ಸ್ವಿಫ್ಟ್ ಕಾರಿನಲ್ಲಿ ಕೊಡಗಿಗೆ ತಂದ ಅಕ್ರಮ ಹಣ ಯಾರದ್ದು?
ಮಡಿಕೇರಿ, ನವೆಂಬರ್, 12: ದೇಶದಲ್ಲಿ ರೂ. 500 ಮತ್ತು ರೂ.1000 ರೂಪಾಯಿಯ ನೋಟುಗಳು ಅಮಾನ್ಯವಾಗುತ್ತಿದ್ದಂತೆಯೇ ಅಕ್ರಮವಾಗಿ ಕೂಡಿಟ್ಟ ಹಣವನ್ನು ಏನು ಮಾಡಬೇಕೆಂಬುದು ತೋಚದೆ ಒಳಗೊಳಗೆ ಪರದಾಟಗಳು ಆರಂಭವಾಗಿರುವುದು ಗುಟ್ಟಾಗಿ ಉಳಿದಿಲ್ಲ.
ಕಪ್ಪುಹಣವನ್ನು ಬಿಳಿ ಮಾಡುವ ಯತ್ನಗಳು ಕೂಡ ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಕಂತೆ, ಕಂತೆ ನೋಟುಗಳು ಕಾಗದದ ಹಾಳೆಯಂತೆ ಗೋಚರಿಸುತ್ತಿದೆ.
ಆ ಹಣಕ್ಕಾಗಿ ಪಟ್ಟ ಕಷ್ಟ, ಮಾಡಿದ ಅಕ್ರಮ ಎಲ್ಲವೂ ಕಣ್ಣುಮುಂದೆ ಹಾದು ಹೋಗುತ್ತಿದೆ. ಮೇಲ್ಮೋಟಕ್ಕೆ ತಮಗೇನು ಆಗಿಯೇ ಇಲ್ಲ ಎಂಬಂತೆ ವರ್ತಿಸುತ್ತಿರುವ ಕಾಳಧನಿಕರು ಒಳಗೊಳಗೆ ಕುಗ್ಗಿ ಹೋಗಿದ್ದಾರೆ.[ ಕಪ್ಪು ಹಣ ಬದಲಿಸುವವರ ಜಾಲದಲ್ಲಿ ಸಿಲುಕೀರಿ ಜೋಕೆ!]
ಕೆಲವರು ಗೌಪ್ಯವಾಗಿ ಸಂಘ ಸಂಸ್ಥೆಗಳಿಗೆ ಉದಾರವಾಗಿ ನೀಡುವ ಪ್ರಯತ್ನಗಳು ಕೂಡ ನಡೆಯುತ್ತಿರುವ ವರದಿಗಳು ಬಿತ್ತರವಾಗಿವೆ.
ಕೊಡಗಿನಲ್ಲಿ ತೋಟ ಕೆಲಸ ಮಾಡಿಸುವ ಕಾರ್ಮಿಕರಿಗೆ ಪ್ರತಿ ದಿನ, ವಾರಕ್ಕೆ ಸಂಬಳ ನೀಡಬೇಕಾಗಿರುವುದರಿಂದ ಹೆಚ್ಚಿನವರು ಮನೆಯಲ್ಲೇ ಹಣ ಇಟ್ಟುಕೊಳ್ಳುವವರೂ ಇದ್ದಾರೆ. ಅವರು ಮಾರಿದ ಕಾಫಿ, ಕರಿಮೆಣಸಿನ ಲೆಕ್ಕ ತೋರಿಸಬಹುದು.[ಚಿಕ್ಕಮಗಳೂರಿನಲ್ಲಿ 2 ಸಾವಿರ ರು ಖೋಟಾನೋಟು ಪತ್ತೆ]
ಆದರೆ ಬೇರೆ ಬೇರೆ ಮಾರ್ಗದಲ್ಲಿ ಹಣ ಸಂಪಾದಿಸಿ ಗುಡ್ಡೆ ಹಾಕಿಟ್ಟುಕೊಂಡವರಿಗೆ ನಡುಕ ಶುರುವಾಗಿದ್ದು, ಅದನ್ನು ನೋಡಿಕೊಂಡು ಅಳುವ ಪರಿಸ್ಥಿತಿಯೂ ಬಂದೊದಗಿದೆ.
ಈ ನಡುವೆ ಕಾರಿನಲ್ಲಿ ಸಾಗಿಸುತ್ತಿದ್ದ ರೂ. 41 ಲಕ್ಷ 90 ಸಾವಿರದ ರೂ.500 ಮುಖಬೆಲೆ ನೋಟ್ಗಳನ್ನು ಪೊನ್ನಂಪೇಟೆ ಪೊಲೀಸರಿಗೆ ಸಿಕ್ಕಿದ್ದು, ಒಂದು ಕ್ಷಣ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಈ ಹಣ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ ತಪಾಸಣೆ ನಡೆಸುತ್ತಿದ್ದ ಸಂದರ್ಭ ಬಾಳೆಲೆ, ಕಾರ್ಮಾಡು ಗೇಟಿನ ಬಳಿ ಪತ್ತೆಯಾಗಿದೆ.
ಈ ಹಣವನ್ನು ಮೈಸೂರಿನಿಂದ ಶಿಫ್ಟ್ (ಕೆ.ಎ.01-ಎಂ.ಸಿ2803) ಕಾರಿನಲ್ಲಿ ಕೊಡಗಿಗೆ ತರಲಾಗುತ್ತಿತ್ತು. ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿರುವ ಮಾಹಿತಿಯಂತೆ ಕುಟ್ಟ ಸುಬ್ಬಲಕ್ಷ್ಮಿ ಕಾಫಿ ಮಿಲ್ಲಿನ ಮಾಲೀಕ ಜಕ್ರಿ ಎಂಬುವವರಿಗೆ ಸೇರಿದ ಹಣವಾಗಿದ್ದು, ಮೈಸೂರಿನ ಪ್ರಸನ್ನ ಎಂಬುವರ ಬಳಿಯಿಂದ ಹಣ ತರಲಾಗುತ್ತಿತ್ತು ಎನ್ನಲಾಗಿದೆ.
ಸದ್ಯ ಕಾರು ಮತ್ತು ಹಣವನ್ನು ವಶಪಡಿಸಿಕೊಂಡಿರುವ ಪೊನ್ನಂಪೇಟೆ ಪೊಲೀಸರು ಹಣ ಸಾಗಿಸುತ್ತಿದ್ದ ಸೋಹೆಬ್, ಮಜೀದ್, ಮಣಿ ಎಂಬುವರನ್ನು ವಶಕ್ಕೆ ಪಡೆದು ಕೊಂಡಿದ್ದಾರೆ. ತನಿಖೆ ಬಳಿಕ ಈ ಹಣದ ಮೂಲ ಪತ್ತೆಯಾಗಬೇಕಿದೆ. ಹಣವನ್ನು ಕೊಂಡೊಯ್ದು ಎಸ್ಟೇಟ್ ಕಾರ್ಮಿಕರ ಮೂಲಕ ಬಿಳಿಮಾಡುವ ಸಂಚು ಇದಾಗಿರಬಹುದೆಂದು ಕೆಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಪೊಲೀಸರ ತನಿಖೆಯಿಂದಷ್ಟೆ ಇದು ಬಯಲಾಗಬೇಕಿದೆ.