ಕೊಡಗಿನಲ್ಲಿ ಮಳೆಗೆ ರಸ್ತೆ ಕುಸಿತ, ಬಿರುಕುಬಿಟ್ಟ ಮನೆಗಳು:ಆತಂಕ
ಮಡಿಕೇರಿ, ಜು.25: ಕೊಡಗಿನಲ್ಲಿ ಮತ್ತೆ ಮಳೆ ಅಬ್ಬರಿಸತೊಡಗಿದ್ದು ಪರಿಣಾಮ ರಸ್ತೆ, ಮನೆ ಕುಸಿತ ಪ್ರಕರಣಗಳು ಹೆಚ್ಚಾಗತೊಡಗಿದೆ. ನಿರಂತರ ಮಳೆಯ ಕಾರಣ ಭೂಮಿ ತೇವಗೊಂಡಿದ್ದು ಅಂತರ್ಜಲ ಮೇಲಕ್ಕೆ ಉಕ್ಕಿ ಬರುತ್ತಿದ್ದು ಅಲ್ಲಲ್ಲಿ ಗುಡ್ಡ ಕುಸಿದರೆ, ಗಾಳಿಗೆ ಮರಗಳು ನೆಲಕ್ಕುರುತ್ತಿವೆ. ಮಳೆಯೊಂದಿಗೆ ಚಳಿಯೂ ಬಾಧಿಸುತ್ತಿರುವುದರಿಂದ ಸಾಕಪ್ಪಾ ಮಳೆ ಎಂದು ಗೋಳಿಡುವ ಸ್ಥಿತಿ ಇಲ್ಲಿನವರದ್ದಾಗಿದೆ.
ಈಗಾಗಲೇ ಭಾರಿ ಗಾಳಿ, ಮಳೆಗೆ ಹಲವು ಮನೆಗಳು ಕುಸಿದು ಬಿದ್ದಿವೆ. ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಭೂಮಿಯು ತೇವಾಂಶ ಹೆಚ್ಚಾದ ಪರಿಣಾಮ ತೋಟದ ಮರಗಳು ಗಾಳಿಯ ರಭಸಕ್ಕೆ ನೆಲಕ್ಕೆ ಬೀಳುತ್ತಿರುವ ಕಾರಣ ತೋಟಗಳಲ್ಲಿ ಕೆಲಸ ಮಾಡಲು ಭಯಪಡುವಂತಾಗಿದೆ. ತೇವಾಂಶವಿರುವ ಜಾಗಗಳಲ್ಲಿ ಕಟ್ಟಿದ ಮನೆಗಳಲ್ಲಿ ನೀರು ಉಕ್ಕಿ ಬರುತ್ತಿದ್ದು ಆತಂಕ ಎದುರಾಗಿದೆ.
ಕೆಸರುಗದ್ದೆಯ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳ ನೋಂದಣಿ ಶುರು
ಸುಂಟಿಕೊಪ್ಪದ ಪಂಪ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಪಿ.ಎಫ್ ಸಬಾಸ್ಟೀನ್ ಮತ್ತು ರಮೇಶ್ ಎಂಬವರಿಗೆ ಸೇರಿದ ಹಳೆಯ ಕಟ್ಟಡ ಕುಸಿದಿದೆ. ಅತಿಯಾದ ಮಳೆಗೆ ಇಲ್ಲಿನ ಕಾಫಿಗಿಡಗಳಲ್ಲಿದ್ದ ಫಸಲು ಉದುರತೊಡಗಿದ್ದು, ಮರ ಬಿದ್ದು ಕಾಫಿಗಿಡಗಳು ನಾಶವಾಗಿವೆ.
ಕುಸಿಯುವ ಹಂತದಲ್ಲಿ ಮಂಗಳೂರು ರಸ್ತೆ: ಮಳೆಯ ಕಾರಣ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ವಿವಿಧೆಡೆ ಬಿರುಕು ಕಾಣಿಸಿಕೊಂಡಿದ್ದು, ಕಾಟಕೇರಿ ಬಳಿ ರಸ್ತೆ ಕುಸಿತವಾಗಿದ್ದು, ಮಳೆಯ ಕಾರಣ ಇದನ್ನು ದುರಸ್ತಿ ಪಡಿಸುವುದು ಅಸಾಧ್ಯವಾಗಿದ್ದು ಯಾವಾಗ ಸಂಪೂರ್ಣ ರಸ್ತೆ ಕುಸಿದು ಸಂಚಾರವೇ ಬಂದ್ ಆಗಿಬಿಡುತ್ತದೆಯೋ ಎಂಬ ಭಯವೂ ಕಾಡತೊಡಗಿದೆ.
ಈಗಾಗಲೇ ಸುರಿದ ಪುನರ್ವಸು ಮಳೆ ಭಾರೀ ಅನಾಹುತ ಸೃಷ್ಠಿಸಿದ್ದು ಅದರಂತೆ ಪುಷ್ಯ ಮಳೆಯೂ ಅಬ್ಬರಿಸುವ ಲಕ್ಷಣಗಳು ಕಾಣಿಸುತ್ತಿದ್ದು, ಮಳೆಯ ರಭಸ ಹೆಚ್ಚಿದ್ದರಿಂದ ಮತ್ತೆ ನದಿಯಲ್ಲಿ ನೀರಿನ ಪ್ರಮಾಣ ಜಾಸ್ತಿಯಾಗುತ್ತಿದೆ.
ಕೊಡಗಿನ ಮಳೆಯಲ್ಲಿ ಆಟಿ-ನಾಟಿ ಕೂಡುಕೂಟದ ಸಂಭ್ರಮ
ಭಯವುಂಟು ಮಾಡಿದ ಬಿರುಕು: ಮಡಿಕೇರಿ ಬಳಿಯ ಮಕ್ಕಂದೂರು ಗ್ರಾಮ ವ್ಯಾಪ್ತಿಯಲ್ಲಿ ಮನೆ ಬಿರುಕು ಬಿಡುತ್ತಿರುವುದು ಹೆಚ್ಚಾಗಿದ್ದು, ಮತ್ತೆ ಭಯದ ವಾತಾವರಣ ನಿರ್ಮಾಣವಾಗಿದೆ. ಅಂತರ್ಜಲ ಮಟ್ಟ ಹೆಚ್ಚಾಗಿ ಭೂಮಿ ಬಾಯಿ ಬಿಡುತ್ತಿದೆ ಎಂದು ಹೇಳಲಾಗುತ್ತಿದೆ. ಮನೆಯ ವಾಸಿಗಳಿಗೆ ನೆಲದೊಳಗೆ ನೀರು ಹರಿದ ಶಬ್ದವೂ ಬರುತ್ತಿದ್ದು ಇದರಿಂದ ಎಲ್ಲಿ ಕುಸಿದು ಬೀಳುತ್ತೋ ಎಂಬ ಭಯ ಅವರನ್ನು ಕಾಡುತ್ತಿದೆ.
ಈ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಈಗಾಗಲೇ ಭೂಮಿ ಬಿರುಕು ಬಿಟ್ಟ ಪ್ರದೇಶದಲ್ಲಿ ನೀರು ಹರಿದ ಶಬ್ಧದ ಅನುಭವವಾಗುತ್ತಿದೆಯಂತೆ. ಕೂಡಲೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆಹಾಕುವ ಅಗತ್ಯವಿದೆ. ಇನ್ನು ಭಾಗಮಂಡಲ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ವೇಗ ಹೆಚ್ಚಿಸಿ ಕೊಳ್ಳುವ ಸಾಧ್ಯತೆ ಕಂಡು ಬರುತ್ತಿದೆ.