ಕೊಡಗು ಪ್ರವಾಹ ಸಂತ್ರಸ್ತ ಮಕ್ಕಳಿಗೆ 100% ಸ್ಕಾಲರ್ ಶಿಪ್
ಮಡಿಕೇರಿ, ಏಪ್ರಿಲ್ 10: ಬೆಂಗಳೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಐಎಫ್ಐಎಂನ ಹಳೆ ವಿದ್ಯಾರ್ಥಿ ಸಂಘವು ಕೇರಳ ಮತ್ತು ಕೊಡಗು ಪ್ರವಾಹ ಸಂತ್ರಸ್ತರ ಮಕ್ಕಳಿಗೆ ಪದವಿ ವಿದ್ಯಾರ್ಥಿ ವೇತನ ಯೋಜನೆಯನ್ನು ಪ್ರಕಟಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಬಿಬಿಎ ಮತ್ತು ಬಿಬಿಎ ಎಲ್ಎಲ್ಬಿ ಪದವಿ ಪಡೆಯಲು ಬಯಸುವ ಕೇರಳ- ಕೊಡಗು ಪ್ರವಾಹಪೀಡಿತ ಪ್ರದೇಶಗಳ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ದೊರಕಲಿದೆ. ಅಗತ್ಯತೆ ಮತ್ತು ಪ್ರತಿಭೆ ಆಧರಿಸಿ, ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಶೇಕಡ 100ರಷ್ಟು ವಿದ್ಯಾರ್ಥಿ ವೇತನ ನೀಡಲಾಗುತ್ತದೆ.
"ಪೂರ್ವ ನಿರ್ಧರಿತ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಸಂಘವು ಶೇಕಡ 100ರಷ್ಟು ಪದವಿ ವಿದ್ಯಾರ್ಥಿ ವೇತನವನ್ನು, ಕೇರಳ ಹಾಗೂ ಕೊಡಗು ಪ್ರವಾಹ ಸಂತ್ರಸ್ತ ಪ್ರದೇಶಗಳಿಂದ ಆಯ್ದ ಇಬ್ಬರು ವಿದ್ಯಾರ್ಥಿಗಳಿಗೆ ನೀಡುತ್ತದೆ. ಇದು ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಸಾಮಾಜಿಕ ಹೊಣೆಗಾರಿಕೆಯ ಪಾತ್ರವನ್ನು ವಿಸ್ತರಿಸುವಂಥ ಕ್ರಮ" ಎಂದು ಐಎಫ್ಐಎಂ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ತಕೀರ್ ಇಕ್ಬಾಲ್ ಹೇಳಿದ್ದಾರೆ.

ಸಂಘದ ಮಾಜಿ ಕಾರ್ಯದರ್ಶಿ ಮಿಥುನ್ ಅಯ್ಯಪ್ಪ ಮಾತನಾಡಿ, "ಕಳೆದ ವರ್ಷ ಸಂಭವಿಸಿದ ಭೀಕರ ದುರಂತದಿಂದ ಚೇತರಿಸಿಕೊಳ್ಳುತ್ತಿದ್ದು, ಮಕ್ಕಳ ಶಿಕ್ಷಣಕ್ಕೆ ಬೆಂಬಲ ನೀಡಲಾಗದ ಸ್ಥಿತಿಯಲ್ಲಿರುವ ಕುಟುಂಬಗಳ ವಿದ್ಯಾರ್ಥಿಗಳನ್ನು ಸಂಘ ಗುರಿ ಮಾಡಿದೆ. ಇದು ಪ್ರಾಥಮಿಕ ಹೊಣೆಗಾರಿಕೆ. ಏಕೆಂದರೆ ಅರ್ಹ ಅಭ್ಯರ್ಥಿಗಳು ನೈಸರ್ಗಿಕ ವಿಕೋಪದಂಥ ನಮ್ಮ ನಿಯಂತ್ರಣದಲ್ಲಿಲ್ಲದ ಅಂಶಗಳಿಂದಾಗಿ ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವುದು ಸಂಘದ ನಂಬಿಕೆ. ಕೆಲವರ ಕನಸುಗಳನ್ನು ನನಸುಗೊಳಿಸುವ ನಿಟ್ಟಿನಲ್ಲಿ ಇದು ಸಣ್ಣ ನೆರವು. ಸುಮಾರು 10-12 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಹಾಗೂ ಸಂಘ ಶೇಕಡ 100ರಷ್ಟು ವೆಚ್ಚವನ್ನು ಭರಿಸುವ ಮೂಲಕ ಅವರ ಕಾಳಜಿ ವಹಿಸುತ್ತದೆ" ಎಂದು ವಿವರಿಸಿದರು.
ಐಎಫ್ಐಎಂ ಹಳೆವಿದ್ಯಾರ್ಥಿ ಸಂಘದ ಈ ವಿನೂತನ ಕ್ರಮವನ್ನು ಶ್ಲಾಘಿಸಿರುವ ಐಎಫ್ಐಎಂ ಕಾಲೇಜಿನ ಪ್ರಾಚಾರ್ಯರಾದ ಡಾ.ಅನುಪಮಾ ನಟರಾಜನ್, "ಐಎಫ್ಐಎಂ ಹಳೆ ವಿದ್ಯಾರ್ಥಿ ಸಂಘ ಪರಿಸರಾತ್ಮಕ ವಿಷಯಗಳ ಬಗ್ಗೆ ಗಮನ ಹರಿಸುತ್ತಿರುವುದು ಮತ್ತು ನೈಸರ್ಗಿಕ ವಿಕೋಪದಿಂದ ತೊಂದರೆಗೀಡಾದವರಿಗೆ ಸಹಾಯ ಹಸ್ತ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ" ಎಂದು ಹೇಳಿದರು.

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ನಮೂನೆಗಳು ಐಎಫ್ಐಎಂ ಕಾಲೇಜು ಮತ್ತು ಐಎಫ್ಐಎಂ ಕಾನೂನು ಕಾಲೇಜಿನ ವೆಬ್ಸೈಟ್ನಲ್ಲಿ ಲಭ್ಯ ಅಥವಾ ಐಎಫ್ಐಎಂ ಪ್ರವೇಶ ತಂಡದಿಂದಲೂ ಪಡೆಯಬಹುದು. ಐಎಫ್ಐಎಂ ಹಳೆ ವಿದ್ಯಾರ್ಥಿ ಸಂಘವು ಈ ಯೋಜನೆಗಾಗಿ ಸ್ವಯಂಸೇವಾ ಸಂಸ್ಥೆಗಳು ಮತ್ತು ಸಾಮಾಜಿಕ ಉದ್ಯಮಶೀಲ ವ್ಯಕ್ತಿಗಳೊಂದಿಗೆ ಸಹಯೋಗ ಮಾಡಿಕೊಂಡಿದೆ.












Click it and Unblock the Notifications