ಕಾದಾಟದಿಂದ ಗಾಯಗೊಂಡು ಹೊಂಡದಲ್ಲಿ ಬಿದ್ದಿದ್ದ ಕಾಡುಕೋಣ ರಕ್ಷಣೆ
ಮಡಿಕೇರಿ, ಏಪ್ರಿಲ್ 30: ಪರಸ್ಪರ ಗುದ್ದಾಡಿಕೊಂಡಿದ್ದ ಎರಡು ಕಾಡು ಕೋಣಗಳ (ಕಾಟಿ) ಪೈಕಿ ಒಂದು ತೀವ್ರವಾಗಿ ಗಾಯಗೊಂಡಿದ್ದನ್ನು ನೋಡಿ ಸ್ಥಳೀಯರು ನೆರವಿಗೆ ಧಾವಿಸಿ ರಕ್ಷಿಸಿರುವ ಘಟನೆ ನಡೆದಿದೆ.
ದಕ್ಷಿಣ ಕೊಡಗಿನ ಕೆ.ಬಾಡಗದ ಹೆರ್ಮಾಡು ಈಶ್ವರ ದೇವಸ್ಥಾನ ಸಮೀಪದ ಪೆಮ್ಮಣಮಾಡ ನವೀನ್ ಎಂಬುವವರ ತೋಟದಲ್ಲಿ ಎರಡು ದಿನಗಳ ಹಿಂದೆ ಎರಡು ಕಾಡು ಕೋಣಗಳು ಪರಸ್ಪರ ಕಾದಾಡಿಕೊಂಡಿವೆ. ಗುದ್ದಾಡಿದ ಇವುಗಳ ಪೈಕಿ ಒಂದು ಕೋಣ ತೀವ್ರವಾಗಿ ಗಾಯಗೊಂಡು ತೋಟದ ಹೊಂಡದೊಳಗೆ ಬಿದ್ದಿತ್ತು. ಹೊಂಡದಿಂದ ಮೇಲೆ ಬರಲಾಗದೇ ಒದ್ದಾಡುತ್ತಿದ್ದುದನ್ನು ಗಮನಿಸಿದ ತೋಟದ ಮಾಲೀಕ ಪೆಮ್ಮಣಮಾಡ ನವೀನ್, ಸ್ಥಳೀಯರ ಗಮನಕ್ಕೆ ತಂದು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದರು.
ಸಮುದ್ರದಿಂದ ಬರ್ಖಾ ರಕ್ಷಿಸಿದ ಕರಾವಳಿ ಕಾವಲು ಪೊಲೀಸರು
ವಿಷಯ ತಿಳಿದ ಅರಣ್ಯ ಮತ್ತು ಪಶು ಸಂಗೋಪನಾ ಇಲಾಖೆಯವರು ಇಂದು ಸ್ಥಳಕ್ಕೆ ಬಂದು ಹೊಂಡದಲ್ಲಿ ಬಿದ್ದಿದ್ದ ಕಾಡು ಕೋಣವನ್ನು ಕ್ರೇನ್ ಮತ್ತು ಸ್ಥಳೀಯರ ಸಹಾಯದಿಂದ ಮೇಲಕ್ಕೆ ಎತ್ತಿ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಕಂಟೈನರ್ ಮೂಲಕ ಮೈಸೂರು ಮೃಗಾಲಯಕ್ಕೆ ಸಾಗಿಸಲಾಗಿದೆ.