ಕೊಡಗಿನ ಸಂತ್ರಸ್ತರ ಪರಿಹಾರ ಕೇಂದ್ರದಲ್ಲಿ ಭರವಸೆಯ ಹೊಂಗಿರಣ

ಮಡಿಕೇರಿ, ಆಗಸ್ಟ್ 20: ಕಳೆದೊಂದು ವಾರದಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ, ಆಸ್ತಿ-ಪಾಸ್ತಿಯನ್ನು ಕಳೆದುಕೊಂಡು ಕಂಗೆಟ್ಟಿರುವ ಕೊಡಗಿನ ಜನರಿಗೆ, ಸದ್ಯ ಸರ್ಕಾರದ ಪರಿಹಾರ ಕೇಂದ್ರದಲ್ಲಿ ಹೊತ್ತಿಗೆ ಸರಿಯಾಗಿ ಊಟೋಪಹಾರ ಹಾಗೂ ಪರಿಹಾರ ಸಾಮಾಗ್ರಿಗಳು ಲಭ್ಯವಾಗುತ್ತಿವೆ. ಮುಂದೇನು ಗತಿ ಎಂಬ ಆತಂಕದಲ್ಲಿದ್ದ ಕುಟುಂಬಗಳಿಗೆ ಪರಿಹಾರ ಕೇಂದ್ರ ಭರವಸೆಯ ಹೊಂಗಿರಣ ಮೂಡಿಸಿದೆ.

'ಮನೆ ಆಸ್ತಿ ಕಳೆದುಕೊಂಡು ದಿಕ್ಕೆಟ್ಟಿದ್ದೆವು. ಈಗ ಊಟ, ಬಟ್ಟೆಬರೆಗಳು ಸಿಗುತ್ತಿವೆ. ಬದುಕುವ ಬಗ್ಗೆ ಭರವಸೆಯೂ ಮೂಡಿದೆ'- ಇದು ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಆಸರೆ ಪಡೆದಿರುವ ಮನು ಎಂಬ ಮಹಿಳೆ ಹೇಳಿಕೊಂಡ ಮನದಾಳದ ಮಾತುಗಳು.

ಕೊಡಗು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಮಡಿಕೇರಿ, ಕುಶಾಲನಗರ, ಮುಳಸೋಗೆ, ಕೂಡಿಗೆ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಸಾವಿರಾರು ಜನರು ತಮ್ಮ ಮನೆ, ಆಸ್ತಿ, ಜಾನುವಾರುಗಳನ್ನು ಕಳೆದುಕೊಂಡು ಅಕ್ಷರಶಃ ನಿರಾಶ್ರಿತರಾಗಿದ್ದಾರೆ.

ಪರಿಹಾರ ಕೇಂದ್ರಗಳಲ್ಲಿ ಸೌಲಭ್ಯ

ಪರಿಹಾರ ಕೇಂದ್ರಗಳಲ್ಲಿ ಸೌಲಭ್ಯ

ಅತಿವೃಷ್ಟಿಯಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಕುಶಾಲನಗರವೂ ಒಂದಾಗಿದ್ದು, ಸಂತ್ರಸ್ತರಿಗಾಗಿ ಇಲ್ಲಿನ ಸರ್ಕಾರಿ ಪ್ರಾಥಮಿಕ ಮಾದರಿ ಶಾಲೆಯಲ್ಲಿ ಪರಿಹಾರ ಕೇಂದ್ರವನ್ನು ತೆರೆಯಲಾಗಿದೆ. ಇದರ ಜೊತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಂತ್ರಸ್ತರಿಗಾಗಿ ನೆರವಿನ ಮಹಾಪೂರವನ್ನೇ ಹರಿಸಿದ್ದು, ಇವುಗಳನ್ನು ಸ್ವೀಕರಿಸಿ, ವ್ಯವಸ್ಥಿತವಾಗಿ ನಿಜವಾದ ಸಂತ್ರಸ್ತರಿಗೆ ವಿತರಿಸಲು ಕೂಡ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ.

ಕುಶಾಲನಗರದ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯಲ್ಲಿರುವ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಪರಿಹಾರ ಸಾಮಗ್ರಿಗಳನ್ನು ಸ್ವೀಕರಿಸುವ ಕೇಂದ್ರವನ್ನು ಪ್ರಾರಂಭಿಸಲಾಗಿದೆ.

ಸಂತ್ರಸ್ತರ ಸಂಕಟ

ಸಂತ್ರಸ್ತರ ಸಂಕಟ

ಸಂತ್ರಸ್ತರಾಗಿರುವ ವಿಶ್ವನಾಥ್ ಎಂಬುವವರು ತಮ್ಮ ಅನಿಸಿಕೆ ವ್ಯಕ್ತಪಡಿಸಿ, 'ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಇಂತಹ ಭಾರಿ ಮಳೆ ಸುರಿದಿರುವುದನ್ನು ನಾನು ಕಂಡಿಲ್ಲ. ಈ ಬಾರಿ ಪ್ರಕೃತಿಯ ಅವಕೃಪೆಗೆ ನಾವು ಒಳಗಾಗಬೇಕಾಯಿತು. ತೀವ್ರ ಅತಿವೃಷ್ಟಿಯಿಂದಾಗಿ ನಾವು ತೊಂದರೆಗೆ ಒಳಗಾಗಿದ್ದೇವೆ. ಆದರೆ ನಮ್ಮ ಕಣ್ಣೀರು ಒರೆಸಲು ಇಡೀ ರಾಜ್ಯದ ಜನ ಒಂದಾಗಿ, ನೆರವಿನ ಮಹಾಪೂರವನ್ನೇ ಹರಿಸಿರುವುದು ಸಂತಸದ ಸಂಗತಿ.

ಮುಖ್ಯಮಂತ್ರಿ ಕುಮಾರಸ್ವಾಮಿ ಖುದ್ದು ಕುಶಾಲನಗರಕ್ಕೂ ಬಂದು, ನಮ್ಮ ನೋವನ್ನು ಆಲಿಸಿದ್ದಾರೆ. ಅಲ್ಲದೆ ಪರಿಹಾರ ದೊರಕಿಸುವ ಮಾತುಗಳನ್ನಾಡಿದ್ದಾರೆ. ಮನೆಗಳನ್ನು ಕಳೆದುಕೊಂಡವರಿಗೆ ಹೊಸ ಸೂರು ಒದಗಿಸುವ ಭರವಸೆ ನೀಡಿದ್ದಾರೆ. ಇದು ಹೊಸದಾಗಿ ನಮ್ಮ ಬದುಕು ಕಟ್ಟಿಕೊಳ್ಳಲು ಪ್ರೇರಣೆಯಾಗಿದೆ ಎಂದರು.

ಊಟೋಪಹಾರಕ್ಕೆ ತೊಂದರೆಯಿಲ್ಲ

ಊಟೋಪಹಾರಕ್ಕೆ ತೊಂದರೆಯಿಲ್ಲ

ಕುಶಾಲನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭಿಸಲಾಗಿರುವ ಪರಿಹಾರ ಕೇಂದ್ರದಲ್ಲಿ ಸುಮಾರು 250 ರಿಂದ 300 ಜನರು ಆಶ್ರಯವನ್ನು ಪಡೆದಿದ್ದು, ಇವರಿಗೆ ಬೆಳಗಿನ ಉಪಹಾರಕ್ಕಾಗಿ ಇಡ್ಲಿ, ಸಾಂಬಾರ್, ಉಪ್ಪಿಟ್ಟು ಸೇರಿದಂತೆ ವಿವಿಧ ಉಪಹಾರ ನೀಡಲಾಗುತ್ತಿದೆ.

ಪರಿಹಾರ ಕೇಂದ್ರಕ್ಕೆ ಹಲವು ಸಂಘಟನೆಗಳು ಸ್ವಯಂ ಪ್ರೇರಿತರಾಗಿ ಆಹಾರ, ತರಕಾರಿ, ಬ್ರೆಡ್ ಇತ್ಯಾದಿಗಳನ್ನು ಪೂರೈಸುತ್ತಿರುವುದು, ಕನ್ನಡಿಗರ ವಿಶಾಲ ಹೃದಯಕ್ಕೆ ಸಾಕ್ಷಿಯಾಗಿದೆ.

ಇಲ್ಲಿನ ಮುಖ್ಯೋಪಾಧ್ಯಾಯರಾದ ಗಾಯತ್ರಿ ಹೇಳುವಂತೆ, ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರಿಗಾಗಿ ಮಧ್ಯಾಹ್ನದ ಊಟ, ರಾತ್ರಿಯ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಅನ್ನ ಸಾಂಬಾರ್, ರೈಸ್ ಬಾತ್ ಸೇರಿದಂತೆ ವಿವಿಧ ಅಡುಗೆ ಊಟ ಬಡಿಸಲಾಗುತ್ತಿದೆ. ಊಟ ಪೂರೈಕೆಗಾಗಿ ಅಗತ್ಯ ಸಿಬ್ಬಂದಿಗಳನ್ನೂ ಕೂಡ ನೇಮಿಸಲಾಗಿದೆ.

ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಆಶ್ರಯ ಪಡೆಯಲು, ರಾತ್ರಿ ತಂಗಲು ಕೂಡ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ಶುದ್ಧ ನೀರಿನ ಬಾಟಲ್ ಪೂರೈಕೆ ವ್ಯವಸ್ಥೆಯೂ ಇದೆ. ಪರಿಹಾರ ಸಾಮಗ್ರಿಗಳಾದ ಹೊಸ ಉಡುಪುಗಳು, ತಟ್ಟೆ, ಬಿಸ್ಕೆಟ್, ಮಕ್ಕಳ ಉಡುಪುಗಳನ್ನು ವಿತರಿಸಲು ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗಿದೆ.

ಬಹಳಷ್ಟು ಸಂತ್ರಸ್ತರು ಊಟ, ಉಪಹಾರದ ಸಮಯಕ್ಕೆ ಪರಿಹಾರ ಕೇಂದ್ರಕ್ಕೆ ಬಂದು ಊಟ ಉಪಹಾರ ಸೇವಿಸಿ, ಪುನಃ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಿರುವುದೂ ಕಂಡುಬಂದಿದೆ. ಇಂತಹವರಿಗೂ ಕೂಡ ಊಟ ಉಪಹಾರ ಸೇವನೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಪರಿಹಾರ ಕೇಂದ್ರದ ಆವರಣದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿದೆ ಎಂದರು.

41 ಪರಿಹಾರ ಕೇಂದ್ರಗಳು

41 ಪರಿಹಾರ ಕೇಂದ್ರಗಳು

ಕೊಡಗು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಹಲವು ಗ್ರಾಮಗಳಲ್ಲಿ ಗುಡ್ಡ ಕುಸಿತ ಉಂಟಾಗಿ ಮನೆಗಳು ನಾಶವಾಗಿವೆ. ಸಾವಿರಾರು ಜನ ಮನೆಗಳನ್ನು ಕಳೆದುಕೊಂಡು, ವಾಸಕ್ಕೆ ಇದ್ದ ಸೂರು ಇಲ್ಲದಂತಾಗಿದೆ. ಜೀವವನ್ನು ಕೈಯಲ್ಲಿ ಹಿಡಿದುಕೊಂಡು, ಸುರಕ್ಷಿತ ಪ್ರದೇಶಗಳಿಗೆ ತೆರಳುವುದು ಕೂಡ ಸವಾಲಿನ ಸಂಗತಿಯಾಗಿತ್ತು.

ಇಂತಹ ಕೆಟ್ಟ ಪರಿಸ್ಥಿತಿಯಲ್ಲಿ ಸರ್ಕಾರ, ಸಂತ್ರಸ್ತರ ಜೀವನ ಉಳಿಸಲು ಸೇನೆಯ ನೆರವು ಪಡೆದಿದೆ. ಸಂತ್ರಸ್ತರಿಗಾಗಿ ಆಸರೆ ವ್ಯವಸ್ಥೆ ಮತ್ತು ಊಟೋಪಹಾರದ ವ್ಯವಸ್ಥೆಗಾಗಿ ಕೊಡಗು ಜಿಲ್ಲೆಯಲ್ಲಿ 41 ಪರಿಹಾರ ಕೇಂದ್ರಗಳನ್ನು ತೆರೆದು, ಸಮರ್ಪಕ ವ್ಯವಸ್ಥೆ ಕೈಗೊಂಡಿದೆ. ರಕ್ಷಣಾ ಸಿಬ್ಬಂದಿಗಳು ಜೀವದ ಹಂಗನ್ನು ತೊರೆದು ಜನರ ಜೀವ ಕಾಪಾಡುವಲ್ಲಿ ತೋರಿರುವ ನಿಷ್ಠೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.

ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ

ಸ್ವಚ್ಛತಾ ಕಾರ್ಯಕ್ಕೆ ಆದ್ಯತೆ

ಭಾರಿ ಮಳೆಯಿಂದ ಸಂತ್ರಸ್ತರಾದವರ ಆರೋಗ್ಯ ಕಾಪಾಡಲು, ಪರಿಹಾರ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರಗಳನ್ನೂ ಕೂಡ ಪ್ರಾರಂಭಿಸಲಾಗಿದೆ. ಪ್ರಥಮ ಚಿಕಿತ್ಸಾ ಕೇಂದ್ರದಲ್ಲಿ ಒಬ್ಬರು ವೈದ್ಯರು, 02 ರಿಂದ 03 ನರ್ಸ್‌ಗಳನ್ನು ನೇಮಿಸಲಾಗಿದ್ದು, ಸಾಕಷ್ಟು ಪ್ರಮಾಣದಲ್ಲಿ ಜೀವರಕ್ಷಕ ಔಷಧಿಗಳು, ರಕ್ತದೊತ್ತಡ, ಮಧುಮೇಹ ಪರೀಕ್ಷಾ ಉಪಕರಣಗಳನ್ನೂ ಕೂಡ ಒದಗಿಸಲಾಗಿದೆ. ಇವರಿಗೆ ಆಶಾ ಕಾರ್ಯಕರ್ತೆಯರೂ ಕೂಡ ನೆರವಾಗುತ್ತಿದ್ದಾರೆ.

ಭಾರಿ ಮಳೆಯಿಂದ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ, ನೈರ್ಮಲ್ಯದ ಕೊರತೆ ಕಂಡುಬಂದಿದ್ದರಿಂದ, ಇಲ್ಲಿನ ನಗರ, ಪಟ್ಟಣ ಪ್ರದೇಶಗಳಲ್ಲಿ ನೈರ್ಮಲ್ಯ ವ್ಯವಸ್ಥೆ ತಹಬದಿಗೆ ತರುವ ನಿಟ್ಟಿನಲ್ಲಿ ಸ್ವಚ್ಛತಾ ಕಾರ್ಯಕ್ಕಾಗಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವತಿಯಿಂದ ಸುಮಾರು 300 ಜನ ಪೌರ ಕಾರ್ಮಿಕರನ್ನು ನೇಮಿಸಿದೆ. ಈಗಾಗಲೆ ಪೌರಕಾರ್ಮಿಕರನ್ನು ಹೊತ್ತ ಬಸ್‌ಗಳು ಕುಶಾಲನಗರ ಮತ್ತು ಮಡಿಕೇರಿಯತ್ತ ಧಾವಿಸಿದ್ದು, ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂದಿತು.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಸುರಿದ ಪರಿಣಾಮವಾಗಿ ಸಂತ್ರಸ್ತರಾದವರಿಗೆ ಸೂಕ್ತ ಪರಿಹಾರೋಪಾಯ ಕಲ್ಪಿಸುವ ಸಲುವಾಗಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರು ಜಿಲ್ಲೆಯಲ್ಲಿಯೇ ಮೊಕ್ಕಾಂ ಹೂಡಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಖುದ್ದು ನಿಗಾ ವಹಿಸಿದ್ದಾರೆ.

ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಸಚಿವರಾದ ಆರ್.ವಿ.ದೇಶಪಾಂಡೆ ಅವರು ಕೂಡ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಾಥ್ ನೀಡಿದ್ದಾರೆ. ಸರ್ಕಾರದ ಹಿರಿಯ ಅಧಿಕಾರಿಗಳು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದು, ಪರಿಹಾರ ಕಾರ್ಯಗಳ ಬಗ್ಗೆ ಅಧೀನ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+