ಕೊಡಗಿನ ಮಳೆನಮ್ಮೆಯ ಸಂಭ್ರಮ ಈಗ ಬರೀ ನೆನಪಷ್ಟೆ!
ಮಡಿಕೇರಿ, ಜುಲೈ 25; ಕೊಡಗಿನ ಮುಂಗಾರು ಮಳೆಯಲ್ಲಿ ಕೆಸರು ಗದ್ದೆಯಲ್ಲಿ ಕ್ರೀಡಾ ಕೂಟಗಳನ್ನು ನಡೆಸಿ ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುತ್ತ ಆಚರಿಸುತ್ತಿದ್ದ ಮಳೆಹಬ್ಬದ ಸಂತಸದ ಕ್ಷಣಗಳನ್ನು ಮಹಾಮಳೆಯ ಅವಘಡ ಮತ್ತು ಕೊರೊನಾ ಕಸಿದು ಕೊಂಡಿದೆ. ಈಗ ಎಲ್ಲವೂ ಬರೀ ನೆನಪಷ್ಟೆ.
ಸುರಿಯುವ ಮಳೆಯಲ್ಲಿಯೇ ಕೃಷಿ ಚಟುವಟಿಕೆ ಮಾಡುತ್ತಾ, ಜಡಗೊಂಡ ದೇಹಕ್ಕೆ ಉಲ್ಲಾಸ ನೀಡಲೆಂದೇ ಮನಸ್ಸಿನ ಕ್ರೀಡಾ ಸ್ಪೂರ್ತಿಗೆ ಧಕ್ಕೆ ಬಾರದಿರಲೆಂದು ಕೆಸರು ಗದ್ದೆಯಲ್ಲಿ ವಿವಿಧ ಕ್ರೀಡಾಕೂಟಗಳನ್ನು ಏರ್ಪಡಿಸಿ ಖುಷಿ ಪಡುತ್ತಿದ್ದ ಇಲ್ಲಿನ ಜನರ ಸಡಗರವನ್ನೆಲ್ಲ ಇದೀಗ ಕೊರೊನಾ ಕಿತ್ತುಕೊಂಡಿದೆ.
ಎಲ್ಲವೂ ಸರಿಯಿದ್ದಿದ್ದರೆ ಇಷ್ಟರಲ್ಲಿಯೇ ಹಲವು ಸಂಘಟನೆಗಳಿಂದ ಜಿಲ್ಲೆಯಾದ್ಯಂತ ಕೆಸರು ಗದ್ದೆಗಳನ್ನೇ ಆಟದ ಮೈದಾನವನ್ನಾಗಿ ಮಾಡಿಕೊಂಡು ಅಲ್ಲಿ ಓಟ, ಹಗ್ಗಜಗ್ಗಾಟ, ವಾಲಿಬಾಲ್, ಫುಟ್ಭಾಲ್ ನಂತಹ ಕ್ರೀಡೆಗಳನ್ನು ನಡೆಸಿ ಖುಷಿ ಪಡುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಕಳೆದ ಒಂದು ವರ್ಷದಿಂಧ ಕ್ರೀಡಾ ಚಟುವಟಿಕೆಗಳಿಗೆ, ಹಬ್ಬಗಳಿಗೆ ಕಾರ್ಮೋಡ ಕವಿದಿದೆ.
ಕೊಡಗಿನಲ್ಲಿ ಏನೇ ಮಾಡಿದರೂ ಅದನ್ನು ಸಡಗರ ಸಂಭ್ರಮದಿಂದಲೇ ಮಾಡುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ. ಮೊದಲೆಲ್ಲ ಭತ್ತದ ಕೃಷಿ ಚಟುವಟಿಕೆ ಅದರಲ್ಲೂ ನಾಟಿ ಕೆಲಸ ವೆಂದರೆ ಮಕ್ಕಳಿಂದ ವೃದ್ದರವರೆಗೆ ಎಲ್ಲಿಲ್ಲದ ಖುಷಿ. ಎಲ್ಲರೂ ಒಟ್ಟಾಗಿ ಗದ್ದೆಗಿಳಿದು ಲೋಕರೂಢಿ ಮಾತನಾಡುತ್ತಾ ಕೆಲಸ ಮಾಡುತ್ತಿದ್ದರು. ದೂರದ ಮನೆಗಳು, ತಮ್ಮದೇ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದ ಜನರಿಗೆ ಗದ್ದೆಯಲ್ಲಿ ಒಟ್ಟಾಗಿ ಕಲೆತು ನಾಟಿ ಮಾಡುವಾಗ ಸಿಗುತ್ತಿದ್ದ ಸಂತೋಷಕ್ಕೆ ಪಾರವೇ ಇರುತ್ತಿರಲಿಲ್ಲ.

ಹೊರ ಊರಲ್ಲಿದ್ದವರು ನಾಟಿಗೆ ಹಾಜರು
ನಾಟಿ ಕೆಲಸದ ಸಮಯಕ್ಕೆ ಸರಿಯಾಗಿ ಮನೆಯಿಂದ ಹೊರ ಹೋಗಿ ಕೆಲಸ ಮಾಡುತ್ತಿದ್ದವರು ಒಂದಷ್ಟು ದಿನಗಳ ಕಾಲ ರಜೆ ಪಡೆದು ಬರುತ್ತಿದ್ದರು. ಅದರಲ್ಲೂ ಪೊಲೀಸ್, ಸೇನೆಯಲ್ಲಿ ಕೆಲಸ ಮಾಡುತ್ತಿದ್ದವರು ಈ ಸಮಯದಲ್ಲಿಯೇ ರಜೆ ಪಡೆದು ಬರುತ್ತಿದ್ದದ್ದು ವಿಶೇಷವಾಗಿತ್ತು. ಒಂದಷ್ಟು ದಶಕಗಳ ಕಾಲ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಭತ್ತದ ಕೃಷಿಯೇ ಹಲವು ಕಾರಣಗಳಿಗೆ ಭಾರವಾಗ ತೊಡಗಿತು. ಓದಿದವರು ಕೆಲಸ ಹುಡುಕಿಕೊಂಡು ಪರ ಊರುಗಳಿಗೆ ಹೋದವರು ಅಲ್ಲಿಯೇ ನೆಲೆಸಿದರು. ಜತೆಗೆ ಭತ್ತದ ಕೃಷಿ ಮಾಡಿಸುವುದು ದುಬಾರಿಯಾಯಿತು. ಗದ್ದೆ ಹೊಂದಿದ್ದ ಮಾಲೀಕರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು. ಜತೆಗೆ ಅನಾವೃಷ್ಠಿ, ಅತಿವೃಷ್ಠಿಗೆ ಸಿಲುಕಿ ಗದ್ದೆ ಕೃಷಿ ಮಾಡುವುದೇ ಕಷ್ಟವಾಗಿ ಪರಿಣಮಿಸಲಾರಂಭಿಸಿತು. ಪರಿಣಾಮ ಭತ್ತದ ಕೃಷಿ ಬದಲಿಗೆ ಇತರೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದರು.

ಗದ್ದೆಯೆ ಜೊತೆ ಭಾವನಾತ್ಮಕ ಸಂಬಂಧ
ಎಲ್ಲೋ ಒಂದು ಕಡೆ ತಲೆಮಾರುಗಳಿಂದ ಮುಂದುವರೆದುಕೊಂಡು ಬಂದಿದ್ದ ಗದ್ದೆಯೆಡೆಗಿನ ಭಾವನಾತ್ಮಕ ಸಂಬಂಧಗಳು ಸಡಿಲವಾಗಲು ಆರಂಭಿಸಿತು. ಇದು ಹೀಗೆಯೇ ಮುಂದುವರೆದರೆ ಯುವ ತಲೆಮಾರು ಕೊಡಗಿನ ಪೂಜನೀಯವಾದ ಧಾನ್ಯ ಲಕ್ಷ್ಮಿಯಾದ ಭತ್ತದ ಮಹತ್ವ, ಕೃಷಿ ಚಟುವಟಿಕೆ, ಆಚಾರ ವಿಚಾರ ಎಲ್ಲವನ್ನು ಮರೆತು ಬಿಡುತ್ತಾರೆ ಎಂಬ ಭಯವೂ ಆರಂಭವಾಯಿತು. ಹೀಗಾಗಿ ಗದ್ದೆಯ ಮಹತ್ವ ಮತ್ತು ಅದರ ಸುತ್ತ ಇರುವ ಭಾವನಾತ್ಮಕ ಸಂಬಂಧ, ಸಂಪ್ರದಾಯ ಎಲ್ಲವನ್ನು ಜೀವಂತವಾಗಿರಿಸುವ ಹಾಗೂ ಯುವ ತಲೆಮಾರಿಗೂ ಪರಿಚಯಿಸುವ ಸಲುವಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಳೆನಮ್ಮೆ(ಮಳೆಹಬ್ಬ)ಯನ್ನು ಹುಟ್ಟು ಹಾಕಿತು.

ಮಳೆನಮ್ಮೆ ಹೇಗಿರುತ್ತಿತ್ತು ಗೊತ್ತಾ?
ಈ ಮಳೆ ನಮ್ಮೆ(ಮಳೆಹಬ್ಬ) ಹೇಗಿರುತ್ತಿತ್ತೆಂದರೆ, ಜಿಲ್ಲೆಯ ಯಾವುದಾರೊಂದು ಕಡೆ ಯಾವುದಾದರೂ ಒಂದು ಕುಟುಂಬದ ವ್ಯಕ್ತಿಯ ಗದ್ದೆಯನ್ನು ಆಯ್ಕೆ ಮಾಡಿಕೊಂಡು ಹಿರಿಯರು ಕಿರಿಯರು, ಮಹಿಳೆಯರು, ಪುರುಷರು ಎನ್ನದೇ ಎಲ್ಲರೂ ಸಾಂಪ್ರದಾಯಿಕ ಉಡುಗೆಯಲ್ಲಿ ನೆರೆಯುತ್ತಿದ್ದರು. ಹಿಂದಿನ ಕಾಲದ ಸಂಪ್ರದಾಯದಂತೆ ಪೈರು ಕೀಳುವ ಮುನ್ನ ಭೂಮಿ ತಾಯಿಯನ್ನು ಪ್ರಾರ್ಥಿಸಿ ಪೂಜೆ ಮಾಡಿ ನಂತರ ಪೈರು ಕೀಳುವ ಕಾರ್ಯವನ್ನು ಮಹಿಳೆಯರು ಮಾಡುತ್ತಿದ್ದರು. ಈ ಕಾರ್ಯದಲ್ಲಿ ವಿವಿಧ ಅತ್ಯುನ್ನತ ಹುದ್ದೆಯಲ್ಲಿದ್ದವರು ಬಂದು ಥೇಟ್ ಕೊಡಗಿನ ಕೃಷಿಕ ಮಹಿಳೆಯರಾಗಿ ಗದ್ದೆಗಿಳಿದು ಪೈರು ಕೀಳುತ್ತಿದ್ದರು. ಜತೆಗೆ ಇಂದಿನ ಯುವತಿಯರಿಗೂ ಪೈರು ಕೀಳುವುದು ಮತ್ತು ಅದನ್ನು ಕಂತೆ ಕಟ್ಟುವುದು ಹೇಗೆಂದು ಹೇಳಿಕೊಡುತ್ತಿದ್ದರು.

ಸಾಮೂಹಿಕ ನಾಟಿ, ಊಟ, ಆಟ
ಇನ್ನೊಂದೆಡೆ ಪುರುಷರು ಎತ್ತಿನಿಂದ ಹಿಂದಿನ ಕಾಲದ ಮರದ ನೇಗಿಲನ್ನು ಬಳಸಿ ಉಳುಮೆ ಮಾಡಿ ಬಳಿಕ ನೆರೆದವರೆಲ್ಲ ಗದ್ದೆಗಿಳಿದು ನಾಟಿ ಮಾಡುತ್ತಿದ್ದರು. ಆ ನಂತರ ಸಹ ಬೋಜನ.. ಆ ನಂತರ ಕೆಸರು ಗದ್ದೆಯನ್ನೇ ಕ್ರೀಡಾಂಗಣವಾಗಿಸಿ ಮಹಿಳೆಯರಿಗೆ, ಪುರುಷರಿಗೆ, ಬಾಲಕರು ಹೀಗೆ ಎಲ್ಲರೂ ಹಗ್ಗಜಗ್ಗಾಟ, ಓಟ, ಶಕ್ತಿಕೋಲ್, ರನ್ನಿಂಗ್ ರೇಸ್, ರಿಲೇ ಹೀಗೆ ವಿವಿಧ ಆಟಗಳನ್ನಾಡುತ್ತಿದ್ದರು. ಬಳಿಕ ನೆರೆದವರೆಲ್ಲರೂ ತಮ್ಮ ಜಂಜಾಟ ಮರೆತು ಕೆಸರಿನ ಗದ್ದೆಯಲ್ಲಿಯೇ ಕೊಡವ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕುತ್ತಿದ್ದರು. ಇದೆಲ್ಲವೂ ಸುರಿಯುವ ಮಳೆಯಲ್ಲಿಯೇ ನಡೆಯುತ್ತಿತ್ತು.
Recommended Video

ಸಂಭ್ರಮ ಕಸಿದ ವಿದ್ಯಮಾನಗಳು
ಇವತ್ತಿಗೂ ಆ ಕ್ಷಣಗಳನ್ನು ನೆನೆದವರು ಖುಷಿ ಪಡುತ್ತಾರೆ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಕಳೆದ ಮೂರು ವರ್ಷಗಳಿಂದೀಚೆಗೆ ಮುಂಗಾರು ಮಳೆ ಎಂದರೆ ಕೊಡಗಿನವರಲ್ಲಿ ಸಂಭ್ರಮಕ್ಕಿಂತ ಭಯವೇ ಹೆಚ್ಚು ಕಾಡುತ್ತಿದೆ. ಕಾರಣ ಮೂರು ವರ್ಷಗಳಲ್ಲಿ ಕೊಡಗಿನಲ್ಲಿ ನಡೆದ ಭೂಕುಸಿತ, ಪ್ರವಾಹ, ಜೀವಹಾನಿಯಂತಹ ಅವಘಡಗಳು ನಮ್ಮ ಕಣ್ಣಮುಂದಿದೆ. ಹೀಗಿರುವಾಗ ಸಂಭ್ರಮಕ್ಕೆಲ್ಲಿದೆ ಜಾಗ?












Click it and Unblock the Notifications