'ಪ್ರವಾಹದಲ್ಲಿ ಕೊಚ್ಚಿಹೋದ ಮಗಳು ಬದುಕಿ ಬರ್ತಾಳೆ ಅನ್ನೋ ಭರವಸೆ ಇಲ್ಲ'
ಮಡಿಕೇರಿ, ಅಕ್ಟೋಬರ್ 9: 'ನನ್ನ ಮಗಳಿಗೆ ಏನೂ ಆಗಿಲ್ಲ ಆಕೆ ಬದುಕಿ ಬಂದೇ ಬರ್ತಾಳೆ ಎನ್ನುವ ನಂಬಿಕೆ ಉಂಟು' ಆದರೆ ದಿನೇ ದಿನೇ ನಂಬಿಕೆ ಕಳೆದುಕೊಳ್ಳುತ್ತಿದ್ದೇನೆ ಹೀಗೆ ತಂದೆಯೊಬ್ಬರು ಪ್ರವಾಹದಲ್ಲಿ ಕೊಚ್ಚಿ ಹೋದ ಮಗಳ ಬರುವಿಕೆಗಾಗಿ ಕಣ್ತುಂಬ ನೀರು, ಹೃದಯದ ತುಂಬ ಪ್ರೀತಿಯನ್ನು ತುಂಬಿಕೊಂಡು ಕಾಯುತ್ತಿದ್ದಾರೆ.
ಇತ್ತೀಚೆಗೆ ಕೊಡಗಿನಲ್ಲಿ ಸಂಭವಿಸಿದ ಪ್ರವಾಹದಲ್ಲಿ 15 ವರ್ಷದ ಮಂಜುಳಾ ಕೊಚ್ಚಿ ಹೋಗಿದ್ದಾಳೆ, ಆಕೆಯನ್ನು ಹುಡುಕಿ ಸುಸ್ತಾಗಿದೆ. ಇನ್ನೊಂದೆಡೆ ಆಕೆ ಬದುಕಿಲ್ಲ ಎಂದು ಆಕೆಯ ಅಂತಿಮ ಕ್ರಿಯೆಗಳನ್ನು ಮಾಡಲು ಕುಟುಂಬದವರು ಸಿದ್ಧವಿದ್ದಾರೆ, ಆದರೆ ಎಲ್ಲೋ ಒಂದು ಕಡೆ ತನ್ನ ಮಗಳು ಬದುಕಿದ್ದಾಳೆ ಎನ್ನುವ ಭರವಸೆಯೊಂದಿಗೆ ಮಗಳ ಫೋಟೊವನ್ನು ಹಿಡಿದುಕೊಂಡು ಹೋಗಿ ಬರುವವರಿಗೆಲ್ಲಾ ಈಕೆಯನ್ನು ನೋಡಿದ್ದೀರಾ ಎಂದು ಕೇಳುತ್ತಾರೆ ದುಃಖತಪ್ತರಾಗುತ್ತಾರೆ.
ಜೋಡುಪಾಳದಲ್ಲಿ ಸೆಪ್ಟೆಂಬರ್ 17ರಂದು ಗುಡ್ಡ ಕುಸಿತ ಉಂಟಾದ ಸಮಯದಲ್ಲಿ ಆಕೆ ಕಣ್ಮರೆಯಾಗಿದ್ದಳು. ತಂದೆ ಸೋಮಯ್ಯ ಆಕೆಯ ಫೋಟೊವನ್ನು ಭದ್ರವಾಗಿಟ್ಟುಕೊಂಡು ಮಗಳ ಬರುವಿಕೆಗಾಗಿ ಹಂಬಲಿಸುತ್ತಿದ್ದಾರೆ. ಮಂಜುಳಾಗೆ ನಮ್ಮೂರಲ್ಲಿ ಬಸ್ ವ್ಯವಸ್ಥೆ ಇಲ್ಲದ ಕಾರಣ ಸಹೋದರಿಯ ಮನೆಯಲ್ಲಿದ್ದುಕೊಂಡು ಮಹೇಶ್ವರ ಪ್ರೌಢಶಾಲೆಗೆ ಹೋಗುತ್ತಿದ್ದಳು.

ಹಳ್ಳಿಗೆ ಕೇವಲ ಒಂದೇ ಒಂದು ಬಸ್ ಬರುತ್ತಿತ್ತು ಅದು ಬಂದರೂ 3 ಕಿಲೋಮೀಟರ್ ನಡೆದುಕೊಂಡು ಹೋಗಬೇಕಿತ್ತು ಹಾಗಾಗಿ ಅವಳನ್ನು ಸಹೋದರಿಯ ಮನೆಗೆ ಕಳುಹಿಸಿದ್ದೆ, ಅಂದು ಮಂಜುಳಾ ಅವಳ ಅತ್ತೆ ಗೌರಮ್ಮ ಜೊತೆ ಮನೆಯಲ್ಲಿಯೇ ಇದ್ದಳು. ಗೌರಮ್ಮ ಅವರ ಗಂಡ ಬಸಪ್ಪ ಹಾಗೂ ಮಗಳು ಗುಡ್ಡ ಕುಸಿತದಲ್ಲಿ ಸಿಲುಕಿದ್ದರು.
ಅದೇ ದಿನ ಬಸಪ್ಪ ಅವರ ದೇಹ ಸಿಕ್ಕಿತ್ತು ಮಾರನೇ ದಿನ ಗೌರಮ್ಮ ಅವರ ಮಗಳು ಮನೀಶಾ ಅವರ ಮೃತದೇಹ ಮನೆಯಿಂದ 300 ಮೀಟರ್ ದೂರದಲ್ಲಿ ಪತ್ತೆಯಾಗಿತ್ತು.
ಜೋಡುಪಾಳ-ಮಡಿಕೇರಿ ದಾರಿಯಲ್ಲಿ ಎಲುಬುಗಳು ಪತ್ತೆಯಾಗಿದ್ದವು ಬಳಿಕ ಅದು ಜಾನುವಾರುಗಳದ್ದು ಎಂದು ದೃಢಪಟ್ಟಿತ್ತು. ಸೋಂಯ್ಯ ಅವರ ಮೂರು ಮಕ್ಕಳು ಸುರಕ್ಷಿತವಾಗಿದ್ದಾರೆ. ಈ ಪ್ರದೇಶಗಳು ಕೆಸರಿನಿಂದ ತುಂಬಿರುವ ಕಾರಣ ಆಕೆಯನ್ನು ಹುಡುಕಲು ಸಾಧ್ಯವಾಗುತ್ತಿಲ್ಲ. ಆದರೂ ಬದುಕಿ ಬರಲಿ ಎಂದು ಮನಸ್ಸು ಹೇಳುತ್ತಿದೆ.
ಮಗಳನ್ನು ಕಾಣೆಯಾದವರ ಪಟ್ಟಿಯಲ್ಲಿ ಸೇರಿಸಲಾಗಿದೆ. ಇದುವರೆಗೂ ಆಕೆ ಪತ್ತೆಯಾಗದ ಕಾರಣ ಆಕೆ ಬರುವ ಎಲ್ಲಾ ಭರವಸೆಯನ್ನುಕಳೆದುಕೊಂಡಿದ್ದೇನೆ, ಕುಟುಂಬದವರ ಇಚ್ಛೆಯಂತೆ ಮುಂದಿನ ಕಾರ್ಯ ನಡೆಯಲಿದೆ ಎಂದು ಕಣ್ಣೀರಿಡುತ್ತಾ ಮಾತು ಮುಗಿಸುತ್ತಾರೆ.












Click it and Unblock the Notifications