ಕೊಡಗಿನಲ್ಲಿ ಮುಂಗಾರು ಶುರುವಾಯ್ತು, ಸಜ್ಜಾದ ಜಿಲ್ಲಾಡಳಿತ
ಮಡಿಕೇರಿ, ಜೂನ್ 03: ಕೊಡಗಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆಯಾಗುತ್ತಿದ್ದು, ಮುಂಗಾರು ಆರಂಭದ ಲಕ್ಷಣ ಕಂಡು ಬರುತ್ತಿದೆ. ಮೊದಲೆಲ್ಲ ಮೇ ಕೊನೆಯ ವಾರ ಅಥವಾ ಜೂನ್ ತಿಂಗಳ ಮೊದಲ ವಾರದಿಂದ ಮುಂಗಾರು ಆರಂಭವಾಗುತ್ತಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಮುಂಗಾರು ತಡವಾಗಿ ಆರಂಭವಾಗಿ ಸಕಾಲದಲ್ಲಿ ಮಳೆ ಸುರಿಯದೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಅನಾಹುತವನ್ನು ಸೃಷ್ಟಿ ಮಾಡುವುದು ಮಾಮೂಲಿಯಾಗಿದೆ.
ಆದರೆ ಮಳೆ ಆರಂಭವಾಗಿರುವುದು ಮಳೆಗಾಲದ ಅನಾಹುತದ ನೆನಪನ್ನೂ ಮತ್ತೆ ತಂದಿದೆ. 2018ರ ಮಳೆಗಾಲದಲ್ಲಿ ಸಂಭವಿಸಿದ ಭೂಕುಸಿತ ಕೊಡಗು ತಲ್ಲಣವಾಗುವಂತೆ ಮಾಡಿತ್ತು. ತದ ನಂತರ 2019ರಲ್ಲಿ ಕೂಡ ಮಳೆಗಾಲದಲ್ಲಿ ಕೆಲವೆಡೆ ಭೂಕುಸಿತ, ಪ್ರವಾಹ ಸಂಭವಿಸಿ ಸಂಕಷ್ಟಕ್ಕೆ ತಳ್ಳಿತ್ತು. ಕಾವೇರಿ ನದಿಯಲ್ಲಿ ಮೇಲಿಂದ ಮೇಲೆ ಪ್ರವಾಹ ಬಂದಿತ್ತಲ್ಲದೆ, ನೂರಾರು ಎಕರೆ ಪ್ರದೇಶ ಜಲಾವೃತಗೊಂಡಿತ್ತು. ಈಗ ಮಳೆಯಾಗುತ್ತಿರುವುದರಿಂದ ಮತ್ತೆ ಅವೆಲ್ಲವೂ ಇಲ್ಲಿನ ಜನರಲ್ಲಿ ನೆನಪಾಗುತ್ತಿವೆ...
Recommended Video

ಜನರಲ್ಲಿ ಅನಾಹುತದ ಭೀತಿ
ಕಳೆದ ಎರಡು ವರ್ಷಗಳಿಂದಲೂ ಕೊಡಗಿನಲ್ಲಿ, ಮಳೆಗಾಲದಲ್ಲಿ ಆಸ್ತಿ ಪಾಸ್ತಿ ನಷ್ಟ, ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಭೂ ಕುಸಿತ, ಪ್ರವಾಹದ ಭೀತಿಯಿಂದ ಜನರು ಇನ್ನೂ ಹೊರಬಂದಿಲ್ಲ. ಇದೀಗ ಮುಂಗಾರು ಆರಂಭವಾಗುತ್ತಿದ್ದು, ಈ ಬಾರಿಯ ಮಳೆಗಾಲ ಇನ್ಯಾವ ರೀತಿಯ ಅನಾಹುತವನ್ನು ಸೃಷ್ಟಿ ಮಾಡಿಬಿಡುತ್ತದೆಯೋ ಎಂಬ ಭಯವಂತೂ ಜನರಲ್ಲಿ ಇದ್ದೇ ಇದೆ.

2018ರ ದುರಂತದಿಂದ ಹೊರಬಂದಿಲ್ಲ
ಒಂದೆಡೆ ನಿಸರ್ಗ ಚಂಡಮಾರುತದ ಭಯ, ಮತ್ತೊಂದೆಡೆ ಮುಂಗಾರು ಕೇರಳಕ್ಕೆ ಕಾಲಿಟ್ಟಿರುವುದರಿಂದ ಮಳೆಗಾಲ ಜಿಲ್ಲೆಯಲ್ಲಿ ಆರಂಭವಾದಂತೆ ಗೋಚರವಾಗುತ್ತಿದೆ. ಈ ಬಾರಿ ಜಿಲ್ಲೆಯ ಜನತೆ ಕೂಡ ಕೊರೊನಾದ ಗುಂಗಿನಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಿರುವ ಕಾರಣದಿಂದ ಮಳೆಗಾಲಕ್ಕೆ ಸಜ್ಜಾದಂತೆ ಕಂಡು ಬರುತ್ತಿಲ್ಲ. ಹಿಂದೆಯೆಲ್ಲ ಹೀಗಿರಲಿಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಜಿಲ್ಲೆಯ ಜನರು ಸರ್ವ ರೀತಿಯಲ್ಲಿ ಸಜ್ಜಾಗಿ ಬಿಡುತ್ತಿದ್ದರು.
ಜೊತೆಗೆ ಜನ ಇನ್ನೂ 2018ರ ದುರಂತದ ಹೊಡೆತದಿಂದ ಹೊರಬಂದಿಲ್ಲ. ಭೂಕುಸಿತದಿಂದಾಗಿ ಮಣ್ಣು ನೀರಿನೊಂದಿಗೆ ಹರಿದು ಹೋಗಿದ್ದು, ಸಮತಟ್ಟು ಜಾಗದಲ್ಲಿ ನಿಂತಿದೆ. ಕೆಲವು ತೊರೆ, ನದಿಗಳಲ್ಲಿ ಮಣ್ಣು ತುಂಬಿ ಹರಿವಿನ ವಿಸ್ತಾರ ಕಿರಿದಾಗಿದೆ. ಇದರಿಂದಾಗಿ ಚಿಕ್ಕದಾಗಿ ಮಳೆ ಸುರಿದು ನೀರು ಹರಿದು ಬಂದರೂ ರಸ್ತೆ, ತೋಟಗಳು ಜಲಾವೃತವಾಗಿದ್ದು, ಮುಂದೆ ಮಳೆಗಾಲದಲ್ಲಿ ಸಾಕಷ್ಟು ಹಾನಿಯಾದರೂ ಅಚ್ಚರಿಪಡಬೇಕಾಗಿಲ್ಲ.

ಹಾರಂಗಿ ಜಲಾಶಯ ಸೇರಿದ ಮಣ್ಣು
ಈಗಾಗಲೇ ಭೂಕುಸಿತದಿಂದಾಗಿ ಮಣ್ಣೆಲ್ಲವೂ ಕೊಚ್ಚಿಕೊಂಡು ಹೋಗಿ ಹಾರಂಗಿ ಜಲಾಶಯವನ್ನು ಸೇರಿದ್ದು ಇದರಿಂದ ಹೂಳು ತುಂಬಿದೆ. ಈ ಬಾರಿ ಬಹುಬೇಗ ಜಲಾಶಯ ಭರ್ತಿಯಾದರೂ ನೀರಿನ ಸಂಗ್ರಹ ಹೆಚ್ಚಿನ ಪ್ರಮಾಣದಲ್ಲಿ ಆಗುವುದು ಕಷ್ಟಸಾಧ್ಯವೇ. ಈ ಬಾರಿ ಜಿಲ್ಲಾಡಳಿತ ಮಳೆಗಾಲದಲ್ಲಿ ಕೊಡಗಿನಲ್ಲಿ ಸಂಭವಿಸಬಹುದಾದ ಅನಾಹುತವನ್ನು ಸಮರ್ಥವಾಗಿ ನಿಭಾಯಿಸಲು ಸಜ್ಜಾಗಿದ್ದು, ಈಗಾಗಲೇ ಎನ್ಡಿಆರ್ ಎಫ್ ತಂಡದ ಹತ್ತನೇ ಬೆಟಾಲಿಯನ್ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಿಂದ ಆಗಮಿಸಿದೆ. ಈ ತಂಡವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅನನ್ಯ ವಾಸುದೇವ ಅವರು ನಗರದ ಪೊಲೀಸ್ ಮೈತ್ರಿ ಭವನದಲ್ಲಿ ಬರ ಮಾಡಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಸನ್ನದ್ಧಗೊಂಡ ಎನ್ಡಿಆರ್ ಎಫ್
ಎನ್ಡಿಆರ್ ಎಫ್ ತಂಡದಲ್ಲಿ ಕಮಾಂಡಿಂಗ್ ಅಧಿಕಾರಿ ಆರ್.ಕೆ.ಉಪಾಧ್ಯಾಯ ಅವರು ಸೇರಿದಂತೆ ಇಪ್ಪತೈದು ಮಂದಿ ಯೋಧರಿದ್ದು, ಇವರು ಭೂಕುಸಿತ, ಪ್ರವಾಹ, ಕಟ್ಟಡ ಕುಸಿತ, ಪ್ರವಾಹ ಅಪಘಾತಗಳು ಮತ್ತಿತರ ಅವಘಡಗಳು ಸಂಭವಿಸಿದ್ದಲ್ಲಿ ತಕ್ಷಣವೇ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಚಟುವಟಿಕೆ ನಡೆಸಲಿದ್ದಾರೆ. ಈಗಾಗಲೇ ಜಿಲ್ಲೆಯಾದ್ಯಂತ ಮಳೆಗಾಲದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ. ಒಟ್ಟಾರೆ ಜಿಲ್ಲೆಯಲ್ಲಿ ಮಂಗಳವಾರ 15.7 ಮಿ.ಮೀ ಮಳೆಯಾಗಿತ್ತು.
-
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ












Click it and Unblock the Notifications