ಚಿತ್ರಗಳು : ಮಳೆ, ಗುಡ್ಡ ಕುಸಿತ, ಅಪಾರ ನಷ್ಟದ ಬಳಿಕ ಕೊಡಗು
ಮಡಿಕೇರಿ, ಆಗಸ್ಟ್ 28 : ಭಾರಿ ಮಳೆ, ಭೂ ಕುಸಿತದಿಂದಾಗಿ ಕೊಡಗು ಜಿಲ್ಲೆಯಲ್ಲಿ ಅಪಾರವಾದ ನಷ್ಟ ಉಂಟಾಗಿದೆ. ಸದ್ಯ, ಮಳೆ ಕಡಿಮೆಯಾಗಿದ್ದು, ಮನೆಗಳನ್ನು ಕಳೆದುಕೊಂಡು ಜನರು ಇನ್ನೂ ಸಂತ್ರಸ್ತರ ಕೇಂದ್ರದಲ್ಲಿಯೇ ಇದ್ದಾರೆ.
ಕೊಡಗನ್ನು ಮತ್ತೆ ಕಟ್ಟುವ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಮೊದಲ ಹಂತದಲ್ಲಿ ರಸ್ತೆ, ವಿದ್ಯುತ್ ಸೌಕರ್ಯವನ್ನು ಸರಿಪಡಿಸಲಾಗುತ್ತಿದೆ. ಗುಡ್ಡ ಕುಸಿತದಲ್ಲಿ ಸಿಲುಕಿದ ಮೂವರು ಇನ್ನೂ ನಾಪತ್ತೆಯಾಗಿದ್ದು, ಜಿಲ್ಲಾ ಪೊಲೀಸರು ಡ್ರೋಣ್ ಮೂಲಕ ಹುಡುಕಾಟ ನಡೆಸುತ್ತಿದ್ದಾರೆ.
ಕೊಡಗಿನಲ್ಲಿ ಆದ ನಷ್ಟದ ಅಂದಾಜು ಅಂಕಿ-ಅಂಶಗಳು
ಜಿಲ್ಲೆಯ ಪ್ರವಾಹ ಮತ್ತು ಭೂ ಕುಸಿತದಲ್ಲಿ ಅಪಾಯಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಿದ ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್, ಎನ್ಡಿಆರ್ಎಫ್ , ಎಂಇಜಿ ತಂಡಗಳನ್ನು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅಭಿನಂದಿಸಿದ್ದಾರೆ.
ಕೊಡಗನ್ನು ಮತ್ತೆ ಕಟ್ಟುವುದು ಸರ್ಕಾರದ ಸದ್ಯದ ಸವಾಲು
ಜಿಲ್ಲೆಯಲ್ಲಿ ಸಂತ್ರಸ್ತರ ಆತ್ಮಸ್ಥೈರ್ಯ ಹೆಚ್ಚಿಸುವ ಚಟುವಟಿಕೆಗಳನ್ನು ಜಿಲ್ಲಾಡಳಿತ ನಡೆಸುತ್ತಿದೆ. ಮನೆಗಳ ಪುನರ್ ನಿರ್ಮಾಣ ದತ್ತ ಗಮನ ಹರಿಸಲಾಗಿದೆ. ರಸ್ತೆಗಳನ್ನು ದುರಸ್ತಿ ಮಾಡಲಾಗುತ್ತಿದೆ. ಕೊಡಗಿನ ಈಗಿನ ಚಿತ್ರಗಳು ಇಲ್ಲಿವೆ ನೋಡಿ....
ಮಡಿಕೇರಿ : ವೈರಲ್ ಆಗಿರುವ ಮನೆ ಕುಸಿತದ ವಿಡಿಯೋ ಹಿಂದಿನ ಕಥೆ!
ರಕ್ಷಣಾ ಕಾರ್ಯ ಮಾಡಿದವರಿಗೆ ಅಭಿನಂದನೆ
ಕೊಡಗು ಜಿಲ್ಲೆಯ ನೆರೆ ಮತ್ತು ಭೂ ಕುಸಿತದಲ್ಲಿ ಅಪಾಯಕ್ಕೆ ಸಿಲುಕಿದವರ ರಕ್ಷಣಾ ಕಾರ್ಯ ನಡೆಸಿದ ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್, ಎನ್ಡಿಆರ್ಎಫ್, ಎಂಇಜಿ ತಂಡಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅಭಿನಂದಿಸಿದರು.
ಡ್ರೋಣ್ ಮೂಲಕ ಕಾರ್ಯಾಚರಣೆ
ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ನಾಪತ್ತೆಯಾದವರ ಪತ್ತೆಗಾಗಿ ಡ್ರೋಣ್ ಮೂಲಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಭೂ ಕುಸಿತದಿಂದಾಗಿ ನಾಪತ್ತೆಯಾದ ಇನ್ನೂ ಮೂವರ ಶವ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ರಕ್ಷಣೆ ಮತ್ತು ಪತ್ತೆಗಾಗಿ ಕೊಡಗು ಜಿಲ್ಲಾಡಳಿತ ಡ್ರೋಣ್ ಕಾರ್ಯಾಚರಣೆ ಮಾಡುತ್ತಿದೆ.
ರಸ್ತೆಗಳು ಕುಸಿದು ಹೋಗಿವೆ
ಮಡಿಕೇರಿಯಿಂದ ಮಂಗಳೂರಿಗೆ ಸಾಗುವ ಮುಖ್ಯ ಹೆದ್ದಾರಿ ತಾಳತ್ ಮನೆ ಬಳಿ ಗುಡ್ಡ ಕುಸಿತದಿಂದ ಹಾಳಾಗಿದ್ದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಪಡಿಸುವ ಕಾರ್ಯ ಪ್ರಗತಿಯಲ್ಲಿದೆ.
1,500 ಕಿ.ಮೀ. ಗ್ರಾಮೀಣ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. 150 ಕಿ.ಮೀ.ರಸ್ತೆಯನ್ನು ಹೊಸದಾಗಿ ನಿರ್ಮಾಣ ಮಾಡಬೇಕಿದೆ.
ಸಂತ್ರಸ್ತರಿಗೆ ಯೋಗಾಭ್ಯಾಸ
ಕೊಡಗು ಜಿಲ್ಲೆಯಲ್ಲಿ ಸಂತ್ರಸ್ತರ ಆತ್ಮಸ್ಥೈರ್ಯ ಹೆಚ್ಚಿಸುವ ಚಟುವಟಿಕೆಗಳನ್ನು ಜಿಲ್ಲಾಡಳಿತ ನಡೆಸುತ್ತಿದೆ. ಮಡಿಕೇರಿ ನಗರದ ಮೈತ್ರಿ ಪರಿಹಾರ ಕೇಂದ್ರದಲ್ಲಿ ಸಂತ್ರಸ್ತರು ಯೋಗಾಭ್ಯಾಸದಲ್ಲಿ ಪಾಲ್ಗೊಂಡ ಚಿತ್ರಗಳು ಇಲ್ಲಿವೆ.
ಸಂತ್ರಸ್ತರಿಗೆ ಸೀಮೆಎಣ್ಣೆ
ಜಿಲ್ಲೆಯ ವಿವಿಧ ಸ್ಥಳಗಳಿಗೆ ಜಿಲ್ಲಾಡಳಿತ ಸೀಮೆಎಣ್ಣೆ ಸರಬರಾಜು ಮಾಡುತ್ತಿದೆ. ಗ್ರಾಮ ಪಂಚಾಯತಿ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಸಂತ್ರಸ್ತ ಕುಟುಂಬಗಳಿಗೆ ಸೀಮೆಎಣ್ಣೆ ವಿತರಣೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ವಿಶೇಷ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಪ್ರತಿ ಕುಟುಂಬಕ್ಕೆ 10 ಕೆ.ಜಿ.ಅಕ್ಕಿ, ಅಡುಗೆ ಎಣ್ಣೆ, ಸಕ್ಕರೆ, ಬೇಳೆ, ಸೀಮೆಎಣ್ಣೆ ವಿತರಣೆ ಮಾಡಲಾಗುತ್ತಿದೆ.
ಮಾದರಿ ಮನೆಗಳ ನಿರ್ಮಾಣ
'ಅತಿವೃಷ್ಟಿಯಿಂದಾಗಿ ಮನೆಗಳು ಸಂಪೂರ್ಣ ನಾಶವಾಗಿದ್ದು ದೇಶದಲ್ಲೇ ಮಾದರಿಯಾಗುವಂತ ಮನೆಗಳನ್ನು ಪುನರ್ ನಿರ್ಮಾಣ ಮಾಡಲಾಗುವುದು' ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
'ಕೊಡಗು ಜಿಲ್ಲಾಡಳಿತ ಪುನರ್ ವಸತಿ ಕಲ್ಪಿಸುವ ಸಂಬಂಧ ಕೊಡಗಿನ ವಿವಿಧ ಸ್ಥಳಗಳಲ್ಲಿ ಭೂಮಿಯನ್ನು ಗುರುತಿಸಿದ್ದು, ಸರ್ವೆ ಕಾರ್ಯವನ್ನು ಸಹ ಪೂರ್ಣಗೊಳಿಸಲಾಗಿದೆ' ಎಂದು ಸಚಿವರು ತಿಳಿಸಿದ್ದಾರೆ.
ಪರಿಹಾರದ ಚೆಕ್ ವಿತರಣೆ
ಜಿಲ್ಲೆಯ ಅತಿವೃಷ್ಟಿ ಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ತಾತ್ಕಾಲಿಕ ಪರಿಹಾರದ ಚೆಕ್ ಗಳನ್ನು ವಿತರಣೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದಾಗಿ 716 ಮನೆಗಳು ಸಂಪೂರ್ಣವಾಗಿ ಕುಸಿದಿವೆ. 404 ಮನೆಗಳಿಗೆ ಹಾನಿಯಾಗಿದೆ. 32 ಗ್ರಾಮಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.