ಕಾವೇರಿ ತೀರ್ಥೋದ್ಭವ: ಅಕ್ಟೋಬರ್ 17&18 ಮದ್ಯ ಮಾರಾಟ ನಿಷೇಧ
ಮಡಿಕೇರಿ, ಅಕ್ಟೋಬರ್ 14: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿರುವ ತಲಕಾವೇರಿಯಲ್ಲಿ ಅಕ್ಟೋಬರ್ 17 ರಂದು ಐತಿಹಾಸಿಕ ಕಾವೇರಿ ತೀರ್ಥೋದ್ಭವ ಆಚರಣೆ ನಡೆಯಲಿದೆ.
ಪ್ರಸ್ತಕ 2022ನೇ ವರ್ಷದ ಶ್ರೀ ಕಾವೇರಿ ತುಲಾ ಸಂಕ್ರಮಣ ತಲಕಾವೇರಿ ದೇವಾಲಯ ವತಿಯಿಂದ ಪ್ರಸ್ತಕ 2022ನೇ ವರ್ಷದ 'ಶ್ರೀ ಕಾವೇರಿ ತುಲಾ ಸಂಕ್ರಮಣ ಮತ್ತು ಪವಿತ್ರ ತೀರ್ಥೋದ್ಭವ' ಜಾತ್ರೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಭಾಗಮಂಡಲದ ಶ್ರೀ ಭಗಂಡೇಶ್ವರ -ತಲಕಾವೇರಿ ದೇವಾಲಯ ಆಡಳಿಯ ಮಂಡಳಿ ಮಾಹಿತಿ ನೀಡಿದ್ದು, ಅದ್ಧೂರಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆಗಳು ಅಂತಿಮಗೊಳ್ಳುತ್ತಿದೆ.
Madikeri Dasara 2022: ಮಡಿಕೇರಿ ದಸರಾಕ್ಕೆ ಮೆರಗು ನೀಡುವ ದಶಮಂಟಪಗಳು...
'ಶ್ರೀ ಕಾವೇರಿ ತುಲಾ ಸಂಕ್ರಮಣ ಮತ್ತು ಪವಿತ್ರ ತೀರ್ಥೋದ್ಭವ' ಜಾತ್ರೆ ಹಿನ್ನೆಲೆಯಲ್ಲಿ ಅಕ್ಟೋಬರ್ 17 ಹಾಗೂ ಅಕ್ಟೋಬರ್ 18 ರಂದು ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಮದ್ಯ ಮಾರಾಟ ನಿಷೇಧದ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ, ಅಕ್ಟೋಬರ್ 17 ರಂದು ನಡೆಯಲಿರುವ ತಲಕಾವೇರಿ ಕಾವೇರಿ ತೀರ್ಥೋದ್ಭವ ಸಂಬಂಧ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965 ಕಲಂ 21 ರಲ್ಲಿ ದತ್ತವಾಗಿರುವ ಅಧಿಕಾರದಂತೆ ಅಕ್ಟೋಬರ್, 17 ರ ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್, 18 ರ ಮಧ್ಯ ರಾತ್ರಿ 12 ಗಂಟೆಯವರೆಗೆ ತಲಕಾವೇರಿ, ಭಾಗಮಂಡಲ ಪಟ್ಟಣ ಮತ್ತು ಚೇರಂಬಾಣೆ ಗ್ರಾಮದ ಸುತ್ತಮುತ್ತ 5 ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೋಟೆಲ್, ಕ್ಲಬ್ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಆದೇಶ ಹೊರಡಿಸಿದ್ದಾರೆ.
ಭಾಗಮಂಡಲ ದೇವಸ್ಥಾನದಲ್ಲಿ ಅಕ್ಟೋಬರ್ 17ರಂದು ಸೋಮವಾರ ಸಂಜೆ 7.21ಕ್ಕೆ ಮೀನಾ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವಾಗಲಿದ್ದು, ಐತಿಹಾಸಿಕ ಕಾವೇರಿ ತೀರ್ಥೋದ್ಭವಕ್ಕಾಗಿ ಭಕ್ತರು ಕಾತುರರಾಗಿದ್ದಾರೆ. ಜೀವನದಿಯ ದರ್ಶನವನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ಮೂಲೆಮೂಲೆಯಿಂದ ಲಕ್ಷಾಂತರ ಭಕ್ತರು ಭಾಗಿಯಾಗುವ ನಿರೀಕ್ಷಿಯಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಕಾವೇರಿ ತೀರ್ಥೋದ್ಭವ ಜಾತ್ರೆಯನ್ನು ಸರಳವಾಗಿ ಆಚರಿಸಲಾಗಿತ್ತು. ಹೀಗಾಗಿ ನೂರಾರು ಭಕ್ತರು ತೀರ್ಥೋದ್ಭವದಲ್ಲಿ ಭಾಗಿಯಾಗಲಾರದೇ ನಿರಾಸೆಗೊಂಡಿದ್ದರು. ಈ ಬಾರಿ ಕೊರೊನಾ ಸಮಸ್ಯೆ ಬಗೆಹರಿದ ಹಿನ್ನೆಲೆಯಲ್ಲಿ ಐತಿಹಾಸಿಕ ಕಾವೇರಿ ತೀರ್ಥೋದ್ಭವವನ್ನು ಅದ್ಧೂರಿಯಾಗಿ ನಡೆಸಲು ಆಡಳಿತ ಮಂಡಳಿ ನಿರ್ಧರಿಸಿದ್ದಾರೆ. ಈಗಾಗಲೇ ಅನೇಕ ಧಾರ್ಮಿಕ ಕಾರ್ಯಗಳು ಆರಂಭವಾಗಿದ್ದು ನಾಳೆ ಅಕ್ಟೋಬರ್ 15ರಂದು ಅಕ್ಷಯ ಪಾತ್ರೆ ಇರಿಸುವ ಕಾರ್ಯ ನಡೆಯಲಿದೆ. ಈಗಾಗಲೇ ಮಡಿಕೇರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.