ಕೊಡಗಿನಲ್ಲಿ ಶಾತವಾಹನರ ಕಾಲದ ಶಿಲಾಶಾಸನ ಪತ್ತೆ!
ಶಾತವಾಹನರ ಕಾಲದ್ದು ಎಂದು ನಂಬಲಾದ ಶಿಲಾಶಾಸನವೊಂದು ಕೊಡಗು ಜಿಲ್ಲೆ ವೀರಾಜಪೇಟೆಯ ಬಳಿ ಸಿಕ್ಕಿದೆ. ಕೊಡಗಿನ ಇತಿಹಸ ತಿಳಿಸುವ ಪ್ರಥಮ ಶಾಸನ ಇದಾಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ
ಮಡಿಕೇರಿ, ಜನವರಿ 9: ಕೊಡಗಿನಲ್ಲಿ ಮೊದಲ ಬಾರಿಗೆ ಶಿಲಾ ಶಾಸನವೊಂದು ವೀರಾಜಪೇಟೆ ಬಳಿಯ ಬಾಳುಗೋಡು ಕೊಡವ ಫೆಡರೇಷನ್ ಒಕ್ಕೂಟದ ಸಾಂಸ್ಕೃತಿಕ ಕೇಂದ್ರದ ಹಿಂಭಾಗದ ಗುಡ್ಡದಲ್ಲಿ ಪತ್ತೆಯಾಗಿದೆ. ಕೊಡವ ಸಮಾಜದ ಫೆಡರೇಷನ್ ಗೆ ಸೇರಿದ ಜಾಗದಲ್ಲಿ ಇವು ಕಂಡು ಬಂದಿದ್ದು, ಸಿಕ್ಕ ಶಿಲಾಶಾಸನಗಳು ಸುಮಾರು 500 ಮೀಟರ್ ಉದ್ದ, 200 ಮೀಟರ್ ಅಗಲ, 200 ಮೀಟರ್ ಎತ್ತರವಾಗಿವೆ.
ಕೆಲ ಸಮಯದ ಹಿಂದೆ ಭಾರತೀಯ ಪುರಾತತ್ವ ಇಲಾಖೆ ನಿವೃತ್ತ ಉಪ ಅಧೀಕ್ಷಕ ನಾಯಕಂಡ ಸಿ.ಪ್ರಕಾಶ್ ಅವರು ಬಾಳುಗೋಡು ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ಸಮಾರಂಭಕ್ಕೆ ಆಗಮಿಸಿ, ಇಲ್ಲಿ ಓಡಾಡಿದಾಗ ಅವರ ಕಣ್ಣಿಗೆ ಮೈದಾನದ ಪಕ್ಕದಲ್ಲಿ ಶಿಲಾ ಶಾಸನಗಳಿರುವುದು ಕಂಡು ಬಂದಿದ್ದವು.[ನಾಗರಹೊಳೆ ಕಾಡಿನ ರಸ್ತೆ ಪಕ್ಕದಲ್ಲೇ 9 ಹುಲಿ ಕಂಡ ಸ್ಥಳೀಯರು]
ಈ ಬಗ್ಗೆ ಸಂಶೋಧನೆ ನಡೆಸಿದಾಗ ಅವುಗಳಲ್ಲಿ ಎರಡನೇ ಶತಮಾನದ ಪ್ರಾಚೀನ ಶಿಲಾ ಯುಗದ ಕಲ್ಲುಗಳ ಪೈಕಿ ಶಿಲಾಯುಗದ ಮಾದರಿಯ ಲಿಪಿ ಪತ್ತೆಯಾಗಿದ್ದು, ಇದು ಶಾತವಾಹನ ಕಾಲದ ಶಿಲೆಗಳೆಂದು ತಿಳಿದು ಬಂದಿದೆ. ಪ್ರಾಚೀನ ಕಾಲದ ಶಿಲಾಯುಗದ ಒಂದೇ ಅಳತೆಯ ಎರಡು ಗುಡ್ಡೆಗಳು ಅಕ್ಕ ಪಕ್ಕದಲ್ಲಿದ್ದು, 200 ಮೀಟರ್ ಎತ್ತರದಲ್ಲಿ ನಾಲ್ಕು ಹಂತದಲ್ಲಿ ಪ್ರಾಚೀನ ಕಾಲದ ಶಿಲೆಗಳಿಂದ ತಳಹದಿ ಹಾಕಿರುವುದು ಕಂಡು ಬಂದಿದೆ.
ಈ ಜಾಗದಲ್ಲಿ ನೂರಾರು ಶಿಲೆಗಳಿದ್ದು, ಈ ಪೈಕಿ ಕೆಲವು ಶಿಲೆಗಳಲ್ಲಿ ಶಾಸನ ಬರೆದಿರುವುದನ್ನು ಪತ್ತೆ ಹಚ್ಚಲಾಗಿದೆ. ಕೆಲವು ಶಿಲೆಗಳನ್ನು ಕಟ್ಟಡ ಕಟ್ಟುವ ಸಲುವಾಗಿ ಕೆತ್ತಲಾಗಿದೆ. ಜಾಗದಲ್ಲಿದ್ದ ಒಂದು ಶಿಲೆಯಲ್ಲಿ ಅಪಾವಮಾಚ' ಎಂದು ಬರೆದಿದ್ದು, ಈಚೆಗಿನ ಶಾತವಾಹನ ಕಾಲದ ಬ್ರಾಹ್ಮಿ ಲಿಪಿ ಎಂದು ಸಂಶೋಧನೆಯಿಂದ ಕಂಡು ಹಿಡಿಯಲಾಗಿದೆ. ಇದು ಪ್ರಮುಖ ವ್ಯಕ್ತಿಯ ಹೆಸರಾಗಿರಬಹುದು ಎಂದು ಊಹಿಸಲಾಗಿದೆ.[ಗಿರಿಜನರ ಪರ ನಿಂತ ನಟ ಚೇತನ್ ವಿರುದ್ಧ ದೂರು!]
ಬಾಳುಗೋಡು ಗ್ರಾಮದ ಈ ಎರಡು ಗುಡ್ಡೆಗಳನ್ನು ಉತ್ಖನನ ಮಾಡಿದಾಗ ಪ್ರಾಚೀನ ಕಾಲದ ಇನ್ನಷ್ಟು ಸಾಕ್ಷ್ಯಾಧಾರಗಳು ದೊರೆಯಲಿವೆ. ಈ ಬ್ರಾಹ್ಮಿ ಲಿಪಿಯ ಶಾಸನವನ್ನು ಗಮನಿಸಿದಾಗ ಗಂಗರಿಗಿಂತ ಮೊದಲು ಶಾತವಾಹನರು ನೆಲೆಸಿದ್ದರು ಎಂಬದನ್ನು ಪುಷ್ಟೀಕರಿಸುತ್ತದೆ. ಈ ಶಿಲಾ ಶಾಸನಗಳನ್ನು ನೋಡಿದಾಗ ಕಲ್ಲನ್ನು ಸಮತಟ್ಟು ಮಾಡಿ, ಕಲ್ಲಿನಿಂದ ಉಜ್ಜಿ ಶಾಸನ ಬರೆದಿರುವುದು ಗೋಚರಿಸಿದೆ. ಕೊಡಗಿನವರಿಗೆ ಈ ಶಿಲಾಶಾಸನ ಅಚ್ಚರಿ ಮೂಡಿಸುವುದರೊಂದಿಗೆ ಕುತೂಹಲ ಕೆರಳಿಸಿದೆ.