ಕೊಡಗಿನಲ್ಲಿ ಮತ್ತೆ ಬಿರುಸುಗೊಂಡ ಮುಂಗಾರು: ಶೀತಗಾಳಿಗೆ ತತ್ತರ!
Recommended Video

ಮಡಿಕೇರಿ, ಆಗಸ್ಟ್ 8: ಕೊಡಗಿನಲ್ಲಿ ಕಳೆದ ಎರಡು ವಾರಗಳಿಂದ ತಗ್ಗಿದ್ದ ಮಳೆಯ ಅಬ್ಬರ ಮತ್ತೆ ಶುರುವಾಗಿದೆ. ಪುನರ್ವಸು ಮಳೆಯ ಅಬ್ಬರಕ್ಕೆ ಕಾವೇರಿ ನದಿ ಉಕ್ಕಿ ಹರಿದಿತ್ತಲ್ಲದೆ ಹಲವು ಪ್ರದೇಶಗಳು ಜಲಾವೃತವಾಗಿ ಕೋಟ್ಯಂತರ ರೂ. ನಷ್ಟ ಸಂಭವಿಸಿತ್ತು.
ಆದರೆ ನಂತರದ ಪುಷ್ಯ ಮಳೆ ಧಾರಾಕಾರವಾಗಿ ಅಲ್ಲದಿದ್ದರೂ ಸಾಧಾರಣವಾಗಿ ಸುರಿದಿತ್ತು. ಅದರಲ್ಲೂ ಕಳೆದ ಒಂದು ವಾರದಿಂದ ಮಳೆಯ ಪ್ರಮಾಣ ಕಡಿಮೆಯಾಗಿತ್ತು. ಆದರೆ ಇದೀಗ ಆಶ್ಲೇಷ ಮಳೆ ಶುರುವಾಗಿದ್ದು ಭಾರೀ ಮಳೆ ಸುರಿಯುವ ಲಕ್ಷಣಗಳು ಕಂಡು ಬರತೊಡಗಿದೆ.
ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಈಗಾಗಲೇ ಭಾಗಮಂಡಲ- ನಾಪೋಕ್ಲು ರಸ್ತೆ ಸಂಪರ್ಕ ಕಡಿತಗೊಂಡಿದ್ದು, ತಲಕಾವೇರಿಗೆ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ಇದುವರೆಗೂ ನಾಲ್ಕನೇ ಬಾರಿಗೆ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಮಳೆಯಿಂದಾಗಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ.
ಮಂಗಳಾದೇವಿ ನಗರದ ಹೇಮಾವತಿ ಎಂಬವರ ಮನೆ ಪಕ್ಕದ ಬರೆ ಕುಸಿತಗೊಡು ಮನೆಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ನಗರಸಭಾ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರದ ಕಾವೇರಿ ಲೇಔಟ್, ಗೌಳಿ ಬೀದಿಯಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ನೀರನ್ನು ಹೊರಹಾಕಲು ಜನರು ಪರದಾಡುತ್ತಿದ್ದಾರೆ.

ಭಾಗಮಂಡಲದಲ್ಲಿ ಜಲಮಯ ರಸ್ತೆಗಳು
ಮಂಗಳವಾರ ರಾತ್ರಿಯಿಂದ ಇಲ್ಲಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದ್ದು, ಮತ್ತೆ ಕಾವೇರಿ ನದಿ ಸೇರಿದಂತೆ ಇತರೆ ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ತೊರೆ, ನದಿಗಳು ತುಂಬಿ ಹರಿಯಲಾರಂಭಿಸಿವೆ. ಭಾಗಮಂಡಲದಲ್ಲಿ 113.80 ಮಿ.ಮೀ. ಮಳೆ ಸುರಿದ ಕಾರಣ ಮತ್ತೆ ತ್ರಿವೇಣಿ ಸಂಗಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು, ರಸ್ತೆಗಳು ಜಲಾವೃತವಾಗಿವೆ. ಮಡಿಕೇರಿ ವ್ಯಾಪ್ತಿಯಲ್ಲಿ ಭಾರಿ ಮಳೆ ಸುರಿದಿದ್ದು ರಾತ್ರಿಯಿಂದ ಬೆಳಗ್ಗಿನ ಅವಧಿವರೆಗೆ ಅತ್ಯಧಿಕ ಸುಮಾರು 106.ಮಿ.ಮೀ ಮಳೆ ಸುರಿದಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಡಿಕೇರಿಯಲ್ಲಿ ಶೀತಗಾಳಿಗೆ ತತ್ತರ
ಮಳೆಯೊಂದಿಗೆ ಶೀತಗಾಳಿಯೂ ಬೀಸುತ್ತಿದ್ದು, ಮಳೆಯ ರಭಸ ಇನ್ನಷ್ಟು ಜಾಸ್ತಿಯಾದರೆ ಜನ ಸಂಕಷ್ಟಕ್ಕೀಡಾಗುವುದು ಖಚಿತವಾಗಿದೆ. ನಗರದ ಕಾವೇರಿ ಲೇ ಔಟ್ ನಲ್ಲಿ ಚರಂಡಿಯ ನೀರು ಮನೆಗಳಿಗೆ ನುಗ್ಗಿದ್ದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಗುಡ್ಡಪ್ರದೇಶಗಳಲ್ಲಿ ವಾಸಿಸುವ ಜನ ಭಯದಲ್ಲಿ ದಿನ ಕಳೆಯುವಂತಾಗಿದೆ.

ನೀರಿನಲ್ಲಿ ಮುಳುಗಿದ ಬಸ್
ಮಂಗಳವಾರ ಹೆಚ್ಚು ಮಳೆ ಇಲ್ಲದ ಕಾರಣದಿಂದ ಖಾಸಗಿ ಬಸ್ ಕಕ್ಕಬೆ ಎಂಬಲ್ಲಿ ಹೊಳೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಬೆಳಿಗ್ಗೆ ಬಸ್ಗಳನ್ನು ತೊಳೆಯಲು ಅನುಕೂಲವಾಗುತ್ತದೆ ಎಂಬ ಆಲೋಚನೆಯೂ ಇತ್ತು. ಆದರೆ ರಾತ್ರಿ ಸುರಿದ ಭಾರೀ ಮಳೆಗೆ ನದಿ ತುಂಬಿ ಹರಿದ ಕಾರಣ ಬೆಳಿಗ್ಗೆ ಎದ್ದು ನೋಡುವ ವೇಳೆಗೆ ಬಸ್ ನೀರಿನಲ್ಲಿ ಮುಳುಗಡೆಯಾದ ದೃಶ್ಯ ಗೋಚರವಾಗಿತ್ತು.

ಕಕ್ಕಡದಲ್ಲಿ ಆಶ್ಲೇಷ ಮಳೆ ಅಬ್ಬರ
ಕೊಡಗಿನಲ್ಲಿ ಕಕ್ಕಡ ಮಾಸ ಮುಗಿಯುವ ಹಂತ ತಲುಪಿದ್ದು ಈ ತಿಂಗಳಲ್ಲಿ ಇಲ್ಲಿ ಮಳೆ ಎಡೆಬಿಡದೆ ಸುರಿಯಯುವುದು ಮಾಮೂಲಿ. ಅದರಲ್ಲೂ ಆಶ್ಲೇಷ ಮಳೆ ಧಾರಾಕಾರವಾಗಿ ಸುರಿದು ನದಿಗಳಲ್ಲಿ ಪ್ರವಾಹ ಸೃಷ್ಟಿಸುವುದು ಸಾಮಾನ್ಯವಾಗಿದೆ. ಹೀಗಾಗಿ ಈ ಮಳೆ ಮತ್ತೆ ಅಬ್ಬರಿಸುವ ಸಾಧ್ಯತೆಯಿರುವುದರಿಂದ ಜಿಲ್ಲಾಡಳಿತ ಪ್ರವಾಹ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಯಪ್ರವೃತ್ತವಾಗಿದೆ.
ಇನ್ನು ಕಳೆದೊಂದು ದಿನದಲ್ಲಿ ಸುರಿದ ಮಳೆಯನ್ನು ಗಮನಿಸಿದರೆ ಜಿಲ್ಲೆಯಲ್ಲಿ ಸರಾಸರಿ 65.91 ಮಿ.ಮೀ. ಮಳೆ ಸುರಿದಿರುವುದನ್ನು ಕಾಣಬಹುದು. ಕಳೆದೊಂದು ವಾರದಲ್ಲಿ ಮಳೆಯ ಪ್ರಮಾಣ 5ಮಿ.ಮೀ.ಗೆ ತಗ್ಗಿತ್ತು. ಆದರೆ ಮಂಗಳವಾರದಿಂದ ಮತ್ತೆ ಲಯಕಂಡುಕೊಂಡಿದ್ದು ಜಿಲ್ಲೆಯಾದ್ಯಂತ ರಭಸವಾಗಿ ಸುರಿಯುತ್ತಿದೆ.

ತಾಲೂಕುವಾರು ಉತ್ತಮ ಮಳೆ
ಇನ್ನು ತಾಲೂಕುವಾರು ಮಳೆ ಸುರಿಯುವುದನ್ನು ನೋಡಿದರೆ ಮಡಿಕೇರಿ ತಾಲೂಕಿನಲ್ಲಿ 93.20 ಮಿ.ಮೀ, ವೀರಾಜಪೇಟೆಯಲ್ಲಿ 66.77 ಮಿ.ಮೀ ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 37.77ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 2713.87 ಮಿ.ಮೀ ಮಳೆ ಸುರಿದಿದ್ದರೆ ಕಳೆದ ವರ್ಷ ಇದೇ ಅವಧಿಯಲ್ಲಿ 1339.36 ಮಿ.ಮೀ ನಷ್ಟು ಮಾತ್ರ ಮಳೆಯಾಗಿತ್ತು.

ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು
ಮಡಿಕೇರಿ ವ್ಯಾಪ್ತಿಯಲ್ಲಿ ಮಳೆಹೆಚ್ಚಾದ ಹಿನ್ನಲೆಯಲ್ಲಿ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು ಸದ್ಯ 6868 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಅದರಲ್ಲಿ ನದಿಗೆ 5200 ಕ್ಯುಸೆಕ್ ಹಾಗೂ ನಾಲೆಗೆ 50 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ ಗರಿಷ್ಠ 2,859 ಅಡಿಯ ಜಲಾಶಯದಲ್ಲಿ 2857.89 ಅಡಿಗಳಷ್ಟು ನೀರಿದೆ. ಮಳೆಯ ರಭಸ ಹೆಚ್ಚಾದರೆ ಒಳ ಹರಿವು ಕೂಡ ಹೆಚ್ಚುವ ಸಾಧ್ಯತೆಯಿದೆ.












Click it and Unblock the Notifications