ಆರಿದ್ರಾ ಮಳೆ ಅಬ್ಬರಕ್ಕೆ ಕೊಡಗು ತಲ್ಲಣ, ಭೂಕುಸಿತದ ಆತಂಕ

ಮಡಿಕೇರಿ, ಜುಲೈ 5 : ಕೊಡಗಿನಲ್ಲಿ ಮುಂಗಾರಿನ ಅಬ್ಬರ ಜೋರಾಗಿದೆ. ಪರಿಣಾಮ ಕಾವೇರಿ ನದಿ ಸೇರಿದಂತೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಅಲ್ಲಲ್ಲಿ ಭೂಕುಸಿತ, ಮನೆ ಗೋಡೆ ಕುಸಿತ ಸೇರಿದಂತೆ ಹಲವು ಅನಾಹುತಗಳು ಒಂದರ ಮೇಲೊಂದರಂತೆ ಸಂಭವಿಸುತ್ತಿದ್ದು ಕೊಡಗು ಹಾಗೂ ಕೊಡಗಿಗೆ ಹೊಂದಿಕೊಂಡಂತಿರುವ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಒಂದೆಡೆ ಭೂಕಂಪನ ಮತ್ತೊಂದೆಡೆ ಭೂ ಕುಸಿತ, ಮಗದೊಂದೆಡೆ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ಹೀಗೆ ಪ್ರಾಕೃತಿಕ ವಿಕೋಪದಿಂದ ಬಳಲುತ್ತಿರುವ ಕೊಡಗಿನಲ್ಲಿ ಯಾವಾಗ ಏನಾಗುತ್ತದೆಯೋ ಎಂಬ ಭೀತಿಯಲ್ಲಿ ಜನ ಕಾಲ ಕಳೆಯುವಂತಾಗಿದೆ. ಮೋಡ ಮುಸುಕಿನೊಂದಿಗೆ ಸುರಿಯುವ ಮಹಾಮಳೆಯಿಂದ ಹಗಲು ಸಂಜೆಯಂತಾಗುತ್ತಿದೆ.

ಮೊದಲೆಲ್ಲ ಮಳೆ ಸುರಿದಾಗ ಅಲ್ಲಲ್ಲಿ ಇರುವ ನದಿ ತೊರೆಗಳು ಉಕ್ಕಿ ಹರಿಯುತ್ತಿದ್ದವು. ಪ್ರವಾಹ ಪರಿಸ್ಥಿತಿ ತಲೆದೋರುತ್ತಿತ್ತು. ಅದಕ್ಕೆಲ್ಲ ಮೊದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದುದರಿಂದ ಅಂತಹ ಸಮಸ್ಯೆಗಳು ಉಂಟಾಗುತ್ತಿರಲಿಲ್ಲ. ಆದರೀಗ ಎಲ್ಲಿ ಯಾವಾಗ ಯಾವ ಗುಡ್ಡ ಕುಸಿಯುತ್ತೋ? ಬಂಡೆಗಳು ಉರುಳಿ ಬರುತ್ತವೆಯೋ ಎಂಬುದೇ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿಂದಿನ ಮಳೆಗಾಲವನ್ನು ನಾವು ನೆನಪಿಸಿಕೊಳ್ಳುವುದಾದರೆ ಆ ದಿನಗಳಲ್ಲಿ ನಿಧಾನವಾಗಿ ಜಿಟಿ ಜಿಟಿಯಾಗಿ ಸುರಿಯುತ್ತಾ ಬಿರುಸುಪಡೆದುಕೊಳ್ಳುತ್ತಿದ್ದ ಮಳೆ ಜೋರಾಗಿ ಸುರಿದರೂ ಪ್ರವಾಹವನ್ನು ಹೊರತು ಪಡಿಸಿ ಕೆಲವು ಅವಘಡಗಳು ಸಂಭವಿಸುತ್ತಿದ್ದರೂ ಈಗಿನಂತೆ ಇಡೀ ಜಿಲ್ಲೆಯ ಜನರು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಆದರೀಗ ಮಳೆಯ ಆರ್ಭಟವೇ ಜನರ ನಿದ್ದೆಗೆಡಿಸುತ್ತಿದೆ.

 ಪುನರ್ವಸು ಮಳೆ ಮತ್ತಷ್ಟು ಬಿರುಸು

ಪುನರ್ವಸು ಮಳೆ ಮತ್ತಷ್ಟು ಬಿರುಸು

ಜೂನ್ 22ರಿಂದ ಆರಂಭವಾದ ಆರಿದ್ರಾ ಮಳೆ ಜುಲೈ 5ಕ್ಕೆ ಅಂತ್ಯಗೊಳ್ಳುತ್ತಿದ್ದು, ಕೊನೆಯ ಪಾದದ ಮಳೆ ಜೋರಾಗಿ ಸುರಿಯುತ್ತಿದೆ. ಜತೆಗೆ ಅನಾಹುತವನ್ನು ಸೃಷ್ಟಿಸುತ್ತಿದೆ. ಜುಲೈ 6 ರಿಂದ ಪುನರ್ವಸು ಮಳೆ ಆರಂಭವಾಗಲಿದ್ದು, ಈ ಮಳೆ ಇನ್ನಷ್ಟು ಬಿರುಸು ಪಡೆದುಕೊಳ್ಳುವುದಂತು ಖಚಿತವಾಗಿದೆ. ಇದೀಗ ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಕಾರಣ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದ್ದು, ನಾಪೋಕ್ಲು- ಭಾಗಂಡಲ, ಮಡಿಕೇರಿ - ಭಾಗಮಂಡಲ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದರೆ, ಭಾಗಮಂಡಲದಿಂದ 4 ಕಿ.ಮೀ ದೂರದ ಭಾಗಮಂಡಲ - ತಲಕಾವೇರಿ ರಸ್ತೆ ಮೇಲೆ ಬಂಡೆ ಉರುಳಿ ಬಿದ್ದಿದೆ. ತೆರವುಗೊಳಿಸುವ ಕಾರ್ಯವು ನಡೆಯುತ್ತಿದೆ. ಮೊಣ್ಣಂಗೇರಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಣ್ಣು ಕುಸಿತ ಸಂಭವಿಸಿದೆ.

 ವಿದ್ಯುತ್‌ ವ್ಯತ್ಯಯ, ಮನೆ ಕುಸಿತ

ವಿದ್ಯುತ್‌ ವ್ಯತ್ಯಯ, ಮನೆ ಕುಸಿತ

ಈಗಾಗಲೇ ಗಾಳಿ ಮಳೆಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಅಲ್ಲಲ್ಲಿ ವಿದ್ಯುತ್ ವ್ಯತ್ಯಯ ಸಂಭವಿಸಿದ್ದರೆ, ಮಡಿಕೇರಿ ಸಮೀಪದ ಎರಡನೇ ಮೊಣ್ಣಂಗೇರಿ - ರಾಮಕೊಲ್ಲಿ ಸಂಪರ್ಕ ಕಲ್ಪಿಸುವ ಸೇತುವೆಯಲ್ಲಿ ಬಿರುಕು ಕಾಣಿಸಿದೆ. ಇದೆಲ್ಲದರ ನಡುವೆ ಶನಿವಾರಸಂತೆಯ ಸುಳುಗಳಲೆ ಕಾಲೋನಿಯಲ್ಲಿ ಬಾರಿ ಮಳೆಗೆ ಸ್ನಾನದ ಮನೆಯಗೋಡೆ ಕುಸಿದು ಬಿದ್ದು ವಸಂತಮ್ಮ (69) ಎಂಬ ಮಹಿಳೆ ಗಾಯಗೊಂಡಿದ್ದು ಅವರನ್ನು ಹಾಸನದ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಮಡಿಕೇರಿ ನಗರ ಮತ್ತು ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಭೂಕುಸಿತ ಸಂಭವಿಸಬಹುದಾದ ಮಡಿಕೇರಿ‌ ನಗರದ ಚಾಮುಂಡೇಶ್ವರಿ ನಗರ, ಇಂದಿರಾ‌‌ ನಗರ, ಮಂಗಳೂರು ರಸ್ತೆ ಸಮೀಪದ ತಾಳತ್ ಮನೆ ಸೇರಿದಂತೆ ಹಲವು ಕಡೆಗಳಿಗೆ ಭೇಟಿ ನೀಡಿದ ಎನ್‌ಡಿಆರ್‌ಎಫ್ ತಂಡ ಪರಿಶೀಲನೆ ನಡೆಸಿದೆ. ಜತೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರಾದ ಆರ್.ಎಂ.ಅನನ್ಯ ವಾಸುದೇವ್, ಇನ್ಸ್ ಪೆಕ್ಟರ್ ರಾಮ್ ಭಜ್, ಸಬ್ ಇನ್ಸ್ಪೆಕ್ಟರ್ ಇನ್ಸ್ ಪೆಕ್ಟರ್ ಶಾಂತಿ ಲಾಲ್ ಜಾಟಿಯ ಅವರೊಂದಿಗೆ ರಕ್ಷಣಾ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ.

 ಭೂಕಂಪದಿಂದ ಹಾನೀಗೀಡಾದ ಮನೆಗೆ ಭೇಟಿ

ಭೂಕಂಪದಿಂದ ಹಾನೀಗೀಡಾದ ಮನೆಗೆ ಭೇಟಿ

ಇನ್ನು ಕೊಡಗು ದಕ್ಷಿಣಕನ್ನಡ ಜಿಲ್ಲೆಯಗಡಿಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂಕಂಪನ, ಗುಡ್ಡಕುಸಿತ ಸಂಭವಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಭೂಕಂಪ ಇಲಾಖೆಯ ಮುಖ್ಯಸ್ಥ ಅಝದ್ ಅಹಮದ್ ಭಟ್, ಸೆಂಥಿಲ್, ಮಂಗಳೂರು ವಿಭಾಗದ ಭೂ ಗರ್ಭ ಇಲಾಖೆಯ ಮಹದೇವ್, ತಹಸೀಲ್ದಾರ್ ಅನಿತಾಲಕ್ಷ್ಮಿ, ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಪಂಚಾಯತ್ ಸದಸ್ಯ ರವಿ ಪೂಜಾರಿ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಗ್ರಾಮ ಕರಣಿಕರಾದ ರಫೀಕ್ ಮುಲ್ಲಾ, ನಾರಾಯಣ ಹಾಗೂ ಇನ್ನಿತರ ಸರಕಾರಿ ಅಧಿಕಾರಿಗಳು ಅರಂತೋಡು ಬಳಿಯ ತೊಡಿಕಾನ ದೊಡ್ಡಕುಮೇರಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಭೂಕಂಪನದಿಂದ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿ ಕೂಲಂಕುಷ ಪರಿಶೀಲನೆ ನಡೆಸಿ, ಸಿಸ್ಮೊ ಗ್ರಾಫಿಕ್ಸ್ ಮೂಲಕ ಅಧ್ಯಯನ ನಡೆಸಲು ಮುಂದಾಗಿದೆ.

Recommended Video

    ಚಂದ್ರಶೇಖರ್ ಗುರೂಜಿ ಹತ್ಯೆ ಹಿಂದೆ ಆಸ್ತಿ ಗಲಾಟೆ?? ಕೊಲೆ ಮಾಡಿದ್ದು ಇವರೇನಾ? | OneIndia Kannada
     ದೇವರ ಮೊರೆ ಹೋದ 18 ಗ್ರಾಮಗಳ ಜನರು

    ದೇವರ ಮೊರೆ ಹೋದ 18 ಗ್ರಾಮಗಳ ಜನರು

    ಇದೆಲ್ಲದರ ನಡುವೆ ಕೊಡಗು- ದಕ್ಷಿಣ ಕನ್ನಡ ಗಡಿ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸರಣಿ ಭೂಕಂಪನವಾದ ಹಿನ್ನೆಲೆಯಲ್ಲಿ ಪ್ರಾಕೃತಿ ವಿಕೋಪ ಸಂಭವಿಸದಿರಲಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಜನರು ತೊಡಿಕಾನ ಗ್ರಾಮದ ಶ್ರೀ ಮಲ್ಲಿಕಾರ್ಜುನನ ಮೊರೆ ಹೋಗಿದ್ದಾರೆ. ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿಯಲ್ಲಿರುವ ಸುಮಾರು ಹದಿನೆಂಟು ಗ್ರಾಮಗಳ ಜನರು ಸೇರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಯಾವುದೇ ತೊಂದರೆ ಸಂಭವಿಸದಿರಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.

    ಒಟ್ಟಾರೆ ಮಹಾಮಳೆ ಕೊಡಗು- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ಭಯದ ವಾತಾವರಣ ನಿರ್ಮಿಸಿದ್ದು, ಮುಂದಿನ ದಿನಗಳಲ್ಲಿ ಮಳೆ ಇನ್ನಷ್ಟು ಬಿರುಸುಗೊಳ್ಳುವುದರಿಂದ ಮತ್ತಷ್ಟು ಅನಾಹುತ ಸೃಷ್ಟಿಯಾಗುತ್ತೋ ಎಂಬ ಭಯವಂತು ಇದ್ದೇ ಇದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+