ಮರುಕಳಿಸಲಿದೆಯೇ ಕಾವೇರಿ ಕಣಿವೆಯಲ್ಲಿ ಬರಗಾಲ ಪರ್ವ!
ಮಡಿಕೇರಿ, ಆಗಸ್ಟ್ 7: ಸಾಮಾನ್ಯವಾಗಿ ಕೊಡಗಿನಲ್ಲಿ ಜೂನ್ ನಿಂದ ಸೆಪ್ಟಂಬರ್ ಅವಧಿಯ ಕಾಲ ಮುಂಗಾರು ಮಳೆಯ ಕಾಲವಾಗಿದ್ದು, ಈಗಾಗಲೇ ಅರ್ಧಭಾಗ ಮುಗಿದಿದೆ. ಆದರೂ ವಾಡಿಕೆಯ ಮಳೆಯಾಗದಿರುವುದು ಮಡಿಕೇರಿ ಸೇರಿದಂತೆ ಕಾವೇರಿ ಕಣಿವೆಯ ಮೈಸೂರು, ಮಂಡ್ಯ ಜಿಲ್ಲೆಯ ಜನರೂ ಆತಂಕ ಪಡುವಂತಾಗಿದೆ.
ಕೊಡಗಿನಲ್ಲಿ ವಾಡಿಕೆಯ ಮಳೆ ಬಾರದ ಕಾರಣದಿಂದ ಭತ್ತದ ಕೃಷಿ ಕಾರ್ಯ ಮಂದಗತಿಯಲ್ಲಿ ಸಾಗಿದೆ. ಅಲ್ಲದೆ ನಿರೀಕ್ಷೆಯಷ್ಟು ಕೃಷಿಕಾರ್ಯ ನಡೆದಿಲ್ಲ ಎಂದು ಹೇಳಲಾಗುತ್ತಿದೆ. ಈ ನಡುವೆ ಹಾರಂಗಿ ಮತ್ತು ಚಿಕ್ಲಿಹೊಳೆ ಜಲಾಶಯ ಭರ್ತಿಯಾಗಿದೆಯಾದರೂ ಒಳ ಹರಿವಿನ ಪ್ರಮಾಣ ಕಡಿಮೆಯಿದೆ.
ಒಟ್ಟಾರೆ ಜನವರಿಯಿಂದ ಇಲ್ಲಿಯವರೆಗೆ 1334.25 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1302.75 .ಮೀ ಮಳೆಯಾಗಿತ್ತು. ಇನ್ನು ಹಾರಂಗಿ ಜಲಾಶಯದ ನೀರಿನ ಮಟ್ಟವನ್ನು ಗಮನಿಸಿದ್ದೇ ಆದರೆ 2,859 ಅಡಿಯ ಜಲಾಶಯದಲ್ಲಿ ಈಗ 2858.56 ಅಡಿಯಷ್ಟು ನೀರಿದೆ. ಸದ್ಯ ಜಲಾಶಯಕ್ಕೆ 6862 ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆಯಾದರೂ ನದಿಗೆ 5541 ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ.

ಹಾರಂಗಿಯಿಂದ ನಾಲೆಗಿಲ್ಲ ನೀರು
ಹಾರಂಗಿ ಜಲಾಶಯ ಭರ್ತಿಯಾಗಿದ್ದರೂ ಸರ್ಕಾರ ನಾಲೆಗೆ ಕೇವಲ 50 ಕ್ಯೂಸೆಕ್ ನೀರನ್ನು ಬಿಡುತ್ತಿದೆ. ಇದರಿಂದ ಯಾವುದೇ ಕೃಷಿ ಚಟುವಟಿಕೆ ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ. ಇಷ್ಟರಲ್ಲೇ ನಾಲೆಗೆ ನೀರು ಹರಿಸಿದ್ದರೆ ರೈತರು ಭತ್ತ ಇನ್ನಿತರ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತಿತ್ತು. ಆದರೆ ಸಕಾಲದಲ್ಲಿ ನೀರು ಹರಿಸದೆ ಯಾವಾಗಲೋ ನೀರು ಹರಿಸಿದರೆ ಏನು ಪ್ರಯೋಜನ ಎಂಬುದು ಇಲ್ಲಿನ ರೈತರ ಆಕ್ರೋಶ.

ಬೆಳೆ ಬೆಳೆಯುವುದಕ್ಕೂ ನೀರಿಲ್ಲ
ಹಾರಂಗಿ ನದಿ ನೀರನ್ನು ಆಶ್ರಯಿಸಿ ಬೆಳೆ ಬೆಳೆಯುವ ಜಿಲ್ಲೆಯ ಮತ್ತು ಗಡಿಭಾಗದ ರೈತರು ಜಲಾಶಯ ಭರ್ತಿಯಾಗಿದ್ದರಿಂದ ನೀರು ಹರಿಸಬಹುದೆಂದು ಖುಷಿಯಾಗಿದ್ದರು. ಆದರೆ ಇಲ್ಲಿಯವರೆಗೆ ನೀರು ಹರಿಸುವ ಲಕ್ಷಣಗಳು ಕಾಣದೆ ಇರುವುದರಿಂದ ರೈತರು ಬಿತ್ತನೆ ಭತ್ತದ ಸಸಿಗಳನ್ನು ತಯಾರಿಸಿಕೊಂಡಿದ್ದರೂ, ನಾಲೆಯಲ್ಲಿ ನೀರು ಬರದೆ ನಾಟಿ ಕಾರ್ಯಕ್ಕಾಗಿ ಕಾಯುವಂತಾಗಿದೆ. ಮೊದಲೆಲ್ಲ ಈ ವೇಳೆಗೆಲ್ಲ ನಾಲೆಗಳು ತುಂಬಿ ಹರಿಯುತ್ತಿತ್ತಾದರೂ ಈಗ ನೀರಿಲ್ಲದೆ ಖಾಲಿ ಖಾಲಿಯಾಗಿರುವುದು ಗೋಚರಿಸುತ್ತಿದೆ. ಜತೆಗೆ ನಾಲೆಯನ್ನು ದುರಸ್ತಿಗೊಳಿಸುವ ಕಾರ್ಯವೂ ನಡೆಯದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

90 ಅಡಿಗೇರಿದ ಕೆಆರ್ ಎಸ್ ನೀರು
ಇನ್ನೊಂದೆಡೆ ಕೊಡಗಿನಲ್ಲಿ ಸ್ವಲ್ಪ ಮಟ್ಟಿಗೆ ಮಳೆಯಾಗಿರುವುದರಿಂದ ಸದ್ಯ 90 ಅಡಿಗೆ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಹೆಚ್ಚಿರುವುದು ಕಂಡು ಬಂದಿದೆ. ಕಳೆದ ವರ್ಷ ಈ ಅವಧಿಯಲ್ಲಿ 97.19 ಅಡಿಯಷ್ಟು ನೀರು ಸಂಗ್ರಹವಾಗಿತ್ತು. ಜತೆಗೆ ಜುಲೈ ತಿಂಗಳಲ್ಲೇ ನಾಲೆಗಳಿಗೆ ಒಂದಷ್ಟು ನೀರನ್ನು ಹರಿಸಲಾಗಿತ್ತು. ಆದರೆ ಈ ಬಾರಿ ನದಿಗೆ ನೀರು ಬಿಡಲಾಗುತ್ತಿದೆಯಾದರೂ ನಾಲೆಗಳಿಗೆ ನೀರು ಹರಿಸುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದು ಆಕ್ರೋಶಕ್ಕೂ ಕಾರಣವಾಗಿದೆ. ಜತೆಗೆ ಒಂದು ತಿಂಗಳಿನಿಂದ ನಾಲೆಗೆ ನೀರು ಹರಿಸಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರೂ ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.

ಸರ್ವಪಕ್ಷ ಸಭೆ
ಮೂಲಗಳ ಪ್ರಕಾರ ಆ.14ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸರ್ವಪಕ್ಷಗಳ ಸಭೆಯಲ್ಲಿ ಬೆಳೆಗಳಿಗೆ ನೀರು ಹರಿಸಬೇಕೋ ಅಥವಾ ಕೇವಲ ಕೆರೆ-ಕಟ್ಟೆಗಳನ್ನು ತುಂಬಿಸಬೇಕೋ ಎಂಬುದರ ಬಗ್ಗೆ ತೀರ್ಮಾನವಾಗುವ ಸಾಧ್ಯತೆಯಿದೆ. ಒಂದು ವೇಳೆ ಇನ್ನುಳಿದ ದಿನಗಳಲ್ಲಿ ಕೊಡಗಿನಲ್ಲಿ ಮಳೆ ಸುರಿಯದೆ ಹೋದರೆ ಈ ವರ್ಷವೂ ಕಾವೇರಿ ಕಣಿವೆಯಲ್ಲಿ ಬರ ತಲೆದೋರಲಿದ್ದು ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ಇಲ್ಲದಿಲ್ಲ. ಮುಂದಿನ ದಿನಗಳಲ್ಲಿ ಸುರಿಯುವ ಮಳೆಯ ಮೇಲೆಯೇ ಎಲ್ಲವೂ ನಿಂತಿದೆ ಎಂದರೆ ತಪ್ಪಾಗಲಾರದು.












Click it and Unblock the Notifications