ಚಿತ್ರಗಳು; ಪುನರ್ವಸು ಮಳೆ ಅಬ್ಬರ, ಹಾರಂಗಿ ಡ್ಯಾಂನಿಂದ ನೀರು ಬಿಡುಗಡೆ
ಮಡಿಕೇರಿ, ಜುಲೈ 15; ಕೊಡಗು ಜಿಲ್ಲೆಯಲ್ಲಿ ಪುನರ್ವಸು ಮಳೆ ಅಬ್ಬರಿಸುತ್ತಿದೆ. ಜಿಲ್ಲಾಡಳಿತ ಜುಲೈ 15ರಂದು ಆರೆಂಜ್ ಹಾಗೂ ಜುಲೈ 16 ರಂದು ರೆಡ್ ಅಲರ್ಟ್ ಘೋಷಣೆ ಮಾಡಿದೆ. ಹಾರಂಗಿ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ 6 ಸಾವಿರ ಕ್ಯುಸೆಕ್ ನೀರನ್ನು ಬುಧವಾರ ಸಂಜೆಯಿಂದಲೇ ನಾಲ್ಕು ಕ್ರಸ್ಟ್ಗೇಟ್ಗಳ ಮೂಲಕ ಬಿಡಲಾಗುತ್ತಿದೆ.
ಮಡಿಕೇರಿ ವ್ಯಾಪ್ತಿಯಲ್ಲಿ ಭಾರೀ ಮಳೆ ಸುರಿಯುತ್ತಿರುವ ಕಾರಣ ಸುತ್ತಮುತ್ತಲಿನ ನದಿ ತೊರೆಗಳು ತುಂಬಿ ಹರಿದು ಹಾರಂಗಿ ಜಲಾಶಯವನ್ನು ಸೇರುತ್ತಿವೆ. ಬುಧವಾರ ಜಲಾಶಯದ 19,000 ಕ್ಯೂಸೆಕ್ ಆಗಿತ್ತು. 2,859 ಅಡಿಗಳ ಜಲಾಶಯದಲ್ಲಿ 2,853 ಅಡಿಯಷ್ಟು ನೀರು ಸಂಗ್ರಹವಾಗಿದೆ.
ಶಾಸಕ ಅಪ್ಪಚ್ಚು ರಂಜನ್ ಸೂಚನೆ ಮೇರೆಗೆ ಸದ್ಯ ಹಾರಂಗಿ ಜಲಾಶಯದ 4 ಕ್ರೆಸ್ಟ್ ಗೇಟ್ಗಳ ಮೂಲಕ ನಾಲ್ಕು ಸಾವಿರ ಕ್ಯುಸೆಕ್ ಹಾಗೂ ವಿದ್ಯುತ್ ಉತ್ಪಾದನಾ ಘಟಕ ಮೂಲಕ 2000 ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಮಳೆ ಮುಂದುವರೆದಿದ್ದು, ಜಲಾಶಯದ ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.
ಕಾವೇರಿ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ರೌದ್ರಾವತಾರ ತಾಳುತ್ತಿದ್ದು, ಯಾವಾಗ ಬೇಕಾದರೂ ಈ ಪ್ರದೇಶ ಜಲಾವೃತವಾಗುವ ಸಾಧ್ಯತೆಯಿದೆ.

ಬಿಡುವು ನೀಡಿದ್ದ ಮಳೆ
ಜಿಲ್ಲೆಯಲ್ಲಿ ಒಂದಷ್ಟು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಕೆಲವು ದಿನಗಳಿಂದ ಲಯ ಪಡೆಯುವುದರೊಂದಿಗೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ತಗ್ಗು ಪ್ರದೇಶ, ಗದ್ದೆ ಬಯಲುಗಳು ಜಲಾವೃತವಾಗಿವೆ. ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿರುವುದರಿಂದ ಮತ್ತು ಮಳೆಯ ಅಬ್ಬರ ಹೆಚ್ಚಾಗಿ ಜಲಾಶಯದ ಒಳ ಹರಿವು ಹೆಚ್ಚಾದರೆ ಹೊರ ಹರಿವಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ.

ತಗ್ಗು ಪ್ರದೇಶಗಳ ಜನರಿಗೆ ಎಚ್ಚರಿಕೆ
ಹಾರಂಗಿ ಮತ್ತು ಕಾವೇರಿ ನದಿಯ ತಗ್ಗು ಪ್ರದೇಶದಲ್ಲಿರುವ ಹಾಗೂ ಎರಡೂ ದಂಡೆಗಳಲ್ಲಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ಮತ್ತು ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ.
ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತ್ರಿವೇಣಿ ಸಂಗಮದಲ್ಲಿ ಕಾವೇರಿ ನದಿ ರೌದ್ರಾವತಾರ ತಾಳಿದೆ. ಯಾವಾಗ ಬೇಕಾದರೂ ಭಾಗಮಂಡಲ ಪ್ರದೇಶ ಜಲಾವೃತವಾಗುವ ಸಾಧ್ಯತೆಯಿದೆ.

ನದಿಯ ನೀರಿನ ಮಟ್ಟ ಏರಿಕೆ
ಕಾವೇರಿ, ಲಕ್ಷ್ಮಣ ತೀರ್ಥ ನದಿಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದ್ದು, ಅಲ್ಲಲ್ಲಿ ಪ್ರವಾಹ ಸೃಷ್ಠಿಯಾಗುವ ಭಯ ಆವರಿಸಿದೆ. ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮಳೆಯ ತೀವ್ರತೆ ಮೂರು ದಿನಗಳ ಕಾಲ ಇರಲಿದ್ದು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿರುವ ಕಾರಣ ಮರ, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಇದರಿಂದ ಬಹುತೇಕ ಊರುಗಳು ಕತ್ತಲೆಯಲ್ಲಿ ಮುಳುಗಿವೆ.
Recommended Video

ಜಿಲ್ಲಾಡಳಿತ ಸಜ್ಜಾಗಿದೆ
ಮಂಗಳೂರು ರಸ್ತೆ ಸೇರಿದಂತೆ ಹಲವೆಡೆ ಗುಡ್ಡಗಳು ಅಲ್ಪಪ್ರಮಾಣದಲ್ಲಿ ಕುಸಿದಿವೆ. ಅಪಾಯ ಸಂಭವಿಸಬಹುದಾದ ಪ್ರದೇಶಗಳಲ್ಲಿನ ಮನೆಗಳಲ್ಲಿದ್ದ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಅಲ್ಲಲ್ಲಿ ಭೂಕುಸಿತ, ಜಲಾವೃತ, ಹೀಗೆ ಪ್ರಾಕೃತಿಕ ವಿಕೋಪಗಳು ಸಣ್ಣಪುಟ್ಟ ಪ್ರಮಾಣದಲ್ಲಿ ಸಂಭವಿಸಿದ್ದು, ಇದನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಎನ್ಡಿಆರ್ಎಫ್ ತಂಡ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ.












Click it and Unblock the Notifications