ಕೊಡಗಿನಲ್ಲಿ ಮುಂಗಾರು ಶುರುವಾಯ್ತು, ಸಜ್ಜಾದ ಜಿಲ್ಲಾಡಳಿತ
ಮಡಿಕೇರಿ,
ಜೂನ್ 03: ಕೊಡಗಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆಯಾಗುತ್ತಿದ್ದು, ಮುಂಗಾರು ಆರಂಭದ ಲಕ್ಷಣ ಕಂಡು ಬರುತ್ತಿದೆ. ಮೊದಲೆಲ್ಲ ಮೇ ಕೊನೆಯ ವಾರ ಅಥವಾ ಜೂನ್ ತಿಂಗಳ ಮೊದಲ ವಾರದಿಂದ ಮುಂಗಾರು ಆರಂಭವಾಗುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಮುಂಗಾರು ತಡವಾಗಿ ಆರಂಭವಾಗಿ ಸಕಾಲದಲ್ಲಿ ಮಳೆ ಸುರಿಯದೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಅನಾಹುತವನ್ನು ಸೃಷ್ಟಿ ಮಾಡುವುದು ಮಾಮೂಲಿಯಾಗಿದೆ. id="toptextpromo"> id='are-slot-1' class='oiad oi-axt oiadv'>ಆದರೆ
ಮಳೆ ಆರಂಭವಾಗಿರುವುದು ಮಳೆಗಾಲದ ಅನಾಹುತದ ನೆನಪನ್ನೂ ಮತ್ತೆ ತಂದಿದೆ. 2018ರ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತ ಕೊಡಗು ತಲ್ಲಣವಾಗುವಂತೆ ಮಾಡಿತ್ತು. ತದ ನಂತರ 2019ರಲ್ಲಿ ಕೂಡ ಮಳೆಗಾಲದಲ್ಲಿ ಕೆಲವೆಡೆ ಭೂಕುಸಿತ, ಪ್ರವಾಹ ಸಂಭವಿಸಿ ಸಂಕಷ್ಟಕ್ಕೆ ತಳ್ಳಿತ್ತು. ಕಾವೇರಿ ನದಿಯಲ್ಲಿ ಮೇಲಿಂದ ಮೇಲೆ ಪ್ರವಾಹ ಬಂದಿತ್ತಲ್ಲದೆ, ನೂರಾರು ಎಕರೆ ಪ್ರದೇಶ ಜಲಾವೃತಗೊಂಡಿತ್ತು. ಈಗ ಮಳೆಯಾಗುತ್ತಿರುವುದರಿಂದ ಮತ್ತೆ ಅವೆಲ್ಲವೂ ಇಲ್ಲಿನ ಜನರಲ್ಲಿ ನೆನಪಾಗುತ್ತಿವೆ... id='are-slot-2' class='oiad oi-axt oiadv'>Recommended Video

ಜನರಲ್ಲಿ ಅನಾಹುತದ ಭೀತಿ
ಕಳೆದ ಎರಡು ವರ್ಷಗಳಿಂದಲೂ ಕೊಡಗಿನಲ್ಲಿ, ಮಳೆಗಾಲದಲ್ಲಿ ಆಸ್ತಿ ಪಾಸ್ತಿ ನಷ್ಟ, ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಭೂ ಕುಸಿತ, ಪ್ರವಾಹದ ಭೀತಿಯಿಂದ ಜನರು ಇನ್ನೂ ಹೊರಬಂದಿಲ್ಲ. ಇದೀಗ ಮುಂಗಾರು ಆರಂಭವಾಗುತ್ತಿದ್ದು, ಈ ಬಾರಿಯ ಮಳೆಗಾಲ ಇನ್ಯಾವ ರೀತಿಯ ಅನಾಹುತವನ್ನು ಸೃಷ್ಟಿ ಮಾಡಿಬಿಡುತ್ತದೆಯೋ ಎಂಬ ಭಯವಂತೂ ಜನರಲ್ಲಿ ಇದ್ದೇ ಇದೆ.

2018ರ ದುರಂತದಿಂದ ಹೊರಬಂದಿಲ್ಲ
ಒಂದೆಡೆ ನಿಸರ್ಗ ಚಂಡಮಾರುತದ ಭಯ, ಮತ್ತೊಂದೆಡೆ ಮುಂಗಾರು ಕೇರಳಕ್ಕೆ ಕಾಲಿಟ್ಟಿರುವುದರಿಂದ ಮಳೆಗಾಲ ಜಿಲ್ಲೆಯಲ್ಲಿ ಆರಂಭವಾದಂತೆ ಗೋಚರವಾಗುತ್ತಿದೆ. ಈ ಬಾರಿ ಜಿಲ್ಲೆಯ ಜನತೆ ಕೂಡ ಕೊರೊನಾದ ಗುಂಗಿನಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿರುವ ಕಾರಣದಿಂದ ಮಳೆಗಾಲಕ್ಕೆ ಸಜ್ಜಾದಂತೆ ಕಂಡು ಬರುತ್ತಿಲ್ಲ. ಹಿಂದೆಯೆಲ್ಲ ಹೀಗಿರಲಿಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯ ಜನರು ಸರ್ವ ರೀತಿಯಲ್ಲಿ ಸಜ್ಜಾಗಿ ಬಿಡುತ್ತಿದ್ದರು.
ಜೊತೆಗೆ ಜನ ಇನ್ನೂ 2018ರ ದುರಂತದ ಹೊಡೆತದಿಂದ ಹೊರಬಂದಿಲ್ಲ. ಭೂಕುಸಿತದಿಂದಾಗಿ ಮಣ್ಣು ನೀರಿನೊಂದಿಗೆ ಹರಿದು ಹೋಗಿದ್ದು, ಸಮತಟ್ಟು ಜಾಗದಲ್ಲಿ ನಿಂತಿದೆ. ಕೆಲವು ತೊರೆ, ನದಿಗಳಲ್ಲಿ ಮಣ್ಣು ತುಂಬಿ ಹರಿವಿನ ವಿಸ್ತಾರ ಕಿರಿದಾಗಿದೆ. ಇದರಿಂದಾಗಿ ಚಿಕ್ಕದಾಗಿ ಮಳೆ ಸುರಿದು ನೀರು ಹರಿದು ಬಂದರೂ ರಸ್ತೆ, ತೋಟಗಳು ಜಲಾವೃತವಾಗಿದ್ದು, ಮುಂದೆ ಮಳೆಗಾಲದಲ್ಲಿ ಸಾಕಷ್ಟು ಹಾನಿಯಾದರೂ ಅಚ್ಚರಿಪಡಬೇಕಾಗಿಲ್ಲ.

ಹಾರಂಗಿ ಜಲಾಶಯ ಸೇರಿದ ಮಣ್ಣು
ಈಗಾಗಲೇ ಭೂಕುಸಿತದಿಂದಾಗಿ ಮಣ್ಣೆಲ್ಲವೂ ಕೊಚ್ಚಿಕೊಂಡು ಹೋಗಿ ಹಾರಂಗಿ ಜಲಾಶಯವನ್ನು ಸೇರಿದ್ದು ಇದರಿಂದ ಹೂಳು ತುಂಬಿದೆ. ಈ ಬಾರಿ ಬಹುಬೇಗ ಜಲಾಶಯ ಭರ್ತಿಯಾದರೂ ನೀರಿನ ಸಂಗ್ರಹ ಹೆಚ್ಚಿನ ಪ್ರಮಾಣದಲ್ಲಿ ಆಗುವುದು ಕಷ್ಟಸಾಧ್ಯವೇ. ಈ ಬಾರಿ ಜಿಲ್ಲಾಡಳಿತ ಮಳೆಗಾಲದಲ್ಲಿ ಕೊಡಗಿನಲ್ಲಿ ಸಂಭವಿಸಬಹುದಾದ ಅನಾಹುತವನ್ನು ಸಮರ್ಥವಾಗಿ ನಿಭಾಯಿಸಲು ಸಜ್ಜಾಗಿದ್ದು, ಈಗಾಗಲೇ ಎನ್ಡಿಆರ್ ಎಫ್ ತಂಡದ ಹತ್ತನೇ ಬೆಟಾಲಿಯನ್ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ಆಗಮಿಸಿದೆ. ಈ ತಂಡವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅನನ್ಯ ವಾಸುದೇವ ಅವರು ನಗರದ ಪೊಲೀಸ್ ಮೈತ್ರಿ ಭವನದಲ್ಲಿ ಬರ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸನ್ನದ್ಧಗೊಂಡ ಎನ್ಡಿಆರ್ ಎಫ್
ಎನ್ಡಿಆರ್ ಎಫ್ ತಂಡದಲ್ಲಿ ಕಮಾಂಡಿಂಗ್ ಅಧಿಕಾರಿ ಆರ್.ಕೆ.ಉಪಾಧ್ಯಾಯ ಅವರು ಸೇರಿದಂತೆ ಇಪ್ಪತೈದು ಮಂದಿ ಯೋಧರಿದ್ದು, ಇವರು ಭೂಕುಸಿತ, ಪ್ರವಾಹ, ಕಟ್ಟಡ ಕುಸಿತ, ಪ್ರವಾಹ ಅಪಘಾತಗಳು ಮತ್ತಿತರ ಅವಘಡಗಳು ಸಂಭವಿಸಿದ್ದಲ್ಲಿ ತಕ್ಷಣವೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಚಟುವಟಿಕೆ ನಡೆಸಲಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಮಳೆಗಾಲದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮಂಗಳವಾರ 15.7 ಮಿ.ಮೀ ಮಳೆಯಾಗಿತ್ತು.












Click it and Unblock the Notifications