯ ಮೀನು!
ಮಡಿಕೇರಿ, ಅಕ್ಟೋಬರ್ 17: ಬಟ್ಟೆ ಒಗೆಯಲು ತೆರಳಿದ ಬಾಲಕಿ ಮೀನು ಹಿಡಿಯಲು ಹೋಗಿ ನೀರಿಗೆ ಬಿದ್ದಿದ್ದು, ಆಕೆಯನ್ನು ರಕ್ಷಿಸುವ ಯತ್ನದಲ್ಲಿ ತಾಯಿಯೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಸಮೀಪದ ಕಲ್ಲಾರೆ ವ್ಯಾಪ್ತಿಯ ಕಲ್ಲುಕೋರೆಯ ಕೆರೆಯಲ್ಲಿ ಸಂಭವಿಸಿದೆ.
ಶೋಭಾ (29) ಮತ್ತು ಅವರ ಪುತ್ರಿ ಕೊಡ್ಲಿಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದ ವಿದ್ಯಾಶ್ರೀ (11) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದವರು. ಮೂಲತಃ ಹೊಳೆನರಸೀಪುರದ ನಿವಾಸಿಯಾಗಿದ್ದು, ಕೆಲ ಸಮಯದಿಂದ ಕೊಡ್ಲಿಪೇಟೆಯ ಕಲ್ಲಾರೆಯಲ್ಲಿ ನೆಲೆಸಿರುವ ಆನಂದ ಎಂಬವರ ಪತ್ನಿ ಹಾಗೂ ಮಗಳು ಮೃತಪಟ್ಟಿದ್ದಾರೆ.[ರಸ್ತೆ ವಿಭಜಕಕ್ಕೆ ಡಿಕ್ಕಿ: ಕಾರು ಪಲ್ಟಿ, ಮೂವರು ಸಾವು]
ಶೋಭಾ ತನ್ನ ಇಬ್ಬರು ಮಕ್ಕಳೊಂದಿಗೆ ಭಾನುವಾರ ಬಟ್ಟೆ ಒಗೆಯಲೆಂದು ಕಲ್ಲಾರೆಯ ಕಲ್ಲುಕೋರೆ ಕೆರೆಗೆ ತೆರಳಿದ್ದರು. ಶೋಭಾ ಬಟ್ಟೆ ಒಗೆಯುತ್ತಿದ್ದರೆ, ಮಕ್ಕಳಾದ ವಿದ್ಯಾಶ್ರೀ ಮತ್ತು ಮಗ ಕುಶಾಲ್ ಆಟವಾಡುತ್ತಿದ್ದರು. ವಿದ್ಯಾಶ್ರೀಗೆ ಕೆರೆಯಲ್ಲಿ ಮೀನು ಕಂಡಿದ್ದು, ಅದನ್ನು ಹಿಡಿಯುವ ಸಲುವಾಗಿ ವೇಲನ್ನು ನೀರಿಗೆ ಎಸೆದಿದ್ದಾಳೆ.
ಆಗ ಅದು ಕಲ್ಲಿಗೆ ಸಿಕ್ಕಿ ಹಾಕಿಕೊಂಡಿದ್ದು, ಅದನ್ನು ಎಳೆದು ತೆಗೆಯುವ ಸಂದರ್ಭದಲ್ಲಿ ಆಯತಪ್ಪಿ ನೀರಿಗೆ ಬಿದ್ದಿದ್ದಾಳೆ. ಕೂಡಲೇ ಶೋಭಾ ಆಕೆಯ ರಕ್ಷಣೆಗೆ ಮುಂದಾಗಿದ್ದು, ಈಜು ಬಾರದ ಕಾರಣ ಆಕೆಯೂ ಮುಳುಗಿದ್ದಾರೆ. ಈ ಸಂದರ್ಭದಲ್ಲಿ ಕೆರೆಯ ದಡದಲ್ಲಿದ್ದ ಮಗ ಕುಶಾಲ್ ತಾಯಿಯನ್ನು ರಕ್ಷಿಸಲು ಮುಂದಾದಾಗ, ನೀ ಬರಬೇಡ ಎಂದು ಶೋಭಾ ಕೂಗಿಕೊಂಡಿದ್ದಾರೆ.[ಕಾರು ಡಿಕ್ಕಿಯಾಗಿ ತಾಂಡವಪುರದ ನವವಿವಾಹಿತ ಸಾವು]
ತಕ್ಷಣ ಕುಶಾಲ್ ಮನೆಗೆ ಬಂದು, ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾನೆ. ಅವರು ಬರುವ ವೇಳೆಗೆ ತಾಯಿ- ಮಗಳು ಸಾವನ್ನಪ್ಪಿದ್ದರು. ಘಟನಾ ಸ್ಥಳಕ್ಕೆ ಕೊಡ್ಲಿಪೇಟೆಯ ಹೊರ ಠಾಣಾ ಪೊಲೀಸರು ಬಂದು, ಮೃತ ದೇಹಗಳಿಗಾಗಿ ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ.
ಆ ನಂತರ ಕುಶಾಲನಗರ ಅಗ್ನಿಶಾಮಕ ದಳದವರು ಸುಮಾರು 20 ಅಡಿ ಆಳದಲ್ಲಿ ಸಿಲುಕಿದ್ದ ಇಬ್ಬರ ಮೃತದೇಹವನ್ನು ಹೊರತೆಗೆದಿದ್ದಾರೆ. ಮೂಲತಃ ಹೊಳೆನರಸೀಪುರದವರಾದ ಆನಂದ ಅವರು ಕೆಲ ತಿಂಗಳ ಹಿಂದಷ್ಟೇ ಕೊಡ್ಲಿಪೇಟೆಗೆ ಆಗಮಿಸಿದ್ದು, ಅಲ್ಲಿನ ಅಂಗಡಿ ಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.[ತಂದೆ ವ್ಯವಹಾರದ ಲಾಭಕ್ಕಾಗಿ 68 ದಿನ ಉಪವಾಸ: ಬಾಲಕಿ ಸಾವು]
ಸೋಮವಾರಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಪರಶಿವಮೂರ್ತಿ, ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಸೇರಿದಂತೆ ಪೊಲೀಸ್ ಸಿಬ್ಬಂದಿ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.