ಮೋದಿ ಹೆಸರಲ್ಲಿ ಮತಯಾಚನೆ ಭವಿಷ್ಯದಲ್ಲಿ ಅಪಾಯಕಾರಿ: ಕಲ್ಲಡ್ಕ
ಮಡಿಕೇರಿ, ಏಪ್ರಿಲ್ 20: ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನೇ ಮುಂದಿಟ್ಟುಕೊಂಡು ಬಿಜೆಪಿ ಅಭ್ಯರ್ಥಿಗಳು ಚುನಾವಣೆಗೆ ಇಳಿದಿರುವುದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಕಲ್ಲಡ್ಕ ಪ್ರಭಾಕರ್ ಭಟ್ ಶನಿವಾರ ಹೇಳಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಮಡಿಕೇರಿಯಲ್ಲಿ ನಡೆದ 'ಸ್ನೇಹಮಿಲನ' ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 65 ವರ್ಷಗಳಲ್ಲಿ ಆಗದ ಕೆಲಸವನ್ನು ಮೋದಿ ಅವರು ಐದು ವರ್ಷದಲ್ಲಿ ಮಾಡಿದ್ದಾರೆ. ಆ ಕಾರಣದಿಂದಲೇ ಮೋದಿ ಅವರಿಗೆ ಮತ ಕೊಡಿ ಎಂದು ಅಭ್ಯರ್ಥಿಗಳು ಕೇಳುತ್ತಿದ್ದಾರೆ. ಮೋದಿ ಅವರನ್ನೇ ಮುಂದಿಟ್ಟುಕೊಂಡು ಮತ ಯಾಚಿಸುವುದು ಒಳ್ಳೆಯ ಲಕ್ಷಣವಲ್ಲ. ಆರೆಸ್ಸೆಸ್ ಸ್ವಯಂಸೇವಕರು ಎಂದಿಗೂ ವ್ಯಕ್ತಿಪೂಜೆ ಮಾಡುವುದಿಲ್ಲ ಎಂದರು.
ಮುಖ ಸರಿಯಿಲ್ಲ ಎಂದು ಮೋದಿ ಹೆಂಡತಿಯನ್ನು ಬಿಟ್ಟಿದ್ದಾರೆ: ಜಮೀರ್ ಅಹ್ಮದ್ ವಿವಾದ
ಕ್ಷೇತ್ರದ ಅಭಿವೃದ್ಧಿಗೆಂದು ಸಂಸದರು ಏನು ಕೇಳಿದರೂ ಮೋದಿ ಕೊಡುತ್ತಿದ್ದರು. ಅದನ್ನು ಸಂಸದರು ಸದ್ಬಳಕೆ ಮಾಡಿಕೊಳ್ಳಬೇಕಿತ್ತು. ನಿಜವಾದ ಅಭ್ಯರ್ಥಿಗಳು ತಮ್ಮ ಸಾಧನೆಯ ಹೆಸರಿನಲ್ಲಿ ಮತ ಕೇಳಬೇಕಿತ್ತು. ಮೋದಿ ಅವರ ಸಾಧನೆ ಮುಂದೆ ಅಭ್ಯರ್ಥಿಗಳದ್ದು ಏನೂ ಇಲ್ಲ. ಕೆಲವರು ಮಾತ್ರ ಕೆಲಸ ಮಾಡಿರಬಹುದು. ಆದರೆ, ಮೋದಿ ಹೆಸರು ಬಳಕೆ ಮಾಡಿಕೊಳ್ಳುತ್ತಿರುವುದು ಅಪಾಯಕಾರಿ ಎಂದು ಹೇಳಿದರು.
ಬಿಜೆಪಿ ಅವರಿಗೆ ಪ್ರಧಾನಿ ಎಂದು ಹೇಳಿಕೊಳ್ಳಲು ಮೋದಿ ಅವರಾದರೂ ಇದ್ದಾರೆ. ಆದರೆ, ಉಳಿದವರಿಗೆ ಯಾರೂ ಇಲ್ಲ. ಮಹಾಘಟಬಂಧನ್ನಲ್ಲಿ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ದೇವೇಗೌಡ, ಮಾಯಾವತಿ ಇದ್ದರೂ ಯಾರನ್ನೂ ಪ್ರಧಾನಿ ಎಂದು ಬಿಂಬಿಸುತ್ತಿಲ್ಲ ಎಂದು ಮಹಾಮೈತ್ರಿಕೂಟವನ್ನು ಅಣಕಿಸಿದರು.