ಕೊನೆ ಕ್ಷಣದಲ್ಲಿ ಚುನಾವಣೆ ರದ್ದು; ಗೆದ್ದ ಖುಷಿಯಲ್ಲಿದ್ದವರಿಗೆ ನಿರಾಸೆ!
ಮಡಿಕೇರಿ, ಅಕ್ಟೋಬರ್ 11; ಮಡಿಕೇರಿ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಗೆ ಕೊನೆ ಕ್ಷಣದಲ್ಲಿ ತಿರುವು ಸಿಕ್ಕಿದೆ. ಸ್ಪಷ್ಟ ಬಹುಮತವಿದ್ದು ಚುನಾವಣೆಗೆ ಗೆದ್ದೆವು ಎಂಬ ಖುಷಿಯಲ್ಲಿದ್ದ ಬಿಜೆಪಿ ಸದಸ್ಯರಿಗೆ ನಿರಾಸೆಯಾಗಿದೆ.
23 ವಾರ್ಡ್ಗಳನ್ನು ಹೊಂದಿರುವ ಮಡಿಕೇರಿ ನಗರಸಭೆಗೆ 5 ತಿಂಗಳ ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಿಗದಿಯಾಗಿತ್ತು. ಬೆಳಗ್ಗೆ 10 ರಿಂದ 12 ಗಂಟೆ ತನಕ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು.
ಬಿಜೆಪಿ 23 ವಾರ್ಡ್ಗಳ ಪೈಕಿ 13ರಲ್ಲಿ ಗೆದ್ದಿದ್ದು ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳಾ ಮೀಸಲು ಅಡಿ ಅನಿತಾ ಪೂವಯ್ಯ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎ-ಮಹಿಳೆ ಕೋಟಾದಡಿ ಸವಿತಾ ರಾಕೇಶ್ ನಾಮಪತ್ರ ಸಲ್ಲಿಸಿದ್ದರು.

ಪ್ರತಿಪಕ್ಷಗಳಿಗೆ ಸಂಖ್ಯಾಬಲದ ಕೊರತೆ ಇದ್ದ ಕಾರಣ ಬಿಜೆಪಿಯ ಅನಿತಾ ಪೂವಯ್ಯ, ಸವಿತಾ ರಾಕೇಶ್ ಗೆಲುವಿನ ಸಂಭ್ರಮದಲ್ಲಿದ್ದರು. ಆದರೆ ಚುನವಣಾಧಿಕಾರಿ ಎಡವಟ್ಟಿನಿಂದ ಚುನಾವಣೆಯೇ ರದ್ದುಗೊಂಡು ಬಿಜೆಪಿಯವರು ನಿರಾಸೆಗೊಂಡರು.
ಚುನಾವಣೆ ರದ್ದು; ಮಧ್ಯಾಹ್ನ 2 ಚುನಾವಣೆ ಸಭೆ ನಡೆಯಿತು. ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ವಿಧಾನ ಪರಿಷತ್ ಸದಸ್ಯ ವೀಣಾ ಅಚ್ಚಯ್ಯಗೆ ಚುನಾವಣೆ ನೋಟಿಸ್ ನೀಡಿಲ್ಲ. ಅವರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸಲಾಗಿದೆ ಎಂದು ಸಭೆಯಲ್ಲಿ ಆರೋಪಿಸಿದರು.
ಚುನಾವಣಾಧಿಕಾರಿಗೆ ತಮ್ಮ ತಪ್ಪಿನ ಅರಿವಾಯಿತು. ವೀಣಾ ಅಚ್ಚಯ್ಯಗೆ ನೋಟಿಸ್ ನೀಡದ ಕಾರಣ ಚುನಾವಣೆಯನ್ನು ರದ್ದುಗೊಳಿಸಲಾಗುತ್ತಿದೆ ಎಂದು ಚುನಾವಣಾಧಿಕಾರಿ ಈಶ್ವರ ಕುಮಾರ್ ಖಂಡು ಘೋಷಣೆ ಮಾಡಿದರು.
ಇದರಿಂದಾಗಿ ಚುನಾವಣೆ ನಡೆದು ಫಲಿತಾಂಶ ಘೋಷಣೆಯಾಗುತ್ತದೆ. ನಾವು ಗೆಲುವಿನ ಸಂಭ್ರಮಾಚರಣೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಬಿಜೆಪಿ ಸದಸ್ಯರಿಗೆ ನಿರಾಸೆಯಾಯಿತು. ಚುನಾವಣಾಧಿಕಾರಿ ವಿರುದ್ಧ ಘೋಷಣೆ ಕೂಗಿದರು, ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಎಸ್ಡಿಪಿಐ, ಕಾಂಗ್ರೆಸ್ ಸದಸ್ಯರು ಚುನಾವಣಾಧಿಕಾರಿ ತೀರ್ಮಾನ ಬೆಂಬಲಿಸಿದರು. ಮತದಾನದ ಹಕ್ಕಿನಿಂದ ವಂಚಿತಗೊಳಿಸಿದ್ದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿತ್ತು. ಚುನಾವಣೆ ರದ್ದುಗೊಳಿಸಿದ್ದು, ಸರಿಯಾದ ಕ್ರಮ ಎಂದು ಪ್ರತಿಪಕ್ಷಗಳು ಹೇಳಿದವು.
ಏಕಾಏಕಿ ಚುನಾವಣೆ ಪ್ರಕ್ರಿಯೆ ರದ್ದುಗೊಳಿಸಿದ್ದು ಬಿಜೆಪಿ ಸದಸ್ಯರನ್ನು ಕೆರಳಿಸಿದೆ. ಚುನಾವಣಾಧಿಕಾರಿ ನಡೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಬಿಜೆಪಿ ಸದಸ್ಯರು ಹೇಳಿದ್ದಾರೆ.
ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಈ ಕುರಿತು ಮಾತನಾಡಿದ್ದಾರೆ, "ಅಧಿಕಾರಿ ತಪ್ಪಿನಿಂದ ಸಮಸ್ಯೆ ಆಗಿದೆ. ಆದರೆ ಚುನಾವಣೆ ರದ್ದುಗೊಳಿಸಿದ್ದು, ದೊಡ್ಡ ತಪ್ಪು. ತಪ್ಪು ಮಾಡಿದ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಹೇಳಿದ್ದಾರೆ.
ಮಡಿಕೇರಿ ನಗರಸಭೆಯಲ್ಲಿ ಎಸ್ಡಿಪಿಐ 5 ವಾರ್ಡ್ಗಳಲ್ಲಿ ಗೆದ್ದಿದೆ. ಅಧ್ಯಕ್ಷ ಸ್ಥಾನಕ್ಕೆ ಮೇರಿ ವೇಗಸ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನೀಮಾ ಅರ್ಷದ್ ನಾಮಪತ್ರ ಸಲ್ಲಿಸಿದ್ದರು. ಜೆಡಿಎಸ್ ಮತ್ತು ಕಾಂಗ್ರೆಸ್ನ ಇಬ್ಬರು ಸದಸ್ಯರು ಬೆಂಬಲ ನೀಡಿದರೂ ಎಸ್ಡಿಪಿಐಗೆ ಅಧ್ಯಕ್ಷ, ಉಪಾಧ್ಯಕ್ಷ ಪಟ್ಟ ಸಿಗುತ್ತಿರಲಿಲ್ಲ.
ಆದರೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಅನಿತಾ ಪೂವಯ್ಯ,ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿಜೆಪಿಯ ಸವಿತಾ ರಾಕೇಶ್ ಗೆಲವುವನ್ನು ಸಂಭ್ರಮಿಸುವ ಮೊದಲೇ ಚುನಾವಣೆ ರದ್ದಾಗಿದ್ದು ಬಿಜೆಪಿಯ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.
"ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಚುನಾವಣೆಗಾಗಿಯೇ ಶಾಸಕರು, ಸಂಸದರು ಆಗಮಿಸಿದ್ದಾರೆ. ನಾಮಪತ್ರ ಸಲ್ಲಿಸುವಾಗಲೇ ಚುನಾವಣಾಧಿಕಾರಿಗಳು ಮಾಹಿತಿ ನೀಡಬೇಕಿತ್ತು" ಎಂದು ಬಿಜೆಪಿ ಸದಸ್ಯೆ ಅನಿತಾ ಪೂವಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಮುಂದೆ ಹೊಸದಾಗಿ ದಿನಾಂಕ ನಿಗದಿ ಮಾಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಮಾಡಬೇಕಿದೆ. ಚುನಾವಣೆಗೆ ಗೆದ್ದೆವು ಎಂಬ ಸಂಭ್ರಮದಲ್ಲಿದ್ದ ಬಿಜೆಪಿ ನಾಯಕರು ಮಾತ್ರ ನಿರಾಸೆಗೊಂಡಿದ್ದಾರೆ.












Click it and Unblock the Notifications