ಗುಹ್ಯದಲ್ಲಿ ತೀರ್ಥ ಸ್ನಾನ ಮಾಡಿದ್ರೆ ಜೀವನ ಪಾವನ!
ಮಡಿಕೇರಿ, ಅಕ್ಟೋಬರ್ 18: ಕೊಡಗಿನ ತಲಕಾವೇರಿಯಲ್ಲಿ ಮಂಗಳವಾರ ತೀರ್ಥೋದ್ಭವವಾಗಿದೆ. ಸಂಗಮದಲ್ಲಿ ತೀರ್ಥಸ್ನಾನ ಮಾಡುವುದರಲ್ಲಿ ಜನ ನಿರತರಾಗಿದ್ದಾರೆ. ಇನ್ನೊಂದೆಡೆ ದೀಪಾವಳಿಯೂ ಜೊತೆಯಲ್ಲಿಯೇ ಬಂದಿರುವುದರಿಂದ ಕಾವೇರಿ ನದಿ ತಟದ ಅಗಸ್ತ್ಯೇಶ್ವರ ಕ್ಷೇತ್ರದಲ್ಲಿ ತೀರ್ಥಸ್ನಾನ ಮಾಡಲು ಮುಗಿಬೀಳುತ್ತಿದ್ದಾರೆ.
ಕಾವೇರಿ ತೀರ್ಥೋದ್ಭವಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು
ಹಾಗೆನೋಡಿದರೆ ಗುಹ್ಯ ಅಗಸ್ತ್ಯೇಶ್ವರ ದೇವಾಲಯದಲ್ಲಿ ವಾರ್ಷಿಕ ಹಬ ದೀಪಾವಳಿ ಸಮಯದಲ್ಲಿಯೇ ನಡೆಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಐದು ದಿನಗಳ ಕಾಲ ನಡೆಯುವ ಹಬ್ಬದಲ್ಲಿ ತೀರ್ಥ ಸ್ನಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ.
ಇಲ್ಲಿ ದೀಪಾವಳಿ ಅಮಾವಾಸ್ಯೆಯಂದು ಕಾವೇರಿ ನದಿಯಲ್ಲಿ ಮಿಂದರೆ ಪಾಪ ನಾಶವಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ನರಕ ಚತುರ್ದಶಿಯಂದು ಅಗಸ್ತ್ಯೇಶ್ವರನಿಗೆ ನೆರಪು ನಡೆಸಲಾಗುತ್ತದೆ. ಅಮಾವಾಸ್ಯೆಯಂದು ನಡೆಯುವ ಜಳಕದೊಂದಿಗೆ ಉತ್ಸವವು ಪೂರ್ಣಗೊಳ್ಳುತ್ತದೆ. ಈ ಜಾತ್ರೆಗೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲದೆ ವಿವಿಧ ಕಡೆಯಿಂದಲೂ ಭಕ್ತರು ಆಗಮಿಸುತ್ತಾರೆ.
ಗುಹ್ಯಕ್ಷೇತ್ರವು ಕಾವೇರಿ ಸೃಷ್ಠಿ ಮಾಡಿರುವ ಕ್ಷೇತ್ರಗಳ ಪೈಕಿ ಒಂದು. ಸಿದ್ದಾಪುರದಿಂದ ಐದು ಕಿ.ಮೀ ದೂರದಲ್ಲಿರುವ ಗುಹ್ಯ ಅಗಸ್ತ್ಯ ದೇಗುಲಕ್ಕೆ ಸಿದ್ದಾಪುರದಿಂದ ವೀರಾಜಪೇಟೆ ಮಾರ್ಗವಾಗಿ ಎರಡು ಕಿ.ಮೀ ಕ್ರಮಿಸಿ ಇಲ್ಲಿಂದ ಬಲ ಭಾಗಕ್ಕಿರುವ ರಸ್ತೆಯಲ್ಲಿ ಮೂರು ಕಿ.ಮೀ ಸಾಗಿದರೆ ಗುಹ್ಯ ಗ್ರಾಮವನ್ನು ತಲುಪಬಹುದಾಗಿದೆ.
ವಿಷ್ಣು ಗುಟ್ಟಾಗಿ ಅಡಗಿದ ಜಾಗ, ಗುಹೆಗಳಲ್ಲಿ ಋಷಿಗಳು ತಪಸ್ಸು ಮಾಡಿದ ಜಾಗ ಗುಹ್ಯವಾಯಿತು ಎನ್ನುತ್ತಾರೆ. ಇಲ್ಲಿನ ಅಗಸ್ತ್ಯೇಶ್ವರ ದೇಗುಲ ಮಾತ್ರ ವೀಕ್ಷಿಸಲು ಆಕರ್ಷಕವಾಗಿದ್ದು, ದೇವಾಲಯದ ಗರ್ಭ ಗುಡಿಯು ವೃತ್ತಾಕಾರದಲ್ಲಿದೆ. ಇಲ್ಲಿರುವ ಈಶ್ವರ ಲಿಂಗವು ಅಗಸ್ತ್ಯ ಮಹರ್ಷಿಯು ಪ್ರತಿಷ್ಠಾಪಿಸಿದ್ದು ಎನ್ನಲಾಗಿದ್ದು, ಇದು ಬಹಳ ಆಳದಲ್ಲಿದೆ. ಗರ್ಭ ಗುಡಿಯು ಎರಡು ಅಂಕಣದಲ್ಲಿ ರಚಿತವಾಗಿರುವುದನ್ನು ಗಮನಿಸಬಹುದಾಗಿದೆ.
ಹಿಂದೆ ದೇವತೆಗಳ ಕಾಲದಲ್ಲಿ ಲೋಕ ಪಾಲಕ ವಿಷ್ಣು ತನ್ನ ಮದುವೆಗಾಗಿ ಕುಬೇರನಲ್ಲಿ ಸಾಲ ಮಾಡಿದ್ದನಂತೆ, ಸಾಲ ಮಾಡಿದ ಹಣದಲ್ಲಿ ಬಹಳ ಅದ್ದೂರಿಯಾಗಿ ವಿಷ್ಣು ಮದುವೆಯಾಗಿದ್ದನಂತೆ, ಮದುವೆಯಾದ ಬಳಿಕ ಸಾಲ ತೀರಿಸಬೇಕಲ್ಲವೇ? ಕೊಟ್ಟ ಸಾಲವನ್ನು ಮರಳಿ ಕೊಡುವಂತೆ ಕುಬೇರನೂ ಕೇಳತೊಡಗಿದನಂತೆ. ಕುಬೇರನ ಕಾಟವನ್ನು ತಡೆಯಲಾರದ ವಿಷ್ಣು ದೇವ ಲೋಕದಿಂದ ಭೂಲೋಕದತ್ತ ಓಡಿ ಬಂದು ಗುಹ್ಯದಲ್ಲಿ ಅಡಗಿ ಕುಳಿತನಂತೆ. ಆದರೆ ಪ್ರತಿವರ್ಷವೂ ಕುಬೇರ ವಿಷ್ಣುವನ್ನು ಹುಡುಕಿಕೊಂಡು ಬರುತ್ತಿದ್ದನಂತೆ. ಈಗಲೂ ಮೀನು ರೂಪದಲ್ಲಿ ಬರುತ್ತಾನೆ ಎಂದು ಜನರು ನಂಬುತ್ತಾರೆ.
ಅದೇನೇ ಇರಲಿ ಗುಹ್ಯ ಕ್ಷೇತ್ರ ನಿಸರ್ಗರಮಣೀಯ ತಾಣವನ್ನು ಹೊಂದಿದ್ದು ನಾಸ್ತಿಕರು, ಆಸ್ತಿಕರು ಎನ್ನದೆ ಎಲ್ಲರನ್ನು ಸೆಳೆಯುತ್ತಿರುವುದಂತೂ ನಿಜ.