ಚುನಾವಣೆ ನಡುವೆಯೂ ಹಾಕಿಹಬ್ಬಕ್ಕೆ ಸಜ್ಜಾದ ಕೊಡಗು
ಮಡಿಕೇರಿ, ಏಪ್ರಿಲ್ 05: ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವ ಕುಲ್ಲೇಟಿರ ಕಪ್ ಈ ಬಾರಿ ನಾಪೋಕ್ಲುನಲ್ಲಿ ಏ.15ರಿಂದ ಆರಂಭವಾಗಲಿದ್ದು, ದಿನಗಣನೆ ಆರಂಭವಾಗಿದೆ. ಈಗಾಗಲೇ ಪಂದ್ಯಾವಳಿಗೆ ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಮೈದಾನ ಸೇರಿದಂತೆ ಕಳೆದ ವರ್ಷ ಬಿದ್ದಾಟಂಡ ಕುಟುಂಬಸ್ಥರು ನಿರ್ಮಿಸಿರುವ ಹೊಸ ಮೈದಾನ ಸೇರಿ ಒಟ್ಟು ಮೂರು ಮೈದಾನಗಳು ಸಿದ್ಧವಾಗಿವೆ.
ಈ ಸಲ ನಡೆಯುತ್ತಿರುವ ಉತ್ಸವವು 22ನೇ ವರ್ಷದ ಉತ್ಸವವಾಗಿದ್ದು, ಈಗಾಗಲೇ ಮೈದಾನದಲ್ಲಿ ಪಂದ್ಯಾವಳಿ ವೀಕ್ಷಣೆಗೆ ಅನುಕೂಲವಾಗುವಂತೆ ಗ್ಯಾಲರಿ ನಿರ್ಮಾಣ ಕಾರ್ಯ ನಡೆಯುತ್ತಿದೆ. ಚುನಾವಣೆ ನಡುವೆ ಈ ಬಾರಿ ಹಾಕಿ ಪಂದ್ಯಾವಳಿ ನಡೆಯುತ್ತಿರುವುದರಿಂದ ಇನ್ನಷ್ಟು ಜನಪ್ರಿಯಗೊಳಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರೋಡ್ ಶೋ, ಪ್ರಚಾರಗಳ ಮೂಲಕ ಕ್ರೀಡಾಸಕ್ತರನ್ನು ಸೆಳೆಯಲಾಗುತ್ತಿದೆ.
ಪಂದ್ಯಾವಳಿಯಲ್ಲಿ ಭಾಗವಹಿಸಲು ಸುಮಾರು 250 ತಂಡಗಳು ನೋಂದಣಿ ಮಾಡಿಕೊಂಡಿವೆ. ಪಂದ್ಯಾವಳಿ ನಡೆಯುವ ವೇಳೆಗೆ ಸುಮಾರು 300 ತಂಡಗಳು ನೋಂದಣಿ ಮಾಡಿಕೊಳ್ಳುವ ನಿರೀಕ್ಷೆಯಿದೆ. ಕುಲ್ಲೇಟಿರ ಕುಟುಂಬಕ್ಕೆ ಪಂದ್ಯಾವಳಿ ನಡೆಸಲು ಕೊಡವ ಹಾಕಿ ಅಕಾಡೆಮಿ, ಹಾಕಿ ಕೂರ್ಗ್, ಹಾಕಿ ಕರ್ನಾಟಕ ಹಾಗೂ ಹಾಕಿ ಇಂಡಿಯಾವು ಸಹಕಾರ ನೀಡಲಿದೆ.

ನಾಪೋಕ್ಲು ಮೈದಾನಗಳಲ್ಲಿ ಮೂರನೇ ಬಾರಿಗೆ ಕುಲ್ಲೇಟಿರ ಕಪ್ ಹಾಕಿ ಪಂದ್ಯಾವಳಿ ನಡೆಯುತ್ತಿದೆ. ಕೊಡವ ಸಮುದಾಯದ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿರುವ ಮತ್ತು ಒಂದು ಸಮುದಾಯದವರು ಒಂದೆಡೆ ಕಲೆತು ನಡೆಸುತ್ತಿರುವ ಈ ಪಂದ್ಯಾವಳಿಗಳು ಈಗಾಗಲೇ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲಾಗಿದೆ. ಕಳೆದ ಎರಡು ದಶಕಗಳಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಪಂದ್ಯಾವಳಿಗೆ ಅಂದಾಜು ಒಂದೂವರೆ ಕೋಟಿ ರೂ. ಖರ್ಚಾಗುವ ಸಾಧ್ಯತೆಯಿದೆ. ರಾಜ್ಯ ಸರಕಾರದಿಂದ ರೂ. 40 ಲಕ್ಷ, ಸಂಸದ ಪ್ರತಾಪ್ ಸಿಂಹ ಅವರು ರೂ. 20 ಲಕ್ಷ ಅನುದಾನದ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸುವ ಸಲುವಾಗಿ ಕುಲ್ಲೇಟಿರ ಕುಟುಂಬ ಕಳೆದ ಮೂರು ವರ್ಷಗಳಿಂದಲೇ ಹಲವು ರೀತಿಯ ಯೋಜನೆಗಳನ್ನು ಹಾಕಿಕೊಂಡು ಕಾರ್ಯಪ್ರವೃತ್ತವಾಗಿದೆ. ಅಷ್ಟೇ ಅಲ್ಲ ವಿಧಾನಸಭಾ ಚುನಾವಣೆಯ ಭರಾಟೆಯ ನಡುವೆ ಯಶಸ್ವಿಯಾಗಿ ಪಂದ್ಯಾವಳಿಯನ್ನು ನಡೆಸಲು ಮುಂದಾಗಿದೆ.
ಪಂದ್ಯಾವಳಿಯ ಆತಿಥ್ಯ ವಹಿಸಿರುವ ಕುಲ್ಲೇಟಿರ ಕುಟುಂಬದ ಮತ್ತೊಂದು ವಿಶೇಷತೆ ಏನೆಂದರೆ ಈ ಕುಟುಂಬದ ತಂಡ ಇದುವರೆಗೆ ಆಡಿದ ಪಂದ್ಯಾವಳಿಗಳಲ್ಲಿ 1998ರ ಕೋಡಿರ ಕಪ್, 1999ರಲ್ಲಿ ಬಲ್ಲಚಂಡ ಕಪ್ ನಲ್ಲಿ ಕೂತಂಡ ಕುಟುಂಬದೊಂದಿಗೆ ಜಂಟಿ ವಿಜೇತ ಹಾಗೂ 2002ರ ಚೆಕ್ಕೇರ ಕಪ್ನಲ್ಲಿ ಗೆಲುವನ್ನು ಸಾಧಿಸಿದೆ. ಮೂರು ಬಾರಿ ಸೆಮಿಫೈನಲ್ ಪ್ರವೇಶಿಸಿದೆ.
ಈ ಬಾರಿಯ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಿಗೆ ಕೊಡಗಿನ ಸಾಂಪ್ರದಾಯಿಕ ಒಡಿಕತ್ತಿಯನ್ನು ನೀಡಲು ತೀರ್ಮಾನಿಸಲಾಗಿದೆ. ಇದಕ್ಕೆ ಕಾರಣವೂ ಇದೆ. ಕುಲ್ಲೇಟಿರ ಕುಟುಂಬದ ಪೊನ್ನಣ್ಣ - ಮಾಣಿಚ್ಚ ಅವರು ವೀರ ಶೂರರಾಗಿದ್ದು ಟಿಪ್ಪು ಸೈನಿಕರ ವಿರುದ್ಧ ಒಡಿಕತ್ತಿ ಹಿಡಿದು ಹೋರಾಡಿ ಗೆಲವು ಸಾಧಿಸಿದ್ದರಂತೆ. ಆ ನೆನಪಿನಾರ್ಥ ಒಡಿಕತ್ತಿಗಳನ್ನು ನೀಡಲಾಗುತ್ತಿದೆಯಂತೆ.
ಇನ್ನು ಇದೇ ಕುಟುಂಬದ ಅಂತರರಾಷ್ಟ್ರೀಯ ಹಾಕಿ ಆಟಗಾರ ಉತ್ತಯ್ಯ ಕೊಡವ ಜನಾಂಗದಲ್ಲಿ ಪ್ರಥಮ ಏಕಲವ್ಯ ಪ್ರಶಸ್ತಿ ಪಡೆದವರಾಗಿದ್ದಾರೆ. ಸುಮಾರು 30 ಮಂದಿ ಭಾರತೀಯ ಸೇನೆಯಲ್ಲೂ ಕಾರ್ಯ ನಿರ್ವಹಿಸಿದ್ದಾರೆ ಎನ್ನುವುದು ಕುಟುಂಬದ ಶೂರತ್ವಕ್ಕೆ ಸಾಕ್ಷಿಯಾಗಿದೆ. ವೀರರು, ಶೂರರು, ಕ್ರೀಡಾಪ್ರೇಮಿಗಳನ್ನೊಳಗೊಂಡ ಕುಲ್ಲೇಟಿರ ತಂಡ 22ನೇ ವರ್ಷದ ಕೊಡವ ಹಾಕಿ ಉತ್ಸವದ ಸಾರಥ್ಯ ವಹಿಸಿದ್ದು, ಯಶಸ್ವಿಯಾಗಿ ನಡೆಸಲು ಶಕ್ತಿ ಮೀರಿ ಶ್ರಮಿಸುತ್ತಿದೆ.
-
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
ಕಾಂತಾರ ವಿವಾದ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಬರ್ತೀನಿ, ಕ್ಷಮೆಯೂ ಕೇಳ್ತೀನಿ ಎಂದ ನಟ ರಣವೀರ್ ಸಿಂಗ್












Click it and Unblock the Notifications