ಜೊಮ್ಯಾಟೋ ಡೆಲಿವರಿ ಬಾಯ್ ಕಮಲೇಶ್ ಹತ್ಯೆ ಆರೋಪಿ
ನವದೆಹಲಿ, ಅಕ್ಟೋಬರ್ 23: ಉತ್ತರ ಪ್ರದೇಶದಲ್ಲಿ ಹಿಂದೂ ಸಮಾಜ ಪಕ್ಷದ ಮುಖಂಡ ಕಮಲೇಶ್ ತಿವಾರಿ ಹತ್ಯೆಯ ಪ್ರಕರಣದಲ್ಲಿ ಬಂಧಿತನಾಗಿರುವವರಲ್ಲಿ ಜೊಮ್ಯಾಟೋ ಆಹಾರ ಪೂರೈಕೆ ಕಂಪೆನಿಯ ಡೆಲಿವರಿ ಬಾಯ್ ಕೂಡ ಸೇರಿದ್ದಾನೆ.
ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೊಳಗಾಗಿದ್ದು, ಕಾನೂನನ್ನು ಉಲ್ಲಂಘಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸಿಕೊಳ್ಳುವುದಿಲ್ಲ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜೊಮ್ಯಾಟೋ ಹೇಳಿದೆ.

ಗುಜರಾತ್ನ ಭಯೋತ್ಪಾದನಾ ನಿಗ್ರಹ ದಳವು ರಾಜಸ್ಥಾನ ಗಡಿಭಾಗದಲ್ಲಿನ ಪ್ರದೇಶವೊಂದರ ಸಮೀಪ ಅಶ್ಫಕ್ ಹುಸೇನ್ ಮತ್ತು ಮೊಯಿನುದ್ದೀನ್ ಪಠಾಣ್ ಅವರನ್ನು ಬಂಧಿಸಿತ್ತು. ಇದರಲ್ಲಿ ಒಬ್ಬಾತ ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ಸಂಗತಿಯನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಜೊಮ್ಯಾಟೋ ಸಂಸ್ಥೆಯನ್ನು ಟ್ರೋಲ್ ಮಾಡಲಾಗುತ್ತಿದೆ.
ಕೆಲವು ತಿಂಗಳ ಹಿಂದೆ ಮುಸ್ಲಿಂ ಡೆಲಿವರಿ ಬಾಯ್ ತಮ್ಮ ಆಹಾರ ಪೂರೈಕೆ ಮಾಡುತ್ತಿದ್ದಾನೆ ಎಂಬ ಕಾರಣಕ್ಕೆ ಆರ್ಡರ್ ರದ್ದುಗೊಳಿಸಿದ್ದಾಗಿ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದ ವ್ಯಕ್ತಿಯೊಬ್ಬರನ್ನು 'ಆಹಾರಕ್ಕೆ ಧರ್ಮವಿಲ್ಲ' ಎಂದು ಹೇಳುವ ಮೂಲಕ ಜೊಮ್ಯಾಟೋ ಟ್ರೋಲ್ ಮಾಡಿತ್ತು. ಕೆಲವರು ಜೊಮ್ಯಾಟೋ ನೀಡಿದ್ದ ಪ್ರತಿಕ್ರಿಯೆನ್ನು ಶ್ಲಾಘಿಸಿದ್ದರು. ಇನ್ನು ಕೆಲವರು ಜೊಮ್ಯಾಟೋಅನ್ನು ಬಹಿಷ್ಕಾರ ಮಾಡುವಂತೆ ಅಭಿಯಾನ ಆರಂಭಿಸಿದ್ದರು.
ಈಗ ಬಳಕೆದಾರರು ಜೊಮ್ಯಾಟೋದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುತ್ತಿದ್ದಾರೆ. ತನ್ನ ಸಿಬ್ಬಂದಿಯ ಹಿನ್ನೆಲೆ ಪರಿಶೀಲಿಸದೆ ಹೇಗೆ ಕೆಲಸ ನೀಡಿದೆ ಎಂದು ಪ್ರಶ್ನಿಸಿದ್ದಾರೆ.
ಮೊಯಿನುದ್ದೀನ್ ಪಠಾಣ್, ಜೊಮ್ಯಾಟೋದಲ್ಲಿ 2019ರ ಆಗಸ್ಟ್ 17ರಿಂದ ಕೆಲಸ ಮಾಡುತ್ತಿದ್ದಾನೆ. ಅದಕ್ಕೂ ಮೊದಲು ಆತನ ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾನ್ ಕಾರ್ಡ್ ಮತ್ತು ಆತನ ಹಿಂದಿನ ನ್ಯಾಯಾಲಯದ ದಾಖಲೆಗಳನ್ನು ಸ್ವತಂತ್ರ ಸಂಸ್ಥೆಯೊಂದರ ಮೂಲಕ ಪರಿಶೀಲನೆ ನಡೆಸಲಾಗಿತ್ತು. ಅ.6ರಂದು ಆತ ತನ್ನ ಸಂಸ್ಥೆಯಿಂದ ಕೊನೆಯ ಡೆಲಿವರಿ ನೀಡಿದ್ದ ಎಂದು ಜೊಮ್ಯಾಟೋ ವಕ್ತಾರರು ತಿಳಿಸಿದ್ದಾರೆ.












Click it and Unblock the Notifications