ಮಡಿಕೇರಿಯಲ್ಲಿ ಮುಂಗಾರು ಆರಂಭದಲ್ಲೇ ಭೂಕುಸಿತ; ಸ್ಥಳಾಂತರಗೊಳ್ಳುತ್ತಿರುವ ಜನ
ಮಡಿಕೇರಿ, ಜೂನ್ 23: ಕೊಡಗಿನಲ್ಲಿ ಕಳೆದ ಎರಡು ವರ್ಷಗಳಿಂದ ಮಳೆಗಾಲದಲ್ಲಿ ಭೂ ಕುಸಿತ ಸಂಭವಿಸುತ್ತಲೇ ಇದೆ. ಈ ಬಾರಿ ಆರಂಭದಲ್ಲಿಯೇ ಗುಡ್ಡಪ್ರದೇಶವಾದ ಮಡಿಕೇರಿ ನಗರದ ಚಾಮುಂಡೇಶ್ವರಿ ನಗರದಲ್ಲಿ ಭೂಕುಸಿತವುಂಟಾಗಿರುವುದು ಜನರನ್ನು ಭಯಭೀತರನ್ನಾಗಿಸಿದೆ.
Recommended Video
ಕೊಡಗು ಜಿಲ್ಲೆ ಬೆಟ್ಟಗುಡ್ಡವನ್ನು ಹೊಂದಿದ ಜಿಲ್ಲೆ. ಅದರಲ್ಲೂ ಮಡಿಕೇರಿ ನಗರದ ಬಹುತೇಕ ಬಡಾವಣೆಗಳು ಎತ್ತರದ ಪ್ರದೇಶಗಳಲ್ಲಿವೆ. ಈ ಪೈಕಿ ಭೂಕುಸಿತದ ಭಯದಲ್ಲಿರುವ ಚಾಮುಂಡೇಶ್ವರಿ ನಗರವು ಜನವಸತಿಗೆ ಯೋಗ್ಯವಲ್ಲ ಎಂಬುದು ನೋಡಿದಾಕ್ಷಣವೇ ಗೊತ್ತಾಗಿ ಬಿಡುತ್ತದೆ. ಒಂದು ಕಾಲದಲ್ಲಿ ಗುಡ್ಡ ಪ್ರದೇಶವಾಗಿ ಕುರುಚಲು ಕಾಡಿನಿಂದ ಕೂಡಿದ ಪ್ರದೇಶವಾಗಿದ್ದ ಈ ಸ್ಥಳ ಪೈಸಾರಿ ಜಾಗ ಎಂಬುದು ಗೊತ್ತಾಗುತ್ತಿದ್ದಂತೆಯೇ ಜನ ಇಲ್ಲಿ ಮೊದಲಿಗೆ ಗುಡಿಸಲು ಕಟ್ಟಿ ಬಳಿಕ ತಮ್ಮವರನ್ನು ಕರೆದು ತಂದು ಮನೆಗಳನ್ನು ನಿರ್ಮಿಸಲು ಆರಂಭಿಸಿದರು. ಹೀಗೆ ಮುಂದುವರೆದು ಬಡಾವಣೆಗಳಾಗಿ ರೂಪುಗೊಂಡಿತು.

ಮಳೆ ಸುರಿದರೂ ಗುಡ್ಡ ಕುಸಿಯುತ್ತಿರಲಿಲ್ಲ
ಅಂದು ಮಳೆ ಸುರಿಯುತ್ತಿತ್ತಾದರೂ ಯಾವುದೇ ಅನಾಹುತಗಳು ಸಂಭವಿಸುತ್ತಿರಲಿಲ್ಲ. ಜತೆಗೆ ಜನರು ತಮ್ಮ ಶ್ರಮದಿಂದಲೇ ಮನೆ ನಿರ್ಮಿಸುತ್ತಿದ್ದರು. ಇದರಿಂದ ಯಾವುದೇ ತೊಂದರೆಗಳಾಗುತ್ತಿರಲಿಲ್ಲ. ಆದರೆ ಇತ್ತೀಚೆಗೆ ಯಂತ್ರಗಳನ್ನು ಬಳಸಿ ಮಾಡುತ್ತಿರುವುದರಿಂದ ಇಡೀ ಭೂಮಿ ಅಲುಗಾಡಿ ಭೂಕುಸಿತಕ್ಕೆ ಕಾರಣವಾಗುತ್ತಿದೆ.

ಅಪಾಯದಲ್ಲಿದ್ದ ಕುಟುಂಬಗಳ ಸ್ಥಳಾಂತರ
2018ರಲ್ಲಿ ಭೂಕುಸಿತ ಸಂಭವಿಸಿದಾಗ ಇಲ್ಲಿ ಹಲವು ಮನೆಗಳು ಕುಸಿದು ಬಿದ್ದಿದ್ದವು. ಹೀಗಾಗಿ ಅಪಾಯದಲ್ಲಿದ್ದ ಇಲ್ಲಿನ ಕುಟುಂಬಗಳನ್ನು ಸ್ಥಳಾಂತರಿಸಲಾಗಿತ್ತು. ಅಲ್ಲದೆ ಈಗಾಗಲೇ ಸಂಪೂರ್ಣವಾಗಿ ಮನೆ ಕಳೆದುಕೊಂಡವರಿಗೆ ಮನೆಗಳನ್ನು ವಿತರಿಸಲಾಗಿದೆ. ಅಪಾಯದಂಚಿನಲ್ಲಿರುವ ಮನೆಗಳನ್ನು ಗುರುತಿಸಿ ಎರಡನೇ ಪಟ್ಟಿ ತಯಾರಿಸಲಾಗಿದ್ದು, ಈ ಪಟ್ಟಿಯಲ್ಲಿ 420 ಮಂದಿ ಇದ್ದಾರೆ. ಈ ಪಟ್ಟಿಯನ್ನು ನೋಡೆಲ್ ಅಧಿಕಾರಿಗಳು ಪರಿಶೀಲಿಸಿ, ಸ್ಥಳ ಪರಿಶೀಲನೆ ಮಾಡಿದ್ದು, ಇದರಲ್ಲಿ ಸುಮಾರು 163 ಮಂದಿಗೆ ಪುನರ್ವಸತಿ ಅವಶ್ಯಕತೆ ಇಲ್ಲ ಎಂದು ವರದಿ ನೀಡಿದ್ದಾರೆ ಎನ್ನಲಾಗಿದೆ.

ಐದು ಕುಟುಂಬಗಳ ಸ್ಥಳಾಂತರ
ಈ ನಡುವೆ ಕೆಲವು ದಿನಗಳ ಹಿಂದೆ ಚಾಮುಂಡೇಶ್ವರಿ ನಗರದಲ್ಲಿ ಸಣ್ಣ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, ಇಲ್ಲಿನ ಕೆಲವರನ್ನು ಸ್ಥಳಾಂತರ ಮಾಡಲಾಗಿದೆ. ಆದರೂ ಭಯ ಇದ್ದೇ ಇದೆ. ಸ್ಥಳಕ್ಕೆ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಳಿ-ಮಳೆಯಿಂದಾಗಿ ಕಳೆದ ರಾತ್ರಿ ಚಾಮುಂಡೇಶ್ವರಿ ನಗರದ ಶ್ಯಾಂ ಎಂಬುವರ ಮನೆಯ ಹಿಂಭಾಗದಲ್ಲಿ ಮಣ್ಣು ಕುಸಿದಿದೆ. ಈ ಸಂಬಂಧ ಪರಿಶೀಲನೆ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮಾಹಿತಿ ನೀಡಿ, ಇದೊಂದು ಸಣ್ಣ ಪ್ರಮಾಣದ ಭೂಕುಸಿತವಾಗಿದ್ದು, ಐದು ಕುಟುಂಬಗಳನ್ನು ಸುರಕ್ಷತಾ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇತರ ನಿವಾಸಿಗಳಿಗೆ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಪರಿಹಾರ ಕಾರ್ಯಾಚರಣೆ ತಂಡ ಸಮೀಪದಲ್ಲೇ ಬೀಡು ಬಿಟ್ಟಿದ್ದು, ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ಜೋರಾದರೆ ಇನ್ನಷ್ಟು ತೊಂದರೆಗಳಾಗುವ ಭಯವೂ ಇದೆ.

ಮುಂದಿನ ದಿನಗಳಲ್ಲಿ ಗುಡ್ಡ ಕುಸಿಯುವ ಭಯ
ಜಿಲ್ಲೆಯಲ್ಲಿ ಇಂತಹ ಗುಡ್ಡ ಪ್ರದೇಶಗಳು ಬಹಳಷ್ಟಿದ್ದು, ವಾಸಿಸಲು ಯೋಗ್ಯವಲ್ಲದ ಮತ್ತು ಅಪಾಯ ಸಂಭವಿಸಬಹುದಾದ ಪ್ರದೇಶಗಳಲ್ಲಿರುವ, ನದಿ ದಡದಲ್ಲಿ ವಾಸವಿರುವ ನಿವಾಸಿಗಳಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಮಳೆಯ ವಾತಾವರಣವಿದೆಯಾದರೂ ಜೋರಾಗಿ ಮಳೆ ಸುರಿಯುತ್ತಿಲ್ಲ. ಕಳೆದ ಎರಡು ವರ್ಷಗಳಲ್ಲಿ ಸಂಭವಿಸಿದ ಅನಾಹುತವನ್ನು ಗಮನಿಸುವುದಾದರೆ, ಜುಲೈ ಆಗಸ್ಟ್ ತಿಂಗಳಲ್ಲಿ ಮಳೆಯ ರಭಸ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಈ ವೇಳೆ ಗುಡ್ಡಗಳು ಕುಸಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಈ ಪ್ರದೇಶದಲ್ಲಿ ವಾಸಿಸುವ ಜನರು ಎಚ್ಚರಿಕೆಯಿಂದ ಇರುವುದು ಒಳಿತು.












Click it and Unblock the Notifications