ಸರಕಾರಿ ಆಸ್ಪತ್ರೆಗೆ ನುಗ್ಗಿ ಭ್ರೂಣ ಹೊತ್ತೊಯ್ದ ನಾಯಿ!
ಮಡಿಕೇರಿ, ಸೆಪ್ಟೆಂಬರ್ 10 : ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿಟ್ಟಿದ್ದ 5 ತಿಂಗಳ ಭ್ರೂಣವನ್ನು ಬೀದಿನಾಯಿಯೊಂದು ಕಚ್ಚಿಕೊಂಡು ಹೋದ ಘಟನೆ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದಿದ್ದು, ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೀದಿನಾಯಿಯೊಂದು ಆಸ್ಪತ್ರೆಯೊಳಗೆ ನುಗ್ಗಿ ಭ್ರೂಣ ಹೊತ್ತೊಯ್ಯುತ್ತದೆ ಎಂದರೆ ಆಸ್ಪತ್ರೆ ಎಂತಹ ದುಃಸ್ಥಿತಿಯಲ್ಲಿದೆ ಎಂಬುದು ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಕುಶಾಲನಗರ ಸಮೀಪದ ಗುಡ್ಡೇನಹಳ್ಳಿ ಗ್ರಾಮದ ನಾಸಿರ್ ಎಂಬವರ ಪತ್ನಿ ಹಸೀನಾ ಬುಧವಾರ ಸಂಜೆ ಚಿಕಿತ್ಸೆಗೆ ಆಗಮಿಸಿದ ಸಂದರ್ಭ, ವೈದ್ಯರು ಪರೀಕ್ಷಿಸಿ ಗರ್ಭಕೋಶ ತೊಂದರೆಯಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಗರ್ಭಪಾತ ನಡೆಸಿ 5 ತಿಂಗಳ ಭ್ರೂಣವನ್ನು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿಟ್ಟಿದ್ದರು. [ಶ್ವಾನಪ್ರಿಯರಲ್ಲದವರು ಈ ಲೇಖನ ಓದಬೇಡಿ!]

ಆ ನಂತರ ಪತಿ ನಾಸಿರ್ ಮತ್ತು ಮನೆಯವರು ರಾತ್ರಿ ಬಂದು ಭ್ರೂಣವನ್ನು ದಫನ್ ಮಾಡಲು ನೀಡುವಂತೆ ಮನವಿ ಮಾಡಿದ್ದಾರೆ. ಆ ಸಂದರ್ಭ ಶಸ್ತ್ರಚಿಕಿತ್ಸಾ ಕೊಠಡಿಗೆ ತೆರಳಿ ನೋಡಿದಾಗ ಅಲ್ಲಿ ಭ್ರೂಣ ಇರಲಿಲ್ಲ. ಭ್ರೂಣ ಕಾಣಿಸುತ್ತಿಲ್ಲ ಎಂದು ಕರ್ತವ್ಯದಲ್ಲಿದ್ದ ದಾದಿಯೊಬ್ಬರು ಹೇಳಿದ್ದಾರೆ.
ಆಗ ಅಲ್ಲಿ ಮಾತಿನ ಚಕಮಕಿ ಆರಂಭವಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಶಸ್ತ್ರಚಿಕಿತ್ಸಾ ಕೊಠಡಿಗೆ ಯಾರೂ ಹೋಗುವಂತಿಲ್ಲ. ಹೀಗಿರುವಾಗ ನಾಪತ್ತೆಯಾಗಿದೆ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ. ಬಳಿಕ ಸಿಸಿ ಟಿವಿ ಪರಿಶೀಲಿಸಿದಾಗ ಬೀದಿ ನಾಯಿ ಶಸ್ತ್ರಚಿಕಿತ್ಸಾ ಕೊಠಡಿಗೆ ನುಗ್ಗಿ ಭ್ರೂಣ ಹೊತ್ತೊಯ್ಯುತ್ತಿರುವ ದೃಶ್ಯ ಕಾಣಿಸಿದೆ. ಅಷ್ಟೇ ಅಲ್ಲ, ಕರ್ತವ್ಯದಲ್ಲಿದ್ದ ದಾದಿ ರೇವತಿ ಎಂಬುವರು ಭ್ರೂಣ ಹೊತ್ತೊಯ್ಯುತ್ತಿರುವ ನಾಯಿಯ ಹಿಂದೆ ಓಡುತ್ತಿರುವುದು ಕಂಡು ಬಂದಿದೆ. [ಬೆಕ್ಕಿನ ಮರಿಗೆ ಹಾಲೂಡಿಸಿ ವಾತ್ಸಲ್ಯ ಮೆರೆದ ಬೀದಿ ನಾಯಿ!]

ಈ ಕುರಿತಂತೆ ಕುಶಾಲನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಜಿಲ್ಲಾ ಆರೋಗ್ಯಾಧಿಕಾರಿ ಓ.ಆರ್. ಶ್ರೀರಂಗಪ್ಪ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಹಾಗೂ ಕರ್ತವ್ಯದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಾರುಲತಾ ಸೋಮಲ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಮಾಹಿತಿ ಪಡೆದರು. ಹಾಗೂ ಕರ್ತವ್ಯದಲ್ಲಿದ್ದ ವೈದ್ಯರು ಹಾಗೂ ದಾದಿಯರನ್ನು ವಿಚಾರಣೆ ಮಾಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಇಲ್ಲಿ ಇಂತಹ ಘಟನೆ ಇದೇ ಮೊದಲಲ್ಲ ಹಿಂದೆಯೂ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. [ಸಣ್ಣಕಥೆ : ಸುಂದರಿ ಯುವತಿ ಮತ್ತು ಆಕೆಯ ಜಾಣ ನಾಯಿ!]












Click it and Unblock the Notifications