ಕೋವಿಡ್ ಕೇರ್ ಸೆಂಟರ್ ಆರಂಭಿಸಿದ ಗೋಣಿಕೊಪ್ಪದ ಲೋಪಮುದ್ರಾ ಆಸ್ಪತ್ರೆ
ಮಡಿಕೇರಿ, ಮೇ 17: ರಾಜ್ಯದಲ್ಲಿ ದಿನೇ ದಿನೇ ಉಲ್ಪಣಗೊಳ್ಳುತ್ತಿರುವ ಕೋವಿಡ್ ಎರಡನೇ ಅಲೆಯ ತೀವ್ರತೆಗೆ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಲಕ್ಷಾಂತರ ಜನರು ಆಸ್ಪತ್ರೆಗಳ ಲಕ್ಷಗಟ್ಟಲೆ ಬಿಲ್ ಭರಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ದುಬಾರಿ ಬಿಲ್ ಭರಿಸಲಾಗದೇ ಈಗಲೂ ಒದ್ದಾಡುತಿದ್ದಾರೆ.
ಈ ಸಂದಿಗ್ಧ ಸಮಯದಲ್ಲಿ ಸಾಧ್ಯವಾದಷ್ಟೂ ಗುಂಜಿಕೊಳ್ಳೋಣ ಎಂದು ನೂರಾರು ಖಾಸಗಿ ಆಸ್ಪತ್ರೆಗಳು ಸುಲಿಗೆಗೆ ನಿಂತುಬಿಟ್ಟಿವೆ. ಆದರೆ ಕೊಡಗಿನ ಗೋಣಿಕೊಪ್ಪಲಿನಲ್ಲಿರುವ ಲೋಪಮುದ್ರಾ ಆಸ್ಪತ್ರೆಯ ಮಾಲೀಕ ವರ್ಗ ಮಾತ್ರ ಈ ಆಪತ್ತಿನ ಸಮಯದಲ್ಲಿ ಜನರ ಸೇವೆಗೆ ನಿಂತಿದ್ದು, ಆಸ್ಪತ್ರೆಯ ಮೂರನೇ ಮಹಡಿಯನ್ನು ಸಂಪೂರ್ಣ ಕೋವಿಡ್ ಕೇರ್ಸೆಂಟರ್ ಆಗಿ ಪರಿವರ್ತಿಸಿ ಇತರ ಆಸ್ಪತ್ರೆಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.
ಶನಿವಾರ ಈ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು, ಈ ಕೋವಿಡ್ ಕೇರ್ಸೆಂಟರ್ನ್ನು ಉದ್ಘಾಟಿಸಿದ್ದು, ಆಸ್ಪತ್ರೆಯ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿದ್ದಾರೆ. ಲೋಪಮುದ್ರಾ ಮೆಡಿಕಲ್ ಸೆಂಟರ್ನ ಮೂರನೇ ಮಹಡಿಯಲ್ಲಿ ಸುಮಾರು ಮೂವತ್ತು ಬೆಡ್ಗಳ ವ್ಯವಸ್ಥೆಯೊಂದಿಗೆ ಕೇರ್ಸೆಂಟರ್ ಪ್ರಾರಂಭಿಸಿದ್ದು, ದಕ್ಷಿಣ ಕೊಡಗಿನ ಕೋವಿಡ್ ರೋಗಿಗಳ ಚಿಕಿತ್ಸೆಗೆ ಅನುಕೂಲ ಕಲ್ಪಿಸಲಾಗುತ್ತಿದೆ.

ಕೊಡಗು ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ
ನಿಯಮ ಬದ್ಧವಾಗಿ ವ್ಯವಸ್ಥಿತ ರೂಪುರೇಷೆಗಳೊಂದಿಗೆ ಕೋವಿಡ್ ಕೇರ್ ಸೆಂಟರ್ ತೆರೆಯಲ್ಪಟ್ಟಿದ್ದು, ರೋಗಿಗಳ ತುರ್ತು ಚಿಕಿತ್ಸೆಗೆ ಬೇಕಾದ ವ್ಯವಸ್ಥಿತ ವೈದ್ಯಕೀಯ ಉಪಕರಣಗಳ ಅಳವಡಿಕೆಯನ್ನೂ ಮಾಡಲಾಗಿದೆ.
ಕೊಡಗು ಜಿಲ್ಲಾಧಿಕಾರಿ ಚಾರುಲತ ಸೋಮಲ್, ಆರೋಗ್ಯ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿ ಡಾ.ಮೋಹನ್ ಹಾಗೂ ತಾಲ್ಲೂಕು ವೈದ್ಯಾಧಿಕಾರಿ ಡಾ.ಯತಿರಾಜ್, ಲೋಪಮುದ್ರಾ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್ ಕೇರ್ ಸೆಂಟರ್ ಸ್ಥಳವನ್ನು ಪರಿಶೀಲನೆ ನಡೆಸಿ, ಖಾಸಗಿ ಆಸ್ಪತ್ರೆಯ ಸಾಮಾಜಿಕ ಬದ್ಧತೆಯನ್ನು ಶ್ಲಾಘಿಸಿದ್ದಾರೆ.

ಸಾಮಾನ್ಯ ಚಿಕಿತ್ಸೆಗಳಿಗೆ ಸಮಸ್ಯೆ ಆಗದಂತೆ ವ್ಯವಸ್ಥೆ
ಲೋಪಮುದ್ರಾ ಆಸ್ಪತ್ರೆಯ ಮೂರನೇ ಮಹಡಿಯಲ್ಲಿ ಪ್ರಾರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಬದಲಿ ಮಾರ್ಗದ ವ್ಯವಸ್ಥೆಯನ್ನು ರೂಪಿಸಲಾಗಿದೆ. ಆಸ್ಪತ್ರೆಯಲ್ಲಿ ಈ ಹಿಂದೆ ನಡೆಯುತ್ತಿದ್ದ ಎಲ್ಲಾ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆಗಳನ್ನು ಕೋವಿಡ್ ನಿಯಮಪಾಲನೆ ಅನುಸಾರವಾಗಿ ರೋಗಿಗಳಿಗೆ ದೊರಕಲಿದೆ. ಕೋವಿಡ್ ಕೇರ್ ಸೆಂಟರ್ ಪ್ರವೇಶಿಸಲು ಆಸ್ಪತ್ರೆಯ ಸಮೀಪದ ರಸ್ತೆಯನ್ನು ಬಳಸಲಾಗುತ್ತಿದ್ದು, ಲೋಪಮುದ್ರಾದ ಇತರೆ ಸಾಮಾನ್ಯ ಚಿಕಿತ್ಸೆಗಳಿಗೆ ಸಮಸ್ಯೆ ಆಗದಂತೆ ವ್ಯವಸ್ಥಿತವಾಗಿ ಕೋವಿಡ್ ಸೆಂಟರ್ ಅನ್ನು ನಿಭಾಯಿಸಲಾಗುತ್ತಿದೆ.

ಜನರ ಕೋವಿಡ್ ಸಂಕಷ್ಟ ಪರಿಹರಿಸಲು ಈ ನಿರ್ಧಾರ
ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಲೋಪಮುದ್ರಾ ಆಸ್ಪತ್ರೆಯ ಮುಖ್ಯಸ್ಥ ಡಾ.ಅಮೃತ್ ನಾಣಯ್ಯ, ನಿರ್ದೇಶಕಿ ಡಾ.ಸೌಮ್ಯ ಗಣೇಶ್ ನಾಣಯ್ಯ ಹಾಗೂ ಪಾಲಿಬೆಟ್ಟ ಚೆಷೈರ್ ಹೋಂ ಅಧ್ಯಕ್ಷೆ ಚೆಪ್ಪುಡೀರ ಗೀತಾ ಚಂಗಪ್ಪ, ನಿವೃತ್ತ ಬ್ರಿಗೇಡಿಯರ್ ದೇವಯ್ಯ, ಜಮ್ಮಡ ಗಣೇಶ್ಅಯ್ಯಣ್ಣ, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಕ್ಮಾಡ ರಾಜೀವ್ಬೋಪಯ್ಯ, ಕಲ್ಯಾಟಂಡ ಗೌತಮ್, ಕೊಕ್ಕಂಡ ಪವನ್ಅಯ್ಯಪ್ಪ ಸೇರಿದಂತೆ ಹಲವರ ಸಹಕಾರ ಕಾರಣವಾಗಿದೆ.
ಜನರ ಕೋವಿಡ್ ಸಂಕಷ್ಟವನ್ನು ಪರಿಹರಿಸಲು ಲೋಪಮುದ್ರಾ ಕೋವಿಡ್ ಕೇರ್ ಸೆಂಟರ್ ವಿಶೇಷವಾಗಿ ಖಾಸಗಿ ಆಸ್ಪತ್ರೆಯ ಬಗ್ಗೆ ಜನರಲ್ಲಿರುವ ನಕರಾತ್ಮಕ ಭಾವನೆಯನ್ನು ತೊಲಗಿಸಲು ಮತ್ತು ಖಾಸಗಿ ಆಸ್ಪತ್ರೆಗಳು ಬಂಡವಾಳಶಾಹಿಯ ಬಾಹುಗಳು ಎಂಬ ಕಳಂಕವನ್ನು ತೊಡೆದು ಮೆಟ್ಟಿನಿಲ್ಲುವ ಪ್ರಯತ್ನಕ್ಕೆ ಮುಂದಾಗಿದೆ.
Recommended Video

ಆಸ್ಪತ್ರೆಯ ಸಮಾಜ ಸೇವೆಗೆ ಜನಮೆಚ್ಚುಗೆ ಗಳಿಸಿದೆ
ಈ ಬಗ್ಗೆ ಮಾತನಾಡಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಯತಿರಾಜ್ ಅವರು, ಲೋಪಮುದ್ರಾ ಮೆಡಿಕಲ್ ಸೆಂಟರ್ ನಂತೆ ಇತರೆ ಖಾಸಗಿ ಆಸ್ಪತ್ರೆಗಳು ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಮುಂದಾದರೆ ಜನರಿಗೆ ಅನುಕೂಲ ಲಭಿಸಲಿದೆ. ಸರ್ಕಾರದ ಪ್ರಯತ್ನದೊಂದಿಗೆ ಖಾಸಗಿ ಆಸ್ಪತ್ರೆಗಳ ಸೇವೆಯು ಜನರಿಗೆ ಉತ್ತಮ ರೀತಿಯಲ್ಲಿ ಲಭ್ಯವಾಗಬೇಕಾಗಿದೆ. ಈಗಾಗಲೇ ಅಮ್ಮತ್ತಿಯ ಖಾಸಗಿ ಆಸ್ಪತ್ರೆಯ ಮುಖ್ಯಸ್ಥರು ಈ ಬಗ್ಗೆ ಆಸಕ್ತಿ ತೋರಿದ್ದು, ಮಾತುಕತೆ ನಡೆಸಿದ್ದಾರೆ. ಇದೇ ರೀತಿಯಲ್ಲಿ ಶ್ರೀಮಂಗಲದಲ್ಲೂ ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾದರೆ ದಕ್ಷಿಣ ಕೊಡಗಿನ ಜನರಿಗೆ ಸರ್ಕಾರ ಆರೋಗ್ಯ ಕೇಂದ್ರಗಳ ಸೌಲಭ್ಯಗಳ ಜತೆಗೆ ಖಾಸಗಿ ಸಂಸ್ಥೆಯ ಉಚಿತ ಸೇವೆಯೂ ಲಭಿಸುತ್ತದೆ ಎಂದು ಹೇಳಿದರು. ಬೆಡ್ ಹಾಕಲು ಜಾಗ ಸಿಕ್ಕಿದರೆ ಸಾಕು ಲೂಟಿ ಮಾಡೋದು ಹೇಗೆ ಎಂದು ಚಿಂತಿಸುವ ಖಾಸಗಿ ಆಸ್ಪತ್ರೆಗಳಿರುವ ಈ ಕಾಲದಲ್ಲಿ ಲೋಪಮುದ್ರಾ ಆಸ್ಪತ್ರೆ ಸಮಾಜ ಸೇವೆಗೆ ಮುಂದಾಗಿರುವುದು ಜನಮೆಚ್ಚುಗೆ ಗಳಿಸಿದೆ.












Click it and Unblock the Notifications