ಭರ್ತಿಯಾದ ಕೊಡಗಿನ ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಣೆ
ಕೊಡಗು, ಆಗಸ್ಟ್ 4: ಕೊಡಗಿನ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯ ಭರ್ತಿಯಾದ ಹಿನ್ನಲೆಯಲ್ಲಿ ವರ ಮಹಾಲಕ್ಷ್ಮಿ ಹಬ್ಬದ ದಿನವಾದ ಶುಕ್ರವಾರ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಜಲಾಶಯಕ್ಕೆ ಬಾಗಿನ ಅರ್ಪಿಸಿದರು.
ಈ ವೇಳೆ ಮಾತನಾಡಿದ ಅವರು, "ಹಾರಂಗಿಯಿಂದ ಕಾಲುವೆಗಳಿಗೆ ಶೀಘ್ರ ನೀರುಹರಿಸಿ ರೈತರ ಬೆಳೆಗಳಿಗೆ ಅನುಕೂಲ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು".

ಕಾಲುವೆಗಳಿಗೆ ನೀರು ಬಿಡುವ ಸಂಬಂಧ ತುರ್ತಾಗಿ ಸಭೆ ಆಹ್ವಾನಿಸಬೇಕು. ಕಾವೇರಿ ಕಣಿವೆಯಲ್ಲಿ ಇನ್ನೂ ಹೆಚ್ಚಿನ ಮಳೆಯಾಗಿ ಕೃಷ್ಣರಾಜ ಮತ್ತು ಹೇಮಾವತಿ ಜಲಾಶಯ ಭರ್ತಿಯಾಗಿ ನಾಡಿನ ಜನತೆಗೆ ಒಳಿತಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದರು.
ಕೊಡಗು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವುದರಿಂದ ಇಲ್ಲಿನ ಮೂಲ ಸೌಲಭ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಂ ಅವರೊಂದಿಗೆ ಬಾಗಿನ ಅರ್ಪಿಸಲು ದಿನಾಂಕ ನಿಗದಿಯಾಗಿತ್ತು,

ಆದರೆ ಕಾರಣಾಂತರದಿಂದ ಜಿಲ್ಲಾ ಉಸ್ತುವಾರಿ ಸಚಿವರು ಆಗಮಿಸಲು ಸಾಧ್ಯವಾಗಿಲ್ಲ ಎಂದು ಶಾಸಕರು ಇದೇ ಸಂದರ್ಭದಲ್ಲಿ ತಿಳಿಸಿದರು.
ಜಲಾಶಯದ ನೀರಿನ ಮಟ್ಟ: ಹಾರಂಗಿ ವ್ಯಾಪ್ತಿಯಲ್ಲಿ 15.2 ಮಿ.ಮೀ. ಮಳೆ ಸುರಿದಿದ್ದು, ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ ಪೈಕಿ ಶುಕ್ರವಾರ ನೀರಿನ ಮಟ್ಟ 2858.28 ಅಡಿ ಇದೆ.

ನೀರಿನ ಒಳ ಹರಿವು 4018 ಕ್ಯೂಸೆಕ್ಸ್ ಹಾಗೂ ಹೊರಹರಿವು 3,000 ಕ್ಯೂಸೆಕ್ಸ್, ಸಧ್ಯ ನಾಲೆಗೆ 50 ಕ್ಯೂಸೆಕ್ಸ್ ನೀರನ್ನು ಬಿಡಲಾಗುತ್ತಿದೆ.












Click it and Unblock the Notifications