ಉತ್ತರ ಪ್ರದೇಶದಲ್ಲಿ ಯಾಕೆ ಮೊದಲಿನಂತಿಲ್ಲ ಮಾಯಾವತಿ?; ಪ್ರಿಯಾಂಕಾ ಗಾಂಧಿ ಅಚ್ಚರಿ
ಲಕ್ನೋ, ಜನವರಿ 22: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿ ತಮ್ಮ ಎಂದಿನ ಶೈಲಿಯಲ್ಲಿ ಪ್ರಚಾರ ನಡೆಸುತ್ತಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಪ್ರಚಾರದ ವೈಖರಿ ಬಗ್ಗೆ ನನಗೆ ಆಶ್ಚರ್ಯವಾಗಿದೆ. ಮಾಯಾವತಿ ತಮ್ಮ ಎಂದಿನ ಶೈಲಿಯಲ್ಲಿ ಪ್ರಚಾರ ಮಾಡುತ್ತಿಲ್ಲ ಎಂಬ ಉತ್ತರ ಪ್ರದೇಶದ ಜನರ ನಂಬಿಕೆಯನ್ನು ನಾನೂ ಒಪ್ಪಿಕೊಳ್ಳುತ್ತೇನೆ, ಆದರೆ ಇದು ನನಗೆ ಅಚ್ಚರಿ ಮೂಡಿಸುತ್ತಿದೆ ಎಂದಿದ್ದಾರೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣಾ ಅಖಾಡದಲ್ಲಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ನಿಜವಾಗಿಯೂ ಮಂಕಾದರೆ?, ಪ್ರಿಯಾಂಕಾ ಗಾಂಧಿ ಹೇಳಿಕೆ ಹಿಂದಿನ ಮರ್ಮವೇನು?, ಯುಪಿಯಲ್ಲಿ ಕಳೆ ಕಳೆದುಕೊಂಡಿತಾ ಬಿಎಸ್ ಪಿ ಎಂಬುದಕ್ಕೆ ಸಂಬಂಧಿಸಿದಂತೆ ಸ್ವತಃ ಪ್ರಿಯಾಂಕಾ ಗಾಂಧಿಯವರೇ ಮಾತನಾಡಿದ್ದಾರೆ. ಈ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಮಾಯಾವತಿ ಪ್ರಚಾರ ವೈಖರಿ ಬಗ್ಗೆ ಆಶ್ಚರ್ಯ:
ಉತ್ತರ ಪ್ರದೇಶದಲ್ಲಿ ಮಾಯವತಿಯವರ ಪಕ್ಷ ಕಳೆದ ಆರು-ಏಳು ತಿಂಗಳಿನಿಂದ ಅಷ್ಟರ ಮಟ್ಟಿಗೆ ಸಕ್ರಿಯವಾಗಿಲ್ಲ. ವಿಧಾನಸಭೆ ಚುನಾವಣೆ ಘೋಷಣೆ ನಂತರದಲ್ಲಿ ಮತ್ತೆ ಸಕ್ರಿಯರಾಗಬಹುದು ಎಂದು ನಾವು ಭಾವಿಸಿದ್ದೇವು, ಆದರೆ ಈಗ ನನಗೂ ಆಶ್ಚರ್ಯವಾಗುತ್ತಿದೆ. ಏಕೆಂದರೆ ರಾಜ್ಯದಲ್ಲಿ ಚುನಾವಣೆ ಶುರುವಾಗಿದ್ದು, ನಾವು ಚುನಾವಣೆಯ ಮಧ್ಯದಲ್ಲಿದ್ದೇವೆ. ಈ ಹಂತದಲ್ಲಿಯೂ ಬಿಎಸ್ಪಿ ಸಕ್ರಿಯವಾಗದಿರುವುದು ನಮಗೂ ತುಂಬಾ ಆಶ್ಚರ್ಯವಾಗುವಂತೆ ಮಾಡಿದೆ. ನೀವು ಹೇಳಿದಂತೆ ಮಾಯಾವತಿ ತುಂಬಾ ಶಾಂತವಾಗಿದ್ದಾರೆ, ನನಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ," ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಬಿಎಸ್ಪಿ ಮೇಲೆ ಬಿಜೆಪಿ ಸರ್ಕಾರದ ಒತ್ತಡ:
ಬಹುಜನ ಸಮಾಜವಾದಿ ಪಕ್ಷದ ಮೇಲೆ ಬಿಜೆಪಿ ಸರ್ಕಾರ ಒತ್ತಡ ಹೇರುವ ಸಾಧ್ಯತೆಯೂ ಇದೆ ಎಂದು ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ಉತ್ತರ ಪ್ರದೇಶ ಚುನಾವಣೆ ಆರಂಭಕ್ಕೂ ಮೊದಲೇ ಮಾಯಾವತಿ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು. ಆದರೆ ಅದರ ಹೊರತಾಗಿ, ಅವರು ಚುನಾವಣಾ ಕಣದಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂದು ನಂಬಲಾಗುತ್ತಿದೆ.

ಯುಪಿ ಚುನಾವಣೆಗೆ ಬಿಎಸ್ಪಿ 51 ಅಭ್ಯರ್ಥಿಗಳ ಪಟ್ಟಿ:
ಶನಿವಾರ ಎರಡನೇ ಹಂತದ ಚುನಾವಣೆಗೆ ಬಿಎಸ್ಪಿ 51 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. "ಇಂದು, ನಾನು ಉತ್ತರ ಪ್ರದೇಶದ ಎರಡನೇ ಹಂತದ ಚುನಾವಣೆಗೆ 55 ಸ್ಥಾನಗಳಲ್ಲಿ 51 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುತ್ತಿದ್ದೇನೆ. ಈ ಬಾರಿ ನಾವು 'ಹರ್ ಪೋಲಿಂಗ್ ಬೂತ್ ಕೋ ಜೀತಾನಾ ಹೈ, ಬಿಎಸ್ಪಿ ಕೋ ಸತ್ತಾ ಮೇ ಲಾನಾ ಹೈ' ಎಂಬ ಘೋಷಣೆ ನೀಡಿದ್ದೇವೆ. ಬಿಎಸ್ಪಿ ಕಾರ್ಯಕರ್ತರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. 2007 ರಂತೆ ಬಿಎಸ್ಪಿ ಸರ್ಕಾರವನ್ನು ರಚಿಸುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಮಾಯಾವತಿ ಹೇಳಿದ್ದರು.
ಇದಕ್ಕೂ ಮುನ್ನ ಜನವರಿ 15 ರಂದು ಮಾಯಾವತಿ ಮೊದಲ ಹಂತದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದರು. 53 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಳೆದ ಶನಿವಾರ ಬಿಡುಗಡೆ ಮಾಡಲಾಗಿತ್ತು. ಫೆಬ್ರವರಿ 10ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿರುವ ಪಶ್ಚಿಮ ಉತ್ತರ ಪ್ರದೇಶದ 58 ವಿಧಾನಸಭಾ ಕ್ಷೇತ್ರಗಳ ಪೈಕಿ 53 ಸ್ಥಾನಗಳಿಗೆ ಪಕ್ಷವು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ. ಮೊದಲ ಹಂತದ ಯುಪಿ ಚುನಾವಣೆಗೆ ಬುಧವಾರದಂದು ಮಾಯಾವತಿ ಉಳಿದ ಐದು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದರು ಮತ್ತು ಏಳು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಬದಲಾಯಿಸಿದರು.
ಯುಪಿಯಲ್ಲಿ ಪ್ರಿಯಾಂಕಾ ಗಾಂಧಿಯೇ ಸಿಎಂ ಅಭ್ಯರ್ಥಿ ವಿವಾದ:
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರೇ ಮುಖ್ಯಮಂತ್ರಿ ಅಭ್ಯರ್ಥಿ ಆಗಲಿದ್ದಾರೆ ಎಂಬ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು. ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕಾ ಗಾಂಧಿ, ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಇದೆ. ಆಯಾ ರಾಜ್ಯಗಳಲ್ಲಿ ಕಾಂಗ್ರೆಸ್ ಉಸ್ತುವಾರಿಗಳೂ ಇದ್ದಾರೆ. ಬೇರೆ ರಾಜ್ಯಗಳಲ್ಲಿ ಉಸ್ತುವಾರಿಗಳೇ ಮುಖ್ಯಮಂತ್ರಿ ಅಭ್ಯರ್ಥಿ ಆಗುತ್ತಾರೋ ಇಲ್ಲವೋ ಎಂಬ ಬಗ್ಗೆ ನೀವು ಪ್ರಶ್ನೆ ಮಾಡುತ್ತೀರಾ. ಬೇರೆ ರಾಜ್ಯಗಳಲ್ಲಿ ಉಸ್ತುವಾರಿಗಳಿಗೆ ಕೇಳದ ಪ್ರಶ್ನೆಗಳನ್ನು ನನಗೆ ಏಕೆ ಕೇಳುತ್ತೀರಿ," ಎಂದು ಮರುಪ್ರಶ್ನೆ ಹಾಕಿದ್ದಾರೆ.
ಮೈತ್ರಿ ಕುರಿತು ಪ್ರಿಯಾಂಕಾ ಗಾಂಧಿ ಮಾತು:
"ನಾನು ಉತ್ತರ ಪ್ರದೇಶದ ಪರವಾಗಿ ಮಾತನಾಡಬಲ್ಲೆ. ನಾವು ಈ ಹಿಂದೆ ಯುಪಿಯಲ್ಲಿ ಮೈತ್ರಿ ಪ್ರಯೋಗ ಮಾಡಿಕೊಂಡಿದ್ದೆವು. 2017ರಲ್ಲಿ ಸಮಾಜವಾದಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಅದಕ್ಕೂ ಮೊದಲು ನಾವು ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇವೆ. ಹಾಗಾಗಿ ಉತ್ತರ ಪ್ರದೇಶದಲ್ಲಿ ನಮ್ಮ ಸ್ವತಂತ್ರ ಹಾದಿಯಾಗಿದೆ. ಕಾಂಗ್ರೆಸ್ ಪಕ್ಷವು ಈ ಮಾರ್ಗವನ್ನು ಆರಿಸಿಕೊಳ್ಳುತ್ತದೆ ಎಂದು ನಾನು ಇತರ ರಾಜ್ಯಗಳ ಬಗ್ಗೆ ಮಾತನಾಡುವುದಕ್ಕೆ ಆಗುವುದಿಲ್ಲ. ಆಯಾ ರಾಜ್ಯಗಳಲ್ಲಿ ಪರಿಸ್ಥಿತಿಯ ಮೇಲೆ ಮೈತ್ರಿ ನಿರ್ಧಾರವಾಗಲಿಗೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣೆ:
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, ಫೆಬ್ರವರಿ 14, ಫೆಬ್ರವರಿ 20, ಫೆಬ್ರವರಿ 23, ಫೆಬ್ರವರಿ 27, ಮಾರ್ಚ್ 3 ಮತ್ತು ಮಾರ್ಚ್ 7ರಂದು ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಅಂತಿಮವಾಗಿ ಮಾರ್ಚ್ 10ರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ, ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ, ಕಾಂಗ್ರೆಸ್ ಮತ್ತು ಮಾಯಾವತಿ ನೇತೃತ್ವದ ಬಹುಜನ ಸಮಾಜವಾದಿ ಪಕ್ಷದ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯುತ್ತಿದೆ.
ಕಳೆದ 2017ರಲ್ಲಿ ಉತ್ತರ ಪ್ರದೇಶದಲ್ಲಿ 403 ವಿಧಾನಸಭೆಗಳಿಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತಿಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿತ್ತು. ಒಟ್ಟು 403 ಕ್ಷೇತ್ರಗಳ ಪೈಕಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಸಮಾಜವಾದಿ ಪಕ್ಷ 47 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಹುಜನ ಸಮಾಜವಾದಿ ಪಕ್ಷವು 19 ಕ್ಷೇತ್ರಗಳಲ್ಲಿ ಗೆಲುವಿನ ಬಾವುಟ ಹಾರಿಸಿತ್ತು. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕೇವಲ ಏಳು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.












Click it and Unblock the Notifications