ಅಯೋಧ್ಯೆ ವಿವಾದ : ಸುಪ್ರೀಂ ನೇಮಿಸಿರುವ ಮೂವರು ಸಂಧಾನಕಾರರು ಯಾರು?
ಅಯೋಧ್ಯೆ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟಿನ ಐವರು ಸದಸ್ಯರ ನ್ಯಾಯಪೀಠವು ಇಂದು ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿದೆ. ಮಂದಿರ -ಮಸೀದಿ ಮಾಲಿಕತ್ವ ವಿವಾದದ ಶಾಶ್ವತ ಪರಿಹಾರಕ್ಕೆ ಮಧ್ಯಸ್ಥಿಕೆ ನಡೆಸುವ ಕುರಿತ ತೀರ್ಪು ಹೊರಬಂದಿದೆ.
ಅಯೋಧ್ಯೆಯಲ್ಲಿ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಕೋರ್ಟ್ ಮೇಲ್ವಿಚಾರಣೆಯಲ್ಲಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳುವ ಕುರಿತಂತೆ ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು ಇಂದು ತೀರ್ಪು ನೀಡಿದೆ.
"ಮಧ್ಯಸ್ಥಿಕೆ ಆರಂಭವಾದರೆ ಅದರ ನಡವಳಿಗಳು ವರದಿಯಾಗುವಂತಿಲ್ಲ. ಅದು ತಮಾಷೆಯಲ್ಲ. ಯಾರೊಬ್ಬರೂ ಆರೋಪಗಳಲ್ಲಿ ತೊಡಗಬಾರದು" ಮಧ್ಯಸ್ಥಿಕೆ ವಹಿಸಲು ಯಾರಿಗೆ ಹೇಳಬೇಕು ಅಥವಾ ಯಾವ ಸಮಿತಿಗೆ ಹೇಳಬೇಕು ಎಂಬ ಬಗ್ಗೆ ಅರ್ಜಿದಾರರೇ ಒಮ್ಮತದ ನಿರ್ಧಾರಕ್ಕೆ ಬರಬೇಕು ಎಂದು ಮುಖ್ಯನ್ಯಾಯ ಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
ನ್ಯಾ.ಇಬ್ರಾಹಿಂ ಖಾಲಿಫುಲ್ಲಾ, ಶ್ರೀ ರವಿಶಂಕರ್ ಗುರೂಜಿ, ಶ್ರೀರಾಮ್ ಪಂಚು ಅವರನ್ನೊಳಗೊಂಡ ತ್ರಿಸದಸ್ಯ ಸಮಿತಿಯನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದು, ಸಂಧಾನ ಪ್ರಕ್ರಿಯೆಯನ್ನು 4 ವಾರದೊಳಗೆ ಆರಂಭಿಸಿ, 8 ತಿಂಗಳೊಳಗೆ ಮುಗಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ.

ಅಯೋಧ್ಯೆ ಭೂಮಿ ಹಂಚಿಕೆ ವಿವಾದ
1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಸಮಯದಲ್ಲಿ ಒಟ್ಟು 67 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ಅದರಲ್ಲಿ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿವೆ. ಆದ್ದರಿಂದ ಈ ಭೂಮಿಯ ವಾರಸುದಾರರಾದ ರಾಮ ಜನ್ಮಭೂಮಿ ನ್ಯಾಸ್ ಟ್ರಸ್ಟ್ ಗೆ ಅದನ್ನು ಹಿಂದಿರುಗಿಸಬೇಕು ಎಂದು ಕೇಂದ್ರ ಸರ್ಕಾರ ಮನವಿ ಮಾಡಿದೆ. 2.77 ಎಕರೆ ವಿಸ್ತೀರ್ಣದ ಭೂಮಿಯನ್ನು ಸದ್ಯಕ್ಕೆ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಹಾಗು ರಾಮ್ ಲಲ್ಲಾ ಸಮಾನಾಗಿ ಹೊಂದಿವೆ.

ಫಕೀರ್ ಮೊಹಮ್ಮದ್ ಇಬ್ರಾಹಿಂ ಕಾಲಿಫುಲ್ಲ
ಫಕೀರ್ ಮೊಹಮ್ಮದ್ ಇಬ್ರಾಹಿಂ ಕಾಲಿಫುಲ್ಲ
1951ರ ಜುಲೈ 23ರಂದು ಜನಿಸಿದ ಕಾಲಿಫುಲ್ಲಾ ಆವರು ಸುಪ್ರೀಂಕೋರ್ಟ್ ಆಫ್ ಇಂಡಿಯಾದ ಮಾಜಿ ನ್ಯಾಯಮೂರ್ತಿಗಳಾಗಿದ್ದಾರೆ. 1975ರ ಆಗಸ್ಟ್ 20ರಂದು ವಕೀಲರಾಗಿ ವೃತ್ತಿ ಆರಂಭಿಸಿದರು. ಟಿ.ಎಸ್ ಗೋಪಾಲನ್ ಅಂಡ್ ಕೋ ಸಂಸ್ಥೆಯಲ್ಲಿ ಕಾರ್ಮಿಕ ಕಾನೂನು ವಿಭಾಗದಲ್ಲಿ ನುರಿತರಾದರು.
2000ರ ಮಾರ್ಚ್ 02ರಂದು ಮದ್ರಾಸ್ ಹೈಕೋರ್ಟಿನ ಜಡ್ಜ್ ಆಗಿ ನೇಮಕಗೊಂಡರು. ಫೆಬ್ರವರಿ 11ರಂದು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನ ಜಡ್ಜ್ ಆಗಿ ನೇಮಕವಾದರು, ನಂತರ ಎರಡು ತಿಂಗಳ ಅವಧಿಗೆ ಮುಖ್ಯ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದರು.
2011ರ ಸೆಪ್ಟೆಂಬರ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟಿನ ಮುಖ್ಯ ಜಸ್ಟೀಸ್ ಆಗಿ ನೇಮಕವದರು. 2012ರ ಏಪ್ರಿಲ್ 02ರಂದು ಸುಪ್ರೀಂಕೋರ್ಟಿನ ಜಡ್ಜ್ ಆದರು. ಅಂದಿನ ಮುಖ್ಯ ನ್ಯಾಯಮೂರ್ತಿ ಸರೋಶ್ ಹೊಮಿ ಕಪಾಡಿಯಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು. 2016ರ ಜುಲೈ 22ರಂದು ಜಸ್ಟೀಸ್ ಕಾಲಿಫುಲ್ಲಾ ಅವರು ಸುಪ್ರೀಂಕೋರ್ಟ್ ಸೇವೆಯಿಂದ ನಿವೃತ್ತಿ ಹೊಂದಿದರು.

ರವಿಶಂಕರ್ ಗುರೂಜಿ
1956ರ ಮೇ 13ರಂದು ಜನಿಸಿದ ರವಿಶಂಕರ್ ಅವರು ಭಾರತದಲ್ಲಿ ಆಧಾತ್ಮ ಗುರುವಾಗಿದ್ದಾರೆ. ಶ್ರೀ ಶ್ರೀ, ಗುರುದೇವ್ ಅಥವಾ ಗುರೂಜಿ ಎಂದೇ ಇವರನ್ನು ಸಂಬೋಧಿಸಲಾಗುತ್ತದೆ. 1981ರಲ್ಲಿ ಬೆಂಗಳೂರಿನಲ್ಲಿ ಆರ್ಟ್ ಅಫ್ ಲಿವಿಂಗ್ ಸ್ಥಾಪಿಸಿದರು. ಸಾಮಾಜಿಕ ಕಳಕಳಿಯಿಂದ ಸ್ಥಾಪನೆಯಾದ ಸರ್ಕಾರೇತರ ಸಂಸ್ಥೆಯಾಗಿದ್ದು, ನಂತರ ಆಧಾತ್ಮ ಕೇಂದ್ರವಾಗಿ ಬೆಳೆದಿದೆ. 1997ರಲ್ಲಿ ಜೀನಿವಾ ಮೂಲದ ದೇಣಿಗೆ ಸಂಸ್ಥೆ ಜತೆ ಕೈಜೊಡಿಸಿ, ಗ್ರಾಮೀಣಾಭಿವೃದ್ಧಿ ಹಾಗೂ ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅಯೋಧ್ಯಾ ವಿವಾದ ಬಗೆ ಹರಿಸಲು 2017ರಲ್ಲಿ ಯತ್ನಿಸಿದ್ದ ರವಿಶಂಕರ್ ಗುರೂಜಿ ಅವರ ಸಂಧಾನದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದವು. ನ್ಯಾಯಾಲಯದ ಹೊರಗಡೆ ಸಂಧಾನ ಮಾತುಕತೆ ನಡೆಸುವಂತೆ ಸುಪ್ರೀಂಕೋರ್ಟಿನ ನಿರ್ದೇಶನದಂತೆ ರವಿಶಂಕರ್ ಅವರು ನೀಡಿದ ಸಂಧಾನ ಸೂತ್ರವು ಎರಡು ಕೋಮಿನವರಿಗೆ ಒಪ್ಪಿಗೆಯಾಗಿರಲಿಲ್ಲ.

ಶ್ರೀರಾಮ್ ಪಂಚು
ಹಿರಿಯ ವಕೀಲ ಹಾಗೂ ಸಂಧಾನಕಾರರಾಗಿರುವ ಶ್ರೀರಾಮ್ ಪಂಚು ಅವರು ಸಂಧಾನಕಾರದ ಚೇಂಬರ್ಸ್ ನ ಸ್ಥಾಪಕರಾಗಿದ್ದಾರೆ. ಅಂತಾರಾಷ್ಟ್ರೀಯ ಸಂಧಾನಕಾರರ ಸಂಸ್ಥೆ(ಐಎಂಐ) ನ ಸಮಿತಿಯಲ್ಲಿ ನಿರ್ದೇಶಕರಾಗಿದ್ದಾರೆ. 2005ರಲ್ಲಿ ಕೋರ್ಟ್ ನಿರ್ದೇಶನದಂತೆ ಸಂಧಾನಕಾರರಾಗಿ ಕಾರ್ಯ ನಿರ್ವಹಿಸಿದ್ದರು.
ಅತ್ಯಂತ ಕಠಿಣ ಹಾಗೂ ದೀರ್ಘಕಾಲದ ವ್ಯಾಜ್ಯಗಳನ್ನು ಮಾತುಕತೆ ಮೂಲಕ ಪರಿಹರಿಸಿದ್ದಾರೆ. ವಾಣಿಜ್ಯ, ಕಾರ್ಪೊರೇಟ್, ಗುತ್ತಿಗೆ, ಸಿವಿಎಲ್ ವ್ಯಾಜ್ಯಗಳನ್ನು ಬಗೆಹರಿಸಿದ್ದಾರೆ.
ಅಸ್ಸಾಂ ಹಾಗೂ ನಾಗಾಲ್ಯಾಂಡ್ ನಡುವಿನ 500 ಚದರ ಕಿಲೋ ಮೀಟರ್ ಗಡಿ ವಿವಾದವನ್ನು ಬಗೆಹರಿಸಲು ಸುಪ್ರೀಂಕೋರ್ಟಿನಿಂದ ಪಂಚು ಅವರನ್ನು ನಿಯೋಜಿಸಲಾಗಿತ್ತು. ಪಾರ್ಸಿ ಸಮುದಾಯದವರ ವ್ಯಾಜ್ಯವನ್ನು ಬಗೆಹರಿಸಲು ಪಂಚು ಅವರು ನೆರವಾಗಿದ್ದರು.












Click it and Unblock the Notifications