ಡಿವೈಎಸ್ಪಿ ಎಂ.ಕೆ ಗಣಪತಿ ಸಾವಿನ ಪ್ರಕರಣ, ಕೋರ್ಟಿಗೆ ವರದಿ ಸಲ್ಲಿಸಿದ ಸಿಬಿಐ
ಮಡಿಕೇರಿ, ಅಕ್ಟೋಬರ್ 31: ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ಡಿವೈಎಸ್ಪಿ ಎಂ.ಕೆ ಗಣಪತಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೊನೆಗೂ ಅಂತಿಮ ತನಿಖಾ ವರದಿಯನ್ನು ಬುಧವಾರದಂದು ಸ್ಥಳೀಯ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಹಿಂದೆ ಅಂದಿನ ಗೃಹ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ ತಂಡ ಈಗ ವಿಸ್ತೃತವಾಗಿ ದೋಷಾರೋಪಣ ಪಟ್ಟಿ ಸಲ್ಲಿಸಿದೆ.
ಸರ್ಕಾರ ನೇಮಿಸಿದ್ದ ನ್ಯಾಯಾಂಗ ಆಯೋಗವು ತನ್ನ ವರದಿಯನ್ನು ಸಲ್ಲಿಸಿ ಎರಡು ವರ್ಷ ವಾಗಿದೆ. ಸಿಐಡಿ ವರದಿಯಂತೆ ಈ ವರದಿ ಪ್ರಕಾರವು ಎಂಕೆ ಗಣಪತಿ ಸಾವಿಗೆ ಮಾನಸಿಕ ಒತ್ತಡವೇ ಕಾರಣ ಎಂದು ಷರಾ ಹಾಕಲಾಗಿತ್ತು.
2017ರ ಅಕ್ಟೋಬರ್ ನಲ್ಲಿ ಸಚಿವ ಕೆಜೆ ಜಾರ್ಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಸಿಬಿಐ ನಂತರ ತನಿಖೆಗೆ ಕಾಲಾವಕಾಶ ಕೋರಿತ್ತು. ಹೀಗಾಗಿ, ನ್ಯಾಯಾಂಗ ಆಯೋಗದ ವರದಿ ಯಾವುದೇ ಬೆಲೆ ಸಿಕ್ಕಿರಲಿಲ್ಲ. ಈಗ ಮಡಿಕೇರಿ ಜೆಎಂಎಫ್ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ 260 ಪುಟಗಳ ವರದಿಯನ್ನು ಸಿ.ಬಿ.ಐ ಅಧಿಕಾರಿಗಳು ಸಲ್ಲಿಸಿದ್ದಾರೆ.
ಚೆನ್ನೈನ ಸಿಬಿಐ ಕಚೇರಿಯ ಅಧಿಕಾರಿ ಸುಬೋಧ್ ನೇತೃತ್ವದ ಸಿಬಿಐ ತಂಡವು ನ್ಯಾಯಾಧೀಶರಿಗೆ ವರದಿ ಸಲ್ಲಿಸಿದ ಸಂದರ್ಭದಲ್ಲಿ ಸ್ಥಳೀಯ ಪೊಲೀಸರು ಉಪಸ್ಥಿತರಿದ್ದರು.

ನ್ಯಾಯಾಂಗ ವರದಿ ತನಿಖೆ
ನಿವೃತ್ತ ನ್ಯಾಯಾಧೀಶ ಕೆ.ಎನ್ ಕೇಶವನಾರಾಯಣ ಅವರ ನೇತೃತ್ವದ ನ್ಯಾಯಾಂಗ ಆಯೋಗವು ಅಂದಿನ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿ ತನ್ನ ವರದಿಯನ್ನು ಸಲ್ಲಿಸಿತ್ತು.
ಸುಮಾರು ಒಂದೂವರೆ ವರ್ಷಗಳ ತನಿಖೆ, ವಿಚಾರಣೆ ಬಳಿಕ ತನ್ನ ವರದಿಯನ್ನು ಸಲ್ಲಿಸಿತ್ತು. ಸದ್ಯ ವರದಿಯನ್ನು ಪರಿಶೀಲಿಸಲು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಶ್ ಚಂದ್ರ ಅವರಿಗೆ ಹಸ್ತಾಂತರಿಸಲಾಗಿತ್ತು. 50 ಸಾಕ್ಷ್ಯಗಳ ವಿಚಾರಣೆ ನಡೆಸಿ, ಸತ್ಯ ಶೋಧನಾ ಸಮಿತಿ ಮಾದರಿಯ ವರದಿಯನ್ನು ತಯಾರಿಸಿ, 320 ಪುಟಗಳ ವರದಿ ಇದಾಗಿತ್ತು.

ನ್ಯಾಯಾಂಗ ವರದಿಯಲ್ಲಿ ಏನಿದೆ?
ಎಂಕೆ ಗಣಪತಿ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ವ್ಯಕ್ತಿಯ ಕೈವಾಡ ಕಂಡು ಬಂದಿಲ್ಲ. ಮಾನಸಿಕ ಒತ್ತಡವೇ ಗಣಪತಿ ಅವರ ಆತ್ಮಹತ್ಯೆಗೆ ಕಾರಣ ಎಂದು ನ್ಯಾಯಾಂಗ ವರದಿಯಲ್ಲಿ ಹೇಳಲಾಗಿತ್ತು.ಇದಲ್ಲದೆ, ಪ್ರಮುಖ ಆರೋಪಿಗಳಾದ ಅಂದಿನ ಗೃಹ ಸಚಿವ ಕೆಜೆ ಜಾರ್ಜ್, ಐಪಿಎಸ್ ಅಧಿಕಾರಿಗಳಾದ ಎ.ಎಂ ಪ್ರಸಾದ್, ಪ್ರಣವ್ ಮೊಹಾಂತಿ ಅವರನ್ನು ನ್ಯಾಯಾಂಗ ಆಯೋಗ ವಿಚಾರಣೆಗೊಳಪಡಿಸಿರಲಿಲ್ಲ.

ಜಾರ್ಜ್ ಮೇಲೆ ಆರೋಪ ಹೊರೆಸಿದ್ದರು
ಕೊಡಗಿನ ಮಡಿಕೇರಿಯ ಲಾಡ್ಜ್ ವೊಂದರಲ್ಲಿ ಮಂಗಳೂರಿನ ಡಿವೈಎಸ್ಪಿಯಾಗಿದ್ದ ಎಂ.ಕೆ ಗಣಪತಿ ಅವರು ಜುಲೈ 7, 2016ರಂದು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂದರ್ಭದಲ್ಲಿ ಅವರು ಮಂಗಳೂರಿನಲ್ಲಿ ಡಿವೈಎಸ್ಪಿಯಾಗಿದ್ದರು. ಸಾಯುವುದಕ್ಕೂ ಮೊದಲು ನೀಡಿದ್ದ ಸಂದರ್ಶನದಲ್ಲಿ ಗಣಪತಿ ತಮ್ಮ ಸಾವಿಗೆ ಕೆ.ಜೆ ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ, ಎ.ಎಂ ಪ್ರಸಾದ್ ಕಾರಣ ಎಂದು ಹೇಳಿದ್ದರು.

ಜನಪ್ರತಿನಿಧಿಗಳ ಕೋರ್ಟಿನಲ್ಲಿ ಕೇಸ್
ವಿಡಿಯೋ ಸಾಕ್ಷ್ಯದ ಮೇಲೆ ಆರಂಭವಾದ ಪೊಲೀಸರ ತನಿಖೆ 'ಅಸಹಜ ಸಾವು' ಎಂದಷ್ಟೇ ಪ್ರಕರಣದ ತನಿಖೆ ನಡೆದು ನಂತರ ಸಿಐಡಿ ಪಾಲಾಯಿತು. ಸಿಐಡಿ ತನಿಖೆ ನಡೆಸಿ, ಕೆಜೆ ಜಾರ್ಜ್ ಸೇರಿದಂತೆ ಮೂವರಿಗೂ ಕ್ಲೀನ್ ಚಿಟ್ ನೀಡಿ, ಕೋರ್ಟಿಗೆ ಬಿ ರಿಪೋರ್ಟ್ ಸಲ್ಲಿಸಿತು. ರಾಜೀನಾಮೆ ನೀಡಿದ್ದ ಜಾರ್ಜ್ ಮತ್ತೆ ಸಂಪುಟ ಸೇರಿದರು. ಗಣಪತಿ ಕುಟುಂಬದವರ ಅರ್ಜಿ ಪುರಸ್ಕರಿಸಿದ ಸುಪ್ರೀಂಕೋರ್ಟ್, ಪ್ರಕರಣವನ್ನು ಸಿಬಿಐಗೆ ವಹಿಸಿತು, ತನಿಖೆ ನಿಧಾನಗತಿಯಿಂದ ಸಾಗಿ, ಈಗ ಚಾರ್ಜ್ ಶೀಟ್ ಸಲ್ಲಿಕೆ ಹಂತಕ್ಕೆ ಬಂದಿದೆ. ಸಿಬಿಐ ಡಿವೈಎಸ್ಪಿ ರವಿ, ಸಿಬಿಐ ಪಬ್ಲಿಕ್ ಪ್ರಾಸಿಕ್ಯೂಟರ್ ಸುಬೋಧ್ ಅವರು ತನಿಖಾ ವರದಿ ಸಲ್ಲಿಸಿದ್ದಾರೆ. ಜಾರ್ಜ್ ವಿರುದ್ಧದ ಪ್ರಕರಣ ಜನಪ್ರತಿನಿಧಿಗಳ ಕೋರ್ಟಿನಲ್ಲಿದೆ.












Click it and Unblock the Notifications