ಕೊಡಗಿನಲ್ಲಿ ಬಿರುಸಾಗಿದೆ ಮಳೆ; ಅಲ್ಲಲ್ಲಿ ಅನಾಹುತ

ಮಡಿಕೇರಿ, ಆಗಸ್ಟ್ 5: ಕಳೆದ ಕೆಲವು ದಿನಗಳಿಂದ ಕೊಡಗಿನಲ್ಲಿ ಮುಂಗಾರು ಚೇತರಿಕೆಗೊಂಡಿದ್ದು, ತಲಕಾವೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿದ ಪರಿಣಾಮ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಭಾಗಮಂಡಲದ ಸಂಗಮ ಕ್ಷೇತ್ರ ಜಲಾವೃತವಾಗಿದ್ದರೆ, ಅತ್ತ ದಕ್ಷಿಣ ಕೊಡಗಿನಲ್ಲಿ ಲಕ್ಷ್ಮಣತೀರ್ಥ ನದಿಯೂ ತುಂಬಿ ಹರಿಯತೊಡಗಿದೆ.

ದಕ್ಷಿಣ ಕೊಡಗಿನ ಕೆಲವೆಡೆ ಮಳೆಯ ರಭಸ ಹೆಚ್ಚಾದ ಪರಿಣಾಮ ಒಂದಷ್ಟು ಅನಾಹುತಗಳು ಸಂಭವಿಸಿವೆ. ಕೊಡಗು ಮತ್ತು ಕೇರಳಕ್ಕೆ ಸಂಪರ್ಕ ಕಲ್ಪಿಸುವ ವಿರಾಜಪೇಟೆ-ಮಾಕುಟ್ಟ ರಸ್ತೆಯ ಒಂದು ಭಾಗ ಕುಸಿದಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯುಂಟಾಗಿದೆ.

ಈ ರಸ್ತೆ ಕಳೆದ ಬಾರಿಯೂ ಕುಸಿತ ಕಂಡಿತ್ತಲ್ಲದೆ, ಹಲವು ಸಮಯಗಳವರೆಗೆ ಸಂಪರ್ಕ ಬಂದ್ ಆಗಿತ್ತು. ಆ ನಂತರ ದುರಸ್ತಿ ಮಾಡಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿತ್ತು. ಇದೀಗ ಮತ್ತೆ ಮಳೆಯಿಂದ ರಸ್ತೆ ಕುಸಿತ ಕಂಡಿದ್ದು ಮಳೆ ಮುಂದುವರೆದರೆ ಮತ್ತಷ್ಟು ಹಾನಿಯಾಗುವ ಸಾಧ್ಯತೆಯೂ ಇಲ್ಲದಿಲ್ಲ.

Heavy Rain In Kodagu Brings Fear in People

ರಸ್ತೆ ಕುಸಿತವಾಗಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಥಳ ಪರಿಶೀಲನೆ ನಡೆಸಿದ್ದು, ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಪಡಿಸುವ ಉದ್ದೇಶದಿಂದ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮೂರು ದಿನಗಳವರೆಗೆ ಪೆರುಂಬಾಡಿ ಚೆಕ್ ಪೋಸ್ಟ್ ನಿಂದ ಮಾಕುಟ್ಟ ಚೆಕ್ ಪೋಸ್ಟ್ ವರೆಗಿನ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ನೀಡಿದ್ದಾರೆ. ಕೇರಳಕ್ಕೆ ತೆರಳುವ ವಾಹನಗಳು ಇನ್ಮುಂದೆ ಕುಟ್ಟ, ಮಾನಂದವಾಡಿ ಮೂಲಕ ತೆರಳಬೇಕಾಗಿದೆ.

ಇನ್ನು ಇದೀಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ತೀವ್ರತೆ ಆ.9ರವರೆಗೂ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಜಿಲ್ಲೆಯ ಜನತೆ ಎಚ್ಚರವಾಗಿರುವಂತೆ ಸೂಚಿಸಲಾಗಿದೆ.

ಜನಕ್ಕೆ ಇನ್ನೂ ಭೂಕುಸಿತದ ಭಯ: ಮಳೆಯೊಂದಿಗೆ ಗಾಳಿ ಕೂಡ ಬೀಸುತ್ತಿದ್ದು, ಈ ರೀತಿಯ ಗಾಳಿ ಸಹಿತ ಮಳೆ ಹಾಗೂ ಚಳಿ ಕಂಡು ಬಂದರೆ ಭೂಮಿಯಲ್ಲಿ ಅಂತರ್ಜಲ ಹುಟ್ಟಲು ಅನುಕೂಲವಾಗುತ್ತದೆ ಎಂಬುದು ಹಿರಿಯರ ಅನುಭವದ ಮಾತಾಗಿದೆ. ಕಳೆದ ವರ್ಷ ಸಂಭವಿಸಿದ ಭೂಕುಸಿತ ಮತ್ತು ಪ್ರವಾಹದ ಭಯ ಇನ್ನೂ ಕೂಡ ಹಾಗೆಯೇ ಉಳಿದಿರುವುದರಿಂದ ಮಳೆ ಬಂದಾಗಲೆಲ್ಲ ಜನರಲ್ಲಿ ಆತಂಕವೂ ಇಲ್ಲದಿಲ್ಲ.

Heavy Rain In Kodagu Brings Fear in People

ಜಿಲ್ಲೆಯಾದ್ಯಂತ ಅಲ್ಲಲ್ಲಿ ಅವಘಡಗಳು: ಈಗಾಗಲೇ ಮಳೆಯಿಂದ ಅಲ್ಲಲ್ಲಿ ಹಾನಿಗಳು ಸಂಭವಿಸಿದ ಬಗ್ಗೆಯೂ ವರದಿಯಾಗಿದ್ದು ಅದರಂತೆ ನಾಪೋಕ್ಲು ಭಾಗಮಂಡಲ ರಸ್ತೆಯ ನೆಲಜಿ ಜಂಕ್ಷನ್ ಬಳಿ ರಸ್ತೆಗೆ ಅಡ್ಡಲಾಗಿ ಮರ ಉರುಳಿ ಬಿದ್ದು ಕೆಲಕಾಲ ರಸ್ತೆ ಸಂಚಾರಕ್ಕೆ ತಡೆಯಾಗಿತ್ತು. ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸಾರ್ವಜನಿಕರು ಮರವನ್ನು ತೆರವುಗೊಳಿಸಿದ್ದರೆ, ಕೆಲವೆಡೆ ಮಳೆ ಗಾಳಿಗೆ ಮರ ವಿದ್ಯುತ್ ಕಂಬಗಳ ಮೇಲೆ ಬಿದ್ದು ವಿದ್ಯುತ್ ಸಂಪರ್ಕಕ್ಕೆ ಅಡಚಣೆಯಾಗಿದೆ.

ವಿರಾಜಪೇಟೆ ತಾಲೂಕಿನಲ್ಲೂ ಭಾರಿ ಮಳೆಯಾಗಿದ್ದು ನಾಂಗಾಲ ಗ್ರಾಮದಲ್ಲಿ ಭೂಕುಸಿದು ಮನೆಗೆ ಬಿದ್ದ ಪರಿಣಾಮ ಅಲ್ಪ ಪ್ರಮಾಣದ ಹಾನಿಯಾಗಿದ್ದರೆ, ಗೋಣಿಕೊಪ್ಪದ ವೆಂಕಟಪ್ಪ ಬಡಾವಣೆಯ ಪಕ್ಕದಲ್ಲಿ ಹರಿಯುತ್ತಿರುವ ಕೀರೆ ಹೊಳೆ ಉಕ್ಕಿ ಹರಿದು ಬಡಾವಣೆಯಲ್ಲಿರುವ 12ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಲಕ್ಷ್ಮಣ ತೀರ್ಥ ನದಿಯಲ್ಲಿ ಏಕಾಏಕಿ ನೀರಿನ ಪ್ರಮಾಣ ಏರಿಕೆಯಾಗಿ ನದಿ ಪಾತ್ರದ ಭತ್ತದ ಗದ್ದೆಗಳು ನೀರಿನ ಪ್ರವಾಹಕ್ಕೆ ಸಿಲುಕಿವೆ.

ಇನ್ನೂ ಭರ್ತಿಯಾಗದ ಹಾರಂಗಿ ಜಲಾಶಯ: ಮಡಿಕೇರಿ ವ್ಯಾಪ್ತಿಯಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದ್ದರೂ ಹಾರಂಗಿ ಜಲಾಶಯದ ಒಳಹರಿವು ಹೆಚ್ಚಾದಂತೆ ಕಂಡು ಬರುತ್ತಿಲ್ಲ. ಸದ್ಯ 1230 ಕ್ಯುಸೆಕ್ ಮಾತ್ರವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 5662 ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಇದೇ ರೀತಿ ಮಳೆ ಮುಂದುವರೆದರೆ ಒಳ ಹರಿವು ಹೆಚ್ಚಾಗಬಹುದೇನೋ?
ಗರಿಷ್ಠ 2,859 ಅಡಿಯ ಜಲಾಶಯದಲ್ಲಿ ಇದೀಗ 2833.29 ಅಡಿಯಷ್ಟು ನೀರಿದೆ.

ಈ ಬಾರಿ ತಡವಾಗಿ ಮುಂಗಾರು ಚೇತರಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆ ಸುರಿಯುವ ಸಾಧ್ಯತೆಯಿದೆ. ಜತೆಗೆ ಕಳೆದ ವರ್ಷ ಇದೇ ಸಮಯದಲ್ಲಿ ಭೂಕುಸಿತ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿ ಕೋಟ್ಯಂತರ ರೂ ಆಸ್ತಿ-ಪಾಸ್ತಿ ನಷ್ಟ, ಮನೆ ಮಠ ಕಳೆದುಕೊಂಡು ಹಲವರು ನಿರ್ಗತಿಕರಾಗಿದ್ದರಲ್ಲದೆ, ಸಾವು ನೋವು ಸಂಭವಿಸಿತ್ತು. ಕಳೆದ ವರ್ಷದ ದುರಂತ ಇನ್ನೂ ಕಣ್ಣು ಮುಂದೆ ಹಸಿರಾಗಿರುವ ಕಾರಣ ಜನ ಎಚ್ಚರಿಕೆಯಲ್ಲಿದ್ದಾರೆ. ಅಷ್ಟೇ ಅಲ್ಲದೆ ಜಿಲ್ಲಾಡಳಿತವೂ ಎಲ್ಲ ರೀತಿಯಲ್ಲಿಯೂ ಪರಿಸ್ಥಿತಿ ನಿಭಾಯಿಸಲು ಸನ್ನದ್ಧವಾಗಿರುವುದು ಕಂಡು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+