ಕಣ್ಮನ ಸೆಳೆವ ಕೊಡಗಿನ ಸಂಭ್ರಮದ ಬೋಡುನಮ್ಮೆ ಚಿತ್ತಾರ
ಕೊಡಗು, ಏಪ್ರಿಲ್ 23: ಕೊಡಗಿನಲ್ಲಿ ನಡೆಯುವ ಹಬ್ಬಗಳು ಇತರೆ ಕಡೆಗಳಲ್ಲಿ ಆಚರಿಸುವ ಹಬ್ಬಗಳಿಗಿಂತ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಇಂತಹ ಹಬ್ಬಗಳ ಪೈಕಿ ಬೋಡು ಹಬ್ಬವೂ ಒಂದಾಗಿದೆ.
ಈ ಹಬ್ಬವನ್ನು ಜಿಲ್ಲೆಯಾದ್ಯಂತ ಆಚರಿಸಲಾಗುವುದಿಲ್ಲ. ಕೆಲವೇ ಕೆಲವು ಗ್ರಾಮಗಳಲ್ಲಿ ಅದರಲ್ಲೂ ಭದ್ರಕಾಳಿ ದೇವಾಲಯವಿರುವ ಊರುಗಳಲ್ಲಿ ಮಾತ್ರ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಗ್ರಾಮಕ್ಕೊಂದು ಭದ್ರಕಾಳಿ ದೇವಾಲಯವಿದ್ದು, ಈ ದೇವಾಲಯಗಳಲ್ಲಿ ವರ್ಷಕ್ಕೊಮ್ಮೆ ಬೋಡು ಹಬ್ಬವನ್ನು ಆಚರಿಸಲಾಗುತ್ತದೆ.
ಕೆಂಗೇರಿಯಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಜಯಂತಿ ಬ್ರಹ್ಮೋತ್ಸವ
ಪ್ರತಿವರ್ಷವೂ ಏಪ್ರಿಲ್ ತಿಂಗಳಲ್ಲಿ ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರಿನ ಭದ್ರಕಾಳಿ ದೇವರ ಹಬ್ಬ ನಡೆಯುತ್ತದೆ. ಈ ವೇಳೆ ನಡೆಯುವ ಬೋಡು ಹಬ್ಬ ವಿಶಿಷ್ಟವಾಗಿದ್ದು, ಇದು ಮೊದಲ ಬೋಡು ಹಬ್ಬವಾಗಿದ್ದು ನಂತರ ದಕ್ಷಿಣ ಕೊಡಗಿನ ಕೆಲವೆಡೆಗಳಲ್ಲಿ ಬೋಡು ಹಬ್ಬಗಳು ಮುಂದುವರೆಯುತ್ತದೆ. ಕೊನೆಗೆ ದೇವರಪುರದಲ್ಲಿ ಅಂತ್ಯಗೊಳ್ಳುತ್ತದೆ.
ವಾರಗಳ ಕಾಲ ಹಬ್ಬದ ಆಚರಣೆ
ಹಾಗೆನೋಡಿದರೆ ಚೆಂಬೆಬೆಳ್ಳೂರಿನಲ್ಲಿ ನಡೆಯುವ ಬೋಡುಹಬ್ಬಕ್ಕೆ ತನ್ನದೇ ಆದ ಇತಿಹಾಸ ಮತ್ತು ಆಚರಣೆಯಿದೆ. ಒಂದಷ್ಟು ವಿಶೇಷತೆಗಳನ್ನು ಕಾಣಬಹುದಾಗಿದೆ. ಹಬ್ಬವು ವಾರಗಳ ಕಾಲ ನಡೆಯುತ್ತಿದ್ದು, ಹಬ್ಬದ ಸಂಪ್ರದಾಯದಂತೆ ಹರಕೆ ಹೊತ್ತವರು ವಿವಿಧ ವೇಷ ಭೂಷಣ ಧರಿಸಿ ರಂಜಿಸುವುದು ಇಲ್ಲಿನ ವಿಶೇಷತೆಯಾಗಿದೆ. ಈ ವೇಳೆ ಹುಲಿ ವೇಷಧರಿಸಿದವರು ಒಂದೆಡೆಯಾದರೆ, ಮತ್ತೊಂದೆಡೆ ಕೆಸರು ಮೈಗೆ ಹಚ್ಚಿಕೊಂಡು, ಹುಲ್ಲನ್ನು ಮೈಗೆ ಕಟ್ಟಿಕೊಂಡು ಕುಣಿದು ಕುಪ್ಪಳಿಸುತ್ತಾ ತಮ್ಮ ಹರಕೆ ತೀರಿಸುತ್ತಾರೆ.
ಹುಲಿವೇಷ ಮತ್ತು ಬೋಡು ವೇಷ
ಹುಲಿವೇಷ ಮತ್ತು ಬೋಡು ವೇಷ ಹಾಕಿದವರು ಹಬ್ಬದ ದಿನ ಹಬ್ಬ ನಡೆಯುವ ದೇವಾಲಯದ ದೇವನೆಲೆಯಲ್ಲಿ ಸೇರಿ ಕೊಡಗಿನ ಸಾಂಪ್ರದಾಯಿಕ ಚಂಡೆ(ಕೊಟ್ಟ್) ಮತ್ತು ವಾಲಗಕ್ಕೆ ಹೆಜ್ಜೆ ಹಾಕುತ್ತಾ ದೇವನೆಲೆಯ ಸುತ್ತಲೂ ಪ್ರದಕ್ಷಿಣೆ ಹಾಕುತ್ತಾರೆ. ಇದರಲ್ಲಿ ಎಲ್ಲ ವಯಸ್ಸಿನವರೂ ಪಾಲ್ಗೊಳ್ಳುತ್ತಾರೆ. ಸುಮಾರು ಒಂದು ವಾರಗಳ ಕಾಲ ಭದ್ರಕಾಳಿ ದೇವಾಲಯದ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ.
ದೇವನೆಲೆಯಲ್ಲಿ ಹಬ್ಬದ ಕಟ್ಟು
ಹಬ್ಬದ ಮೊದಲ ದಿನ ಊರಿನವರೆಲ್ಲ ದೇವನೆಲೆಯಲ್ಲಿ ಸೇರಿ ಹಬ್ಬದ ಕಟ್ಟು ಹಾಕಲಾಗುತ್ತದೆ. ಇದನ್ನು ಊರಿನಲ್ಲಿ ಕಟ್ಟು ಬೀಳುವುದು ಎಂದು ಹೇಳಲಾಗುತ್ತದೆ. ಕಟ್ಟು ಬಿದ್ದ ಬಳಿಕ ಅಂದಿನಿಂದ ಹಬ್ಬ ಮುಗಿಯುವ ತನಕ ಊರಿನಲ್ಲಿ ಮಾಂಸಸೇವನೆ, ಮರಕಡಿಯುವುದು, ಇನ್ನಿತರ ಯಾವುದೇ ಕೈಂಕರ್ಯಗಳನ್ನು ಮಾಡುವಂತಿಲ್ಲ. ಆ ನಂತರ ಪಟ್ಟಣಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಊರಿನವರೆಲ್ಲ ಹಗಲು ಹೊತ್ತು ಅನ್ನ ಸೇವಿಸದೆ ಇತರೆ ತಿಂಡಿ ಸೇವಿಸಿ ರಾತ್ರಿ ಮಾತ್ರ ಅನ್ನ ಸೇವಿಸುತ್ತಾರೆ.
ಪೀಳಿಯಾಟದ ಮೋಜು
ಆ ನಂತರ 10ರಿಂದ12 ವರ್ಷದೊಳಗಿನ ಮಕ್ಕಳು ಸಂಜೆ ವೇಳೆಯಲ್ಲಿ ದೇವಾಲಯದ ಆವರಣದಲ್ಲಿ ಪೀಳಿಯಾಟವಾಡುತ್ತಾರೆ. ಆ ನಂತರ ಪೊದಕೇರಿ, ಪೊದಕೋಟೆ ಹಾಗೂ ನಡಿಕೇರಿ ಮೂರು ಕೇರಿಗಳ ಜನರು ಬಿದಿರಿನಿಂದ ತಯಾರು ಮಾಡಿದ ಕೃತಕ ಕುದುರೆಯನ್ನು ದೇವಾಲಯಕ್ಕೆ ತಂದು ಕುದುರೆ ಆಟ ಆಡುವ ಮೂಲಕ ಹರಕೆ ಹೊತ್ತವರು ತಮ್ಮ ಹರಕೆ ತೀರಿಸುತ್ತಾರೆ.
ಭಿಕ್ಷೆ ಬೇಡುವ ಆಚರಣೆ
ಮಾರನೆಯ ದಿನ ಊರಿನವರೆಲ್ಲ ಸೇರಿ ಸಾಂಪ್ರದಾಯಿಕ ವೇಷಧರಿಸಿ ಊರಿನ ಪ್ರತಿಯೊಂದು ಮನೆಮನೆಗಳಿಗೆ ತೆರಳಿ ಭಿಕ್ಷೆ ಕೇಳುವ ಮೂಲಕ ಬೋಡು ನಮ್ಮೆ(ಬೇಡುವ ಹಬ್ಬ)ಯನ್ನು ಆಚರಿಸುತ್ತಾರೆ. ವೇಷಧಾರಿಗಳು ಮನೆಗೆ ಬಂದ ಸಂದರ್ಭ ಮನೆಯವರು ಸತ್ಕಾರ ಮಾಡಿ ಕಳುಹಿಸಿಕೊಡುತ್ತಾರೆ. ಆ ನಂತರ ಮತ್ತೆ ಸಂಜೆ ದೇವಾಲಯದ ಆವರಣದಲ್ಲಿ ಸೇರಿ ತಮಟೆ ವಾದ್ಯಕ್ಕೆ ಹೆಜ್ಜೆಹಾಕುತ್ತಾರೆ.
ಒಂಬತ್ತು ಶತಮಾನಗಳ ಇತಿಹಾಸ
ಚೆಂಬೆಬೆಳ್ಳೂರಿನ ಭದ್ರಕಾಳಿಗೆ 900 ವರ್ಷಗಳ ಇತಿಹಾಸವಿದ್ದು, ಹಿಂದೆ ಅಜ್ಜಿಯ ರೂಪದಲ್ಲಿ ಗ್ರಾಮಕ್ಕೆ ಆಗಮಿಸಿದ ಭದ್ರಕಾಳಿಗೆ ಚೇಂದಂಡ ಕುಟುಂಬದವರು ನೆಲೆಕರುಣಿದರು. ದಿನಕಳೆದಂತೆ ಅಜ್ಜಿಯ ಪವಾಡದಿಂದ ಆಕೆ ಬರೀ ಅಜ್ಜಿಯಲ್ಲ ಅಜ್ಜಿಯ ರೂಪದಲ್ಲಿ ಬಂದ ಗ್ರಾಮದೇವತೆ ಭದ್ರಕಾಳಿ ಎಂಬುದು ತಿಳಿದು ಆಕೆ ದೇವಾಲಯ ಕಟ್ಟಿಸುವ ಮೂಲಕ ಶಾಶ್ವತ ನೆಲೆ ನೆಲೆನೀಡಲಾಯಿತೆಂಬ ಮಾತುಗಳು ಜನವಲಯದಲ್ಲಿದೆ.
ಬೇಡಿದ್ದನ್ನು ಕೊಡುವ ಭದ್ರಕಾಳಿಗೆ ಪೂಜೆ
ಭದ್ರಕಾಳಿ ಬೇಡಿದ್ದನ್ನು ನೀಡುವ ಕರುಣಾಮಯಿಯಾಗಿದ್ದು, ಹಿಂದಿನ ಕಾಲದಲ್ಲಿ ದೇವರಿಗೆ ನರಬಲಿ ನೀಡಲಾಗುತ್ತಿತ್ತು ಎಂಬ ಮಾತುಗಳಿವೆ. ಅದು ಏನೇ ಇರಲಿ ಇಲ್ಲಿ ಬೇಡಿಕೊಂಡ ಬಯಕೆ ಈಡೇರಿದ ಉದಾಹರಣೆಗಳು ಸಾಕಷ್ಟಿವೆ ಎಂದು ಹಿರಿಯರಯ ಹೇಳುತ್ತಾರೆ. ಹೀಗಾಗಿಯೇ ಪ್ರತಿವರ್ಷ ಊರವರು ಸೇರಿ ಅದ್ಧೂರಿಯಾಗಿ ಸಂಪ್ರದಾಯಬದ್ಧವಾಗಿ ಬೋಡುಹಬ್ಬವನ್ನು ಆಚರಿಸುವುದು ಕಂಡು ಬರುತ್ತಿದೆ.