ಮಡಿಕೇರಿಯಲ್ಲಿ ಅಡಿಕೆ ಕದಿಯಲು ಬಂದು ಪ್ರಾಣ ಕಳೆದುಕೊಂಡ
ಮಡಿಕೇರಿ, ಆಗಸ್ಟ್ 31: ಅಡಿಕೆ ಕದಿಯಲು ಎಸ್ಟೇಟ್ ಒಳಗೆ ನುಗ್ಗಿದ್ದ ಕಳ್ಳನ ಮೇಲೆ ಮನೆಯ ಮಾಲೀಕ ಗುಂಡು ಹಾರಿಸಿದ ಪರಿಣಾಮ ಆತ ಸಾವನ್ನಪ್ಪಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.
ಮಡಿಕೇರಿಯ ಕರಿಕೆ ಗ್ರಾಮದ ಎಲ್ಲುಕೊಚ್ಚಿ ಎಂಬಲ್ಲಿ ಈ ಘಟನೆ ನಡೆದಿದೆ. ಮುಂಡೋಡಿ ಮೊಣ್ಣಪ್ಪ ಎಂಬುವವರು ಕಳ್ಳರಿಂದ ಅಡಿಕೆ ರಕ್ಷಿಸಿಕೊಳ್ಳಲು ಅಡಿಕೆ ದಾಸ್ತಾನು ಮಾಡಿದ್ದ ಕೊಠಡಿಗೆ ಗಂಟೆ ಅಳವಡಿಸಿದ್ದರು. ಶುಕ್ರವಾರ ಮಧ್ಯ ರಾತ್ರಿ, ಆ ದಾಸ್ತಾನು ಕೋಣೆಯ ಗಂಟೆ ಶಬ್ದ ಕೇಳುತ್ತಿದ್ದಂತೆ ಗನ್ ತೆಗೆದುಕೊಂಡು ಹೊರಟಿದ್ದಾರೆ ಮೊಣ್ಣಪ್ಪ. ಆ ಸಂದರ್ಭ ಅಡಿಕೆ ಕದಿಯುತ್ತಿದ್ದವನ ಮೇಲೆ ಗುಂಡು ಹಾರಿಸಲಾಗಿದೆ.
ದೇವಂಗೋಡಿ ನಿವಾಸಿ ಗಣೇಶ್ ಮೃತಪಟ್ಟವರು. ಗಣೇಶನ ಮೇಲೆ ಕೊಡಗು, ದಕ್ಷಿಣ ಕನ್ನಡ, ಸುಳ್ಯ ಹಾಗೂ ಕೇರಳದಲ್ಲೂ ಕಳ್ಳತನ ಸಂಬಂಧ ಪ್ರಕರಣಗಳು ದಾಖಲಾಗಿವೆ.

"ಆತ ಮುಸುಕು ಹಾಕಿಕೊಂಡಿದ್ದ. ನಾನು ನೋಡುತ್ತಿದ್ದಂತೆ ಚಾಕುವಿನಿಂದ ಚುಚ್ಚಲು ಬಂದ. ಹೀಗಾಗಿ ನನ್ನನ್ನು ರಕ್ಷಿಸಿಕೊಳ್ಳಲು ಗುಂಡು ಹಾರಿಸಿದೆ" ಎಂದು ಮೊಣ್ಣಪ್ಪ ಹೇಳಿಕೆ ನೀಡಿದ್ದಾರೆ. ಗುಂಡು ಹಾರಿಸಿದ ನಂತರ ಭಾಗಮಂಡಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಭಾಗಮಂಡಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ.












Click it and Unblock the Notifications