ಚಿತ್ರಗಳು : ಕೊಡಗಿನಲ್ಲಿ ಇನ್ನೂ ನಡೆಯುತ್ತಿದೆ ಪರಿಹಾರ ಕಾರ್ಯ
ಮಡಿಕೇರಿ, ಆಗಸ್ಟ್ 31 : ಮಳೆ, ಭೂ ಕುಸಿತದಿಂದ ಹಾನಿಗೊಳಗಾದ ಕೊಡಗು ಜಿಲ್ಲೆಗೆ ಸರ್ಕಾರ 115 ಕೋಟಿ ರೂ. ಬಿಡುಗಡೆ ಮಾಡಿದೆ. ರಸ್ತೆ ನಿರ್ಮಾಣ, ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮುಂತಾದ ಕಾರ್ಯಗಳನ್ನು ಜಿಲ್ಲಾಡಳಿತ ಆರಂಭಿಸಿದೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು. ಗುಡ್ಡ ಕುಸಿತದಿಂದಾಗಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಹತ್ತಿರದಲ್ಲಿಯೇ ಅನುಕೂಲ ಸ್ಥಳದಲ್ಲಿ ಮನೆ ನಿರ್ಮಿಸಿ ಕೊಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಾ.ರಾ.ಮಹೇಶ್ ಅವರು, 'ಸರ್ಕಾರ ಜಿಲ್ಲೆಗೆ ಒಟ್ಟು 115 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಪ್ರಥಮ ಹಂತದಲ್ಲಿ 5 ಕೋಟಿ, 2ನೇ ಹಂತದಲ್ಲಿ 20 ಕೋಟಿ, 3ನೇ ಹಂತದಲ್ಲಿ 85 ಕೋಟಿ ಸೇರಿ 115 ಕೋಟಿಯನ್ನು ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ' ಎಂದರು.
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮಾತನಾಡಿ, 'ಅತಿವೃಷ್ಟಿಯಿಂದಾಗಿ 2108 ಕಿ.ಮೀ.ಗ್ರಾಮೀಣ ರಸ್ತೆ ಹಾನಿಯಾಗಿದೆ. ರಸ್ತೆಯನ್ನು ದುರಸ್ತಿ ಮಾಡುವ ಕಾರ್ಯವನ್ನು ಆರಂಭಿಸಲಾಗಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಚರಂಡಿ ಮತ್ತು ರಸ್ತೆಯನ್ನು ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕಿದೆ' ಎಂದು ಹೇಳಿದರು.

ಹತ್ತಿರದಲ್ಲೇ ಮನೆ ನಿರ್ಮಿಸಿ ಕೊಡಿ
'ಭೂ ಕುಸಿತದಿಂದಾಗಿ ಮನೆ ಕಳೆದುಕೊಂಡವರಿಗೆ ಅವರವರ ಜಾಗದ ಸಮೀಪದಲ್ಲಿಯೇ ಮನೆ ನಿರ್ಮಿಸಿಕೊಡಬೇಕು. ಹಲವು ಕುಟುಂಬಗಳು 40 ರಿಂದ 50 ಲಕ್ಷ ಬೆಲೆಬಾಳುವ ಮನೆಯಲ್ಲಿದ್ದರು. ಅಂಥವರು ಶೆಡ್ನಲ್ಲಿ ವಾಸ ಮಾಡಲು ಮುಂದೆ ಬರುತ್ತಾರೆಯೇ?, ಆದ್ದರಿಂದ, ಕನಿಷ್ಠ 10 ಗುಂಟೆ ಜಾಗ ನೀಡಬೇಕು' ಎಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.

ತಾತ್ಕಾಲಿಕ ಶೆಡ್ ನಿರ್ಮಾಣ
ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರು, 'ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಡಲು ಸುಂಟಿಕೊಪ್ಪ ಹೋಬಳಿಯ ಗರಗಂದೂರು ಬಳಿ 7 ಎಕರೆ ಜಾಗ, ಆರ್ಟಿಒ ಕಚೇರಿ ಬಳಿ 4 ಎಕರೆ ಜಾಗ, ಬಿಳಿಗೇರಿ ಬಳಿ 3.70 ಎಕರೆ ಜಾಗ ಗುರುತಿಸಲಾಗಿದೆ. ಇಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿಕೊಡಬಹುದಾಗಿದೆ' ಎಂದು ಹೇಳಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ
'ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಲ್ಲಿ ಲೈನ್ ಮನೆಗಳಲ್ಲಿ ವಾಸ ಮಾಡುತ್ತಿದ್ದವರು. ತೋಟದಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದವರು ಇದ್ದಾರೆ. ಅಂತಹವರನ್ನು ಗುರುತಿಸಿ ಆಯಾಯ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿ ಕೊಡುವುದು ಉತ್ತಮ' ಎಂದು ಸಾ.ರಾ.ಮಹೇಶ್ ಹೇಳಿದರು.

ಆಹಾರ ಕಿಟ್ಗಳ ವಿತರಣೆ
'ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಾಶ್ರಿತರಾದ ಬಿಪಿಎಲ್ ಮತ್ತು ಎಪಿಎಲ್ ಕುಟುಂಬದವರಿಗೆ ಆಹಾರ ಕಿಟ್ಗಳನ್ನು ನ್ಯಾಯಬೆಲೆ ಅಂಗಡಿಗಳ ಮೂಲಕ ವಿತರಣೆ ಮಾಡಬೇಕು. ಕಿಟ್ ವಿತರಣೆಯಲ್ಲಿ ಯಾವುದೇ ರೀತಿಯ ಲೋಪವಾಗಬಾರದು' ಎಂದು ಸಚಿವರು ಸೂಚನೆ ನೀಡಿದರು.












Click it and Unblock the Notifications