ಮುಂದಿನ ಚುನಾವಣೆಗೆ ಕೊಡಗಿನಲ್ಲಿ ಹಾಲಿ ಶಾಸಕರೇ ಅಭ್ಯರ್ಥಿಗಳು!
ಮಡಿಕೇರಿ, ಆಗಸ್ಟ್. 27 : ಕಳೆದ ಕೆಲ ದಶಕಗಳಿಂದ ಕೊಡಗಿನಲ್ಲಿ ಬಿಜೆಪಿಯದ್ದೇ ಪಾರುಪತ್ಯ. ಇಲ್ಲಿ ಬಿಜೆಪಿಯನ್ನು ಹಿಂದಿಕ್ಕಿ ಅಧಿಕಾರ ಪಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಈ ಬಾರಿ ಶತಪ್ರಯತ್ನ ನಡೆಸುತ್ತಿವೆ. ಹಾಲಿ ಶಾಸಕರಾದ ಬಿಜೆಪಿಯ ಅಪ್ಪಚ್ಚು ರಂಜನ್ ಮತ್ತು ಕೆ.ಜಿ.ಬೋಪಯ್ಯ ಅವರಿಗೆ ಸೆಡ್ಡು ಹೊಡೆದು, ಗೆಲುವು ಸಾಧಿಸುವ ಅಭ್ಯರ್ಥಿಗಳಿಗಾಗಿ ಹುಡುಕಾಟವೂ ನಡೆಯುತ್ತಿರುವುದು ಸದ್ಯದ ವಿದ್ಯಮಾನ.
ಇನ್ನೇನು ಕೆಲವೇ ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬರಲಿರುವುದರಿಂದ ರಾಜಕೀಯ ಪಕ್ಷಗಳು ಜನಹಿತದ ಬಗ್ಗೆ ಚಿಂತಿಸುವುದಕ್ಕಿಂತ ಪಕ್ಷದ ಬಗ್ಗೆ, ಬೀಳಲಿರುವ ಮತಗಳ ಬಗ್ಗೆಯೇ ಹೆಚ್ಚಿನ ಚರ್ಚೆಗಳನ್ನು ನಡೆಸುತ್ತಾ ಅದಕ್ಕೆ ಬೇಕಾದ ತಂತ್ರಗಳನ್ನು ರೂಪಿಸುತ್ತಿರುವುದು ಈಗ ಕಂಡು ಬರತೊಡಗಿದ್ದು, ಅದು ಕೊಡಗಿನಲ್ಲಿಯೂ ನಡೆಯುತ್ತಿದೆ.
ಬಿ.ಎಲ್.ಸಂತೋಷ್ ರಾಜ್ಯಕ್ಕೆ ವಾಪಸ್, ಬಿಎಸ್ವೈಗೆ ಹಿನ್ನಡೆ?
ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬೇಕಾಗಿದ್ದು ಕಾಂಗ್ರೆಸ್. ಆದರೆ, ಟಿ.ಪಿ.ರಮೇಶ್ ಅವರ ಕೈಸವರಿದ ಪ್ರಕರಣ, ನಂತರದ ರಾಜೀನಾಮೆ ಎಲ್ಲವೂ ಕಾಂಗ್ರೆಸ್ಗೆ ಹಿನ್ನಡೆ ತಂದಿದೆ. ಇನ್ನು ಜೆಡಿಎಸ್ ಇದುವರೆಗೆ ಖಾತೆ ತೆರದಿಲ್ಲ. ಜತೆಗೆ ಪ್ರಭಾವಿ ನಾಯಕರ ಕೊರತೆಯೂ ಇಲ್ಲಿದೆ.
ಹೀಗಿರುವಾಗಲೇ ಬಿಜೆಪಿ ಮುಖಂಡರು ಸಭೆ ಸೇರಿ ಮುಂದಿನ ವಿಧಾನಸಭಾ ಚುನಾವಣೆಗೆ ಹಾಲಿ ಶಾಸಕರೇ ಅಭ್ಯರ್ಥಿಗಳು ಎಂದು ಘೋಷಿಸಿದ್ದಾರೆ. ಇದರಿಂದ ಬಿಜೆಪಿಯ ದಾರಿ ಸುಗಮವಾಗಿದೆ. ಅಷ್ಟೇ ಅಲ್ಲದೆ ಹಾಲಿ ಶಾಸಕರೇ ಅಭ್ಯರ್ಥಿಗಳಾಗಿರುವುದರಿಂದ ಅವರ ಗೆಲುವಿಗೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ಚಿಂತನೆಯನ್ನು ಕೂಡ ನಡೆಸಲಾಗಿದೆ.
ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ ಜಾವ್ಡೇಕರ್ ಹೆಗಲಿಗೆ
ಸಾಮಾನ್ಯವಾಗಿ ಟಿಕೆಟ್ ನೀಡುವ ಪ್ರಕ್ರಿಯೆಗಳು ಆರಂಭವಾಗುತ್ತಿದ್ದಂತೆಯೇ ಎಲ್ಲ ಪಕ್ಷಗಳಲ್ಲೂ ಟಿಕೆಟ್ಗಾಗಿ ಕುದುರೆ ವ್ಯಾಪಾರ, ಶಿಫಾರಸ್ಸು, ಅಸಮಾಧಾನಗಳ ವಿದ್ಯಮಾನ ಆಯಾಯ ಪಕ್ಷಗಳ ಮುಖಂಡರ ನಿದ್ದೆಗೆಡಿಸುವುದರಲ್ಲಿ ಸಂಶಯವಿಲ್ಲ. ಹೀಗಿರುವಾಗ ಕೊಡಗಿನ ಬಿಜೆಪಿಯಲ್ಲಿ ಒಗ್ಗಟ್ಟಿನಿಂದ ಎಲ್ಲ ಮುಖಂಡರು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರುಗಳೇ ಮುಂದಿನ ವಿಧಾನಸಭಾ ಚುನಾವಣಾ ಅಭ್ಯರ್ಥಿಗಳೆಂದು ನಿರ್ಣಯ ಕೈಗೊಂಡಿದ್ದಾರೆ.
ವೀಣಾ 'ಕೈ' ಸವರಿದ ರಮೇಶ್ ಕಾಂಗ್ರೆಸ್ ಗೆ ರಾಜೀನಾಮೆ
ಅಭ್ಯರ್ಥಿಗಳು ಅಂತಿಮವಾಗಿರುವುದರಿಂದ ಮುಂದೆ ಗೆಲುವಿಗೆ ಏನು ಮಾಡಬೇಕೆಂಬ? ಒಂದಷ್ಟು ಕಾರ್ಯಕ್ರಮಗಳ ಸಿದ್ಧತೆ ನಡೆಸಿ ಅದನ್ನು ಕಾರ್ಯಗತ ಮಾಡುವುದಕ್ಕೆ ಕಾರ್ಯಕರ್ತರ ಪಡೆಯನ್ನು ತಯಾರು ಮಾಡಲಾಗುತ್ತಿದೆ. ಇದರಿಂದ ಇತರೆ ಪಕ್ಷಗಳಿಗೆ ಸ್ವಲ್ಪ ಮಟ್ಟಿಗೆ ಬಿಸಿ ಮುಟ್ಟಿರುವುದಂತು ಸತ್ಯ.
ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಆಡಳಿತ ವಿರೋಧಿ ನೀತಿಯ ಬಗ್ಗೆ ಜನರಿಗೆ ತಿಳಿಸಿ, ಕೇಂದ್ರ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವ ಆಂದೋಲನ ನಡೆಸಲು ತೀರ್ಮಾನಿಸಲಾಗಿದೆ. ಹೇಗಾದರೂ ಮಾಡಿ ಗೆಲ್ಲಲೇ ಬೇಕೆಂಬ ಪಣ ತೊಟ್ಟಿರುವ ಬಿಜೆಪಿ ಈಗಿನಿಂದಲೇ ಚುನಾವಣೆಗೆ ತಯಾರಾಗುತ್ತಿದೆ. ಇದನ್ನು ಇತರೆ ಪಕ್ಷಗಳು ಹೇಗೆ ತೆಗೆದುಕೊಳ್ಳುತ್ತವೆ? ಎಂಬುದನ್ನು ಮುಂದಿನ ದಿನಗಳಲ್ಲಿ ನೋಡಬೇಕಾಗಿದೆ.