ಮಡಿಕೇರಿಯಲ್ಲಿ ಈ ಬಾರಿ ದಸರಾ ಆಚರಣೆ ಹೇಗಿರುತ್ತೆ?; ಡಿಸಿ ಮಾಹಿತಿ
ಮಡಿಕೇರಿ, ಸೆಪ್ಟೆಂಬರ್ 24: ನಾಡಹಬ್ಬ ದಸರಾವನ್ನು ಈ ಬಾರಿ ಮೈಸೂರಿನಲ್ಲಿ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಮಡಿಕೇರಿ ಮತ್ತು ಗೋಣಿಕೊಪ್ಪದ ದಸರಾ ಕೂಡ ಪ್ರಸಿದ್ಧಿ ಪಡೆದಿದ್ದು, ಜಿಲ್ಲೆಯಲ್ಲಿ ದಸರಾ ಆಚರಣೆ ಸಂಬಂಧ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರು ದಸರಾ ಸಮಿತಿ ಪದಾಧಿಕಾರಿಗಳೊಂದಿಗೆ ಬುಧವಾರ ಪೂರ್ವಭಾವಿ ಸಭೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅವರು ಮಾತನಾಡಿ, ಕೊರೊನಾದ ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ. ಆ ನಿಟ್ಟಿನಲ್ಲಿ ಸಾಂಪ್ರದಾಯಿಕ ಮತ್ತು ಸರಳವಾಗಿ ದಸರಾ ಆಚರಿಸಬೇಕಿದ್ದು, ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಕೋರಿದರು. ಈಗಾಗಲೇ ಪೊಲೀಸ್ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ದಸರಾ ಸಮಿತಿ ಪದಾಧಿಕಾರಿಗಳೊಂದಿಗೆ ನಡೆದ ಸಭೆಯ ನಿರ್ಧಾರಗಳನ್ನು ತಿಳಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.

ಅಕ್ಟೋಬರ್ 17 ರಂದು ಕರಗ ಉತ್ಸವ
ದಸರಾ ಸಮಿತಿ ಅಧ್ಯಕ್ಷರಾದ ರಾಬಿನ್ ದೇವಯ್ಯ ಅವರು ಮಾತನಾಡಿ, 400-500 ವರ್ಷಗಳ ಇತಿಹಾಸವಿರುವ ಮಡಿಕೇರಿ ದಸರಾವನ್ನು ಈ ಬಾರಿ ಹೇಗೆ ಆಚರಿಸಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆ. ಅಕ್ಟೋಬರ್ 17 ರಂದು ಕರಗ ಉತ್ಸವ ಪಂಪಿನ ಕೆರೆಯಿಂದ ಆರಂಭಗೊಳ್ಳಲಿದೆ. ಪೂಜಾ ಕೈಂಕರ್ಯ ಮಾಡುವವರು ಮತ್ತು ಇತರರು ಸೇರಿದಂತೆ ಪೂಜಾ ಸಂದರ್ಭದಲ್ಲಿ 25 ಮಂದಿ ಇರುತ್ತಾರೆ. ಹೆಚ್ಚು ಗುಂಪು ಸೇರುವುದಿಲ್ಲ. ಸರ್ಕಾರದ ನಿಯಮಗಳನ್ನು ಪಾಲಿಸಲಾಗುವುದು ಎಂದರು. ಕರಗವು ಆರಂಭಗೊಂಡ ನಂತರ ಕೆಲ ಮನೆಗಳಿಗೆ ತೆರಳಿ 10 ಗಂಟೆಗೆ ಉತ್ಸವ ಕೊನೆಗೊಳ್ಳಲಿದೆ ಎಂದು ಅವರು ಮಾಹಿತಿ ನೀಡಿದರು.

ಅ. 26ರಂದು ದಶ ಮಂಟಪಗಳ ಕಳಸ ಪ್ರತಿಷ್ಠಾಪನೆ
ಉತ್ಸವದ ಮೆರವಣಿಗೆ ತೆರಳುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಜನರನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ. ಅಕ್ಟೋಬರ್ 17 ರ ನಂತರ ಮರು ದಿನದಿಂದ ತೆರಳಲು ಅಭ್ಯಂತರವಿಲ್ಲ. ಆದರೆ ಆರಂಭದ ದಿನದಲ್ಲಿ ಜನದಟ್ಟಣೆ ಸೇರದಂತೆ ನೋಡಿಕೊಳ್ಳಬೇಕು ಎಂದು ಪೊಲೀಸ್ ಇನ್ಸ್ ಪೆಕ್ಟರ್ ಮೇದಪ್ಪ ಅವರು ಮನವಿ ಮಾಡಿದರು. ಬಳಿಕ ಮಾತನಾಡಿದ ರಾಬಿನ್ ದೇವಯ್ಯ ಅವರು, ಅಕ್ಟೋಬರ್ 26 ರ ವಿಜಯ ದಶಮಿಯಂದು ದಶ ಮಂಟಪಗಳು ಕಳಸ ಪ್ರತಿಷ್ಠಾಪನೆ ಮಾಡಿ ಟ್ರ್ಯಾಕ್ಟರ್ ಮೂಲಕ ಹೊರಡಲಿವೆ ಎಂದರು.

ಸರಳ ದಸರಾ ಆಚರಣೆಗೆ ಸಹಕರಿಸಲು ಡಿಸಿ ಮನವಿ
ದಸರಾ ಆಚರಣೆ ಸಂಬಂಧಿಸಿದಂತೆ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು. ಮೈಸೂರಿನಲ್ಲಿ ಚಾಮುಂಡಿ ಬೆಟ್ಟ ಮತ್ತು ಅರಮನೆ ಹೊರತುಪಡಿಸಿ ಬೇರೆಡೆ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಅದರಂತೆ ಸರಳ ದಸರಾ ಆಚರಣೆಗೆ ಸಹಕರಿಸಬೇಕು. ಟ್ರ್ಯಾಕ್ಟರ್ ಬದಲಾಗಿ ಚಿಕ್ಕ ವಾಹನದಲ್ಲಿ ಕಳಸ ತೆಗೆದುಕೊಂಡು ಹೋಗಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಮಡಿಕೇರಿ ದಸರಾ ಸಂಬಂಧಿಸಿದಂತೆ ಅಕ್ಟೋಬರ್ 26 ರಂದು ಧಾರ್ಮಿಕ ಕೈಂಕರ್ಯಗಳನ್ನು ಬೇಗ ಆರಂಭಿಸಿ ರಾತ್ರಿ 10 ಗಂಟೆ ಒಳಗೆ ಪೂರ್ಣಗೊಳಿಸಬೇಕು ಎಂದರು.
Recommended Video

ಮಡಿಕೇರಿ ದಸರಾ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ
ಈಗಾಗಲೇ ದಸರಾ ಅನುದಾನ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಮಡಿಕೇರಿ ದಸರಾಗೆ 10 ಲಕ್ಷ ರೂ. ಮತ್ತು ಗೋಣಿಕೊಪ್ಪ ದಸರಾಗೆ 5 ಲಕ್ಷ ರೂ. ಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮುಂದಿನ ಸೋಮವಾರದೊಳಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು. ಡಿವೈಎಸ್ಪಿ ಜಯಕುಮಾರ್, ನಗರ ಪೊಲೀಸ್ ಇನ್ಸ್ ಪೆಕ್ಟರ್ ಅನೂಪ್ ಮಾದಪ್ಪ ದಸರಾ ಸಂಬಂಧಿಸಿದಂತೆ ಹಲವು ಸಲಹೆ ನೀಡಿದರು. ನಗರಸಭೆ ಪೌರಾಯುಕ್ತರಾದ ರಾಮದಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ದರ್ಶನ, ದಸರಾ ಸಮಿತಿ ಪದಾಧಿಕಾರಿಗಳು ಇತರರು ಇದ್ದರು.












Click it and Unblock the Notifications