ಮಡಿಕೇರಿ: ಹದಿನೆಂಟು ಮೆಟ್ಟಿಲ ಮೇಲೆ ವಿರಾಜಮಾನನಾದ ಗಣಪ
ಮಡಿಕೇರಿ, ಸೆಪ್ಟೆಂಬರ್ 16: ಹಲವು ದಶಕಗಳಿಂದ ಗಣೇಶ ಚತುರ್ಥಿಗೆ ಗಣಪತಿ ಪ್ರತಿಷ್ಠಾಪಿಸಿ, ನಿತ್ಯ ಪೂಜಿಸುತ್ತಾ ಬರುತ್ತಿರುವ ನಗರದ ಕೆಎಸ್ಆರ್ ಟಿಸಿ ಡಿಪೋ ಬಳಿಯ ಶಾಂತಿನಿಕೇತನ ಬಡಾವಣೆಯ ಶಾಂತಿನಿಕೇತನ ಯುವಕ ಸಂಘವು ಪ್ರತಿ ವರ್ಷ ವಿಭಿನ್ನತೆ ರೂಢಿಸಿಕೊಂಡಿರುವುದನ್ನು ಕಾಣಬಹುದು.
ವರ್ಷದಿಂದ ವರ್ಷಕ್ಕೆ ಪ್ರತಿಷ್ಠಾಪನೆ ವೇಳೆ ವಿಭಿನ್ನ ಹಾಗೂ ವಿಶಿಷ್ಟತೆಯನ್ನು ಮೆರೆಯುತ್ತಿರುವ ಸಂಘವು ಭಕ್ತಿಗೂ ಪ್ರಾಧಾನ್ಯ ನೀಡಿದೆ. ಪ್ರತಿಷ್ಠಾಪನೆ ಬಳಿಕ ವಿಸರ್ಜನೆ ತನಕ ಒಂದಲ್ಲ ಒಂದು ಕಾರ್ಯಕ್ರಮವನ್ನು ಮಾಡುತ್ತಾ ಬರುತ್ತಿದೆ. ಆ ಮೂಲಕ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಿಕೊಡುತ್ತಿದೆ.[ಶಾಸ್ತ್ರಬದ್ಧವಾಗಿ ಗಣಪತಿಯನ್ನು ವಿಸರ್ಜಿಸುವ ಕ್ರಮ]
ಕೊಡಗಿನಲ್ಲಿ ಕಲಾಕೃತಿಗಳಿಗೆ ಹೆಚ್ಚಿನ ಆದ್ಯತೆ. ದಸರಾ ಮಾದರಿಯಲ್ಲಿ ನಡೆಯುವ ಇಲ್ಲಿನ ವಿಸರ್ಜನಾ ಮೆರವಣಿಗೆಯು ನೋಡುಗರ ಮನ ಸೆಳೆಯುತ್ತದೆ. ಪ್ರತಿಷ್ಠಾನೆಗೊಂಡ ಗಣಪತಿಯನ್ನು ಭವ್ಯ ವಿದ್ಯುತ್ ಅಲಂಕೃತ ಮಂಟಪದಲ್ಲಿ ಮೆರವಣಿಗೆ ನಡೆಸಿ ವಿಸರ್ಜನೆ ಮಾಡಲಾಗುತ್ತದೆ.
ಭವ್ಯವಾದ ಅಯ್ಯಪ್ಪ ಸ್ವಾಮಿಯ ಹದಿನೆಂಟು ಮೆಟ್ಟಿಲುಗಳಂತೆ ಇದೀಗ ಗಣಪತಿಗೆ ದೇಗುಲ ನಿರ್ಮಿಸಿ ಪ್ರತಿಷ್ಠಾಪಿಸಲಾಗಿದ್ದು, ನೋಡುಗರಿಗೆ ಶಬರಿಮಲೆಯ ಕಲ್ಪನೆ ಮೂಡಿಸುತ್ತಿದೆ. ಪಕ್ಕದಲ್ಲಿಯೇ ವಿವಿಧ ದೇವಾನುದೇವತೆಗಳ ಕಲಾಕೃತಿಗಳು, ಜಾಂಬವಂತ, ಆನೆ ಇನ್ನಿತರ ಪ್ರಾಣಿಗಳ ಪ್ರತಿಕೃತಿಗಳು ಕಣ್ಮನ ಸೆಳೆಯುತ್ತವೆ.[ಗಣೇಶನ ಹಬ್ಬಕ್ಕೆ ಬದಲಾವಣೆ ನಿಮ್ಮಿಂದಲೇ ಆರಂಭವಾಗಲಿ!]
ಸಂಘದ ಅಧ್ಯಕ್ಷ ಚೇತನ್ ನೇತೃತ್ವದ ತಂಡ ಉತ್ಸವವನ್ನು ಉತ್ತಮವಾಗಿ ನಡೆಸುತ್ತಿದ್ದು, ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಶನಿವಾರ (ಸೆ. 17) ಅದ್ಧೂರಿ ಮೆರವಣಿಗೆಯೊಂದಿಗೆ ನಡೆಯಲಿದೆ.