ದುಬಾರೆಯಲ್ಲಿ ಕಾವೇರಿಗೆ ನದಿಗೆ ಜೀವಕಳೆ: ವಿಡಿಯೋ ವೈರಲ್
ಮಡಿಕೇರಿ, ಜೂನ್ 27: ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಮಲೆನಾಡು, ಕರಾವಳಿ ಭಾಗದಲ್ಲಿ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾವೇರಿ ನದಿ ಜೀವಕಳೆ ಪಡೆದಿದೆ. ನದಿ ಮೈದುಂಬಿ ಹರಿಯುತ್ತಿರುವ ನದಿಯ ಫೋಟೋ, ವಿಡಿಯೋ ವೈರಲ್ ಆಗಿದೆ.
ಕಳೆದ ಎರಡು ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಹಳ್ಳ, ನದಿ ಉಕ್ಕಿ ಹರಿಯುತ್ತಿದ್ದು, ಭಾಗಮಂಡಲ-ನಾಪೋಕ್ಲು ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಬೇಸಿಗೆಯಲ್ಲಿ ಹರಿವು ನಿಲ್ಲಿಸಿದ್ದ ಕಾವೇರಿ ನದಿಗೆ ಈಗ ಜೀವಕಳೆ ಬಂದಿದೆ.

2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೊಡಗು ಜಿಲ್ಲೆಯಲ್ಲಿ ಈವರೆಗೆ 557.2 ಮಿ. ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ. 15.7 ರಷ್ಟು ಕಡಿಮೆ ಮಳೆಯಾಗಿದೆ. ಆದರೆ ಈಗ ಸುರಿಯುತ್ತಿರುವ ಮಳೆ ಜನರಲ್ಲಿ ಭರವಸೆ ಮೂಡಿಸಿದೆ.
ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಹೆಚ್ಚುವ ಸೂಚನೆ ಇದೆ. ಭಾರತೀಯ ಹವಾಮಾನ ಇಲಾಖೆ ಜಿಲ್ಲೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಗುರುವಾರ ಮಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ದುಬಾರೆಯಲ್ಲಿ ಕಾವೇರಿ ಕಲರವ: ಕಾವೇರಿ ನದಿಯಿಂದ ಸೃಷ್ಟಿಯಾದ ದ್ವೀಪ ಪ್ರದೇಶ ದುಬಾರೆ. ಇಲ್ಲಿ ಸುತ್ತಲೂ ಹರಿಯುವ ಕಾವೇರಿ ನದಿ, ಮಳೆಗಾಲದಲ್ಲಿ ಅದರ ಅಬ್ಬರ ನೋಡುವುದೇ ಸಂತಸದ ಸಂಗತಿ. ಇಲ್ಲಿ ಆನೆಗಳ ಶಿಬಿರ ಇದ್ದು, ಕೊಡಗು ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳ ಪೈಕಿ ಪ್ರಾಕೃತಿಕ ಚೆಲುವನ್ನು ಹೊತ್ತಿರುವ ತಾಣವಿದು.
#ದುಬಾರೆಯಲ್ಲಿ_ಮೈದುಂಬಿ_ಹರಿಯುತ್ತಿರುವ_ಕಾವೇರಿ . pic.twitter.com/VvooP6JGCj
— Coorgthekashmirofkarnataka (@Coorgthekashmir) June 26, 2024
ಈ ಬಾರಿಯ ಬರದಿಂದಾಗಿ ಕಾವೇರಿ ನದಿ ಬತ್ತಿ ಹೋಗಿತ್ತು. ಹಿಂದೆ ದುಬಾರೆ ಸೌಂದರ್ಯವನ್ನು ನೋಡಿದವರು ಈ ವರ್ಷದ ಏಪ್ರಿಲ್, ಮೇ ತಿಂಗಳಿನಲ್ಲಿ ದುಬಾರೆಗೆ ಬಂದು ನಿರಾಸೆಗೊಂಡಿದ್ದರು. ಜುಳುಜುಳು ಹರಿಯುತ್ತಿದ್ದ ಕಾವೇರಿ ಹರಿವು ನಿಲ್ಲಿಸಿದ್ದಳು. ಕಾವೇರಿ ಸಂಪೂರ್ಣವಾಗಿ ಬತ್ತಿ ಹೋಗಿ, ಬಂಡೆಕಲ್ಲು ಕಾಣಿಸುತ್ತಿದ್ದವು.
ಬೇಸಿಗೆಯಲ್ಲಿ ಸಾಮಾನ್ಯವಾಗಿ ನದಿಯ ನೀರು ಸಂಪೂರ್ಣ ಕಡಿಮೆ ಆಗುತ್ತಿರಲಿಲ್ಲ. ದೋಣಿಗಳ ಸಂಚಾರ ಮಾಡುವಷ್ಟು ನೀರು ಇರುತ್ತಿತ್ತು. ಆದರೆ ಈ ಬಾರಿಯ ಬೇಸಿಗೆಯಲ್ಲಿ ದುಬಾರೆ ನೋಡಿದ್ದ ಜನರು ಸಂಕಟಪಟ್ಟಿದ್ದರು. 2003, 2007 ಮತ್ತು 2015ರಲ್ಲಿಯೂ ಕಾವೇರಿ ನದಿಯಲ್ಲಿ ನೀರು ಕ್ಷೀಣಿಸಿತ್ತು. ಆದರೆ ಕೆಲವೇ ದಿನಗಳಲ್ಲಿ ಮಳೆ ಸುರಿದ ಮತ್ತೆ ನದಿಗೆ ಜೀವಕಳೆ ಬಂದಿತ್ತು.
ಈಗ ಮುಂಗಾರು ಮಳೆ ದುಬಾರೆಯ ಮೆರಗು ಹೆಚ್ಚಿಸಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದು, ನದಿಯಲ್ಲಿ ದೋಣಿ ವಿಹಾರಕ್ಕಾಗಿ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ದುಬಾರೆಯಲ್ಲಿ ತುಂಬಿ ಹರಿಯುತ್ತಿರುವ ಕಾವೇರಿಯ ನದಿಯ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ದುಬಾರೆ ಸುಮಾರು 12,757 ಎಕರೆ ವಿಸ್ತೀರ್ಣ ಹೊಂದಿರುವ ಅರಣ್ಯ ಪ್ರದೇಶವಾಗಿದೆ. ಇಲ್ಲಿನ ಕಾಡುಗಳಲ್ಲಿ ಕಾಡೆಮ್ಮೆ, ಚಿರತೆ, ಸೀಳು ನಾಯಿ, ಕರಡಿ, ಜಿಂಕೆ, ನವಿಲು ಸೇರಿದಂತೆ ಹಲವು ಬಗೆಯ ಪ್ರಾಣಿ, ಪಕ್ಷಿಗಳಿವೆ. ಕಾವೇರಿ ನದಿ, ಪ್ರಕೃತಿಯ ಚೆಲುವನ್ನು ನೋಡಲು ಮತ್ತು ಆನೆಗಳನ್ನು ವೀಕ್ಷಣೆ ಮಾಡಲು ಪ್ರವಾಸಿಗರು ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ.
ದುಬಾರೆಯಲ್ಲಿರುವ ಆನೆ ಶಿಬಿರವು ಕಾವೇರಿ ನದಿಯಿಂದ ಆವೃತವಾಗಿದೆ. ನದಿ ದಡದ ಪ್ರದೇಶದಿಂದ ದೋಣಿಗಳ ಸಹಾಯದಿಂದ ಹೋಗಬೇಕು. ಇದು ಕೊಡಗಿನ ಹೆಬ್ಬಾಗಿಲು ಎಂದು ಕರೆಯುವ ಕುಶಾಲನಗರದಿಂದ ಸುಮಾರು 18 ಕಿ. ಮೀ. ದೂರದಲ್ಲಿದೆ. ಸಿದ್ದಾಪುರ ರಸ್ತೆಯಲ್ಲಿ ಸಾಗಿದಾಗ ಸಿಗುವ ನಂಜರಾಯಪಟ್ಟಣದಿಂದ ಎಡಕ್ಕೆ ತಿರುಗಿದರೆ ಅಲ್ಲಿಂದ ಸುಮಾರು 1 ಕಿ. ಮೀ. ದೂರ ಸಾಗಿದರೆ ದುಬಾರೆ ತಲುಪಬಹುದು.












Click it and Unblock the Notifications