ಪ್ರವಾಸಿಗರೇ ಎಚ್ಚರ! ಜಲಪ್ರಳಯದ ಪ್ರದೇಶಗಳಿಗೆ ಭೇಟಿ ನೀಡಿದರೆ ಕಾನೂನು ಕ್ರಮ!
Recommended Video

ಮಡಿಕೇರಿ, ಆಗಸ್ಟ್ 27: ಮಹಾಮಳೆಯಿಂದ ಭೂಕುಸಿತ ಸಂಭವಿಸಿ ಊರಿಗೆ ಊರೇ ಸಂಪೂರ್ಣ ಕೊಚ್ಚಿಹೋಗಿ ಸೂತಕದ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಕೆಲವು ರೆಸಾರ್ಟ್ ಮತ್ತು ಹೋಂಸ್ಟೇಗಳು ಇದರ ಲಾಭ ಪಡೆದುಕೊಳ್ಳಲು ಹವಣಿಸುತ್ತಿರುವುದು ಕಂಡು ಬರತೊಡಗಿದೆ.
ಒಂದೆಡೆ ದೂರದ ಊರುಗಳಿಂದ ಸಂಘ ಸಂಸ್ಥೆಗಳು ವಾಹನಗಳಲ್ಲಿ ಸಂತ್ರಸ್ತರಿಗೆ ಅಗತ್ಯವಿರುವ ಆಹಾರ ಪದಾರ್ಥಗಳನ್ನು ತಂದು ಜಿಲ್ಲಾಡಳಿತಕ್ಕೆ ಹಸ್ತಾಂತರಿಸುತ್ತಿದ್ದಾರೆ.
ಮತ್ತೆ ಕೆಲವರು ದುರಂತ ನಡೆದ ಸ್ಥಳಗಳನ್ನು ನೋಡುವ ಸಲುವಾಗಿಯೇ ಬರುತ್ತಿದ್ದು, ಇಂತಹವರಿಗೆ ವಾಸ್ತವ್ಯಕ್ಕೆ ಹೋಂಸ್ಟೇ ಮತ್ತು ರೆಸಾರ್ಟ್ ಗಳಲ್ಲಿ ಅವಕಾಶ ಮಾಡಿಕೊಡುತ್ತಿದ್ದಾರೆ. ದುರಂತ ನಡೆದ ಸ್ಥಳಕ್ಕೆ ಕರೆದೊಯ್ದು ತೋರಿಸುವ ಸಾಹಸಕ್ಕೆ ಮುಂದಾಗಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

ಸಮರೋಪಾದಿಯಲ್ಲಿ ಕಾರ್ಯಾಚರಣೆ
ಈಗಾಗಲೇ ದುರಂತ ನಡೆದ ಸ್ಥಳದಲ್ಲಿ ಕಾರ್ಯಾಚರಣೆ ಸಮಾರೋಪಾದಿಯಲ್ಲಿ ಸಾಗಿದೆ. ರಕ್ಷಣಾ ಪಡೆಗಳು ನಾಪತ್ತೆಯಾಗಿರುವ ವ್ಯಕ್ತಿಗಳ ಮೃತದೇಹದ ಪತ್ತೆಯಲ್ಲಿ ತೊಡಗಿದ್ದರೆ, ಮತ್ತೆ ಕೆಲವೆಡೆ ರಸ್ತೆಗೆ ಬಿದ್ದಿರುವ ವಿದ್ಯುತ್ ಕಂಬ, ಮರಗಳು, ರಸ್ತೆಗೆ ಕುಸಿದ ಮಣ್ಣನ್ನು ಹೊರತೆಗೆಯುವ ಕಾರ್ಯವನ್ನು ಮಾಡಲಾಗುತ್ತಿದೆ. ಇದೇ ಸಂದರ್ಭ ಈ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಿರುವುದು ಕಿರಿಕಿರಿಯಾಗುತ್ತಿದೆ. ಜತೆಗೆ ಇಲ್ಲಿ ಅನಾಹುತಗಳು ಸಂಭವಿಸುವ ಸಾಧ್ಯತೆಯೂ ಹೆಚ್ಚಿದೆ.

ಜಿಲ್ಲಾಧಿಕಾರಿಗಳ ಆದೇಶ
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಉಂಟಾಗುತ್ತಿರುವ ಪ್ರವಾಹ, ಭೂ ಕುಸಿತ ಮತ್ತು ಕೊಡಗು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾನಿಯಾಗಿದೆ. ಅಪಾಯದ ಮಟ್ಟದಲ್ಲಿರುವ ಹಿನ್ನಲೆಯಲ್ಲಿ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲಿನ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ ಗೃಹಗಳಲ್ಲಿ ಆಗಸ್ಟ್ 31 ರವರೆಗೆ ಪ್ರವಾಸಿಗರ ವಾಸ್ತವ್ಯವನ್ನು ರದ್ದುಪಡಿಸಿ ಈ ಹಿಂದೆಯೇ ಜಿಲ್ಲಾಧಿಕಾರಿ ಶ್ರೀವಿದ್ಯಾ ಅವರು ಆದೇಶ ನೀಡಿದ್ದರು.

ಕಾನೂನು ಕ್ರಮದ ಎಚ್ಚರಿಕೆ
ಆದರೆ ಈ ಆದೇಶವನ್ನು ಗಾಳಿಗೆ ತೂರಿ ಕೆಲವು ಹೊಟೇಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ ಗೃಹಗಳ ಮಾಲೀಕರು ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ. ಜತೆಗೆ ಭೂಕುಸಿತವಾದ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಏಕೆಂದರೆ ಯಾವಾಗ ಯಾವ ಬೆಟ್ಟ ಕುಸಿದು ಬೀಳುತ್ತದೆಯೋ ಎಂಬ ಪರಿಸ್ಥಿತಿ ಇಲ್ಲಿ ನಿರ್ಮಾಣವಾಗಿರುವುದರಿಂದ ಸದ್ಯ ಇಲ್ಲಿಗೆ ಯಾರಿಗೂ ಪ್ರವೇಶ ನೀಡುತ್ತಿಲ್ಲವಾದರೂ ಉಲ್ಲಂಘಿಸಿ ತೆರಳಿದ್ದೇ ಆದರೆ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

ಪ್ರವಾಸಿಗರ ವಿರುದ್ಧವೂ ಕ್ರಮ!
ಇನ್ನು ಮುಂದೆ ಆದೇಶವನ್ನು ಉಲ್ಲಂಘಿಸಿ ಪ್ರವಾಸಿಗರ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟರೆ ಅಂತಹ ಹೊಟೇಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಇತರೆ ಖಾಸಗಿ ವಸತಿ ಗೃಹಗಳ ಮಾಲೀಕರ ಮೇಲೆ ಹಾಗೂ ತೀವ್ರ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡುವ ಪ್ರವಾಸಿಗರ ಮೇಲೆಯೂ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಏನಾದರೂ ದುರಂತ ಪ್ರದೇಶಗಳಿಗೆ ಜಾಲಿ ಟ್ರಿಪ್ಗೆ ಪ್ರವಾಸಿಗರು ಬಂದರೆ ಇಕ್ಕಟ್ಟಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಯಾರೂ ಇತ್ತ ಬರುವ ಸಾಹಸ ಮಾಡದಿರುವುದೇ ಒಳಿತು.












Click it and Unblock the Notifications