ಮಡಿಕೇರಿಯಲ್ಲಿ ಕಾಫಿ ದಾಸ್ತಾನು ಯೋಜನೆ ಆರಂಭ
ಮಡಿಕೇರಿ, ಏಪ್ರಿಲ್ 09: ಕೊಡಗು ಜಿಲ್ಲೆಯ ಬೆಳೆಗಾರರು ತಾವು ಬೆಳೆದಿರುವ ಕಾಫಿಯನ್ನು ಮಾರಾಟ ಮಾಡಲಾಗದೆ ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವ ಉದ್ದೇಶದಿಂದ ಕೊಡಗು ಜಿಲ್ಲಾ ಕಾಫಿ ಬೆಳೆಗಾರರ ಸಹಕಾರ ಸಂಘವು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹಯೋಗದಲ್ಲಿ ಕಾಫಿ ದಾಸ್ತಾನು ಯೋಜನೆಯನ್ನು ಆರಂಭಿಸಿದೆ.
Recommended Video
ಮಡಿಕೇರಿ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಎಂ.ಬಿ.ದೇವಯ್ಯ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದ ಸಭೆಯಲ್ಲಿ ಈ ಯೋಜನೆ ಆರಂಭಿಸುವ ಕುರಿತು ಪ್ರಸ್ತಾಪವಾಗಿದ್ದು, ಅದರಂತೆ ಸಂಘದಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಂದ ಒಂದು ಕೋಟಿ ರೂ. ಸಾಲ ಪಡೆಯಲು ನಿರ್ಧರಿಸಲಾಗಿದೆ ಎಂದರು.
ಅಲ್ಲದೆ ಕಾಫಿ ದಾಸ್ತಾನು ಯೋಜನೆಯನ್ನು ಪಾರದರ್ಶಕವಾಗಿ ನಡೆಸುವ ದೃಷ್ಟಿಯಿಂದ ಸಂಘ ಹಾಗೂ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಜಂಟಿ ಸುಪರ್ದಿಯಲ್ಲಿ ಇರಿಸುವಂತೆ ತೀರ್ಮಾನಿಸಲಾಗಿದೆ ಎಂದು ಹೇಳಿದರು. ಹಾಲಿ ಯೋಜನೆಯಡಿ ಸಂಘವು ಬೆಳೆಗಾರರಿಂದ ಚೀಲ ಒಂದಕ್ಕೆ 1000 ರೂ. ಮುಂಗಡ ಹಣ ನೀಡಿ, ಕಾಫಿಯನ್ನು ದಾಸ್ತಾನು ಮಾಡಿಕೊಳ್ಳಲಿದೆ ಎಂದು ಹೇಳಿದರು.

ಒಬ್ಬ ಬೆಳೆಗಾರನಿಂದ ಗರಿಷ್ಠ 2 ಲಕ್ಷ ರೂ. ಮೊತ್ತದ ಕಾಫಿಯನ್ನು ಮಾತ್ರ ದಾಸ್ತಾನು ಮಾಡಿಕೊಳ್ಳಲಿದೆ. ಈ ಕಾಫಿಯನ್ನು ಬೆಳೆಗಾರರು ತಮಗೆ ಸೂಕ್ತವಾದ ಸಂದರ್ಭದಲ್ಲಿ ಮಾರಾಟ ಮಾಡಿ ಸಂಘಕ್ಕೆ ಹಣವನ್ನು ಮರು ಪಾವತಿಸಬಹುದಾಗಿದೆ. ಅಲ್ಲದೆ ಸಂಘದ ಸಂಸ್ಕರಣಾ ಘಟಕದಲ್ಲಿಯೇ ಕಾಫಿಯನ್ನು ಸಂಸ್ಕರಣೆ ಮಾಡುವುದಿದ್ದಲ್ಲಿ ಅವರ ಕಾಫಿಯನ್ನು ಮೂರು ತಿಂಗಳವರೆಗೆ ಯಾವುದೇ ಬಾಡಿಗೆ ಇಲ್ಲದೆ ಇರಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಇದೀಗ ಗೋದಾಮಿನ ಕೊರತೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಘವು ಮಡಿಕೇರಿ ಹಾಗೂ ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರಾಟ ಸಮಿತಿಗಳ ಗೋದಾಮುಗಳನ್ನು ಉಚಿತವಾಗಿ ನೀಡುವಂತೆ ಕೋರಿದ್ದು, ಇದಕ್ಕೆ ಸ್ಪಂದನೆ ದೊರಕಿದರೆ ಸಂಘವು ಕಾಫಿ ಶೇಖರಣೆಗೆ ತ್ವರಿತವಾಗಿ ಕ್ರಮ ಕೈಗೊಳ್ಳಲಿದೆ ಎಂದು ದೇವಯ್ಯ ಹೇಳಿದರು.












Click it and Unblock the Notifications