ಮಲೆನಾಡು ಪ್ರವಾಸ ರದ್ದು, ಮತ್ತೆ ಕೊಡಗಿಗೆ ಕುಮಾರಸ್ವಾಮಿ
ಮಡಿಕೇರಿ, ಆಗಸ್ಟ್ 19 : ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾ ಪ್ರವಾಸ ರದ್ದಾಗಿದೆ. ಭಾನುವಾರ ಅವರು ಕೊಡಗು ಜಿಲ್ಲೆಯಲ್ಲಿ ಪುನಃ ವೈಮಾನಿಕ ಸಮೀಕ್ಷೆ ಕೈಗೊಳ್ಳಲಿದ್ದಾರೆ.
ಭಾನುವಾರ ಬೆಳಗ್ಗೆ 10 ಗಂಟೆಗೆ ಮೈಸೂರಿನಿಂದ ಹೊರಟು ಕೊಡಗು ಜಿಲ್ಲೆಗೆ ತೆರಳಿ ವೈಮಾನಿಕ ಸಮೀಕ್ಷೆ ನಡೆಸುವರು. ಶನಿವಾರದಂದು ವೈಮಾನಿಕ ಸಮೀಕ್ಷೆ ನಡೆಸದ ಸ್ಥಳದಲ್ಲಿ ಇಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.
ಕೊಡಗಿನ ಜನರ ಜೊತೆ ಸರ್ಕಾರವಿದೆ : ಕುಮಾರಸ್ವಾಮಿ
ಹವಾಮಾನ ಪರಿಸ್ಥಿತಿ ಅನುಕೂಲಕರವಾಗಿದ್ದಲ್ಲಿ ಪಿರಿಯಾಪಟ್ಟಣ ಹೆಲಿಪ್ಯಾಡ್ನಲ್ಲಿ ಇಳಿದು ಕೊಡಗು ಜಿಲ್ಲೆಯ ಪರಿಹಾರ ಕಾಮಗಾರಿಗಳನ್ನು ಪುನರ್ ಪರಿಶೀಲನೆ ನಡೆಸುವರು. ಗಂಜಿ ಕೇಂದ್ರಗಳಿಗೂ ಭೇಟಿ ನೀಡುವ ಸಾಧ್ಯತೆ ಇದೆ.
ಮೈಸೂರಿನಲ್ಲಿರುವ ಕುಮಾರಸ್ವಾಮಿ ಅವರು ಕೊಡಗು ಜಿಲ್ಲಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಭಾನುವಾರ ಬೆಳಗ್ಗೆ ಮಾತುಕತೆ ನಡೆಸಿದರು. ಶನಿವಾರ 317 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದ್ದು ಭಾನುವಾರ ಮಕ್ಕಂದೂರು ಸುತ್ತಾಮುತ್ತಲ ಪ್ರದೇಶದ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊಡಗಿನಲ್ಲಿ ಪ್ರವಾಹ: ದಿನದ 24 ತಾಸು ಕಾರ್ಯಾಚರಣೆಗೆ ಸಿಎಂ ಸೂಚನೆ
ಸೇನಾ ಪಡೆ ಹಾಗೂ ಎನ್.ಡಿ.ಆರ್.ಎಫ್. ತಂಡ ಪರಿಹಾರ ಕಾರ್ಯದಲ್ಲಿ ತೊಡಗಿದೆ. 31 ಗಂಜಿ ಕೇಂದ್ರಗಳಿಗೆ ಅಗತ್ಯವಾದ ಆಹಾರ ವ್ಯವಸ್ಥೆಯನ್ನು ನಿರ್ವಹಿಸಲಾಗಿದೆ. ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಹಾಲು, ಅಕ್ಕಿ, ಬೇಳೆ ಇತರೆ ಧಾನ್ಯಗಳನ್ನು ಪೂರೈಸಲಾಗಿದ್ದು, ಲೋಕೋಪಯೋಗಿ ಸಚಿವರಾದ ಎಚ್.ಡಿ. ರೇವಣ್ಣ ಅವರು ಸ್ಥಳಕ್ಕೆ ಆಗಮಿಸಿ, ಪರಿಹಾರ ಕ್ರಮಗಳ ಪರಿಶೀಲನೆ ನಡೆಸಿದ್ದಾರೆ.