ಕೊಡಗು-ಕೇರಳ ನಡುವಿನ ಸಂಚಾರಕ್ಕೆ ಮಾರ್ಗಸೂಚಿಗಳು
ಮಡಿಕೇರಿ, ಮೇ 07 : ಕರ್ನಾಟಕದಲ್ಲಿ ಲಾಕ್ ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಆದರೆ, ಅಂತರ ಜಿಲ್ಲೆ, ಅಂತರರಾಜ್ಯದ ನಡುವೆ ಸಂಚಾರ ನಡೆಸಲು ಪೊಲೀಸ್ ಇಲಾಖೆ ನೀಡುವ ಪಾಸ್ ಪಡೆಯುವುದು ಅನಿವಾರ್ಯ. ಗಡಿ ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇದೆ.
ಕರ್ನಾಟಕದ ಕೊಡಗು ಮತ್ತು ಕೇರಳ ಗಡಿಯನ್ನು ಹಂಚಿಕೊಂಡಿವೆ. ಗಡಿ ಪ್ರದೇಶದಲ್ಲಿ ಸಂಚಾರ ನಡೆಸುವುದು ಅಷ್ಟು ಸುಲಭವಲ್ಲ. ತುರ್ತು ವಾಹನ, ಅಗತ್ಯ ಸೇವೆಗಳ ವಾಹನಗಳಿಗೆ ವಿನಾಯಿತಿ ಇದೆ. ಆದರೆ, ಖಾಸಗಿ ವಾಹನಗಳಲ್ಲಿ ಸಂಚಾರ ನಡೆಸಬೇಕಾದರೆ ನಿಯಮ ಪಾಲಿಸಬೇಕು.
ಕೊಡಗು ಜಿಲ್ಲಾಡಳಿತ ಕೊಡಗು-ಕೇರಳ ನಡುವಿನ ಸಂಚಾರಕ್ಕೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕರ್ನಾಟಕದ ಪ್ರವೇಶ, ನಿರ್ಗಮನ ದ್ವಾರದ ಬಗ್ಗೆ ವಿವರಗಳನ್ನು ನೀಡಿದೆ. ಬೇರೆ ರಾಜ್ಯಕ್ಕೆ ಹೋಗ ಬೇಕಾದರೂ ಜನರು ಪಾಸ್ ಪಡೆಯುವುದು ಕಡ್ಡಾಯ.
ಕೊರೊನಾ ವೈರಸ್ ವಿಚಾರದಲ್ಲಿ ಕೊಡಗು ಜಿಲ್ಲೆ ಹಸಿರು ವಲಯದಲ್ಲಿದೆ. ಆದರೆ, ಪಕ್ಕದ ಮೈಸೂರು ಕೆಂಪು ವಲಯದಲ್ಲಿದೆ. ತುರ್ತು ಸಂದರ್ಭದಲ್ಲಿ ಮಾತ್ರ ಜನರು ಕೇರಳಕ್ಕೆ ಹೋಗಬೇಕು ಅಲ್ಲಿಂದ ಕರ್ನಾಟಕಕ್ಕೆ ಬರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಪಾಸು ಪಡೆಯುವುದು ಕಡ್ಡಾಯ
ಕೊಡಗು ಜಿಲ್ಲೆಯಿಂದ ಕೇರಳಕ್ಕೆ ಹೋಗಲು www.covid19jagratha.kerala.nic.in ವೆಬ್ ಸೈಟ್ ಮೂಲಕ ಪಾಸುಗಳನ್ನು ಪಡೆಯಬೇಕು. ಕೇರಳದಿಂದ ಕೊಡಗು ಜಿಲ್ಲೆಗೆ ಬರಲು www.sevasindhu.karnataka.gov.in ಮೂಲಕ ಪಾಸು ಪಡೆಯಬೇಕು. ಕೊಡಗು ಜಿಲ್ಲೆಯ ನಿವಾಸಿಗಳು ಎಂದು ಅಧಿಕೃತ ದಾಖಲೆ ಸಲ್ಲಿಸಬೇಕು.

ಕರ್ನಾಟಕದಿಂದ ನಿರ್ಗಮನ ದ್ವಾರಗಳು
ಪಾಸುಗಳನ್ನು ಪಡೆದ ಮೇಲೆ ಕೇರಳಕ್ಕೆ ಹೋಗಲು ಕೊಡಗಿನಿಂದ ವಯನಾಡು ಜಿಲ್ಲೆಯ ಮುತ್ತಂಗ ಚೆಕ್ ಪೋಸ್ಟ್, ಕಾಸರಗೋಡು ಜಿಲ್ಲೆಯ ಮಂಜೇಶ್ವರ ಚೆಕ್ ಪೋಸ್ಟ್ ಬಳಕೆ ಮಾಡಬೇಕು.
ಕೊಡಗು ಜಿಲ್ಲೆಯಿಂದ ನಿರ್ಗಮಿಸಲು ಕೊಪ್ಪ ಚೆಕ್ ಪೋಸ್ಟ್ (ಮೈಸೂರು ಸರಹದ್ದು), ಸಂಪಾಜೆ ಚೆಕ್ ಪೋಸ್ಟ್ (ದಕ್ಷಿಣ ಕನ್ನಡ ಸರಹದ್ದು), ಶಿರಂಗಾಲ ಚೆಕ್ ಪೋಸ್ಟ್ (ಹಾಸನ ಸರಹದ್ದು) ಬಳಕೆ ಮಾಡಬಹುದು.

ಕರ್ನಾಟಕ ಪ್ರವೇಶ ಮಾಡಲು
ಕೇರಳದಿಂದ ಆಗಮಿಸುವ ವಾಹನಗಳು ಕರ್ನಾಟಕವನ್ನು ಪ್ರವೇಶಿಸಲು ಮೈಸೂರು ಜಿಲ್ಲೆಯ ಬಾವಲಿ ಚೆಕ್ ಪೋಸ್ಟ್, ಚಾಮರಾಜನಗರದ ಮೂಲೆ ಹೊಳೆ ಚೆಕ್ ಪೋಸ್ಟ್, ಚಾಮರಾಜನಗರದ ಪುಣಜನೂರು ಚೆಕ್ ಪೋಸ್ಟ್, ದಕ್ಷಿಣ ಕನ್ನಡದ ತಲಪ್ಪಾಡಿ ಚೆಕ್ ಪೋಸ್ಟ್, ದಕ್ಷಿಣ ಕನ್ನಡದ ಜಾಲ್ವೂರು ಚೆಕ್ ಪೋಸ್ಟ್ ಬಳಕೆ ಮಾಡಬಹುದು.

ಕೊಡಗು ಜಿಲ್ಲೆಗೆ ಪ್ರವೇಶ
ಕೇರಳದಿಂದ ಕೊಡಗು ಪ್ರವೇಶ ಮಾಡುವ ವಾಹನಗಳು ಕೊಪ್ಪ ಚೆಕ್ ಪೋಸ್ಟ್ (ಮೈಸೂರು ಜಿಲ್ಲೆಯ ಸರಹದ್ದು, ಸಂಪಾಜೆ ಚೆಕ್ ಪೋಸ್ಟ್ ದಕ್ಷಿಣ ಕನ್ನಡ ಜಿಲ್ಲೆಯ ಸರಹದ್ದನ್ನು ಬಳಕೆ ಮಾಡಬಹುದಾಗಿದೆ.












Click it and Unblock the Notifications