ರೈತರೇ ಅಲ್ಯೂಮಿನಿಯಮ್ ಏಣಿ ಬಳಸುವ ಮುನ್ನ ಎಚ್ಚರವಿರಲಿ!
ಮಡಿಕೇರಿ, ಮಾರ್ಚ್ 22: ಕೊಡಗು ಜಿಲ್ಲೆಯಲ್ಲೀಗ ಕಾಫಿ ಕೊಯ್ಲು ಮುಗಿದಿದ್ದು ಕರಿಮೆಣಸು ಕೊಯ್ಲು ಆರಂಭಗೊಂಡಿದೆ. ಕಾಫಿ ತೋಟದ ನಡುವಿನ ಮುಗಿಲೆತ್ತರದ ಮರದಲ್ಲಿ ಹಬ್ಬಿ ನಿಂತ ಬಳ್ಳಿಗಳಿಂದ ಕರಿಮೆಣಸು ಕೊಯ್ಲು ಮಾಡುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ.
ಮೊದಲೆಲ್ಲ ಮರಕ್ಕೆ ಹಬ್ಬಿ ಬೆಳೆಯುವ ಬಳ್ಳಿಯಿಂದ ಕರಿಮೆಣಸು ಕೊಯ್ಲು ಮಾಡಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಅವತ್ತು ಬಿದಿರು ಯಥೇಚ್ಛವಾಗಿತ್ತು. ಹೀಗಾಗಿ ಬಿದಿರು ಮೆಳೆಗಳಿಂದ ಉತ್ತಮವಾದ ಬಿದಿರನ್ನು ಕಡಿದು ಅದರಿಂದ ಏಣಿ ಮಾಡಿಟ್ಟುಕೊಳ್ಳುತ್ತಿದ್ದರು.
ಅದು ಒಂದಷ್ಟು ವರ್ಷಗಳ ಕಾಲ ಬಾಳಿಕೆ ಬರುತ್ತಿತ್ತು. ಆದರೆ ಕ್ರಮೇಣ ಕಾಫಿ ತೋಟಗಳ ಪ್ರಮಾಣ ಹೆಚ್ಚಾಗುತ್ತಿದ್ದಂತೆಯೇ ಬಿದಿರು ಮೆಳೆಗಳು ನಾಶವಾದವು. ಜತೆಗೆ ಅರಣ್ಯಗಳಲ್ಲಿರುವ ಬಿದಿರುಗಳನ್ನು ಕಡಿಯುವುದಕ್ಕೆ ನಿರ್ಬಂಧ ಹೇರಿದ್ದರಿಂದ ಬಿದಿರು ಬಳಕೆ ಕಡಿಮೆಯಾದವು.
ಒಂದೆರಡು ದಶಕಗಳಿಂದೀಚೆಗೆ ಅಲ್ಯುಮಿನಿಯಮ್ ಏಣಿಗಳು ಮಾರುಕಟ್ಟೆಗೆ ಬಂದಿವೆ. ಬೆಳೆಗಾರರು ಕೂಡ ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮೊರೆ ಹೋಗಿದ್ದಾರೆ. ಕಾರಣ ಇದು ಒಂದಷ್ಟು ಹಗುರವಾಗಿರುವುದಲ್ಲದೆ, ಮರವನ್ನು ಬಿಗಿಯಾಗಿ ಹಿಡಿದುಕೊಳ್ಳುವುದರಿಂದ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಕೊಂಡೊಯ್ಯುವುದು ಸುಲಭವಾಗಿರುವುದರಿಂದ, ಜತೆಗೆ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವುದರಿಂದ ಬೆಳೆಗಾರರೆಲ್ಲ ಖರೀದಿಸಿ ಮನೆಯಲ್ಲಿಟ್ಟುಕೊಂಡಿದ್ದಾರೆ.

ತೋಟದಲ್ಲಿ ಜೋತು ಬಿದ್ದ ವಿದ್ಯುತ್ ತಂತಿಗಳು
ಈ ಏಣಿಗಳು ಕೇವಲ ಕರಿಮೆಣಸು ಕೊಯ್ಲು ಮಾಡಲು ಮಾತ್ರವಲ್ಲದೆ, ಇತರೆ ಕೆಲಸ ಕಾರ್ಯಗಳಿಗೂ ಸಹಕಾರಿಯಾಗಿದೆ. ಆದರೂ ಹೆಚ್ಚಿನ ಪ್ರಮಾಣದಲ್ಲಿ ಬೆಳೆಗಾರರು ಕರಿಮೆಣಸು ಕೊಯ್ಲುಗೆ ಬಳಕೆ ಮಾಡುತ್ತಿರುವುದು ಕಂಡು ಬರುತ್ತದೆ.
ಕೊಡಗಿನ ಹೆಚ್ಚಿನ ಪ್ರದೇಶ ಗುಡ್ಡಕಾಡಿನಿಂದ ಕೂಡಿದ್ದು, ಈ ಪ್ರದೇಶಗಳಲ್ಲಿ ಕಾಫಿ ತೋಟಗಳಿದ್ದು ಆ ಕಾಫಿ ತೋಟಗಳ ನಡುವೆಯೇ ಒಂದೆಡೆಯಿಂದ ಮತ್ತೊಂದೆಡೆಗೆ ವಿದ್ಯುತ್ ಸಂಪರ್ಕ ಹಾದು ಹೋಗಿವೆ. ಈ ತಂತಿಗಳು ವರ್ಷದಿಂದ ವರ್ಷಕ್ಕೆ ಜೋತು ಬೀಳುತ್ತಿವೆ.

ಅವಘಡ ಹೆಚ್ಚಾಗಿ ಸಂಭವಿಸುತ್ತದೆ
ಈ ನಡುವೆ ಮಳೆಗಾಲದಲ್ಲಿ ತಂತಿ ಮೇಲೆ ಮರದ ಕೊಂಬೆಗಳು ಬಿದ್ದು ತಂತಿ ತುಂಡಾಗುವುದು ಮತ್ತು ಸರಿಪಡಿಸುವುದು ಹೀಗೆ ಆಗಾಗ್ಗೆ ಪುನರಾವರ್ತನೆಯಾಗುವುದರಿಂದ ತೋಟದ ನಡುವೆ ಕಂಬದಿಂದ ಕಂಬಕ್ಕೆ ಎಳೆದಿರುವ ತಂತಿಗಳು ಜೋತು ಬಿದ್ದಿದ್ದು ಅವುಗಳಿಂದ ತಪ್ಪಿಸಿಕೊಂಡು ಕೆಲಸ ಮಾಡುವುದೇ ಕಷ್ಟವಾಗುತ್ತಿದೆ. ಪ್ರತಿ ವರ್ಷವೂ ಚೆಸ್ಕಾಂ ಸಿಬ್ಬಂದಿ ಇವುಗಳ ಬಗ್ಗೆ ಪರಿಶೀಲನೆ ನಡೆಸದ ಕಾರಣ ಮತ್ತು ಬೆಳೆಗಾರರು ಈ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತಂದರೂ ನಿರ್ಲಕ್ಷ್ಯ ವಹಿಸುವುದರಿಂದ ಕರಿಮೆಣಸು ಕೊಯ್ಲು ಸಂದರ್ಭ ಈ ವಿದ್ಯುತ್ ತಂತಿಗಳಿಂದ ಅವಘಡ ಹೆಚ್ಚಾಗಿ ಸಂಭವಿಸುತ್ತದೆ.
Recommended Video

ಮೂವತ್ತೆಂಟಕ್ಕೂ ಹೆಚ್ಚು ಮಂದಿ ಬಲಿ
ಕರಿಮೆಣಸು ಕೊಯ್ಲು ಮಾಡುವ ಸಂದರ್ಭ ಕಾರ್ಮಿಕರು ಮತ್ತು ಬೆಳೆಗಾರರು ಮುಂಜಾಗ್ರತೆ ವಹಿಸದೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಅಲ್ಯುಮಿನಿಯಮ್ ಏಣಿಗಳು ಎಷ್ಟು ಉಪಯೋಗವಾಗಿವೆಯೋ ಅಷ್ಟೇ ಅಪಾಯವನ್ನು ತಂದೊಡ್ಡುತ್ತಿವೆ. ಕಳೆದ ಐದಾರು ವರ್ಷಗಳಲ್ಲಿ ಕರಿಮೆಣಸು ಕೊಯ್ಲು ಸಂದರ್ಭ ಏಣಿಯನ್ನು ಒಂದು ಬಳ್ಳಿಯಿಂದ ಮತ್ತೊಂದು ಬಳ್ಳಿಗೆ ಕೊಂಡೊಯ್ದು ಇಡುವಾಗ ಮರಗಳ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿಯನ್ನು ಗಮನಿಸದೆ ಏಣಿ ಸ್ಪರ್ಶಿಸಿ ಸುಮಾರು 38 ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಪ್ರತಿವರ್ಷವೂ ಅರಿವು ಮೂಡಿಸುತ್ತಿದ್ದರೂ ಅಲ್ಲಲ್ಲಿ ಅವಘಡಗಳು ನಡೆಯುತ್ತಲೇ ಇವೆ.

ಗಂಭೀರವಾಗಿ ಪರಿಗಣಿಸದೆ ಅವಘಡ
ನೂರಾರು ಎಕರೆ ಕಾಫಿ ತೋಟ ಹೊಂದಿರುವ ಬೆಳೆಗಾರರಿಗೆ ತಮ್ಮ ತೋಟದ ನಡುವಿನ ಮರಗಳಿಗೆ ಹಬ್ಬಿಸಿದ ಕರಿಮೆಣಸು ಕೊಯ್ಲು ಮಾಡಲು ಕಾರ್ಮಿಕರನ್ನು ಹುಡುಕುವುದೇ ಸವಾಲಿನ ಕೆಲಸವಾಗಿದೆ. ಕೆಲಸಗಾರರು ಸಿಕ್ಕಿದರೂ ಅವರ ಜತೆಯಲ್ಲಿ ಇರಲು ಸಾಧ್ಯವಿಲ್ಲ. ತಮ್ಮ ತೋಟದ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿ ಬಗ್ಗೆ ಕೆಲಸಗಾರರ ಗಮನಕ್ಕೆ ತಂದರೂ ಕೆಲವೊಮ್ಮೆ ಕೆಲಸದ ಅವಸರದಲ್ಲಿ ವಿದ್ಯುತ್ ತಂತಿಯನ್ನು ನೋಡದೆ ಏಣಿಯನ್ನು ಹೊತ್ತೊಯ್ಯುವಾಗ ತಂತಿಗೆ ತಗುಲಿ ಅವಘಡಗಳು ಸಂಭವಿಸುತ್ತಿವೆ. ಈ ಬಗ್ಗೆ ಕಾರ್ಮಿಕರು ಕೂಡ ಸುತ್ತಮುತ್ತ ಗಮನಿಸಿಕೊಂಡು ಕೆಲಸವನ್ನು ಮಾಡಬೇಕಾಗುತ್ತದೆ. ಆದರೆ ಮೇಲಿಂದ ಮೇಲೆ ದುರಂತಗಳು ಸಂಭವಿಸುತ್ತಿದ್ದರೂ ಯಾರೂ ಕೂಡ ಇದರತ್ತ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಪ್ರತಿವರ್ಷವೂ ಅಲ್ಯುಮಿನಿಯಮ್ ಏಣಿಗೆ ವಿದ್ಯುತ್ ತಂತಿ ಸ್ಪರ್ಶವಾಗಿ ಸಾಯುವುದು ನಡೆಯುತ್ತಲೇ ಇದೆ.
ತೋಟಗಳಲ್ಲಿ ಕರಿಮೆಣಸು ಕೊಯ್ಲು ಮಾತ್ರವಲ್ಲದೆ ಮರಕಪಾತ್ ಸಂದರ್ಭವೂ ಕಾರ್ಮಿಕರು ಏಣಿಯನ್ನು ತೋಟದ ನಡುವೆ ಕೊಂಡೊಯ್ಯುವಾಗ ಎಚ್ಚರಿಕೆ ವಹಿಸಬೇಕು. ಬೆಳೆಗಾರರು ಕೂಡ ಕಾರ್ಮಿಕರ ಬಗ್ಗೆ ನಿಗಾವಹಿಸುವ ಅಗತ್ಯವಿದೆ.












Click it and Unblock the Notifications