Karnataka New CM: ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆ: ಡಿ.ಕೆ ಶಿವಕುಮಾರ್ ಸಿಎಂ ಆಗುವ ಹಾದಿ ಸುಗಮ ?
Karnataka New CM: ದೇಶದ ಹಲವು ಪ್ರಮುಖ ಹಾಗೂ ಪ್ರಭಾವಿ ನಾಯಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರೂ, ಡಿ.ಕೆ ಶಿವಕುಮಾರ್ ಅವರು ಪಕ್ಷ ನಿಷ್ಠೆ ಬಿಡಲಿಲ್ಲ. ಈ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಡಿ.ಕೆ ಶಿವಕುಮಾರ್ ಅವರಿಗೆ ತುಂಬಾ ತಡವಾಗಿಯೇ ಸಚಿವ ಸ್ಥಾನ ಸಿಕ್ಕಿತ್ತು. ಜೈಲು ಶಿಕ್ಷೆ ಅನುಭವಿಸಿ ಎದುರಾಳಿ ಪಕ್ಷ ಬಿಜೆಪಿಯಿಂದ ಆಹ್ವಾನ ಬಂದಿದೆ ಎನ್ನುವಾಗಲೂ ಡಿ.ಕೆ ಶಿವಕುಮಾರ್ ಅವರು ಪಕ್ಷಕ್ಕೆ ನಿಷ್ಠರಾಗಿದ್ದರು. ತೆಲಂಗಾಣ, ದೆಹಲಿ ಹಾಗೂ ಈಚೆಗಿನ ಕೇರಳಂ ವಿಧಾನಸಭೆ ಚುನಾವಣೆಗಳ ಜವಾಬ್ದಾರಿಯನ್ನು ಕಾಂಗ್ರೆಸ್ ಪಕ್ಷವು ಡಿಕೆಶಿ ಅವರಿಗೆ ಕೊಟ್ಟಿತ್ತು. ಇದನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದರು ಸಹ. ಕಾಂಗ್ರೆಸ್ ಪಕ್ಷಕ್ಕೆ ಅವರು ತೋರಿಸಿದ ನಿಷ್ಠೆ, ಸಂಘಟನಾ ಚಾತುರ್ಯತೆ ಹಾಗೂ ಬಿಜೆಪಿಯ ರಾಜಕೀಯ ದಾಳಿಗಳಿಗೆ ವಿಚಲಿತರಾಗದ ಇರುವುದರ ಪ್ರತಿಫಲ ಈಗ ಡಿ.ಕೆ ಶಿವಕುಮಾರ್ ಅವರಿಗೆ ಸಿಗುತ್ತಿದೆ ಎನ್ನುವ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.
ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಗೆದ್ದಾಗಿನಿಂದಲೂ ಮುಖ್ಯಮಂತ್ರಿ ಹುದ್ದೆಗೆ ಡಿ.ಕೆ ಶಿವಕುಮಾರ್ ಅವರ ಹೆಸರು ಕೇಳಿ ಬರುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅಮೋಘ ಯಶಸ್ಸು ಗಳಿಸಿದ ನಂತರ ಕರ್ನಾಟಕ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಅವರ ನಡುವೆ ಮುಖ್ಯಮಂತ್ರಿ ಹುದ್ದೆಗೆ ಭಾರೀ ಪೈಪೋಟಿ ಏರ್ಪಟ್ಟಿತ್ತು. ಆ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಮತ್ತು ಡಿ.ಕೆ ಸುರೇಶ್ ಬ್ರದರ್ಸ್, "ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ" ಎಂದಿದ್ದರು. ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದರೆ ಡಿ.ಕೆ ಶಿವಕುಮಾರ್ ಅವರ ಕನಸಿನ ಕೂಲಿ ಸಿಗುವ ದಿನಗಳು ಸಮೀಪದಲ್ಲೇ ಇರುವಂತೆ ಇದೆ.

ಡಿ.ಕೆ ಶಿವಕುಮಾರ್ ಅವರಿಗೆ ಹಲವು ವಿಷಯಗಳು ಪ್ಲಸ್ ಪಾಯಿಂಟ್ ಆಗಿದೆ. ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮೇಲಿದ್ದ ಅಚಲ ವಿಶ್ವಾಸ ಹಾಗೂ ರಾಹುಲ್ ಗಾಂಧಿ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿರುವುದು ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಹಾದಿ ಸುಗಮವಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದವಾಗಿದೆ ಎಂದು ಹೇಳಲಾಗಿತ್ತು. ಈ ಬಗ್ಗೆ ಡಿ.ಕೆ ಶಿವಕುಮಾರ್ ಆಪ್ತರು ಪ್ರಸ್ತಾಪಿಸುತ್ತಿದ್ದರೂ ಸಹ ಸಿದ್ದರಾಮಯ್ಯ ಅವರ ಆಪ್ತರು ಇದನ್ನು ನಿರಾಕರಿಸಿಕೊಂಡೇ ಬಂದಿದ್ದರು. ಮುಂದಿನ ಐದು ವರ್ಷದ ಅವಧಿಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಇರಲಿದ್ದಾರೆ ಎಂದು ಹೇಳುತ್ತಿದ್ದರು. ಇದೀಗ ಸರ್ಕಾರ ಮೂರು ವರ್ಷ ಪೂರೈಸುತ್ತಿರುವ ಹೊತ್ತಿನಲ್ಲೇ ಶಿವಕುಮಾರ್ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಕಾಲ ಕೂಡಿ ಬಂದಿದೆ ಎಂದು ಹೇಳಲಾಗಿದೆ.
ಶಿವಕುಮಾರ್ ಅವರಿಗೆ ಅಧಿಕಾರ ಹಂಚಿಕೆಯ ಬಗ್ಗೆ ಮಾತು ಕೊಡಲಾಗಿದೆ. ಈ ಮಾತು ಉಳಿಸಿಕೊಳ್ಳಬೇಕಿದೆ ಎಂದು ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ನೆನಪಿಸುತ್ತಿದ್ದರು ಆದರೆ, ರಾಹುಲ್ ಗಾಂಧಿ ಅವರು ಇದನ್ನು ಮುಂದೂಡಿಕೊಂಡು ಬಂದಿದ್ದರು ಎನ್ನಲಾಗಿದೆ. ಆದರೆ, ಅಂತಿಮವಾಗಿ ಸೋನಿಯಾ ಮತ್ತು ಪ್ರಿಯಾಂಕಾ ಬಗ್ಗೆ ಇರಿಸಿಕೊಂಡಿದ್ದ ವಿಶ್ವಾಸ ಡಿ.ಕೆ.ಶಿವಕುಮಾರ್ ಅವರಿಗೆ ವರವಾಗಿದೆ. ಅಲ್ಲದೆ ಸುದೀರ್ಘ ಅವಧಿ ಕಾಂಗ್ರೆಸ್ ಪಕ್ಷ ಹಾಗೂ ವರಿಷ್ಠರೊಂದಿಗೆ ನಿಷ್ಠೆಯಿಂದ ನಡೆದುಕೊಂಡಿದ್ದು ಸಹ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ.
ದೇಶದ ಯಾವುದೇ ರಾಜ್ಯದಲ್ಲಾದರೂ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆದಾಗ, ಬಿಜೆಪಿಯ ರಾಜಕೀಯ ಹೊಡೆತಗಳು, ಅವಕಾಶ ತಪ್ಪಿದ ಸಂದರ್ಭದಲ್ಲೂ ಸಹ ಅವರು ಬಿಜೆಪಿ ಕಡೆ ಮುಖ ಮಾಡುವ ಮಾತನ್ನೂ ಸಹ ಆಡಲಿಲ್ಲ. ಪಕ್ಷ ನಿಷ್ಠೆ ತೋರಿದ ಬಗ್ಗೆಯೂ ಹೈಕಮಾಂಡ್ನ ಕೆಲವು ನಾಯಕರಿಗೆ ನಂಬಿಕೆ ಇದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಒಟ್ಟಾರೆ ಸುದೀರ್ಘ ಅವಧಿಯ ಡಿ.ಕೆ ಶಿವಕುಮಾರ್ ಅವರ ಪ್ರಯತ್ನಗಳು ಈಡೇರುವ ಕಾಲ ಇದೀಗ ಕೂಡಿ ಬಂದಿದೆ.














Click it and Unblock the Notifications