ಮಡಿಕೇರಿಯ ಚೆಟ್ಟಳ್ಳಿ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಕೊರತೆ
ಮಡಿಕೇರಿ, ಸೆಪ್ಟೆಂಬರ್ 15: ಸಾಮಾನ್ಯವಾಗಿ ಜನರ ರಕ್ಷಣೆಯನ್ನು ಪೊಲೀಸರು ಮಾಡುತ್ತಾರೆ. ಯಾವುದೇ ಸಮಸ್ಯೆ ಎದುರಾದರೂ ನಾವು ಪೊಲೀಸರ ಮೊರೆ ಹೋಗುತ್ತೇವೆ. ಹೀಗಿರುವಾಗ ಠಾಣೆಗಳಲ್ಲಿ ಸಿಬ್ಬಂದಿಯೇ ಇಲ್ಲದಿದ್ದರೆ ಏನು ಮಾಡಬೇಕು?
ಇಂತಹ ಪ್ರಶ್ನೆ ಇದೀಗ ಚೆಟ್ಟಳ್ಳಿ ಪೊಲೀಸ್ ಉಪಠಾಣೆಯಲ್ಲಿ ಉದ್ಭವವಾಗಿದೆ. ಸಿಬ್ಬಂದಿಗಳ ಕೊರತೆಯಿಂದಾಗಿ ಇರುವ ಸಿಬ್ಬಂದಿ ಯಾವ ಕೆಲಸ ಮಾಡುವುದಪ್ಪಾ ಎಂದು ತಲೆಮೇಲೆ ಕೈಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಚೆಟ್ಟಳ್ಳಿ ಪೊಲೀಸ್ ಉಪಠಾಣೆಯ ವ್ಯಾಪ್ತಿ ಸುಮಾರು 35 ಕಿ.ಮೀ. ಒಳಪಟ್ಟಿದ್ದು ಚೇರಳಶ್ರೀಮಂಗಲ, ಈರಳೆವಳಮುಡಿ, ಅಭ್ಯತ್ಮಂಗಲ, ಹೊಸ್ಕೇರಿ ಹಾಗೂ ಕೂಡ್ಲೂರು ಈ ಐದು ಗ್ರಾಮಗಳನ್ನು ಒಳಗೊಂಡಿದೆ.
ಇಲ್ಲಿ ಸುಮಾರು 15ಸಾವಿರ ಜನ ಸಂಖ್ಯೆಯಿದ್ದು, ಈ ಪ್ರದೇಶ ಬೆಟ್ಟಗುಡ್ಡ ಹಾಗೂ ಮೀಸಲು ಅರಣ್ಯ ವಾಪ್ತಿಗೆ ಸೇರಿರುವುದರಿಂದ ಕಾಡು ಪ್ರಾಣಿಗಳು ಆಗಾಗ್ಗೆ ದಾಳಿ ನಡೆಸುವುದು, ಗಲಾಟೆ, ಜಗಳಗಳು ಹೀಗೆ ಏನಾದರೊಂದು ಕಿರಿಕ್ಗಳು ನಡೆಯತ್ತಲೇ ಇರುತ್ತವೆ. ಇದೆಲ್ಲವನ್ನು ಇಲ್ಲಿರುವ ಸಿಬ್ಬಂದಿಗಳೇ ನಿಭಾಯಿಸಬೇಕಾಗಿದೆ.
ಚೆಟ್ಟಳ್ಳಿಯ ವ್ಯಾಪ್ತಿಯಲ್ಲಿ ಈ ಹಿಂದೆ ಹಲವು ಅಹಿತಕರ ಘಟನೆಗಳು ನಡೆದ ಕಾರಣದಿಂದಾಗಿ ಚೆಟ್ಟಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯನ್ನು ಅತೀ ಸೂಕ್ಷ್ಮ ಪ್ರದೇಶವೆಂದು ಇಲಾಖಾ ಮಟ್ಟದಲ್ಲಿ ಗುರುತಿಸಲಾಗಿದ್ದರೂ ಇಲಾಖಾ ನಿಯಮದ ಆದೇಶದ ಪ್ರಕಾರ ಚೆಟ್ಟಳ್ಳಿ ಉಪಠಾಣೆಗೆ ಒಂದು ಉಪಠಾಣಾಧಿಕಾರಿ, ಒಂದು ಮುಖ್ಯ ಪೇದೆ ಹಾಗೂ ಆರು ಪೇದೆಗಳು ಸೇರಿ ಎಂಟು ಸಿಬ್ಬಂದಿ ಅಗತ್ಯವಿದೆ. ಆದರೆ ಇದೀಗ ಇಲ್ಲಿ ಮುಖ್ಯ ಪೇದೆ ಹಾಗೂ ಒಬ್ಬರೇ ಪೊಲೀಸ್ ಪೇದೆ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುವಂತಾಗಿದೆ.
ಈ ಹಿಂದೆ ಸೇವೆಯಲ್ಲಿದ್ದ 6 ಮಂದಿ ಸಿಬ್ಬಂದಿ ಪೈಕಿ ನಾಲ್ವರನ್ನು ಈಗಾಗಲೇ ವರ್ಗಾವಣೆ ಮಾಡಲಾಗಿದ್ದು, ಪ್ರಸ್ತುತ ಕೇವಲ ಎರಡೇ ಮಂದಿ ರಾತ್ರಿ ಪಹರೆ, ಗ್ರಾಮಗಳಿಗೆ ಭೇಟಿ, ಸಾರ್ವಜನಿಕರ ದೂರು ಸ್ವೀಕಾರ, ಅಪಘಾತ ಹಾಗೂ ಇನ್ನಿತರ ತುರ್ತು ಸಂದರ್ಭ ತೆರಳಿ ಕೆಲಸ ಮಾಡುತ್ತಿದ್ದು, ಸಮರ್ಪಕವಾಗಿ ನಿಭಾಯಿಸುವುದು ಕಷ್ಟವಾಗುತ್ತಿದೆ.
ಇನ್ನು ಮುಂದೆಯಾದರೂ ಕೊಡಗು ಎಸ್ಪಿ ರಾಜೇಂದ್ರ ಪ್ರಸಾದ್ ಇತ್ತ ಗಮನಹರಿಸಿ ಕ್ರಮ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಸುಗಮ ಕಾರ್ಯಕ್ಕೆ ಅನುವು ಮಾಡಿಕೊಡಬೇಕಾಗಿದೆ.












Click it and Unblock the Notifications