ಗಜಗಿರಿ ಬೆಟ್ಟ ಭೂಕುಸಿತ ಪ್ರದೇಶ ಪರಿಶೀಲಿಸಿದ ಕೇಂದ್ರ ತಂಡ
ಮಡಿಕೇರಿ, ಸೆಪ್ಟೆಂಬರ್ 9: ಕೊಡಗು ಜಿಲ್ಲೆಗೆ ನಿನ್ನೆ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳು ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ವಸ್ತು ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು. ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಅವರ ನೇತೃತ್ವದ ತಂಡ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾನಿಯಾದ ಸ್ಥಳಗಳ ಭೇಟಿಯ ಸಂದರ್ಭ ಕೇಂದ್ರ ತಂಡಕ್ಕೆ ಅಗತ್ಯ ಮಾಹಿತಿ ಒದಗಿಸುವುದರೊಂದಿಗೆ ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ತಂಡಕ್ಕೆ ಮನವರಿಕೆ ಮಾಡಿದರು. ಕಡಿದಾದ ಮತ್ತು ವಾಹನ ಸಂಚರಿಸದ ಪ್ರದೇಶಗಳಲ್ಲಿ ಉಂಟಾದ ಬೆಳೆ ಹಾನಿಯನ್ನು ಕೇಂದ್ರ ತಂಡದ ಅಧಿಕಾರಿಗಳು ವೀಕ್ಷಿಸಿದರು.

ಸ್ಥಳೀಯರಿಂದಲೂ ಮಾಹಿತಿ ಪಡೆದ ಅಧಿಕಾರಿಗಳು
ಬೆಳೆ ಹಾನಿ ಮತ್ತಿತರ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಅಧಿಕಾರಿಗಳಿಂದ ಮಾತ್ರವಲ್ಲದೇ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ಜಮೀನಿನ ಮಾಲೀಕರು ಮತ್ತು ಗ್ರಾಮಸ್ಥರಿಂದ ಸೂಕ್ತ ಮಾಹಿತಿ ಪಡೆದರು. ಮೊದಲಿಗೆ ಮಡಿಕೇರಿ ತಾಲೂಕಿನ ಕಡಗದಾಳುವಿನ ಬೊಟ್ಲಪ್ಪ ಪೈಸಾರಿಗೆ ಭೇಟಿ ನೀಡಿದ ಕೇಂದ್ರ ತಂಡ ಅಲ್ಲಿನ ಭೂಕುಸಿತ ಪ್ರದೇಶ ಮತ್ತು ಬೆಳೆಹಾನಿ ಸ್ಥಳಗಳನ್ನು ಪರಿಶೀಲಿಸಿದರು. ಈ ಸಂದರ್ಭ ತೋಟದ ಮಾಲೀಕರಿಂದಲೇ ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆದರು.

ಕಾಫಿ, ಕಾಳುಮೆಣಸು ಬೆಳೆ ಹಾನಿ ವೀಕ್ಷಣೆ
ಬಳಿಕ ಭಾಗಮಂಡಲಕ್ಕೆ ತೆರಳಿದ ತಂಡವು ಅಲ್ಲಿನ ಭೂಕುಸಿತದಿಂದಾಗಿ ಕಾಫಿ ಮತ್ತು ಕಾಳುಮೆಣಸು ಬೆಳೆ ಹಾನಿಯಾದ ಸ್ಥಳವನ್ನು ವೀಕ್ಷಿಸಿದರು. ಅಲ್ಲದೆ ಬೆಳೆ ಹಾನಿ ಸಂಬಂಧ ಜಮೀನಿನ ಮಾಲೀಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳದಲ್ಲಿ ಮಾಹಿತಿ ಪಡೆದರು. ನಂತರ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಭೂಕುಸಿತ ಸ್ಥಳಕ್ಕೆ ತಂಡ ಭೇಟಿ ನೀಡಿತು. ಈ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಆಗಸ್ಟ್ ಮೊದಲ ವಾರದಲ್ಲಿದ್ದ ಪರಿಸ್ಥಿತಿಯನ್ನು ಛಾಯಾಚಿತ್ರದ ಮೂಲಕ ಕೇಂದ್ರ ತಂಡಕ್ಕೆ ವಿವರಿಸಿದರು.
ನಾರಾಯಣಾಚಾರ್ ಅವರ ಮನೆ ಇದ್ದ ಸ್ಥಳಕ್ಕೆ ತೆರಳಿ ಪರಿವೀಕ್ಷಣೆ ನಡೆಸಿ ಜಿಲ್ಲಾಧಿಕಾರಿಯವರಿಂದ ಘಟನೆ ನಡೆದ ದಿನಾಂಕ, ರಕ್ಷಣಾ ಕಾರ್ಯಾಚರಣೆ ಮತ್ತು ಮೃತದೇಹಗಳ ಪತ್ತೆ ಕಾರ್ಯಾಚರಣೆ ಸಂಬಂಧ ಮಾಹಿತಿ ಪಡೆದರು.

ಮಳೆಯಿಂದ ಹಾನಿಯಾದ ಶಾಲೆ ಪರಿಶೀಲನೆ
ಈ ಮಧ್ಯೆ ಭಾಗಮಂಡಲದ ಕೋರಂಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆಯಿಂದ ಸಂಪೂರ್ಣವಾಗಿ ಹಾನಿಯಾಗಿರುವ ಶಾಲಾ ಕಟ್ಟಡವನ್ನು ಕೇಂದ್ರ ತಂಡದ ಅಧಿಕಾರಿಗಳು ಪರಿಶೀಲಿಸಿದರು. ಕೋರಂಗಾಲದ ರಸ್ತೆ ಹಾನಿಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಜೊತೆಗೆ ಬಲ್ಲಮಾವಟಿ ಗ್ರಾ.ಪಂ.ವ್ಯಾಪ್ತಿಯ ದೊಡ್ಡ ಪುಲಿಕೋಟುವಿನ ಹಾನಿಯಾದ ಅಂಗನವಾಡಿ ಕಟ್ಟಡವನ್ನು ವೀಕ್ಷಣೆ ಮಾಡಿದರು.
ಈ ವೇಳೆ ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಪ್ರಭಾಕರನ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಉಂಟಾದ ಹಾನಿಯ ಬಗ್ಗೆ ಕೇಂದ್ರ ತಂಡದ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಒದಗಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು. ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ. ಇಒ ಇತರರು ಇದ್ದರು.
Recommended Video

ಇಡೀ ದಿನ ಜಿಲ್ಲೆಯಲ್ಲಿದ್ದ ಕೇಂದ್ರ ತಂಡ
ಕೇಂದ್ರ ತಂಡವು ಇಡೀ ದಿನ ಜಿಲ್ಲೆಯ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿತ್ತು. ಕೂಡಿಗೆಯ ಸೈನಿಕ ಶಾಲೆಯಲ್ಲಿ ಮಳೆಹಾನಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದ ಕೇಂದ್ರ ತಂಡ ಬಳಿಕ ಬೋಟ್ಲಪ್ಪ ಪೈಸಾರಿ ಭೂಕುಸಿತ ಪ್ರದೇಶ ವೀಕ್ಷಣೆ ಮಾಡಿತು. ತಲ ಕಾವೇರಿ ಬಳಿಯ ಗಜಗಿರಿ ಬೆಟ್ಟದಲ್ಲಿನ ಭೂಕುಸಿತ ಪ್ರದೇಶವನ್ನು ವೀಕ್ಷಣೆ ಮಾಡಿ, ನಾರಾಯಣಾಚಾರ್ ಅವರ ಮನೆ ಕೊಚ್ಚಿ ಹೋಗಿರುವ ಪ್ರದೇಶವನ್ನು ಜೋರು ಮಳೆಯ ನಡುವೆಯೂ ಕೇಂದ್ರ ತಂಡದ ಅಧಿಕಾರಿಗಳು ಪರಿಶೀಲಿಸಿದರು.
ದೊಡ್ಡಪುಲಿಕೋಟು ಬಳಿ ಮಳೆಯಿಂದ ಹಾನಿಯಾಗಿರುವ ಅಂಗನವಾಡಿ ವೀಕ್ಷಿಸಿದರು. ನಂತರ ಬೇಂಗೂರು ಪ್ರವಾಹದಿಂದ ಹಾನಿಯಾಗಿರುವ ಕಾಫಿ ಬೆಳೆಯನ್ನು ವೀಕ್ಷಿಸಿದರು.












Click it and Unblock the Notifications