ಕೊಡಗಿನ ವೀರರ ಶೌರ್ಯಕ್ಕೆ ಸಾಕ್ಷಿಯಾದ ಬೊಡಿನಮ್ಮೆ
ಮಡಿಕೇರಿ, ಸೆಪ್ಟೆಂಬರ್ 02 : ಶೂರತ್ವ ಮತ್ತು ಸಂಪ್ರದಾಯದ ಲೇಪನದೊಂದಿಗೆ ಆಚರಿಸಲ್ಪಡುವ ಕೊಡಗಿನ ಕೈಲ್ ಪೊಳ್ದ್ ಹಬ್ಬದ ಅಂಗವಾಗಿ ಚೆಟ್ಟಳ್ಳಿಯಲ್ಲಿ ಶುಕ್ರವಾರ ನಡೆದ ಬೊಡಿನಮ್ಮೆ ಗಮನ ಸೆಳೆಯಿತು.
ಪುತ್ತರಿರ ಕುಟುಂಬಸ್ಥರು ಚೆಟ್ಟಳ್ಳಿ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ನಾಲ್ಕನೇ ವರ್ಷದ ಬೊಡಿನಮ್ಮೆಯಲ್ಲಿ ನೂರಾರು ಮಂದಿ ಪಾಲ್ಗೊಂಡು ತಮ್ಮ ಶೌರ್ಯ ಮೆರೆದರು.

ಪುತ್ತರಿರ ಕುಟುಂಬದ ಪಟ್ಟೆದಾರರಾದ ಪುತ್ತರಿರ ಬಿ.ಬಿದ್ದಪ್ಪ ಹಾಗೂ ಬೆಂಗಳೂರಿನ ಉದ್ಯಮಿ ಚೆರಿಯಪಂಡ ಸುರೇಶ್ ನಂಜಪ್ಪ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಉದ್ಯಮಿ ಸುರೇಶ್ ನಂಜಪ್ಪ ಅವರು, ಪತ್ತರಿರ ಕುಟುಂಬಸ್ಥರು ಆಯೋಜಿಸಿರುವ ಬೊಡಿನಮ್ಮೆ ಉತ್ತಮ ಬೆಳವಣಿಗೆಯಾಗಿದ್ದು, ಇದು ಹೀಗೆಯೇ ಮುಂದುವರೆಯಲು ಎಲ್ಲರ ಸಹಕಾರ ಅಗತ್ಯ ಎಂದರು.

ಪುತ್ತರಿರ ಪಟ್ಟೆದಾರ ಪುತ್ತರಿರ ಬಿದ್ದಪ್ಪ ಅವರು ಮಾತನಾಡಿ, ನಮ್ಮ ಕುಟುಂಬವು ನಾಲ್ಕನೇ ವರ್ಷದ ಬೊಡೆನಮ್ಮೆಯನ್ನು ಆಯೋಜಿಸಿದ್ದು ತಮ್ಮೆಲ್ಲರ ಸಹಕಾರದಿಂದ ಈ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ಕೊಡವ ಸಾಹಿತ್ಯ ಅಕಾಡೆಮಿಯು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನಾನಾ ಕಾರ್ಯಕ್ರಮವನ್ನು ಆಯೋಜಿಸಿದ್ದು, ಪುತ್ತರಿರ ಕುಟುಂಬಸ್ಥರು ಆಯೋಜಿಸಿರುವ ಬೊಡಿನಮ್ಮೆಗೆ ಕಳೆದ ವರ್ಷದಿಂದ ಸಹಕಾರ ನೀಡುತ್ತಾ ಬರುತಿದ್ದೇವೆ. ಇಂತಹ ಕಾರ್ಯಕ್ರಮಗಳಿಗೆ ಅಕಾಡೆಮಿಯ ಸಹಕಾರ ಇದ್ದೇ ಇರುತ್ತದೆ ಎಂದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಮಾತನಾಡಿ, ಕೊಡವರಿಗೆ ಕೋವಿಯ ಹಕ್ಕು ಮುಖ್ಯವಾಗಿದ್ದು ಕೊಡವ ಮಕ್ಕಡ ಕೂಟವು ಹೋರಾಟವನ್ನು ಮಾಡುತ್ತಾ ಬರುತಿದೆ ಎಂದರು.

ಇದೇ ವೇಳೆ 22, 12 ಬೋರ್ ನಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಫರ್ಧೆ, ಏರ್ ರೈಫಲ್, ಪಿಸ್ತೂಲ್ ಹಾಗು ರಿವಾಲ್ವರ್ ನಿಂದ ಟಾರ್ಗೆಟ್ಗೆ ಗುಂಡು ಹೊಡೆಯುವ ಸ್ಫರ್ಧೆ ನಡೆಯಿತು. ಇದರಲ್ಲಿ ಶಾರ್ಪ್ ಶೂಟರ್ಗಳು ಪಾಲ್ಗೊಂಡು ಗಮನ ಸೆಳೆದರು.












Click it and Unblock the Notifications