ತುಮಕೂರು - ಚಿತ್ರದುರ್ಗ - ದಾವಣಗೆರೆ ಮತ್ತು ರಾಯದುರ್ಗ - ತುಮಕೂರು ಹೊಸ ರೈಲು ಮಾರ್ಗ ಯಾವಾಗ ಪೂರ್ಣ? ಇಲ್ಲಿದೆ ಅಪ್ಡೇಟ್
Karnataka New Railway Line: ರಾಜ್ಯದಲ್ಲಿ ರೈಲ್ವೇ ವಿಭಾಗದಲ್ಲಿ ದೊಡ್ಡ ಮಟ್ಟದ ಅಭಿವೃದ್ಧಿ ಕ್ರಾಂತಿ ನಡೆಯುತ್ತಿದೆ. ಇದೀಗ ಬಹುನಿರೀಕ್ಷಿತ ತುಮಕೂರು - ದಾವಣಗೆರೆ ಮತ್ತು ರಾಯದುರ್ಗ - ತುಮಕೂರು ಹೊಸ ರೈಲು ಮಾರ್ಗ ಯಾವಾಗ ಪೂರ್ಣಗೊಳ್ಳಲಿದೆ ಎಂದು ಸಚಿವ ವಿ ಸೋಮಣ್ಣ ಅವರು ಬಿಗ್ ಅಪ್ಟೇಟ್ ಅನ್ನು ನೀಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಬಹುಕಾಲದ ಬೇಡಿಕೆಯಾಗಿದ್ದ ತುಮಕೂರು - ಚಿತ್ರದುರ್ಗ - ದಾವಣಗೆರೆ ಮತ್ತು ತುಮಕೂರು - ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಗಳು ಯಾವಾಗ ಪೂರ್ಣಗೊಳ್ಳಲಿದೆ ಹಾಗೂ ರೈಲು ಸಂಚಾರ ಯಾವಾಗ ಆರಂಭವಾಗಲಿದೆ ಎಂಬ ಬಗ್ಗೆ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಹೊಸ ಮಾರ್ಗದಿಂದ ಸಮಯ ಕಡಿತ
ಈ ನೂತನ ನೇರ ರೈಲು ಮಾರ್ಗವು ಒಟ್ಟು 206 ಕಿಲೋ ಮೀಟರ್ ಉದ್ದವಿದ್ದು, ಸುಮಾರು 2,140 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಪ್ರಸ್ತುತ ಬೆಂಗಳೂರು ಅಥವಾ ತುಮಕೂರಿನಿಂದ ದಾವಣಗೆರೆಗೆ ಹೋಗುವ ರೈಲುಗಳು ಅರಸೀಕೆರೆ ಮಾರ್ಗವಾಗಿ ಸುತ್ತಿ ಬಳಸಿ ಹೋಗಬೇಕಾಗಿದೆ. ಈ ಹೊಸ ಮಾರ್ಗ ಪೂರ್ಣಗೊಂಡರೆ ಪ್ರಯಾಣದ ದೂರದಲ್ಲಿ ಬರೋಬ್ಬರಿ 65 ಕಿಲೋ ಮೀಟರ್ ಕಡಿತವಾಗಲಿದ್ದು, ಸಮಯ ಉಳಿತಾಯ ಆಗಲಿದೆ.
2028ರೊಳಗೆ ಮುಕ್ತಾಯ
ತೋಳಹುಣಸೆ ಮತ್ತು ಆನಗೋಡು ನಡುವಿನ 16 ಕಿಲೋ ಮೀಟರ್ಗಳಷ್ಟು ಕಾಮಗಾರಿ ಈಗಾಗಲೇ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸುರಕ್ಷತಾ ಪರಿಶೀಲನೆ ನಡೆಸಿ ರೈಲು ಸಂಚಾರ ಆರಂಭಿಸಲು ಸಚಿವರು ಸೂಚಿಸಿದ್ದಾರೆ. ಚಿತ್ರದುರ್ಗ ಮಾರ್ಗವಾಗಿ ಸಾಗುವ ಈ ಇಡೀ ಯೋಜನೆಯನ್ನು ಹಂತ ಹಂತವಾಗಿ ಮುಗಿಸಿ ಶೀಘ್ರದಲ್ಲೇ ಸಂಪೂರ್ಣವಾಗಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವ ಗುರಿಯನ್ನು ರೈಲ್ವೆ ಇಲಾಖೆ ಹೊಂದಿದೆ. ಭೂಸ್ವಾಧೀನ ಪ್ರಕ್ರಿಯೆಯು ಶೇಕಡ 92ರಷ್ಟು ಮುಕ್ತಾಯಗೊಂಡಿದ್ದು, ಬಾಕಿ ಕೆಲಸಗಳಿಗೆ ವೇಗ ನೀಡಲಾಗಿದೆ.
ತುಮಕೂರು - ರಾಯದುರ್ಗ ಹೊಸ ರೈಲು ಮಾರ್ಗ
ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗದ ಯೋಜನೆಯನ್ನು 2012ರಲ್ಲಿ ಆರಂಭಿಸಲಾಯಿತು. ಒಟ್ಟು 206 ಕಿಲೋ ಮೀಟರ್ ಉದ್ದದ ಲೈನ್ ಇದಾಗಿದ್ದು, ಸುಮಾರು 1,850 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಯಾ ಯೋಜನೆ ಘೋಷಿಸಲಾಗಿದೆ. ಬಳಿಕ 2,500 ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಪಕ್ಕದ ಆಂಧ್ರ ಪ್ರದೇಶದ ರಾಯದುರ್ಗದಿಂದ ಕರ್ನಾಟಕದ ಪಾವಗಡವರೆಗೆ 125 ಕಿಲೋ ಮೀಟರ್ವರೆಗೂ ಈಗಾಗಲೇ ಕಾಮಗಾರಿ ಪೂರ್ಣಗೊಂಡು ಕೆ.ರಾಮಪುರ ರೈಲ್ವೆ ನಿಲ್ದಾಣದವರೆಗೆ ಹಳಿ ಜೋಡಣೆ ಹಾಗೂ ಪ್ರಾಯೋಗಿಕವಾಗಿ ರೈಲು ಸಂಚಾರ ಮಾಡಲಾಗಿದೆ.
ಕೆ.ರಾಮಪುರ ನಿಲ್ದಾಣದಿಂದ ಮಧುಗಿರಿ, ಕೊರಟಗೆರೆ, ತುಮಕೂರುವರೆಗೆ 81 ಕಿಲೋ ಮೀಟರ್ವರೆಗೂ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಕೆಲವೆಡೆ ಮಾತ್ರ ಕಾಮಗಾರಿ ಪ್ರಾರಂಭ ಮಾಡಲು ಈಗಾಗಲೇ ಮಾರ್ಗದ ಮಧ್ಯೆ ಇರುವ ಸಮಸ್ಯೆಗಳನ್ನು ನಿವಾರಿಸಲಾಗುತ್ತಿದೆ. ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ರೈಲ್ವೆ ಕಾಮಗಾರಿ ಪ್ರಾರಂಭ ಆಗಿರುವುದು ಈ ಭಾಗದ ಕೂಲಿ ಕಾರ್ಮಿಕರಿಗೆ, ತುಮಕೂರು ಬೆಂಗಳೂರಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಸಂತಸ ತರಿಸಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳನ್ನು ಸಂಪರ್ಕಿಸುವ ಅತ್ಯಂತ ಪ್ರಮುಖವಾದ ಈ ಯೋಜನೆ ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂಪರ್ಕವನ್ನು ಹೆಚ್ಚಿಸಲಿದೆ. ತುಮಕೂರು ಹಾಗೂ ಬಳ್ಳಾರಿ ನಡುವಿನ ರೈಲು ಪ್ರಯಾಣದ ದೂರವನ್ನು 130 ಕಿಲೋ ಮೀಟರ್ಗಳಷ್ಟು ಕಡಿಮೆ ಮಾಡಲಿದೆ.
ಪಾವಗಡ ಮತ್ತು ದೊಡ್ಡಹಳ್ಳಿ ನಡುವಿನ ರೈಲು ಮಾರ್ಗವೂ ಉದ್ಘಾಟನೆಗೆ ಸಜ್ಜಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಬಹುತೇಕ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಮಾಹಿತಿ ಪ್ರಕಾರ, ಇಡೀ ಮಾರ್ಗವನ್ನು ಡಿಸೆಂಬರ್ 2027ರೊಳಗೆ ಪೂರ್ಣ ಕಾಮಗಾರಿ ಮುಗಿಯುವ ಭರವಸೆಯನ್ನು ನೀಡಿದ್ದಾರೆ.
ಕರ್ನಾಟಕದಲ್ಲಿ ಎಲ್ಲೆಲ್ಲಿ ಹಾದುಹೋಗಲಿದೆ?
* ತುಮಕೂರು
* ಊರುಕೆರೆ
* ಕೊರಟಗೆರೆ
* ಮಧುಗಿರಿ
* ಮೆಡಿಕೇಶಿ
* ಪಾವಗಡ
ಆಂಧ್ರದಲ್ಲಿ ಎಲ್ಲೆಲ್ಲಿ ಹಾದುಹೋಗಲಿದೆ?
* ಮಡಕಶಿರಾ
* ದೇವರಪಲ್ಲಿ
* ದೊಡ್ಡಹಳ್ಳಿ
* ಕಲ್ಯಾಣದುರ್ಗ
* ರಾಯದುರ್ಗ












Click it and Unblock the Notifications